ತಮಿಳ್ ವೆಟ್ರಿ ಕಳಗಂ ಮೂಲಕ ರಾಜಕೀಯಕ್ಕೆ ದಳಪತಿ ವಿಜಯ್ ಪ್ರವೇಶ; 2026ರ ತಮಿಳುನಾಡು ಚುನಾವಣೆ ಟಾರ್ಗೆಟ್
Feb 02, 2024 06:57 PM IST
ದಳಪತಿ ವಿಜಯ್ (ಕಡತ ಚಿತ್ರ)
ತಮಿಳ್ ವೆಟ್ರಿ ಕಳಗಂ ಮೂಲಕ ರಾಜಕೀಯಕ್ಕೆ ದಳಪತಿ ವಿಜಯ್ ಪ್ರವೇಶ ಮಾಡಿದ್ದು, 2026ರ ತಮಿಳುನಾಡು ಚುನಾವಣೆ ಟಾರ್ಗೆಟ್ ಮಾಡಿರುವುದಾಗಿ ಶುಕ್ರವಾರ ಘೋಷಿಸಿದರು. 2024ರ ಲೋಕಸಭೆ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ, ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದರು.
ಲೋಕಸಭೆ ಚುನಾವಣೆ ಮತ್ತು ತಮಿಳುನಾಡು ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ 'ದಳಪತಿ' (ಕಮಾಂಡರ್) ವಿಜಯ್ ಎಂದೇ ಖ್ಯಾತರಾದ ತಮಿಳು ಸೂಪರ್ ಸ್ಟಾರ್ ಜೋಸೆಫ್ ವಿಜಯ್ ರಾಜಕೀಯ ಪ್ರವೇಶ ಘೋಷಿಸಿದರು. ಅವರ ಶುಕ್ರವಾರ (ಫೆ.2) ತಮ್ಮ ರಾಜಕೀಯ ಪಕ್ಷ “ತಮಿಳಗ ವೆಟ್ರಿ ಕಳಗಂ” (ವಿಜಯಶಾಲಿ ತಮಿಳು ಸಂಘ) ಎಂದು ಘೋಷಿಸಿಕೊಂಡಿದ್ದಾರೆ.
ತಮಿಳಗ ವೆಟ್ರಿ ಕಳಗಂ ಎಂದು ತಮಿಳು ಭಾಷೆಯಲ್ಲಿ ಬರೆದು ಟ್ವೀಟ್ ಅಪ್ಡೇಟ್ ಮಾಡಿದ್ದು, ಟಿವಿಕೆ ವಿಜಯ್ ಎಂಬ ಹ್ಯಾಷ್ ಟ್ಯಾಗ್ ಕೂಡ ಕೊಟ್ಟಿದ್ದಾರೆ. ಈ ಟ್ವೀಟ್ ಅನ್ನು ಅವರು ಆಕ್ಟರ್ ವಿಜಯ್ ಖಾತೆಯಿಂದ ಮಾಡಿದ್ದು, ಇದರಲ್ಲಿ ಟಿವಿಕೆ ವಿಜಯ್ ಖಾತೆಯ ಟ್ವೀಟ್ ಅನ್ನು ರೀಟ್ವೀಟ್ ಮಾಡಲಾಗಿದೆ.
ಟವಿಕೆಯು 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. 2026ರ ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಆ ಮೂಲಕ ಚುನಾವಣಾ ರಾಜಕೀಯಕ್ಕೆ ಪ್ರವೇಶ ಮಾಡಲಿದೆ ಎಂದು ವಿಜಯ್ ಶುಕ್ರವಾರ ತಿಳಿಸಿದ್ದಾರೆ.
ಎಲ್ಲೆಡೆ ಭ್ರಷ್ಟಾಚಾರವನ್ನು ನೋಡಬಹುದು. ಜನರನ್ನು ಧರ್ಮ, ಜಾತಿಯಿಂದ ವಿಭಜಿಸುವ ಪ್ರಸ್ತುತ ರಾಜಕೀಯ ವಾತಾವರಣವನ್ನು ಪರಿಗಣಿಸಿ ನಾನು ಭ್ರಷ್ಟಾಚಾರ ಮುಕ್ತ, ಪ್ರಗತಿಪರ ಮತ್ತು ಜಾತ್ಯತೀತ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದೇನೆ" ಎಂದು ಅವರು ತಿಳಿಸಿದ್ದಾರೆ.
"ನಾನು ಈಗಾಗಲೇ ಒಪ್ಪಿಕೊಂಡಿರುವ ಚಿತ್ರವನ್ನು ಪಕ್ಷದ ಕೆಲಸಗಳಿಗೆ ಧಕ್ಕೆಯಾಗದಂತೆ ಪೂರ್ಣಗೊಳಿಸಲು ನಿರ್ಧರಿಸಿದ್ದೇನೆ. ಸಾರ್ವಜನಿಕ ಸೇವೆಯ ರಾಜಕೀಯದಲ್ಲಿ ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ. ಇದು ತಮಿಳುನಾಡಿನ ಜನರಿಗೆ ನನ್ನ ಕೃತಜ್ಞತೆ ಎಂದು ನಾನು ಪರಿಗಣಿಸುತ್ತೇನೆ. ರಾಜಕೀಯವನ್ನು ಇನ್ನೊಂದು ವೃತ್ತಿ ಎಂದು ಭಾವಿಸಿಲ್ಲ. ಇದನ್ನು ಪವಿತ್ರವಾದ ಜನಸೇವೆ ಎಂದು ಪರಿಗಣಿಸಿರುವುದಾಗಿ ವಿಜಯ್ ಸ್ಪಷ್ಟಪಡಿಸಿದ್ದಾರೆ.
