ಕನ್ನಡ ಸುದ್ದಿ  /  ಕರ್ನಾಟಕ  /   Bharat Jodo Yatra: 'ಕರ್ನಾಟಕ ರಾಜ್ಯದ ನೋವನ್ನು ನಾವು ಆಲಿಸುತ್ತೇವೆ' - ಐಕ್ಯತಾ ಯಾತ್ರೆಯಲ್ಲಿ ರಾಹುಲ್​ ಗಾಂಧಿ ಮಾತು

Bharat Jodo Yatra: 'ಕರ್ನಾಟಕ ರಾಜ್ಯದ ನೋವನ್ನು ನಾವು ಆಲಿಸುತ್ತೇವೆ' - ಐಕ್ಯತಾ ಯಾತ್ರೆಯಲ್ಲಿ ರಾಹುಲ್​ ಗಾಂಧಿ ಮಾತು

ಕರ್ನಾಟಕ ರಾಜ್ಯದ ನೋವನ್ನು ನಾವು ಆಲಿಸುತ್ತೇವೆ. ಕರ್ನಾಟಕದಲ್ಲಿನ ಭ್ರಷ್ಟಾಚಾರ, ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆಗಳನ್ನು ಆಲಿಸುತ್ತೇವೆ. ಇಂದು ಇಷ್ಟು ಬಿಸಿಲಿನಲ್ಲಿ ನನ್ನ ಮಾತು ಕೇಳಲು ಬಂದಿರುವ ನಿಮ್ಮೆಲ್ಲರಿಗೂ ನಾನು ಧನ್ಯವಾದಗಳನ್ನು ಅಪಿಸುತ್ತೇನೆ ಎಂದು ರಾಹುಲ್​ ಗಾಂಧಿ ಹೇಳಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಇಂದು ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶ ಮಾಡಿದ್ದು, ನಗಾರಿ ಬಾರಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಐಕ್ಯತಾ ಯಾತ್ರೆಗೆ ಅದ್ಧೂರಿ ಚಾಲನೆ ನೀಡಲಾಗಿದೆ.

ಕರ್ನಾಟಕದಲ್ಲಿ ಐಕ್ಯತಾ ಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಈ ಭಾರತ ಜೋಡೋ ಯಾತ್ರೆ ಸಾಗಲಿದೆ. ಇದರ ಉದ್ದೇಶ ಬಿಜೆಪಿ ಹಾಗೂ ಆರ್ ಎಸ್ಎಸ್ ವಿಚಾರಧಾರೆಗಳಿಂದ ದೇಶದಲ್ಲಿ ಹಬ್ಬುತ್ತಿರುವ ದ್ವೇಷ ಹಾಗೂ ಹಿಂಸಾಚಾರದ ವಿರುದ್ಧ ಹೋರಾಟ ಮಾಡುವುದು. ಈ ಯಾತ್ರೆ ಸಂವಿಧಾನದ ರಕ್ಷಣೆ ಯಾತ್ರೆ. ಸಂವಿಧಾನದ ಹೊರತಾಗಿ ಈ ನಮ್ಮ ತಿರಂಗಾಕ್ಕೆ ಬೆಲೆ ಇರುವುದಿಲ್ಲ. ಈ ಯಾತ್ರೆಯಲ್ಲಿ ಬೆಳಗ್ಗೆ 6ರಿಂದ ಸಂಜೆ 6ರವರೆಗೂ ನಾವು ಹೆಜ್ಜೆ ಹಾಕುತ್ತೇವೆ. ಕೆಲವೊಮ್ಮೆ ಮಳೆ ಬೀಳುತ್ತದೆ, ಮತ್ತೆ ಕೆಲವೊಮ್ಮೆ ಸುಡು ಬಿಸಿಲು ಬರುತ್ತದೆ ಆದರೂ ನಾವು ನಿರಂತರವಾಗಿ ಹೆಜ್ಜೆಹಾಕುತ್ತೇವೆ. ನಾನು ಒಬ್ಬನೇ ಸಾಗುವುದಿಲ್ಲ, ನನ್ನ ಜತೆಗೆ ಲಕ್ಷಾಂತರ ಜನರು ಹೆಜ್ಜೆ ಹಾಕುತ್ತಿದ್ದಾರೆ ಎಂದರು.

