Election Result: ಹಿಂದಿ ಭಾಷಿಕ ಪ್ರಬಲ ರಾಜ್ಯಗಳಲ್ಲಿ ಸೋಲುವ ಭಯ; ಬುಧವಾರ ಇಂಡಿಯಾ ಸಭೆ ಕರೆದ ಕಾಂಗ್ರೆಸ್
Dec 03, 2023 12:13 PM IST
Election Result: ಹಿಂದಿ ಭಾಷಿಕ ಪ್ರಬಲ ರಾಜ್ಯಗಳಲ್ಲಿ ಸೋಲುವ ಭಯ; ಬುಧವಾರ ಇಂಡಿಯಾ ಸಭೆ ಕರೆದ ಕಾಂಗ್ರೆಸ್ (ಸಾಂದರ್ಭಿಕ ಚಿತ್ರ)
Assembly Elections 2023 Results: ಕಾಂಗ್ರೆಸ್ ಪಕ್ಷವು ಮುಂದಿನ ಬುಧವಾರ ದೆಹಲಿಯಲ್ಲಿರುವ INDIA'ಬ್ಲಾಕ್ನಲ್ಲಿ ವಿಶೇಷ ಅವಲೋಕನ ಸಭೆ ಏರ್ಪಡಿಸಿದೆಯಂತೆ. ಬಿಜೆಪಿ ವಿರುದ್ಧ ಗೆಲುವು ಪಡೆಯಲು ಈಗಾಗಲೇ ಕಾಂಗ್ರೆಸ್ ಪಟಣಾ, ಬೆಂಗಳೂರು, ಮುಂಬೈನಲ್ಲಿ ಸಭೆ ನಡೆಸಿದೆ. ಇದೀಗ ಈ ಚುನಾವಣಾ ಫಲಿತಾಂಶದ ಕುರಿತು ಅವಲೋಕನ ಮಾಡಲು ದೆಹಲಿಯಲ್ಲಿ ಇದೇ ಬುಧವಾರ ಸಭೆ ಕರೆದಿದೆ.
ಬೆಂಗಳೂರು: ನಾಲ್ಕು ರಾಜ್ಯಗಳ ಮತಎಣಿಕೆ ಸಂದರ್ಭದಲ್ಲಿ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಉಂಟಾಗುತ್ತಿರುವ ಹಿನ್ನಡೆ, ಛತ್ತೀಸ್ಗಢದಲ್ಲಿ ಅಧಿಕಾರ ತಪ್ಪುವ ಸೂಚನೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ವಿಶೇಷವಾಗಿ ಹಿಂದಿ ಭಾಷಿಕರು ಇರುವ ದೇಶದ ಹೃದಯ ಭಾಗಗಳಲ್ಲಿ ಕಾಂಗ್ರೆಸ್ಗೆ ಸೋಲಾಗುವ ಆತಂಕವಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಇದೇ ಬುಧವಾರ ಸಮಾನ ಮನಸ್ಕರ ಸಭೆಯನ್ನು ದೆಹಲಿಯಲ್ಲಿ ಕರೆದಿದೆ. ಹಿಂದಿ ಭಾಷಿಕ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳದಂತೆ ಮಾಡಲು ಸೂಕ್ತ ಯೋಜನೆ ರೂಪಿಸಲು ಈ ಸಭೆ ವೇದಿಕೆಯಾಗುವ ಸೂಚನೆಯಿದೆ. ಇದೇ ಸಮಯದಲ್ಲಿ ಹಿಂದಿಭಾಷಿಕ ರಾಜ್ಯಗಳಲ್ಲಿ ಕಾಂಗ್ರೆಸ್ ಎಡವಿದ್ದೆಲ್ಲಿ ಎಂಬ ಆತ್ಮಾವಲೋಕನವೂ ನಡೆಯಲಿದೆ. ಕಾಂಗ್ರೆಸ್ ಪಕ್ಷವು ಈ ಲೋಕಸಭೆಯಲ್ಲಿ ಹೇಗಾದರೂ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಪಣತೊಟ್ಟಿದ್ದು, ಈಗಾಗಲೇ ಪಟಣಾ, ಬೆಂಗಳೂರು ಮತ್ತು ಮುಂಬೈನಲ್ಲಿ "ಇಂಡಿಯಾ" ಸಭೆಗಳನ್ನು ನಡೆಸಿದೆ.
