logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪೂರ್ವದವರು ಚೀನೀಯರಂತೆ: ಸ್ಯಾಮ್ ಪಿತ್ರೋಡಾ ಜನಾಂಗೀಯ ಹೇಳಿಕೆ ವಿವಾದ, ಕಾಂಗ್ರೆಸ್ ನಾಯಕನ 5 ಹಳೆಯ ವಿವಾದಗಳಿವು

ಪೂರ್ವದವರು ಚೀನೀಯರಂತೆ: ಸ್ಯಾಮ್ ಪಿತ್ರೋಡಾ ಜನಾಂಗೀಯ ಹೇಳಿಕೆ ವಿವಾದ, ಕಾಂಗ್ರೆಸ್ ನಾಯಕನ 5 ಹಳೆಯ ವಿವಾದಗಳಿವು

Umesh Kumar S HT Kannada

May 08, 2024 02:59 PM IST

ಸ್ಯಾಮ್ ಪಿತ್ರೋಡಾ, ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ.

  • ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ, ವೈವಿಧ್ಯತೆ ಕುರಿತು ಮಾತನಾಡುತ್ತ, ಪೂರ್ವದವರು ಚೀನೀಯರಂತೆ ಎಂಬ ಸ್ಯಾಮ್ ಪಿತ್ರೋಡಾ ಅವರ ಜನಾಂಗೀಯ ಹೇಳಿಕೆ ವಿವಾದಕ್ಕೀಡಾಗಿದೆ. ಈ ವಿದ್ಯಮಾನದ ಪೂರ್ಣ ವಿವರ ಮತ್ತು ಕಾಂಗ್ರೆಸ್ ನಾಯಕನ 5 ಹಳೆಯ ವಿವಾದಗಳಿವು. 

ಸ್ಯಾಮ್ ಪಿತ್ರೋಡಾ, ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ.
ಸ್ಯಾಮ್ ಪಿತ್ರೋಡಾ, ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ.

ನವದೆಹಲಿ: ಕಳೆದ ಹದಿನೈದು ದಿವಸಗಳ ಅವಧಿಯಲ್ಲಿ ಭಾರತೀಯ ಸಾಗರೋತ್ತರ ಕಾಂಗ್ರೆಸ್ (ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್) ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಮತ್ತೆ ತಮ್ಮ ಹೇಳಿಕೆಯ ಮೂಲಕ ವಿವಾದಕ್ಕೀಡಾಗಿದ್ದಾರೆ. ಆನುವಂಶಿಕ ತೆರಿಗೆ (ಪಿತ್ರಾರ್ಜಿತ ತೆರಿಗೆ - Inheritance Taxes US) ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಈಗ ಜನಾಂಗೀಯ ಹೇಳಿಕೆ ನೀಡಿದ ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

ಲೋಕಸಭಾ ಚುನಾವಣೆ ಚಾಲ್ತಿಯಲ್ಲಿರುವ ಕಾರಣ, ಕಾಂಗ್ರೆಸ್ ನಾಯಕ ಪ್ರಸ್ತಾಪಿಸಿದ ಪಿತ್ರಾರ್ಜಿತ ಆಸ್ತಿ ತೆರಿಗೆ ಕುರಿತ ವಿವಾದವೇ ಇನ್ನೂ ತಣ್ಣಗಾಗಿಲ್ಲ. ಅದಕ್ಕೂ ಮೊದಲೇ, ಸ್ಯಾಮ್ ಪಿತ್ರೋಡಾ ಅವರು ಭಾರತದ ವೈವಿಧ್ಯತೆಯ ಬಗ್ಗೆ ಮಾತನಾಡುವಾಗ ಮತ್ತೆ ವಿವಾದ ಬಿರುಗಾಳಿ ಎಬ್ಬಿಸಿದ್ದಾರೆ. ದಕ್ಷಿಣ ಭಾರತದ ಜನರು "ಆಫ್ರಿಕನ್ನರಂತೆ ಕಾಣುತ್ತಾರೆ ಮತ್ತು ಪೂರ್ವದಲ್ಲಿರುವವರು ಚೀನೀಯರಂತೆ ಕಾಣುತ್ತಾರೆ" ಎಂದು ಹೇಳುವ ಮೂಲಕ ಜನಾಂಗೀಯವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದು ಟೀಕೆಗೆ ಕಾರಣವಾಗಿದೆ.

