'ರೇವಂತ್ ರೆಡ್ಡಿ ಅನೇ ನೇನು' ತೆಲೆಂಗಾಣ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ;ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕೈ ನಾಯಕರು
Dec 07, 2023 01:38 PM IST
ತೆಲಂಗಾಣದ 2ನೇ ಮುಖ್ಯಮಂತ್ರಿಯಾಗಿ ಎನುಮುಲು ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. (PTI)
ರೇವಂತ್ ರೆಡ್ಡಿ ಅನೇ ನೇನು ಎನ್ನುವ ಮೂಲಕ ತೆಲಂಗಾಣದ 2ನೇ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಹೈದರಾಬಾದ್: ತೆಲಂಗಾಣದ 2ನೇ ಮುಖ್ಯಮಂತ್ರಿಯಾಗಿ ಎನುಮುಲ ರೇವಂತ್ ರೆಡ್ಡಿ ಅವರು ಎಲ್ಬಿ ಸ್ಟೇಡಿಯಂನಲ್ಲಿ ಸೇರಿದ್ದ ಲಕ್ಷಾಂತರ ಮಂದಿ ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ಇಂದು (ಡಿಸೆಂಬರ್ 7, ಗುರುವಾರ) ಮಧ್ಯಾಹ್ನ 1 ಗಂಟೆ 20 ನಿಮಿಷಕ್ಕೆ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಅಧಿಕಾರದ ಗೌಪ್ಯತೆಯನ್ನು ಬೋಧಿಸಿದರು. ಸಿಎಂ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದ ಮಲ್ಲು ಭಟ್ಟಿ ವಿಕ್ರಮಾರ್ಕ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರೇವಂತ್ ರೆಡ್ಡಿ ಅವರು ರೇವಂತ್ ರೆಡ್ಡಿ ಅನೆ ನೇನು ಎನ್ನುತ್ತಿದ್ದಂತೆ ಸ್ಟೇಡಿಂಯನಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರ, ರೆಡ್ಡಿ ಅವರ ಬೆಂಬಲಿಗರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.
ಕೊಂಡಗಲ್ ಕ್ಷೇತ್ರದಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದ ರೇವಂತ್ ರೆಡ್ಡಿ ಅವರು ಮುಖ್ಯಮಂತ್ರಿಯಾಗಿ, ಉಪ ಮುಖ್ಯಮಂತ್ರಿಯಾಗಿ ಭಟ್ಟಿ ವಿಕ್ರಮಾರ್ಕ ಮಲ್ಲು, ಸಚಿವರಾಗಿ ನಾಲಮಾಡ ಉತ್ತಮ್ ಕುಮಾರ್ ರೆಡ್ಡಿ, ಪೊನ್ನಂ ಪ್ರಭಾಕರ್, ಸಿ ದಾಮೋದರ ರಾಜನರಸಿಂಹ ಸೇರಿ 6 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾದ ಕಾಂಗ್ರೆಸ್ ಹಿರಿಯ ನಾಯಕರು
ಹೈದರಾಬಾದ್ನ ಎಲ್ಬಿ ಸ್ಟೇಡಿಯಂನಲ್ಲಿ ಹಮ್ಮಿಕೊಂಡಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ, ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ವೇದಿಕೆಯಲ್ಲಿ ಸಿಎಂ ಆಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಎಂಬ ಹೆಸರಿನ ಬದಲಾಗಿ ತೆಲಂಗಾಣದಲ್ಲಿ ಪ್ರಜಾಪ್ರಭುತ್ವಂ ಪ್ರಮಾಣ ವಚನ ಸ್ವೀಕಾರ, ಅಭಿವೃದ್ಧಿಗೆ ಶ್ರೀಕಾರ ಎಂಬ ಡಿಜಿಟಲ್ ಬರಹ ಗಮನ ಸೆಳೆಯಿತು. ಪ್ರಮಾಣ ವಚನ ಸಮಾರಂಭದ ವೇದಿಕೆಗೆ ಸೋನಿಯಾ ಗಾಂಧಿ ಅವರನ್ನು ತೆರದ ವಾಹನದಲ್ಲಿ ಕರೆತರಲಾಯಿತು. ಈ ವೇಳೆ ರೇವಂತ್ ರೆಡ್ಡಿಯವರು ಸೋನಿಯಾ ಗಾಂಧಿ ಅವರ ಹಿಂದೆಯೇ ಇದ್ದರು.