ಇದನ್ನು ಓದಿ: ವಿಧಾನಸಭೆ ಚುನಾವಣಾ ಮತಎಣಿಕೆ- ಲೈವ್ ಅಪ್ಡೇಟ್ಸ್
ಮುಂದಿನ ಸಭೆ ಇದೇ ಬುಧವಾರ ನಡೆಯಲಿದೆ. ಈ ಸಭೆಗೆ ಹಾಜರಾಗುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನಾ ಖರ್ಗೆ ಅವರು ತಮ್ಮ ಮೈತ್ರಿಕೂಟಗಳಿಗೆ ಕರೆ ಮಾಡಿ ಆಹ್ವಾನ ನೀಡಿದ್ದಾರೆ. ಮುಂಬೈ ಸಭೆಯ ಬಳಿಕ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಶರದ್ ಪವಾರ್ ಬಣ) ನಾಯಕಿ ಸುಪ್ರಿಯಾ ಸುಳೆ ಅವರು ಮುಂದಿನ ಸಭೆ ದೆಹಲಿಯಲ್ಲಿ ನಡೆಯಲಿದೆ ಎಂದು ಸುಳಿವು ನೀಡಿದ್ದರು. ಲೋಕಸಭೆ ಚುನಾವಣೆಗೆ ಇನ್ನು ನಾಲ್ಕೈದು ತಿಂಗಳಷ್ಟೇ ಬಾಕಿ ಇದೆ. ಈ ಸಂದರ್ಭದಲ್ಲಿ ಈ ಸಭೆಯಲ್ಲಿ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆಯ ಕುರಿತು ಚರ್ಚಿಸುವ ಸಾಧ್ಯತೆ ಇದೆ.
ಚುನಾವಣಾ ಮತಎಣಿಕೆಯ ಆರಂಭಿಕ ಫಲಿತಾಂಶಗಳ ಪ್ರಕಾರ ರಾಜಸ್ಥಾನ ಮತ್ತು ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸುತ್ತಿದೆ. ಈ ಎರಡು ಹಿಂದಿ ಹೃದಯಭಾಗದ ರಾಜ್ಯಗಳು ಸಂಸತ್ತಿಗೆ ಹೆಚ್ಚಿನ ಸಂಖ್ಯೆಯ ಸದ್ಯಸರನ್ನು ಕಳುಹಿಸುತ್ತವೆ. ಹೀಗಾಗಿ, ಇಲ್ಲಿನ ಸೋಲನ್ನು ಕಡೆಗಣಿಸುವಂತೆ ಇಲ್ಲ. ಈ ಬುಧವಾರದ ಸಭೆಯಲ್ಲಿ ಈ ಕುರಿತು ಹೆಚ್ಚಿನ ಚರ್ಚೆ, ಆತ್ಮಾವಲೋಕನ ನಡೆಯುವ ಸೂಚನೆಯಿದೆ.
ಪ್ರಮುಖ ಮಿತ್ರ ಪಕ್ಷವಾಗಿರುವ ಸಮಾಜವಾದಿ ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ನಿಷ್ಠುರ ನಿಲುವು ತಲೆದಿದೆ. ಹೀಗಾಗಿ, ಈ ಸಭೆಯಲ್ಲಿ ಕಾಂಗ್ರೆಸ್ ಪಕ್ಷವು ಸಮಾಜವಾದಿ ಪಕ್ಷದ ಕುರಿತು ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಕಾಂಗ್ರೆಸ್ನೊಂದಿಗೆ ಸಂಭಾವ್ಯ ಮೈತ್ರಿಯಲ್ಲಿ ಸ್ಪರ್ಧಿಸಲು ಎಸ್ಪಿಗೆ ಟಿಕೆಟ್ ನೀಡದೆ ಕಾಂಗ್ರೆಸ್ ದ್ರೋಹ ಮಾಡಿದೆ ಎಂದು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದರು. 2024ರ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಪೈಪೋಟಿ ನೀಡಬೇಕಿದ್ದರೆ ಕಾಂಗ್ರೆಸ್ಗೆ ಇಂತಹ ಮೈತ್ರಿ ಅನಿವಾರ್ಯ.
ಇಂಡಿಯಾ ಅಥವಾ ಇಂಡಿಯನ್ ನ್ಯಾಷನಲ್ ಡೆವಲ್ಮೆಂಟಲ್ ಇನ್ಕ್ಲುಸಿವ್ ಅಲೆಯನ್ಸ್ ಎನ್ನುವುದು 28 ಮಿತ್ರಪಕ್ಷಗಳ ಒಕ್ಕೂಟವಾಗಿದೆ. ಇದರಲ್ಲಿ ಕಾಂಗ್ರೆಸ್ ಜತೆಗೆ ಈ ಹಿಂದಿನ ಎನ್ಡಿಎ ಪಕ್ಷಗಳು ಇವೆ. ಇವು ಒಟ್ಟಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸುವ ಗುರಿ ಹಾಕಿಕೊಂಡಿವೆ. (ಎಎನ್ಐ ವರದಿ)