ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಅರ್ಜುನ್ ದೇವ್ ನಿಧನ

ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಅರ್ಜುನ್ ದೇವ್ ನಿಧನ

ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎನ್‌.ಅರ್ಜುನ್‌ ದೇವ್‌ ನಿಧನರಾಗಿದ್ಧಾರೆ.

ಎನ್‌.ಅರ್ಜುನ್‌ ದೇವ್‌
ಎನ್‌.ಅರ್ಜುನ್‌ ದೇವ್‌

ಬೆಂಗಳೂರು: ರಾಜಕೀಯ ವರದಿಗಾರಿಕೆಗೆ ಹೆಸರುವಾಸಿಯಾಗಿದ್ದ ಕರ್ನಾಟಕದ ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಅರ್ಜುನ್ ದೇವ್ (92) ಅವರು ಬೆಂಗಳೂರಿನ ಕೆಂಗೇರಿ ಉಪನಗರದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ನಿಧನರಾದರು. ಇಬ್ಬರು ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಾಯಿನಾಡು ಪತ್ರಿಕೆ, ಸಂಯುಕ್ತ ಕರ್ನಾಟಕ, ಪ್ರಜಾವಾಣಿ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದ ಅವರು ಸುರ್ಯೋದಯ ಪತ್ರಿಕೆ ಸಂಪಾದಕರಾಗಿಯೂ ಕೆಲಸ ಮಾಡಿದ್ದರು. ಅವರ ಹುಟ್ಟೂರಾದ ಕೋಲಾರ ಜಿಲ್ಲೆ ಚೌಡದೇವನಹಳ್ಳಿಯಲ್ಲಿ ಬುಧವಾರ ಸಂಜೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಪ್ರಜಾವಾಣಿಯಲ್ಲಿಯೇ ಬೆಂಗಳೂರು, ಮೈಸೂರು ಸೇರಿದಂತೆ ಹಲವು ಕಡೆಗಳಲ್ಲಿ ಅರ್ಜುನ್‌ ದೇವ ಅವರು ಕೆಲಸ ಮಾಡಿದ್ದರು. ವಿಶೇಷವಾಗಿ ರಾಜಕೀಯ, ರಾಜಕಾರಣದ ಒಳನೋಟದ ವರದಿಗಳನ್ನು ಅವರು ಮಾಡುವಲ್ಲಿ ನಿಷ್ಣಾತರಾಗಿದ್ದರು. ತನಿಖಾ ವರದಿಗಳಿಗೂ ಹೆಸರುವಾಸ. ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾಗಿಯೂ ಅತ್ಯುತ್ತಮವಾಗಿ ಕೆಲಸ ಮಾಡಿದ್ದರು. ಪತ್ರಕರ್ತರ ಸಂಘಟನೆ, ಕ್ಷೇಮಾಭಿವೃದ್ದಿ ವಿಚಾರದಲ್ಲೂ ಸಾಕಷ್ಟು ಚಟುವಟಿಕೆಗಳನ್ನು ರೂಪಿಸಿ ಗಮನ ಸೆಳೆದಿದ್ದರು. ಹಲವಾರು ಪ್ರಶಸ್ತಿಗಳೂ ಅವರಿಗೆ ಬಂದಿದ್ದವು.

ಸಿಎಂ ಸಂತಾಪ

ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಅರ್ಜುನ್ ದೇವ್ ಅವರ ನಿಧನದ ಸುದ್ದಿ ನೋವು ತಂದಿದೆ.ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಕೆಯುಡಬ್ಲೂಜೆ ಸಂತಾಪ

ಹಿರಿಯ ಪತ್ರಕರ್ತರದ ಅರ್ಜುನ್ ದೇವ್‌ ಅವರ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಪ್ರಜಾವಾಣಿ, ಸಂಯುಕ್ತ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಯಲ್ಲಿ ಸಲ್ಲಿಸಿದ್ದ ಸೇವೆ ಅನನ್ಯವಾದದ್ದು. ಪತ್ರಕರ್ತರ ಸಂಘಟನೆಯಲ್ಲಿ ಅವರಿಗಿದ್ದ ಬದ್ಧತೆ, ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವ ಪರಿ ನಿಜಕ್ಕೂ ಶ್ಲಾಘನೀಯ. ಸಂಘದ ಅಧ್ಯಕ್ಷರಾಗಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದ ಅರ್ಜುನ್ ದೇವ್ ಅವರ ನಿಧನದಿಂದ ಸುದ್ದಿಮನೆಗೆ ತುಂಬಲಾರದ ನಷ್ಟವಾಗಿದೆ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಶೋಕಿಸಿದ್ದಾರೆ.

IPL_Entry_Point

ವಿಭಾಗ