Homosexuality: ಸಲಿಂಗಕಾಮ ಒಂದು ಅಸ್ವಸ್ಥತೆ, ಆರ್ಎಸ್ಎಸ್ ಅಂಗಸಂಸ್ಥೆ ಸಂವರ್ಧಿನಿ ನ್ಯಾಸ್ನಿಂದ ಸಮೀಕ್ಷೆ
May 06, 2023 11:40 AM IST
ಸಲಿಂಗ ವಿವಾಹ ಕಾನೂನು ವಿರೋಧಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಯುನೈಟೆಡ್ ಹಿಂದೂ ಫ್ರಂಟ್ ಸದಸ್ಯರಿಂದ ಪ್ರತಿಭಟನೆ (ANI Photo)
Homosexuality a disorder: ಆಧುನಿಕ ವೈದ್ಯಕೀಯದಿಂದ ಆಯುರ್ವೇದದವರೆಗೆ ಎಂಟು ವಿಭಿನ್ನ ಚಿಕಿತ್ಸಾ ವಿಧಾನಗಳ ವೈದ್ಯರನ್ನು ಒಳಗೊಂಡ 318 ತಜ್ಞರ ಅಭಿಪ್ರಾಯಗಳನ್ನು ಈ ಸಮೀಕ್ಷಾ ಸಂಶೋಧನೆ ಆಧರಿಸಿದೆ.
ನವದೆಹಲಿ: ಸಲಿಂಗ ಕಾಮಕ್ಕೆ (Homosexuality) ಸಂಬಂಧಪಟ್ಟಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮಹಿಳಾ ವಿಭಾಗವಾದ ರಾಷ್ಟ್ರ ಸೇವಿಕ ಸಮಿತಿಯ ಅಂಗಸಂಸ್ಥೆ ಸಂವರ್ಧಿನಿ ನ್ಯಾಸ್ ಸಮೀಕ್ಷೆಯೊಂದನ್ನು ನಡೆಸಿದೆ. ಸಲಿಂಗಕಾಮವು ಒಂದು ಅಸ್ವಸ್ಥತೆಯಾಗಿದ್ದು, ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದರೆ ಅದು ಸಮಾಜದಲ್ಲಿ ಮತ್ತಷ್ಟು ಹೆಚ್ಚುತ್ತದೆ ಎಂದು ಆ ಸಮೀಕ್ಷೆಯಲ್ಲಿ ಭಾಗವಹಿಸಿದ ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರು ಅಭಿಪ್ರಾಯಪಟ್ಟಿದ್ದಾರೆ.
ಆಧುನಿಕ ವೈದ್ಯಕೀಯದಿಂದ ಆಯುರ್ವೇದದವರೆಗೆ ಎಂಟು ವಿಭಿನ್ನ ಚಿಕಿತ್ಸಾ ವಿಧಾನಗಳ ವೈದ್ಯರನ್ನು ಒಳಗೊಂಡ 318 ತಜ್ಞರ ಅಭಿಪ್ರಾಯಗಳನ್ನು ಈ ಸಮೀಕ್ಷಾ ಸಂಶೋಧನೆ ಆಧರಿಸಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್ಎಸ್ಎಸ್) ಸಮಾನಾಂತರವಾಗಿರುವ ಮಹಿಳಾ ಸಂಘಟನೆಯಾದ ರಾಷ್ಟ್ರ ಸೇವಿಕಾ ಸಮಿತಿಯ ಹಿರಿಯ ಕಾರ್ಯನಿರ್ವಹಣಾಧಿಕಾರಿಯೊಬ್ಬರು ಹೇಳಿದ್ದಾರೆ.
ಸುಮಾರು ಶೇಕಡ 70ರಷ್ಟು ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರು "ಸಲಿಂಗಕಾಮವು ಒಂದು ಅಸ್ವಸ್ಥತೆ" ಎಂದು ಹೇಳಿದ್ದಾರೆ. ಅವರಲ್ಲಿ ಶೇಕಡ 83ರಷ್ಟು ಜನರು ಸಲಿಂಗಕಾಮಿ ಸಂಬಂಧಗಳಲ್ಲಿ ಲೈಂಗಿಕ ರೋಗ ಹರಡುವುದನ್ನು ದೃಢಪಡಿಸಿದ್ದಾರೆ ಎಂದು ಸಂವರ್ಧಿನಿ ನ್ಯಾಸ್ ತಿಳಿಸಿದೆ.
"ಸಲಿಂಗ ವಿವಾಹಗಳನ್ನು ಕಾನೂನುಬದ್ಧಗೊಳಿಸುವ ನಿರ್ಧಾರವು ರೋಗಿಗಳನ್ನು ಗುಣಪಡಿಸುವ ಮತ್ತು ಸಾಮಾನ್ಯ ಸ್ಥಿತಿಗೆ ತರುವ ಬದಲು ಸಮಾಜದಲ್ಲಿ ಹೆಚ್ಚಿನ ಅಸ್ವಸ್ಥತೆಯನ್ನು ಉತ್ತೇಜಿಸುತ್ತದೆ ಎನ್ನುವುದನ್ನು ಸಮೀಕ್ಷೆಯಲ್ಲಿ ಕಂಡುಕೊಳ್ಳಲಾಗಿದೆ" ಎಂದು ಆರ್ಎಸ್ಎಸ್ನ ಅಂಗಸಂಸ್ಥೆ ತಿಳಿಸಿದೆ.