ದಿ ಸ್ಟೇಟ್ಸ್‌ಮನ್‌ಗೆ ನೀಡಿದ ಸಂದರ್ಶನದಲ್ಲಿ ಸ್ಯಾಮ್ ಪಿತ್ರೋಡಾ ಹೇಳಿದ್ದೇನು

ದಿ ಸ್ಟೇಟ್ಸ್‌ಮನ್‌ಗೆ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಇತ್ತೀಚೆಗೆ ಸಂದರ್ಶನ ನೀಡಿದ್ದು, “ಅಲ್ಲಿ ಇಲ್ಲಿ ಕೆಲವೊಂದು ಜಗಳ ಬಿಟ್ಟರೆ ಭಾರತದಲ್ಲಿ ಜನ ಕಳೆದ 75 ವರ್ಷಗಳ ಅವಧಿಯಲ್ಲಿ ಸಂತೋಷದಿಂದಲೇ ಬಾಳಿ ಬದುಕಿದ್ದಾರೆ. ಬಹಳಷ್ಟು ವೈವಿಧ್ಯ ಅಂದರೆ, ದೇಶದ ಪೂರ್ವದಲ್ಲಿ ಜನ ಚೀನೀಯರಂತೆ, ದಕ್ಷಿಣದವರು ಆಫ್ರಿಕನ್ನರಂತೆ, ಪಶ್ಚಿಮದವರು ಅರಬ್ಬರಂತೆ, ಉತ್ತರದವರು ಬಿಳಿಯರಂತೆ ಕಂಡುಬರುತ್ತಾರೆ. ಆದಾಗ್ಯೂ, ನಾವೆಲ್ಲರೂ ಸೋದರ ಸೋದರಿಯರು. ಹೀಗಾಗಿ ಆ ವೈವಿಧ್ಯತೆ ಅಪ್ರಸ್ತುತ ಮತ್ತು ವೈವಿಧ್ಯ ಹೊಂದಿದ್ದರೂ ಒಂದು ದೇಶವನ್ನಾಗಿ ಭಾರತವನ್ನು ಒಂದು ಚೌಕಟ್ಟಿನಲ್ಲಿ ತಂದಿಡಬಹುದು” ಎಂದು ಹೇಳಿದ್ದರು.

"ಭಾರತದ ಜನರು ವಿವಿಧ ಭಾಷೆಗಳು, ಧರ್ಮಗಳು, ಆಹಾರ ಮತ್ತು ಪದ್ಧತಿಗಳನ್ನು ಗೌರವಿಸುತ್ತಾರೆ. ಅದು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ. ಅದು ನಾನು ನಂಬುವ ಭಾರತ, ಅಲ್ಲಿ ಪ್ರತಿಯೊಬ್ಬರಿಗೂ ಸ್ಥಳವಿದೆ ಮತ್ತು ಎಲ್ಲರೂ ಸ್ವಲ್ಪಮಟ್ಟಿಗೆ ರಾಜಿ ಮಾಡಿಕೊಳ್ಳುತ್ತಾರೆ" ಎಂದು ಸ್ಯಾಮ್ ಪಿತ್ರೋಡಾ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಅವರ ಈ ಹೇಳಿಕೆ ಪ್ರಸಾರವಾದ ಬೆನ್ನಿಗೆ ವಿವಾದಕ್ಕೀಡಾಗಿದೆ. ದೇಶದ ಪೂರ್ವದಲ್ಲಿ ಜನ ಚೀನೀಯರಂತೆ, ದಕ್ಷಿಣದವರು ಆಫ್ರಿಕನ್ನರಂತೆ, ಪಶ್ಚಿಮದವರು ಅರಬ್ಬರಂತೆ, ಉತ್ತರದವರು ಬಿಳಿಯರಂತೆ ಎಂದು ಹೋಲಿಸಿದ್ದು ಜನಾಂಗೀಯವಾಗಿ ವಿವಾದಕ್ಕೀಡಾಗಿದ್ದು, ವ್ಯಾಪಕ ಟೀಕೆ ಎದುರಾಗಿದೆ.