ಈ ಯಾತ್ರೆಯಲ್ಲಿ ದ್ವೇಷ, ಹಿಂಸೆ ಕಾಣುವುದಿಲ್ಲ. ಎಲ್ಲ ಧರ್ಮ, ಜಾತಿ, ಭಾಷಿಗರು ಒಟ್ಟಿಗೆ ಹೆಜ್ಜೆ ಹಾಕುತ್ತಾರೆ. ಈ ಪಾದಯಾತ್ರೆ ಸಾಗುವಾಗ ಯಾರಾದರೂ ಬಿದ್ದರೆ ಉಳಿದವರೆಲ್ಲರೂ ಸೇರಿ ಅವರನ್ನು ಮೇಲೆತ್ತುತ್ತಾರೆ. ಆಗ ಯಾರೋಬ್ಬರು ನಿಮ್ಮ ಧರ್ಮ, ಜಾತಿ, ಭಾಷೆ ಯಾವುದು ಎಂದು ಯಾರೂ ಕೇಳುವುದಿಲ್ಲ. ಇದೇ ನಮ್ಮ ಪ್ರೀತಿಯ, ಶಾಂತಿಯ, ಭ್ರಾತೃತ್ವದ ಭಾರತ. ಈ ಯಾತ್ರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಸಾಗಲಿದ್ದು, ಯಾವುದೇ ಶಕ್ತಿ ಇದನ್ನು ತಡೆಯಲು ಸಾಧ್ಯವಿಲ್ಲ. ಕಾರಣ ಇದು ಭಾರತದ ಧ್ವನಿಯ ಯಾತ್ರೆಯಾಗಿದೆ. ನಾವು 7-8 ಗಂಟೆಗಳ ಕಾಲ ಬೆಳಗ್ಗೆಯಿಂದ ಸಂಜೆವರೆಗೂ ಹೆಜ್ಜೆ ಹಾಕುತ್ತೇವೆ. ಈ ಸಮಯದಲ್ಲಿ ದಾರಿಯುದ್ಧಕ್ಕು ಜನರು ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಾರೆ, ಬೆಲೆ ಏರಿಕೆ, ನಿರುದ್ಯೋಗ, ರೈತರ ಮೇಲಿನ ದೌರ್ಜನ್ಯ, ಸಾರ್ವಜನಿಕ ಉದ್ಯೋಗ ಖಾಸಗಿಕರಣದ ಬಗ್ಗೆ, ಇಡೀ ದೇಶದ ಜನ ತಮ್ಮ ನೋವು ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ. ಎಲ್ಲೂ ದೊಡ್ಡ ಭಾಷಣಗಳು ಇರುವುದಿಲ್ಲ. 7-8 ಗಂಟೆ ಹೆಜ್ಜೆ ಹಾಕಿ 15 ನಿಮಿಷಗಳ ಭಾಷಣ ಇರುತ್ತದೆ ಎಂದು ವಿವರಿಸಿದರು.