ಅಂತಹ ಮಾನಸಿಕ ಅಸ್ವಸ್ಥತೆಯ ರೋಗಿಗಳನ್ನು ಗುಣಪಡಿಸಲು ಆಪ್ತ ಸಮಾಲೋಚನೆ ಉತ್ತಮ ಆಯ್ಕೆಯಾಗಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಬೇಡಿಕೆಯ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸಾರ್ವಜನಿಕ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕು ಎಂದು ಸಂವರ್ಧಿನಿ ನ್ಯಾಸ್ನ ಸಮೀಕ್ಷೆ ಶಿಫಾರಸು ಮಾಡಿದೆ.
"ಸಲಿಂಗಕಾಮಿ ಪೋಷಕರು ತಮ್ಮ ಸಂತತಿಯನ್ನು ಸರಿಯಾಗಿ ಬೆಳೆಸಲು ಸಾಧ್ಯವಿಲ್ಲ ಎಂದು ಸಮೀಕ್ಷೆಯ ಪ್ರಶ್ನಾವಳಿಗೆ ಪ್ರತಿಕ್ರಿಯೆ ನೀಡಿರುವ ಶೇಕಡಾ 67 ಕ್ಕಿಂತ ಹೆಚ್ಚು ವೈದ್ಯರು ಭಾವಿಸಿದ್ದಾರೆ" ಎಂದು ರಾಷ್ಟ್ರ ಸೇವಿಕಾ ಸಮಿತಿಯ ಅಂಗಸಂಸ್ಥೆ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಸಲಿಂಗ ವಿವಾಹಕ್ಕೆ ಕಾನೂನು ಮಂಜೂರಾತಿ ಕೋರಿ ಸಲ್ಲಿಸಿರುವ ಅರ್ಜಿಗಳ ವಾದವನ್ನು ಆಲಿಸುತ್ತಿರುವ ಸಂದರ್ಭದಲ್ಲಿ ಸಂವರ್ಧಿನಿ ನ್ಯಾಸ್ ಈ ಸಮೀಕ್ಷೆಯನ್ನು ನಡೆಸಿದೆ.
"ಸಮೀಕ್ಷೆಗೆ ಪ್ರತಿಕ್ರಿಯಿಸಿದ ಶೇಕಡಾ 57 ಕ್ಕಿಂತ ಹೆಚ್ಚು ವೈದ್ಯರು ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ನ ಮಧ್ಯಸ್ಥಿಕೆಯನ್ನು ನಿರಾಕರಿಸಿದ್ದಾರೆ" ಎಂದು ಸಂವರ್ಧಿನಿ ನ್ಯಾಸ್ನ ಹಿರಿಯ ಕಾರ್ಯಕಾರಿಯೊಬ್ಬರು ಹೇಳಿದ್ದಾರೆ.
ಗರ್ಭದಲ್ಲಿರುವ ಮಗುವಿಗೆ ಸಂಸ್ಕಾರ ನೀಡುವ ಅಭಿಯಾನ ಆರಂಭಿಸಲು ಆರ್ಎಸ್ಎಸ್ ಚಿಂತನೆ
ತಾಯಿಯ ಗರ್ಭದಲ್ಲಿರುವ ಮಗು ಅಥವಾ ಭ್ರೂಣವು ಇನ್ಮುಂದೆ ಭಗವದ್ಗೀತೆ ಅಥವಾ ರಾಮಾಯಣದ ಶ್ಲೋಕಗಳನ್ನು ಕಲಿಯಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ಅಂಗಸಂಸ್ಥೆ ಸಂವರ್ಧಿನಿ ನ್ಯಾಸ್ ಇದೀಗ ಗರ್ಭಿಣಿಯರಿಗೆ ತಮ್ಮ ಶಿಶು ಗರ್ಭದಲ್ಲಿರುವಾಗಲೇ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಕಲಿಸುವ ಗರ್ಭ ಸಂಸ್ಕಾರ ಎಂಬ ಹೊಸ ಅಭಿಯಾನವನ್ನು ಆರಂಭಿಸಲು ಉದ್ದೇಶಿಸಿದೆ. ಈ ಅಭಿಯಾನದಲ್ಲಿ ಸ್ತ್ರೀರೋಗ ತಜ್ಞರು, ಆಯುರ್ವೇದ ವೈದ್ಯರು, ಯೋಗ ತರಬೇತುದಾರರು ಇರುತ್ತಾರೆ. ಈ ಕುರಿತ ವರದಿ ಓದಿ.
ವಿಭಾಗ