ಸ್ಯಾಮ್ ಪಿತ್ರೋಡಾ ಅವರ 5 ಹಳೆಯ ವಿವಾದಗಳಿವು

1) ಸ್ಯಾಮ್ ಪಿತ್ರೋಡಾ ಅವರು ಕಳೆದ ತಿಂಗಳು, ಅಮೆರಿಕದಲ್ಲಿ ಚಾಲ್ತಿಯಲ್ಲಿರುವ ಆನುವಂಶಿಕ ತೆರಿಗೆಯ ಪರಿಕಲ್ಪನೆಯ ಬಗ್ಗೆ ಮಾತನಾಡುವಾಗ ವಿವಾದವನ್ನು ಹುಟ್ಟುಹಾಕಿದರು. ಇವು ಚರ್ಚಿಸಬೇಕಾದ ವಿಷಯಗಳು ಎಂದು ಹೇಳಿದರು. "ಅಮೆರಿಕದಲ್ಲಿ ಆನುವಂಶಿಕ ತೆರಿಗೆ ಇದೆ. ಒಬ್ಬರು 100 ಮಿಲಿಯನ್ ಡಾಲರ್ ಮೌಲ್ಯದ ಸಂಪತ್ತನ್ನು ಹೊಂದಿದ್ದರೆ ಮತ್ತು ಅವರು ಸತ್ತಾಗ ಅವರು ಶೇಕಡಾ 45 ರಷ್ಟು ಮಾತ್ರ ತಮ್ಮ ಮಕ್ಕಳಿಗೆ ವರ್ಗಾಯಿಸಬಹುದು, ಶೇಕಡಾ 55 ರಷ್ಟು ಸರ್ಕಾರದ ವಶಕ್ಕೆ ಹೋಗುತ್ತದೆ. ಇದು ಒಂದು ಆಸಕ್ತಿದಾಯಕ ಕಾನೂನು. ನಿಮ್ಮ ಪೀಳಿಗೆಯಲ್ಲಿ ನೀವು ಸಂಪತ್ತನ್ನು ಸಂಪಾದಿಸಿದ್ದೀರಿ. ನಿಮ್ಮ ಮರಣದೊಂದಿಗೆ ನೀವು ನಿಮ್ಮ ಸಂಪತ್ತನ್ನು ಸಾರ್ವಜನಿಕರಿಗೆ ಬಿಡಬೇಕು. ಆದರೆ, ಎಲ್ಲ ಸಂಪತ್ತನ್ನೂ ಅಲ್ಲ, ಅದರಲ್ಲಿ ಅರ್ಧದಷ್ಟು, ಇದು ನನಗೆ ನ್ಯಾಯೋಚಿತವೆಂದು ತೋರುತ್ತದೆ" ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದರು. ಅಮೆರಿಕದ ಕಾನೂನು ಭಾರತದಲ್ಲಿ ಜಾರಿತರಲು ಕಾಂಗ್ರೆಸ್ ಮುಂದಾಗಿದೆ ಎಂಬ ಟೀಕೆ ವ್ಯಕ್ತವಾಗಿ ವಿವಾದಕ್ಕೆ ಕಾರಣವಾಗಿತ್ತು.

2) ರಾಮ ಮಂದಿರ ವಿವಾದ: 2023 ರ ಜೂನ್‌ನಲ್ಲಿ, ರಾಮ ಮಂದಿರದ ಭವ್ಯ ಉದ್ಘಾಟನೆಯ ನಿರೀಕ್ಷೆಯ ಮಧ್ಯೆ, ಸ್ಯಾಮ್ ಪಿತ್ರೋಡಾ ಅವರು ನಿರುದ್ಯೋಗ, ಹಣದುಬ್ಬರ, ಶಿಕ್ಷಣ ಮತ್ತು ಆರೋಗ್ಯದಂತಹ ಭಾರತದ ಪ್ರಮುಖ ಸಮಸ್ಯೆಗಳನ್ನು ದೇವಾಲಯಗಳು ಪರಿಹರಿಸುವುದಿಲ್ಲ ಎಂದು ಪ್ರತಿಪಾದಿಸುವ ಮೂಲಕ ವಿವಾದವನ್ನು ಹುಟ್ಟುಹಾಕಿದರು. ಅವರ ಹೇಳಿಕೆಗಳು ಕಾಂಗ್ರೆಸ್ ಅನ್ನು ಟೀಕಿಸಲು ಬಿಜೆಪಿಗೆ ಅಸ್ತ್ರಗಳನ್ನು ಒದಗಿಸಿದವು. ಸಾಮಾಜಿಕ-ಆರ್ಥಿಕ ಕಾಳಜಿಗಳಿಗಿಂತ ದೇವಾಲಯ ಸಂವಾದದ ಆದ್ಯತೆಯನ್ನು ಸಂದರ್ಭ ಒತ್ತಿಹೇಳಿತು.

