GT vs SRH: ಕೆನ್ನೇರಳೆ ಜೆರ್ಸಿ ತೊಟ್ಟು ಬ್ಯಾಟಿಂಗ್ಗಿಳಿದ ಗುಜರಾತ್; ತಂಡಕ್ಕೆ ದಸುನ್ ಶನಕ ಪದಾರ್ಪಣೆ
May 15, 2023 07:15 PM IST
ಗುಜರಾತ್ ತಂಡ
- ಗುಜರಾತ್ ತಂಡಕ್ಕೆ ಇಂದು ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಪದಾರ್ಪಣೆ ಮಾಡುತ್ತಿದ್ದಾರೆ. ವಿಜಯ್ ಶಂಕರ್ ಗಾಯಗೊಂಡು ಹೊರಬಿದ್ದಿದ್ದು, ಅವರ ಬದಲಿಗೆ ಸಾಯಿ ಸುದರ್ಶನ್ ಆಡುತ್ತಿದ್ದಾರೆ. ಇದೇ ವೇಳೆ ರಿಂಕು ಸಿಂಗ್ ಕೈಯಿಂದ ಐದು ಸಿಕ್ಸರ್ ಹೊಡೆಸಿಕೊಂಡ ಯಶ್ ದಯಾಳ್ ಕೂಡಾ ಇಂದು ಆಡುತ್ತಿದ್ದಾರೆ.
ಐಪಿಎಲ್ನಲ್ಲಿ ಇಂದು ನಡೆಯುತ್ತಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ (Gujarat Titans) ತಂಡವು ಸನ್ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ಧ ಸೆಣಸಾಡಲಿದೆ. ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್, ಒಂಬತ್ತನೇ ಸ್ಥಾನದಲ್ಲಿರುವ ಎಸ್ಆರ್ಎಚ್ ವಿರುದ್ಧ ಗೆದ್ದು ಪ್ಲೇ ಆಫ್ಗೆ ಲಗ್ಗೆ ಹಾಕುವ ಉತ್ಸಾಹದಲ್ಲಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಸನ್ರೈಸರ್ಸ್ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ ಇಂದು ಒಂದು ಬದಲಾವಣೆ ಮಾಡಲಾಗಿದ್ದು, ಗ್ಲೆನ್ ಫಿಲಿಪ್ಸ್ ಬದಲಿಗೆ ಮಾರ್ಕೊ ಜಾನ್ಸೆನ್ ಆಡುತ್ತಿದ್ದಾರೆ. ಇದೇ ವೇಳೆ ಗುಜರಾತ್ ತಂಡದಲ್ಲೂ ಎರಡು ಬದಲಾವಣೆ ಮಾಡಲಾಗಿದೆ. ಇಂದು ತಂಡ ಹಾಗೂ ಐಪಿಎಲ್ಗೆ ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಪದಾರ್ಪಣೆ ಮಾಡುತ್ತಿದ್ದಾರೆ. ವಿಜಯ್ ಶಂಕರ್ ಗಾಯಗೊಂಡು ಹೊರಬಿದ್ದಿದ್ದು, ಅವರ ಬದಲಿಗೆ ಸಾಯಿ ಸುದರ್ಶನ್ ಆಡುತ್ತಿದ್ದಾರೆ. ಇದೇ ವೇಳೆ ರಿಂಕು ಸಿಂಗ್ ಕೈಯಿಂದ ಐದು ಸಿಕ್ಸರ್ ಹೊಡೆಸಿಕೊಂಡ ಯಶ್ ದಯಾಳ್ ಕೂಡಾ ಇಂದು ಆಡುತ್ತಿದ್ದಾರೆ.
ಈಗಾಗಲೇ ಅಗ್ರಸ್ಥಾನದಲ್ಲಿರುವ ಗುಜರಾತ್, ಇಂದು ಗೆಲುವು ಸಾಧಿಸಿದರೆ ಪ್ಲೇ-ಆಫ್ ಹಂತಕ್ಕೆ ಬಹುತೇಕ ಎಂಟ್ರಿ ಕೊಡಲಿದೆ. ಹಾಲಿ ಚಾಂಪಿಯನ್ ಪಟ್ಟಕ್ಕೆ ಸರಿಸಮನಾಗಿ ಭರ್ಜರಿ ಪ್ರದರ್ಶನ ನೀಡುತ್ತಿರುವ ತಂಡವು, ಕಳೆದ ಬಾರಿಯಂತೆ ಈ ಬಾರಿಯೂ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಹೊರಹೊಮ್ಮಿದೆ. ಓಪನಿಂಗ್ ಬ್ಯಾಟರ್ಗಳಿಂದ ಹಿಡಿದು, ಮಧ್ಯಮ ಕ್ರಮಾಂಕ ಹಾಗೂ ಉತ್ತಮ ಫಿನಿಶಿಂಗ್ ತಂಡದಲ್ಲಿದೆ. ಬೌಲಿಂಗ್ನಲ್ಲೂ ತಂಡ ಬಲಿಷ್ಠವಾಗಿದೆ. ಪರ್ಪಲ್ ಕ್ಯಾಪ್ ಧರಿಸಿರುವ ರಶೀದ್ ಖಾನ್, ಬ್ಯಾಟಿಂಗ್ನಲ್ಲೂ ಅಬ್ಬರಿಸುತ್ತಿದ್ದಾರೆ. ಒಬ್ಬ ಬ್ಯಾಟರ್ ಕೈಕೊಟ್ಟರೂ, ಮತ್ತೊಬ್ಬರು ಮುಂದೆ ನಿಂತು ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ.
