Fire Accidents: ವಿಜಯಪುರದಲ್ಲಿ ಬಾಯ್ಲರ್ ಸ್ಫೋಟ, ಶ್ರೀರಾಮ್ ಕಾಲೇಜಿಗೆ ಬೆಂಕಿ, ದೆಹಲಿಯಲ್ಲೂ ಅವಘಡ, ದೇಶದ ವಿವಿಧೆಡೆ ಬೆಂಕಿ ಆಕಸ್ಮಿಕ
Mar 05, 2023 06:20 PM IST
ಸಾಂದರ್ಭಿಕ ಚಿತ್ರ. (AP Photo/Mahmud Hossain Opu)
- ನಿನ್ನೆ ಮಧ್ಯಾಹ್ನ ವಿಜಯಪುರದಲ್ಲಿ ಸಂಭವಿಸಿದ ಬಾಯ್ಲರ್ ಸ್ಪೋಟದಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದಾನೆ. ದೆಹಲಿ ಮತ್ತು ಮುಂಬಯಿಯಲ್ಲೂ ಇಂದು ಬೆಂಕಿ ಆಕಸ್ಮಿಕ ಸಂಭವಿಸಿದೆ.
ಬೆಂಗಳೂರು: ಬೇಸಿಗೆಯ ಬಿಸಿಲ ಧಗೆ ಹೆಚ್ಚಿದ್ದು, ಬೆಂಕಿ ಆಕಸ್ಮಿಕ ಪ್ರಕರಣಗಳೂ ದೇಶಾದ್ಯಂತ ಹೆಚ್ಚಾಗಿದೆ. ಇದೇ ಸಮಯದಲ್ಲಿ ಕೆಲವೊಂದು ಮಾನವ ನಿರ್ಮಿತ ಬೆಂಕಿ ಅನಾಹುತಗಳೂ ವರದಿಯಾಗಿವೆ. ನಿನ್ನೆ ಮಧ್ಯಾಹ್ನ ವಿಜಯಪುರದಲ್ಲಿ ಸಂಭವಿಸಿದ ಬಾಯ್ಲರ್ ಸ್ಪೋಟದಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದಾನೆ. ದೆಹಲಿ ಮತ್ತು ಮುಂಬಯಿಯಲ್ಲೂ ಇಂದು ಬೆಂಕಿ ಆಕಸ್ಮಿಕ ಸಂಭವಿಸಿದೆ.
ಕರ್ನಾಟಕದ ಹೊಸಕೋಟೆಯಲ್ಲೂ ಇದೀಗ ಬೆಂಕಿ ಆಕಸ್ಮಿಕ ವರದಿಯಾಗಿದೆ. ಅಲ್ಲಿನ ಸಾಲುಮರಗಳು ಬೆಂಕಿಗೆ ಆಹುತಿಯಾಗಿವೆ.
ವಿಜಯಪುರದಲ್ಲಿ ಬಾಯ್ಲರ್ ಸ್ಪೋಟ, ಓರ್ವ ಸಾವು, ಹಲವು ಕಾರ್ಮಿಕರಿಗೆ ಗಾಯ
ವಿಜಯ ಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಚಿಕ್ಕ ಗಲಗಲಿ ಬಳಿ ನಂದಿ ಸಹಕಾರಿ ಕಾರ್ಖಾನೆಯಲ್ಲಿ ನೂತನ ಬಾಯ್ಲರ್ ಪರೀಕ್ಷಾರ್ಥ ವೇಳೆ ಸ್ಪೋಟಗೊಂಡಿದೆ. ಇದರಿಂದ ನಾಲ್ವರು ಕಾರ್ಮಿಕರು ಗಾಯಗೊಂಡಿರುವ ಘಟನೆ ನಡೆದಿದೆ. ನಿನ್ನೆ ಈ ಘಟನೆ ನಡೆದಿತ್ತು. ಇದೀಗ ಬಂದ ವರದಿ ಪ್ರಕಾರ, ಗಾಯಗೊಂಡವರಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದಾನೆ.
ಇತ್ತೀಚೆಗಷ್ಟೇ ಕಾರ್ಖಾನೆಯಲ್ಲಿ ನೂತನವಾಗಿ ಬಾಯ್ಲರ್ ಸ್ಥಾಪನೆ ಮಾಡಲಾಗಿತ್ತು. ಅದನ್ನು ಶನಿವಾರ ಪ್ರಾಯೋಗಿಕ ಪರೀಕ್ಷೆಗೆ ಪ್ರಾರಂಭಿಸಲಾಗಿತ್ತು. ಈ ವೇಳೆ ಬಾಯ್ಲರ್ ಸ್ಫೋಟಗೊಂಡಿದೆ. ಘಟನೆಯಿಂದಾಗಿ ಬೆಂಕಿ ಹೊತ್ತಿಕೊಂಡಿದ್ದರಿಂದ ವಿಜಯಪುರ, ಮುಧೋಳ, ಬಾಗಲಕೋಟೆ, ಬೀಳಗಿಯಿಂದ ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಲಾಯಿತು. ಸತತ ಎರಡು ಗಂಟೆಗಳ ಕಾಲ ಬೆಂಕಿ ನಂದಿಸುವ ಕಾರ್ಯದಲ್ಲಿ ಸಿಬ್ಬಂದಿ ತೊಡಗಿದರು. ಈ ಕುರಿತು ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
220 ಟನ್ ಸಾಮರ್ಥ್ಯದ ಬಾಯ್ಲರ್ ಅನ್ನು 51 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ದೆಹಲಿಯ ಐಎಸ್ಜಿಸಿ ಕಂಪನಿಯ ಬಾಯ್ಲರ್ ಬದಲಾಗಿ ಪುಣೆಯ ಎಸ್.ಎಸ್.ಇಂಜಿನಿಯರ್ಸ್ನಿಂದ ಅಳವಡಿಸಲಾಗಿತ್ತು.
