ಜ್ಞಾನವಾಪಿ ಮಸೀದಿಯಲ್ಲಿ31 ವರ್ಷದ ಬಳಿಕ ಹಿಂದುಗಳಿಂದ ಪೂಜೆ; ತಡೆ ನೀಡಲು ಅಲಹಾಬಾದ್ ಹೈಕೋರ್ಟ್ ನಿರಾಕರಣೆ
Feb 02, 2024 03:59 PM IST
ವಾರಾಣಸಿ ಕೋರ್ಟ್ ತೀರ್ಪಿನ ಬಳಿಕ ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯ ವ್ಯಾಸ್ ಜಿ ಕಿ ತೆಹ್ಖಾನದಲ್ಲಿ 31 ವರ್ಷಗಳ ಬಳಿಕ ಪೂಜೆ ನೆರವೇರಿತು. ಜ್ಞಾನವಾಪಿ ಮಸೀದಿಯಲ್ಲಿ31 ವರ್ಷದ ಬಳಿಕ ಹಿಂದುಗಳಿಂದ ಪೂಜೆ ನಡೆಯಿತು. ಇದಕ್ಕೆ ತಡೆ ನೀಡಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿತು.
ಜ್ಞಾನವಾಪಿ ಮಸೀದಿಯಲ್ಲಿ31 ವರ್ಷದ ಬಳಿಕ ಹಿಂದುಗಳಿಂದ ಪೂಜೆ ನಡೆಯಿತು. ಇದಕ್ಕೆ ತಡೆ ನೀಡಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ. ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಹಿಂದೂ ಪ್ರಾರ್ಥನೆಗೆ ಅನುಮತಿ ನೀಡಿದ ವಾರಾಣಸಿ ನ್ಯಾಯಾಲಯದ ಆದೇಶಕ್ಕೆ ಮಧ್ಯಂತರ ತಡೆಗಾಗಿ ಮಸೀದಿ ಸಮಿತಿಗೆ ಹೈಕೋರ್ಟ್ ಮೆಟ್ಟಿಲೇರಿತ್ತು.
ಅಲಹಾಬಾದ್: ವ್ಯಾಸ್ ತೆಹ್ಖಾನಾ ಎಂದು ಕರೆಯಲ್ಪಡುವ ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂ ಪ್ರಾರ್ಥನೆಗೆ ಅವಕಾಶ ನೀಡುವ ವಾರಾಣಸಿ ನ್ಯಾಯಾಲಯದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲು ಅಲಹಾಬಾದ್ ಹೈಕೋರ್ಟ್ ಶುಕ್ರವಾರ (ಫೆ.2) ನಿರಾಕರಿಸಿದೆ.
ಜ್ಞಾನವಾಪಿ ಮಸೀದಿಗೆ ಸಂಬಂಧಿಸಿ ಜಿಲ್ಲಾ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿದ ಅಂಜುಮನ್ ಇಂತೇಜಾಮಿಯಾ ಮಸ್ಜಿದ್ ಸಮಿತಿ (ಎಐಎಂಸಿ) ಗೆ ತನ್ನ ಮನವಿಗಳನ್ನು ತಿದ್ಡುಪಡಿ ಮಾಡಿಕೊಳ್ಳಲು ಅಲಹಾಬಾದ್ ಹೈಕೋರ್ಟ್ ಫೆಬ್ರವರಿ 6 ರವರೆಗೆ ಸಮಯ ನೀಡಿದೆ.
ಜನವರಿ 17 ರ ಆದೇಶವನ್ನು ಕೂಡ ಪ್ರಶ್ನಿಸಿ ಸಮಿತಿ ಮನವಿ ಸಲ್ಲಿಸಿತ್ತು. ಈ ಎಲ್ಲ ಮನವಿಗಳ ತಿದ್ದುಪಡಿಗೆ ಅಲಹಾಬಾದ್ ಹೈಕೋರ್ಟ್ ಈ ಕಾಲಾವಕಾಶವನ್ನು ಸಮಿತಿಗೆ ನೀಡಿದೆ. ಮನವಿ ಪರಿಷ್ಕರಿಸಿ ಸಲ್ಲಿಸಿದ ಬಳಿಕ ಮುಂದಿನ ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಮಸೀದಿಯ ವ್ಯವಹಾರಗಳನ್ನು ನೋಡಿಕೊಳ್ಳುವ ಸಮಿತಿಯು ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರವಾಲ್ ಈ ಆದೇಶವನ್ನು ಹೊರಡಿಸಿದ್ದಾರೆ.
ವಾರಾಣಸಿ ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧ ತಮ್ಮ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಕೆಲವೇ ಗಂಟೆಗಳಲ್ಲಿ ಸಮಿತಿಯು ಹೈಕೋರ್ಟ್ನ ಮೊರೆ ಹೋಗಿತ್ತು. ಆಗ ಸುಪ್ರೀಂ ಕೋರ್ಟ್ ನ್ಯಾಯಪೀಠವು ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಕೇಳಿಕೊಂಡಿತ್ತು. ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿರುವ ವಿಗ್ರಹಗಳ ಮುಂದೆ ಅರ್ಚಕರು ಪ್ರಾರ್ಥನೆ ಸಲ್ಲಿಸಬಹುದು ಎಂದು ವಾರಣಾಸಿ ನ್ಯಾಯಾಲಯ ಬುಧವಾರ (ಜ.31) ತೀರ್ಪು ನೀಡಿತ್ತು.