ಅತ್ತ ಎಸ್ಆರ್ಎಚ್ ತಂಡವು ಸ್ಥಿರ ಪ್ರದರ್ಶನ ನೀಡಿಲ್ಲ. ತಂಡದ ಬ್ಯಾಟಿಂಗ್ ಲೈನಪ್ ಪ್ರಬಲವಾಗಿದ್ದರೂ, ಅಗತ್ಯ ಸಂದರ್ಭಗಳಲ್ಲಿ ಉತ್ತಮ ಪ್ರದರ್ಶನ ಹೊರಬರುತ್ತಿಲ್ಲ. ಬೌಲಿಂಗ್ನಲ್ಲಿ ಮಯಾಂಕ್ ಮಾರ್ಕಾಂಡೆಗೆ ಉತ್ತಮ ಬೆಂಬಲ ಸಿಗುತ್ತಿಲ್ಲ.
ಪಾಂಡ್ಯ ಬಳಗದ ವಿಶೇಷ ಜೆರ್ಸಿ
ಇಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬಳಗವು, ತಮ್ಮ ನೀಲಿ ಬಣ್ಣದ ಜೆರ್ಸಿ ಬದಲಿಗೆ ಕೆನ್ನೇರಳೆ (lavender) ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ಒಂದೊಳ್ಳೆ ಉದ್ದೇಶದೊಂದಿಗೆ ಲ್ಯಾವೆಂಡರ್ ಜೆರ್ಸಿಯೊಂದಕ್ಕಿ ತಂಡದ ಆಟಗಾರರನ್ನು ಮೈದಾನಕ್ಕಿಳಿಸಲು ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ನಿರ್ಧರಿಸಿದೆ. ಮಾರಕ ರೋಗ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸುವುದು ಇದರ ಹಿಂದಿನ ಉದ್ದೇಶ. ಈ ರೋಗದ ತೀವ್ರತೆಯನ್ನು ಅರಿಯುವ ಸಲುವಾಗಿ ಸಾಂಕೇತಿಕವಾಗಿ ಈ ಬಣ್ಣದ ಜೆರ್ಸಿ ತೊಡಲಾಗುತ್ತಿದೆ. ಈ ಬಣ್ಣವು ವಿವಿಧ ರೀತಿಯ ಕ್ಯಾನ್ಸರ್ ಮತ್ತು ಈ ರೋಗದಿಂದಾಗಿ ಬಲಿಯಾದ ಜೀವಗಳ ಸಂಕೇತವಾಗಿದೆ.
ಹೆಡ್ ಟು ಹೆಡ್ ದಾಖಲೆ
ಗುಜರಾತ್ ಟೈಟಾನ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು 2022ರ ಐಪಿಎಲ್ನಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದವು. ಇದರಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯಗಳಲ್ಲಿ ಗೆದ್ದಿವೆ. ಈ ವರ್ಷದ ಐಪಿಎಲ್ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿರುವುದು ಇದೇ ಮೊದಲ ಬಾರಿ. ಈ ತಂಡಗಳ ನಡುವೆ ಎರಡನೇ ಮುಖಾಮುಖಿ ಈ ಬಾರಿ ಇಲ್ಲ.
ಗುಜರಾತ್ ಆಡುವ ಬಳಗ
ಶುಬ್ಮನ್ ಗಿಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ದಸುನ್ ಶನಕ, ರಾಹುಲ್ ತೆವಾಟಿಯಾ, ಮೋಹಿತ್ ಶರ್ಮಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್.
ಹೈದರಾಬಾದ್ ಆಡುವ ಬಳಗ
ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಸನ್ವಿರ್ ಸಿಂಗ್, ಮಯಾಂಕ್ ಮಾರ್ಕಂಡೆ, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಫಜಲ್ಹಕ್ ಫಾರೂಕಿ, ಟಿ ನಟರಾಜನ್.