2021ರ ಜೂನ್ 26 ರಂದು ಕಾಂಗ್ರೆಸ್ ಹೈಕಮಾಂಡ್ ರೇವಂತ್ ರೆಡ್ಡಿ ಅವರನ್ನು ತೆಲಂಗಾಣದ ಕಾಂಗ್ರೆಸ್ ರಾಜ್ಯಾಧ್ಯಕ್ಷರನ್ನು ನೇಮಕ ಮಾಡುತ್ತದೆ. 2021ರ ಜುಲೈ 7 ರಂದು ಟಿಪಿಸಿಸಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಕೆಸಿಆರ್ ಅಧಿಕಾರದಿಂದ ಕೆಳಗಿಳಿಸುವ ಶಪಥ ಮಾಡಿ ಯೂತ್ ಐಕಾನ್
ರೇವಂತ್ ರೆಡ್ಡಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ ಬಳಿಕ ರಾಜ್ಯ ಪ್ರವಾಸ ಮಾಡುತ್ತಾರೆ. ಪಕ್ಷದ ಎಲ್ಲಾ ನಾಯಕರನ್ನು ಒಗ್ಗೂಟಿಸುವ ಕೆಲಸ ಮಾಡುತ್ತಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಹೈಕಮಾಂಡ್ ಹಾಗೂ ಪಕ್ಕದ ಕರ್ನಾಟಕ ಕಾಂಗ್ರೆಸ್ ನಾಯಕರ ನೆರವಿನಿಂದ ಅಬ್ಬರ ಪ್ರಚಾರವನ್ನು ಮಾಡುತ್ತಾರೆ. ಸಭೆ, ಸಮಾರಂಭಗಳು, ರಾಲಿಯಗಳ ಆಯೋಜಿಸುತ್ತಾರೆ. ಸಿಎಂ ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್ಎಸ್ ಸರ್ಕಾರ ತಪ್ಪುಗಳನ್ನು ಜನರಿಗೆ ಮನ ಮುಟ್ಟುವಂತೆ ವಿವರಿಸುತ್ತಾರೆ. ಕಾಂಗ್ರೆಸ್ ಪಕ್ಷಕ್ಕೊಂದು ಅವಕಾಶ ಕೊಟ್ಟು ನೋಡಿ ಅಂತ ಮತದಾನರ ಮನವೊಲಿಸುತ್ತಾರೆ.
ಅಷ್ಟೇ ಅಲ್ಲ ಸಿಎಂ ಕೆ ಚಂದ್ರಶೇಖರ್ ರಾವ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಶಪಥವನ್ನು ಮಾಡಿದ್ದರು. ಅದರಂತೆ ರೇವಂತ್ ರೆಡ್ಡಿ ತಮ್ಮ ಗುರಿಯನ್ನು ಸಾಧಿಸಿ ತೋರಿಸಿದ್ದಾರೆ. ಕೆಸಿಆರ್ ಕುಟುಂಬದ ವಿರುದ್ಧ ಹೋರಾಟ ಮಾಡಿದ್ದ ರೇವಂತ್ ಬೈಬೈ ಕೆಸಿಆರ್ ಅನ್ನು ರಾಷ್ಟ್ರ ಮಟ್ಟದಲ್ಲಿ ಟ್ರೆಂಡ್ ಆಗುವಂತೆ ಮಾಡಿದ್ದರು.