ಕೋರ್ಟ್ ಆದೇಶದ ಕಾರಣ ಇಂದು ವಾರಾಣಸಿ ಮುಸ್ಲಿಂ ಅಂಗಡಿ ಬಂದ್
ಜಿಲ್ಲಾ ನ್ಯಾಯಾಲಯದ ಆದೇಶದ ನಂತರ ಶುಕ್ರವಾರದ ನಮಾಜ್ ಗೆ ಮುಂಚಿತವಾಗಿ ಇಡೀ ವಾರಣಾಸಿ ಜಿಲ್ಲೆಯಲ್ಲಿ ಅಂಗಡಿಗಳು ಮತ್ತು ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳ ಕೆಲವು ಭಾಗಗಳು ಮುಚ್ಚಲ್ಪಟ್ಟಿವೆ. ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.
ಜಿಲ್ಲಾ ನ್ಯಾಯಾಲಯದ ಆದೇಶದ ನಂತರದ ಮೊದಲ ಶುಕ್ರವಾರ (ಫೆ.2) ಇದು. ಮುಸ್ಲಿಮರ ಪಾಲಿಗೆ ನಮಾಜ್ ದಿನವಾದ ಇಂದು ವಾರಣಾಸಿ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಜ್ಞಾನವಾಪಿ ಮಸೀದಿಯ ವ್ಯವಹಾರಗಳನ್ನು ನೋಡಿಕೊಳ್ಳುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ಶುಕ್ರವಾರ ಪಟ್ಟಣದಲ್ಲಿ ಬಂದ್ ಮಾಡುವಂತೆ ಕರೆ ನೀಡಿತ್ತು. ಪಟ್ಟಣದ ದಾಲ್ಮಂಡಿ, ನಯೀ ಸಡಕ್, ನಡೇಸರ್ ಮತ್ತು ಅರ್ಡಾಲ್ ಬಜಾರ್ ಪ್ರದೇಶಗಳಲ್ಲಿನ ಮುಸ್ಲಿಂ ಪ್ರಾಬಲ್ಯದ ಮಾರುಕಟ್ಟೆ ಪ್ರದೇಶಗಳಲ್ಲಿ ಬಂದ್ ಪರಿಣಾಮ ಗೋಚರಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಹೊರಡಿಸಿದ ಪತ್ರದಲ್ಲಿ, ಮಾರುಕಟ್ಟೆಗಳನ್ನು ಮುಚ್ಚುವಂತೆ ಮನವಿ ಮಾಡಿದೆ. ಶಾಂತಿಯುತವಾಗಿ ನಮಾಜ್ ಮಾಡುವಂತೆ ಜನರನ್ನು ಕೇಳಿದೆ. ಮುಸ್ಲಿಂ ಮಹಿಳೆಯರು ತಮ್ಮ ಮನೆಗಳಲ್ಲಿಯೇ ಇರಬೇಕೆಂದು ಅದು ಸಲಹೆ ನೀಡಿತ್ತು.
ಬಿಗಿ ಪೊಲೀಸ್ ಬಂದೋಬಸ್ತ್
ಹೆಚ್ಚುವರಿ ಪೊಲೀಸ್ ಪಡೆ ಸಜ್ಜುಗೊಳಿಸಿದ ಪೊಲೀಸ್ ಆಯುಕ್ತ ಅಶೋಕ್ ಮುಥಾ ಜೈನ್ ಅವರು ಭದ್ರತಾ ವ್ಯವಸ್ಥೆಗಳ ಬಗ್ಗೆ ನಿನ್ನೆ ತಡರಾತ್ರಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಹಗಲಿನಲ್ಲಿ ಶಾಂತಿ ಕಾಪಾಡಲು ನೆರೆಯ ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಸಜ್ಜುಗೊಳಿಸಲಾಗಿದೆ. ಕಾಶಿ ವಿಶ್ವನಾಥ ಧಾಮ ಮತ್ತು ಹತ್ತಿರದ ಪ್ರದೇಶಗಳ ಬಳಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಪಿಟಿಐ ತಿಳಿಸಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಕ್ಷಿಪ್ರ ಪೊಲೀಸ್ ಪಡೆ ನಿಯೋಜಿಸಲಾಗಿದೆ.
ಜ್ಞಾನವಾಪಿ ಮಸೀದಿ: 31 ವರ್ಷದ ಬಳಿಕ ವ್ಯಾಸ್ ತೆಹ್ಖಾನಾದಲ್ಲಿ ಪೂಜೆ
ಮೂರು ದಶಕಗಳ ಹಿಂದೆ ಸ್ಥಗಿತಗೊಂಡಿದ್ದ ಪೂಜೆ ಪುನರಾರಂಭಿಸಲು ನ್ಯಾಯಾಲಯವು ಅನುಮತಿಸಿದ ಗಂಟೆಗಳ ನಂತರ ಬುಧವಾರ (ಜ.31) ರಾತ್ರಿ ವಾರಣಾಸಿಯ 'ವ್ಯಾಸ್ ತೆಹಕಾನಾ' ಅಥವಾ ಜ್ಞಾನವಾಪಿ ರಚನೆಯ ದಕ್ಷಿಣ ನೆಲಮಾಳಿಗೆಯಲ್ಲಿ ಪೂಜೆ ನೆರವೇರಿತು. 31 ವರ್ಷಗಳಲ್ಲಿ ಮೊದಲ ಬಾರಿಗೆ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ನಸುಕಿನ 3 ಗಂಟೆಗೆ ಮೊದಲ ಪ್ರಾರ್ಥನೆಯನ್ನು ನಡೆಸಲಾಯಿತು.