3) 1984 ರ ಸಿಖ್ ವಿರೋಧಿ ದಂಗೆ: ಸ್ಯಾಮ್ ಪಿತ್ರೋಡಾ ಅವರು 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ 1984 ರ ಸಿಖ್ ವಿರೋಧಿ ದಂಗೆಗಳ ಬಗ್ಗೆ ಪ್ರಶ್ನಿಸಿದಾಗ, “1984 ರ ವಿಚಾರ ಈಗೇಕೆ? ಕಳೆದ 5 ವರ್ಷ ನೀವು ಏನು ಮಾಡಿದ್ರಿ, ಅದರ ಕುರಿತು ಮಾತನಾಡಿ, 1984ರಲ್ಲಿ ಆಗಿ ಹೋಗಿದ್ದು ಆಗಿ ಹೋಯಿತು (1984 mein hua toh hua) ನೀವೇನು ಮಾಡಿದ್ರಿ?” ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದರು. ಇದನ್ನೇ ಇಟ್ಟುಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್ ಆಳ್ವಿಕೆಯನ್ನು ಟೀಕಿಸಿದ್ದರು.

4) ಬಾಲಾಕೋಟ್ ವಾಯುದಾಳಿ: ಭಾರತದಲ್ಲಿ 2019 ರ ಫೆಬ್ರವರಿಯಲ್ಲಿ ಪುಲ್ವಾಮಾ ದಾಳಿಯ ನಂತರ, ಸ್ಯಾಮ್ ಪಿತ್ರೋಡಾ ಅವರು ಬಾಲಕೋಟ್ ಮೇಲೆ ಭಾರತೀಯ ವಾಯುಪಡೆ ನಡೆಸಿದ ಪ್ರತೀಕಾರದ ವೈಮಾನಿಕ ದಾಳಿಯ ಪರಿಣಾಮಕಾರಿತ್ವವನ್ನು ಪ್ರಶ್ನಿಸಿ ವಿವಾದಕ್ಕೆ ಕಾರಣವಾಗಿದ್ದರು. ಅವರ ಹೇಳಿಕೆಗಳು ಭಯೋತ್ಪಾದಕ ಘಟನೆಗಳಿಗೆ ಭಾರತದ ಪ್ರತಿಕ್ರಿಯೆ ಮತ್ತು ಅಂತಹ ಬಿಕ್ಕಟ್ಟುಗಳಿಗೆ ಸೂಕ್ತ ರಾಜತಾಂತ್ರಿಕ ವಿಧಾನದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದವು.

5) ಬಿ ಆರ್ ಅಂಬೇಡ್ಕರ್‌ ಮತ್ತು ಸಂವಿಧಾನ ರಚನೆ: ಭಾರತದ ಸಂವಿಧಾನದ ರಚನೆಯಲ್ಲಿ ಬಿ.ಆರ್.ಅಂಬೇಡ್ಕರ್ ಅವರಿಗಿಂತ ಜವಾಹರಲಾಲ್ ನೆಹರು ಹೆಚ್ಚು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಸುಧೀಂದ್ರ ಕುಲಕರ್ಣಿ ಅವರ ಲೇಖನವನ್ನು ಉಲ್ಲೇಖಿಸಿ ಸ್ಯಾಮ್ ಪಿತ್ರೋಡಾ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಪ್ರತಿಪಾದಿಸಿದ್ದರು. ಅವರ ಈ ಹೇಳಿಕೆ ಕೂಡ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಬಳಿಕ ಈ ಹೇಳಿಕೆಯನ್ನು ಅವರು ಹಿಂಪಡೆದಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