ಮುಂಬಯಿ ಶ್ರೀರಾಮ್ ಕಾಲೇಜಿನಲ್ಲಿ ಬೆಂಕಿ ಆಕಸ್ಮಿಕ
ಮುಂಬಯಿ: ಇಂದು ಬೆಳಗ್ಗೆ ಮುಂಬಯಿಯ ಶ್ರೀರಾಮ್ ಕಾಲೇಜ್ ಆಫ್ ಸೈನ್ಸ್ ಆಂಡ್ ಕಾಮರ್ಸ್ನಲ್ಲಿ ಭಾರೀ ಬೆಂಕಿ ಅನಾಹುತ ಸಂಭವಿಸಿದೆ. ಮುಂಬಯಿಯ ಬಂಡೂಪ್ ಪ್ರದೇಶದಲ್ಲಿರುವ ಈ ಕಾಲೇಜಿನಲ್ಲಿ ಉಂಟಾದ ಬೆಂಕಿ ಆಕಸ್ಮಿಕದ ಬಳಿಕ ಅಲ್ಲಿಗೆ ನಾಲ್ಕು ಫೈರ್ ಎಂಜಿನ್ ವಾಹನಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಯಾವುದೇ ಸಾವು ನೋವು ವರದಿಯಾಗಿಲ್ಲ. ಬೆಂಕಿ ಆಕಸ್ಮಿಕಕ್ಕೆ ಕಾರಣವೇನು ಎಂದು ತಿಳಿದುಬಂದಿಲ್ಲ. ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ದೆಹಲಿಯ ಸುಲ್ತಾನಪುರಿಯಲ್ಲೂ ಬೆಂಕಿ ಆಕಸ್ಮಿಕ
ದೆಹಲಿ: ದೆಹಲಿಯ ಸುಲ್ತಾನ್ಪುರಿ ರಸ್ತೆಯ ಸಮೀಪದ ಸ್ಲಮ್ನಲ್ಲಿ ಭಾರೀ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಹದಿನೈದಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ. "ಹದಿನೈದು ಅಗ್ನಿಶಾಮಕ ವಾಹನಗಳು ಕಾರ್ಯನಿರ್ವಹಣೆ ಮಾಡುತ್ತಿವೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬೆಂಕಿ ನಂದಿಸುವ ಕಾರ್ಯದಲ್ಲಿ ರೋಬೋಟ್ಗಳು ಕೂಡ ಕಾರ್ಯನಿರ್ವಹಿಸುತ್ತಿವೆ. ಇಲ್ಲಿಯವರೆಗೆ ಯಾವುದೇ ಪ್ರಾಣ ಹಾನಿ ವರದಿಯಾಗಿಲ್ಲʼʼ ಎಂದು ದೆಹಲಿಯ ವಿಭಾಗೀಯ ಅಗ್ನಿಶಾಮಕ ಅಧಿಕಾರಿ ಎಕೆ ಜೈಸ್ವಾಲ್ ಅವರು ಸುದ್ದಿಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.
ಕೇರಳದ ತ್ಯಾಜ್ಯ ಘಟಕಕ್ಕೆ ಬೆಂಕಿ
ಕೇರಳದ ತ್ಯಾಜ್ಯ ಘಟಕಕ್ಕೆ ಬೆಂಕಿ ಬಿದ್ದು, ಮೂರು ದಿನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಕೇರಳದ ಬ್ರಹ್ಮಪುರಂ ತ್ಯಾಜ್ಯ ಘಟಕಕ್ಕೆ ಮೂರು ದಿನದ ಹಿಂದೆ ಬೆಂಕಿ ಬಿದ್ದಿತ್ತು. ತ್ಯಾಜ್ಯ ಘಟಕಕ್ಕೆ ಬೆಂಕಿ ಬಿದ್ದ ಪರಿಣಾಮ ಕೊಚ್ಚಿಯ ಗಾಳಿಯ ಗುಣಮಟ್ಟವೂ ಕಡಿಮೆಯಾಗಿದೆ. ತ್ರಿಶೂರ್, ಕೊಟ್ಟಾಯಂ, ಇಡುಕಿ, ಮತ್ತು ಭಾರತೀಯ ನೌಕಾಪಡೆಯ ಸುಮಾರು ಇಪ್ಪತೈದಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಪ್ರಯತ್ನಿಸುತ್ತಿವೆ.