ತಮಿಳಗ ವೆಟ್ರಿ ಕಳಗಂ ಎಂದರೆ…
ದಳಪತಿ ವಿಜಯ್ ಆರಂಭಿಸಿರುವ ರಾಜಕೀಯ ಪಕ್ಷದ ಹೆಸರು ತಮಿಳಗ ವೆಟ್ರಿ ಕಳಗಂ. ತಮಿಳು ವಿಜಯ ಸಂಘ ಎಂಬ ಅರ್ಥ ಕೊಡುತ್ತದೆ.
ದಿವಂಗತ ಎಂ ಜಿ ರಾಮಚಂದ್ರನ್ ಮತ್ತು ಜೆ ಜಯಲಲಿತಾ ಸೇರಿ ಚಿತ್ರರಂಗದ ಅನಭಿಷಿಕ್ತ ದೊರೆಗಳು ರಾಜಕೀಯಕ್ಕೆ ಬಂದು ರಾಜ್ಯವನ್ನಾಳಿದ ಇತಿಹಾಸ ಮತ್ತೆ ಸೃಷ್ಟಿಯಾಗುವುದೇ ಎಂಬ ಕುತೂಹಲ ಇದರೊಂದಿಗೆ ಹೆಚ್ಚಾಗಿದೆ. ವಿಜಯ್ ರಾಜಕೀಯ ಪ್ರವೇಶದ ಕುರಿತು ಊಹಾಪೋಹಗಳು ಕಳೆದ ಕೆಲವು ತಿಂಗಳಿಂದ ಇತ್ತಾದರೂ, ಈಗ ಅಧಿಕೃತವಾಗಿದೆ.
ಆದಾಗ್ಯೂ, ಇತ್ತೀಚೆಗೆ ನಡೆದ ಪಕ್ಷದ ಸಾಮಾನ್ಯ ಸಭೆಯಲ್ಲಿ ಮತ್ತು ಕಾರ್ಯಕಾರಿ ಮಂಡಳಿ ಸಭೆಗಳಲ್ಲಿ ನಿರ್ಧರಿಸಿದ ಪ್ರಕಾರ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಅಥವಾ ಯಾರನ್ನೂ ಬೆಂಬಲಿಸುವುದಿಲ್ಲ ಎಂದು ವಿಜಯ್ ಹೇಳಿದರು.
ಚಿತ್ರರಂಗದಿಂದ ರಾಜಕೀಯ ಪ್ರವೇಶಿಸಿದ ಮತ್ತೋರ್ವ ನಟರಾಗಿ ವಿಜಯ್
ಈ ವಿದ್ಯಮಾನದೊಂದಿಗೆ ತಮಿಳು ಚಿತ್ರರಂಗದಿಂದ ರಾಜಕೀಯ ಪ್ರವೇಶ ಮಾಡಿದ 49 ವರ್ಷದ ನಟ ವಿಜಯ್, ಪಟ್ಟಿಯಲ್ಲಿ ಹೊಸಬರಾಗಿ ಸೇರ್ಪಡೆಯಾಗಿದ್ದಾರೆ. ತಮಿಳುನಾಡಿನ ಇಬ್ಬರು ಮುಖ್ಯಮಂತ್ರಿಗಳು- ಎಂಜಿ ಆರ್ ಎಂದೇ ಖ್ಯಾತರಾಗಿದ್ದ ಎಂ ಜಿ ರಾಮಚಂದ್ರನ್, ಜೆ. ಜಯಲಲಿತಾ ಇಬ್ಬರೂ ಸಿನಿಮಾ ರಂಗದ ಮೇರು ನಟ, ನಟಿಯಾಗಿದ್ದವರು. ಇನ್ನು ಎಂ.ಕರುಣಾನಿಧಿ ಕೂಡ ಸಿನಿಮಾ ರಂಗದವರೇ ಆದರೂ ಚಿತ್ರಕಥೆಗಾರರಾಗಿದ್ದರು. ಎಂಜಿಆರ್ ಎಐಎಡಿಎಂಕೆ ಸ್ಥಾಪಿಸಿದರೆ, ಜಯಲಲಿತಾ ಅದೇ ಪಕ್ಷದಲ್ಲಿ ರಾಜಕೀಯವಾಗಿ ಬೆಳೆದವರು. ಕರುಣಾನಿಧಿ ಡಿಎಂಕೆ ಸ್ಥಾಪಿಸಿದರು. ಪ್ರಸ್ತುತ ಇದೇ ಪಕ್ಷ ಆಡಳಿತದಲ್ಲಿದೆ.
ಇದೇ ರೀತಿ, ಇನ್ನೊಬ್ಬ ನಟ ವಿಜಯಕಾಂತ್ ಡಿಎಂಡಿಕೆ ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಬಂದಿದ್ದರು. ಆದರೆ, ಕಳೆದ ವರ್ಷ ಡಿಸೆಂಬರ್ನಲ್ಲಿ ಮೃತಪಟ್ಟರು. ಮತ್ತೋರ್ವ ಸೂಪರ್ ಸ್ಟಾರ್ ಕಮಲ್ ಹಾಸನ್ 2018ರ ಫೆಬ್ರವರಿಯಲ್ಲಿ ಮಕ್ಕಳ್ ನೀಧಿ ಮೈಯಮ್ (ಎಂಕೆಎಂ) ಅನ್ನು ಸ್ಥಾಪಿಸಿ ರಾಜಕೀಯ ಪ್ರವೇಶಿಸಿದ್ದರು.