ಈ ಪಾದಯಾತ್ರೆ ನಮ್ಮ ಅಭಿಪ್ರಾಯ ಹೇಳುವುದಕ್ಕಿಂತ ನಿಮ್ಮ ಸಮಸ್ಯೆಗಳನ್ನು ಆಲಿಸಲು ಮಾಡಲಾಗುತ್ತಿದೆ. ಜನ ಪ್ರಶ್ನೆ ಕೇಳಬಹುದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನಡೆಯುವುದೇಕೆ? ಪ್ರಜಾಪ್ರಭುತ್ವದಲ್ಲಿ ಹಲವು ಸಂಸ್ಥೆಗಳಿವೆ. ಮಾಧ್ಯಮ, ಸಂಸತ್ತುಗಳಿವೆ. ಇವೆಲ್ಲವೂ ವಿರೋಧ ಪಕ್ಷಗಳಿಗೆ ಬಂದ್ ಮಾಡಲಾಗಿದೆ. ಮಾಧ್ಯಮಗಳಲ್ಲಿ ನಮ್ಮ ವಿಚಾರ ಬರುವುದಿಲ್ಲ, ಮಾಧ್ಯಮಗಳನ್ನು ಸರ್ಕಾರ ನಿಯಂತ್ರಿಸುತ್ತಿದೆ. ಸಂಸತ್ತಿನಲ್ಲಿ ನಾವು ಏನಾದರೂ ಹೇಳಲು ಹೋದರೆ ಅದಕ್ಕೆ ಅವಕಾಶ ನೀಡುವುದಿಲ್ಲ, ವಿರೋಧ ಪಕ್ಷದವರನ್ನು ಬಂಧಿಸಲಾಗುತ್ತದೆ. ಹೀಗಾಗಿ ನಮ್ಮ ಮುಂದೆ ಬೇರೆ ದಾರಿ ಇಲ್ಲದೆ ಪಾದಯಾತ್ರೆ ಮಾಡುತ್ತಿದ್ದೇವೆ. ಜನರ ಜತೆ ಸಾವಿರಾರು ಕಿ.ಮೀ ಹೆಜ್ಜೆ ಹಾಕುವುದೊಂದೆ ವಿರೋಧ ಪಕ್ಷಗಳ ಮುಂದೆ ಉಳಿದಿರುವ ದಾರಿ. ಈ ದಾರಿಯಲ್ಲಿ ನಡೆಯುವುದನ್ನು ಯಾರೂ ಕೂಡ ತಡೆಯಲಾಗುವುದು. ಕಾರಣ ಇಲ್ಲಿ ನಾವು ನಡೆಯುತ್ತಿಲ್ಲ, ದೇಶದ ಜನ ನಡೆಯುತ್ತಿದ್ದಾರೆ ಎಂದು ತಿಳಿಸಿದರು.

ಈ ಯಾತ್ರೆಯಲ್ಲಿ ದೇಶದ ಜನರ ಧ್ವನಿಯನ್ನು ಕೇಳಲಾಗುವುದು. ಭಾರತೀಯರ ಧ್ವನಿಯನ್ನು ಅಡಗಿಸುವ ಸಾಮರ್ಥ್ಯ ಯಾವುದೇ ಶಕ್ತಿಗಳಿಗೆ ಇಲ್ಲ. ಇಂದು ಇಷ್ಟು ಬಿಸಿಲಿನಲ್ಲಿ ನನ್ನ ಮಾತು ಕೇಳಲು ಬಂದಿರುವ ನಿಮ್ಮೆಲ್ಲರಿಗೂ ನಾನು ಧನ್ಯವಾದಗಳನ್ನು ಅಪಿಸುತ್ತೇನೆ. ಮುಂದಿನ 21 ದಿನ ನೀವು ನನ್ನೊಂದಿಗೆ ನೀವು ಈ ಉರಿ ಬಿಸಿಲಿನಲ್ಲಿ ಹೆಜ್ಜೆ ಹಾಕಬೇಕು, ಕರ್ನಾಟಕ ರಾಜ್ಯದ ನೋವನ್ನು ನಾವು ಆಲಿಸುತ್ತೇವೆ. ಕರ್ನಾಟಕದಲ್ಲಿನ ಭ್ರಷ್ಟಾಚಾರ, ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆಗಳನ್ನು ಆಲಿಸುತ್ತೇವೆ. ನಿಮ್ಮೆಲ್ಲರಿಗೂ ಮತ್ತೊಮ್ಮೆ ಅಭಿನಂದನೆಗಳು ಎಂದು ಎಲ್ಲ ಯಾತ್ರಿಗಳಿಗೆ ರಾಹುಲ್​ ಗಾಂಧಿ ಹುರುಪು ತುಂಬಿದರು.

IPL_Entry_Point

ವಿಭಾಗ