Virat Kohli: ವಿರಾಟ್ ಕೊಹ್ಲಿ ಗಾಯದ ಕುರಿತು ಅಡ್ಡಗೋಡೆ ಮೇಲೆ ದೀಪವಿಟ್ಟ ಆರ್ಸಿಬಿ ಕೋಚ್
May 22, 2023 04:55 PM IST
ವಿಜಯ್ ಶಂಕರ್ ಅವರ ಕ್ಯಾಚ್ ಹಿಡಿಯುವ ವೇಳೆ ಕೊಹ್ಲಿ ಗಾಯಗೊಂಡರು
- ಐಪಿಎಲ್ ಮುಗಿದ ಬೆನ್ನಲ್ಲೇ, ಮುಂದಿನ ತಿಂಗಳು ಆಸ್ಟ್ರೇಲಿಯಾ ವಿರುದ್ಧ ಭಾರತವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಆಡಲಿದೆ. ಅದಕ್ಕೂ ಮುನ್ನ ಭಾರತದಲ್ಲಿ ಈಗಾಗಲೇ ಹಲವಾರು ಆಟಗಾರರು ಗಾಯಾಳುಗಳಾಗಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಕೂಡಾ ಈ ಸಾಲಿಗೆ ಸೇರಿಕೊಳ್ಳುವ ಸಾಧ್ಯತೆಯ ಬಗ್ಗೆ ಅನುಮಾನ ಮೂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಅಭಿಮಾನಿಗಳಿಗೆ ಮತ್ತೊಂದು ವರ್ಷ ಕಹಿ ಅನುಭವವಾಯ್ತು. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಶತಕದ ಹೊರತಾಗಿಯೂ ತಂಡವು ಸೋತಿತು. ಅತ್ತ ಆರ್ಸಿಬಿ ಸೋತಿರುವ ಸಂಕಟ ಮಾತ್ರವಲ್ಲದೆ, ಆರ್ಸಿಬಿ ಹಾಗೂ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಪಂದ್ಯದ ಬಳಿಕ ಮತ್ತೊಂದು ಯೋಚನೆ ಶುರುವಾಗಿದೆ. ಅದುವೇ, ವಿರಾಟ್ ಕೊಹ್ಲಿ ಫಿಟ್ನೆಸ್.
ಐಪಿಎಲ್ ಮುಗಿದ ಬೆನ್ನಲ್ಲೇ, ಮುಂದಿನ ತಿಂಗಳು ಆಸ್ಟ್ರೇಲಿಯಾ ವಿರುದ್ಧ ಭಾರತವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಆಡಲಿದೆ. ಅದಕ್ಕೂ ಮುನ್ನ ಭಾರತದಲ್ಲಿ ಈಗಾಗಲೇ ಹಲವಾರು ಆಟಗಾರರು ಗಾಯಾಳುಗಳಾಗಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಕೂಡಾ ಈ ಸಾಲಿಗೆ ಸೇರಿಕೊಳ್ಳುವ ಸಾಧ್ಯತೆಯ ಬಗ್ಗೆ ಅನುಮಾನ ಮೂಡಿದೆ.
ಗುಜರಾತ್ ಟೈಟಾನ್ಸ್ ಇನ್ನಿಂಗ್ಸ್ನಲ್ಲಿ ಫೀಲ್ಡಿಂಗ್ ಮಾಡುವಾಗ, ಮೊಣಕಾಲಿಗೆ ಗಾಯ ಮಾಡಿಕೊಂಡ ಕೊಹ್ಲಿ, ಮೈದಾನದಿಂದ ಹೊರನಡೆದರು. ಅವರು ಪಂದ್ಯದ ಉಳಿದ ಭಾಗಗಳಿಂದ ಸಂಪೂರ್ಣವಾಗಿ ಹೊರಗುಳಿದರು. ಅತ್ತ ಗುಜರಾತ್ ಬ್ಯಾಟರ್ ಶುಬ್ಮನ್ ಗಿಲ್ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣವಾದಾಗಲೂ, ವಿರಾಟ್ ಡಗೌಟ್ನಲ್ಲಿ ಮೌನಿಯಾಗಿ ಕುಳಿತಿದ್ದು ಕಂಡುಬಂತು. ಗಿಲ್ ಗೆಲುವಿನ ರನ್ಗಳನ್ನು ಹೊಡೆಯುತ್ತಿದ್ದಂತೆಯೇ, ಕೊಹ್ಲಿ ಕೋಪದಿಂದ ತಮ್ಮ ನೀರಿನ ಬಾಟಲಿಯನ್ನು ಎಸೆಯುವುದನ್ನು ನೇರಪ್ರಸಾರದ ವೇಳೆ ತೋರಿಸಲಾಯ್ತು. ಪಂದ್ಯ ಸೋತ ಬಳಿಕ, ಗುಜರಾತ್ ಆಟಗಾರರನ್ನು ಅಭಿನಂದಿಸಲು ವಿರಾಟ್ ಮೈದಾನಕ್ಕೆ ಇಳಿದರು. ಆ ಬಳಿಕ ಆರ್ಸಿಬಿ ತಂಡದ ಇತರ ಆಟಗಾರರೊಂದಿಗೆ ಮೈದಾನದಲ್ಲಿ ಸುತ್ತಾಡಿದರು. ಅಲ್ಲದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದರು. ಹೀಗಾಗಿ ವಿರಾಟ್ ಗಂಭೀರ್ ಗಾಯಕ್ಕೊಳಗಾಗಿಲ್ಲ ಎಂದು ಅಭಿಮಾನಿಗಳು ಸಮಾಧಾನ ಪಟ್ಟರು.
ಆದರೆ, ಕೊಹ್ಲಿ ಅವರ ಗಾಯದ ಬಗ್ಗೆ ಅಭಿಮಾನಿಗಳಿಗೆ ಆತಂಕವಿತ್ತು. ಅದರ ಬೆನ್ನಲ್ಲೇ ಈ ಬಗ್ಗೆ ಮಾತನಾಡಿದ ಆರ್ಸಿಬಿ ಮುಖ್ಯ ಕೋಚ್ ಸಂಜಯ್ ಬಂಗಾರ್, ಅಡ್ಡ ಗೋಡೆ ಮೇಲೆ ದೀಪವಿಟ್ಟಿದ್ದಾರೆ. ಕೊಹ್ಲಿಯ ಫಿಟ್ನೆಸ್ ಬಗ್ಗೆ ಅಭಿಮಾನಿಗಳಲ್ಲಿದ್ದ ಭಯವನ್ನು ಅವರು ಸ್ವಲ್ಪ ಮಟ್ಟಿಗೆ ದೂರ ಸರಿಸಿದ್ದಾರೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೂ ಮುನ್ನ ಕೊಹ್ಲಿ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಸಮಾಧಾನಕರ ಮಾಹಿತಿ ಸಿಕ್ಕಿದೆ.
“ವಿರಾಟ್ ಮೊಣಕಾಲಿನಲ್ಲಿ ಸ್ವಲ್ಪ ಗಾಯವಾಗಿತ್ತು. ಆದರೆ ಗಂಭೀರ ಗಾಯಗಳೇನೂ ಇಲ್ಲ ಎಂದು ನಾನು ಭಾವಿಸುತ್ತೇನೆ. ಅವರು 4 ದಿನಗಳ ಅಂತರದಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಶತಕಗಳನ್ನು ಗಳಿಸಿದ್ದಾರೆ" ಎಂದು ಬಂಗಾರ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
“ಅವರು ಕೇವಲ ಬ್ಯಾಟ್ನೊಂದಿಗೆ ಮಾತ್ರ ತಂಡಕ್ಕೆ ಕೊಡುಗೆ ನೀಡುವುದಿಲ್ಲ. ಅದರೊಂದಿಗೆ ಫೀಲ್ಡಿಂಗ್ ಮಾಡುವಾಗಲೂ ಸಹ ತಂಡಕ್ಕೆ ಸಾಕಷ್ಟು ಕೊಡುಗೆ ನೀಡುತ್ತಾರೆ. ಮೈದಾನದಲ್ಲಿ ಸಾಕಷ್ಟು ಓಡಿದ್ದರು. ಒಂದೆರಡು ದಿನಗಳ ಹಿಂದೆ 40 ಓವರ್ಗಳ ಕಾಲ ಮತ್ತು ಇಂದು(ಭಾನುವಾರ) 35 ಓವರ್ಗಳವರೆಗೆ ಮೈದಾನದಲ್ಲಿದ್ದರು. ಅವರು ತಮ್ಮ ಅತ್ಯುತ್ತಮ ಪ್ರಯತ್ನವನ್ನು ತಂಡಕ್ಕಾಗಿ ನೀಡುತ್ತಿದ್ದಾರೆ. ಹೀಗಾಗಿ ಒಂದು ಹಂತದಲ್ಲಿ ಅವರ ಗಾಯದ ಬಗ್ಗೆ ಭಯವಾಗುವುದು ಸಹಜ. ಆದರೆ ಯಾವುದೇ ಗಂಭೀರ ಗಾಯಗಳಾಗಿದೆ ಎಂದು ನಾನು ಭಾವಿಸುವುದಿಲ್ಲ” ಎಂದು ಬಂಗಾರ್ ಹೇಳಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ, 5 ವಿಕೆಟ್ ನಷ್ಟಕ್ಕೆ 197 ರನ್ ಕಲೆ ಹಾಕಿತು. ಬೃಹತ್ ಗುರಿ ಪಡೆದ ಗುಜರಾತ್, 19.1 ಓವರ್ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆ ಮೂಲಕ 6 ವಿಕೆಟ್ಗಳ ಅಂತರದಿಂದ ಗೆದ್ದು ಬೀಗಿತು.