ಕನ್ನಡ ಸುದ್ದಿ  /  Karnataka  /  H D Devegowda To Wright Autobiography

H D Devegowda Autobiography: ಆತ್ಮಚರಿತ್ರೆ ಬರೆಯಲು ಮಾಜಿ ಪ್ರಧಾನಿ ದೇವೇಗೌಡರ ಸಮ್ಮತಿ

ಆತ್ಮಕಥೆಯನ್ನು ರಚಿಸಲು ವಿಶ್ರಾಂತಿ ಸಮಯವನ್ನು ಬಳಸಿಕೊಳ್ಳುವಂತೆ ದೇವೇಗೌಡರಿಗೆ ಜಗದ್ಗುರು ಒತ್ತಾಯ ಪೂರ್ವಕವಾಗಿ ಸೂಚಿಸಿದರು. ಜಗದ್ಗುರುಗಳ ಸೂಚನೆಯನ್ನು ಪ್ರಸಾದವೆಂದು ಸ್ವೀಕರಿಸಿರುವುದಾಗಿ ಆತ್ಮಚರಿತ್ರೆ ಬರೆಯಲು ಸೂಕ್ತ ವ್ಯಾಖ್ಯಾನಕಾರರನ್ನು ನೀಡುವಂತೆ ಕೋರಿದರು.

ದೇವೇಗೌಡರನ್ನು ಭೇಟಿಯಾದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ
ದೇವೇಗೌಡರನ್ನು ಭೇಟಿಯಾದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ

ಬೆಂಗಳೂರು: ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿಗಳಾದ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಇಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಭೇಟಿಯಾದರು. ಅವರ ಆರೋಗ್ಯ ವಿಚಾರಿಸಿ ಆಶೀರ್ವಾದಿಸಿದರು. ಈ ವೇಳೆ ತಮ್ಮ ಆತ್ಮಚರಿತ್ರೆ ಬರೆಯಲು ಹೆಚ್‌ಡಿಡಿ ಒಪ್ಪಿಗೆ ಸೂಚಿಸಿದ್ದಾರೆ.

ಇಳಿ ವಯಸ್ಸಿನಲ್ಲೂ ಹೆಚ್ ಡಿ ದೇವೇಗೌಡರು ಜಗದ್ಗುರುಗಳ ಪಾದಕ್ಕೆ ನಮಿಸಿ ಸ್ವಾಗತಿಸಿದರು. ಈ ವೇಳೆ ಸ್ವಾಮೀಜಿ ದೇವೇಗೌಡರಿಗೆ ಏಲಕ್ಕಿ ಹಾರ ಹಾಗೂ ಶಾಲು ಹೊದಿಸಿ, ಆರೋಗ್ಯ ಪೂರ್ಣರಾಗಿ ಕರುನಾಡಿನ ಧ್ಯೇಯಕ್ಕೆ ಮತ್ತಷ್ಟು ಕ್ರೀಯಾಶೀಲರಗಿ ಯುವಕರಿಗೆ ರಾಜಕೀಯ ಮಾರ್ಗದರ್ಶನ ನೀಡುವಂತೆ ಆಶೀರ್ವಾದಿಸಿದರು.

ವಯೋಸಹಜತೆಯಿಂದ ಆರೋಗ್ಯದಲ್ಲಿ ಏರುಪೇರಾಗಿದ್ದು, ವಿಶ್ರಾಂತಿಯಲ್ಲಿರುವುದರಿಂದ ಆರೋಗ್ಯ ಸುಧಾರಣೆಯಾಗುತ್ತಿರುವುದಾಗಿ ಗೌಡರು ತಿಳಿಸಿದರು. ಜಗದ್ಗುರುಗಳ ಬಿಸಿಲು ಬೆಳದಿಂಗಳು ಅಂಕಣ ಪ್ರಕಟಣೆಯ ದಿನವಾದ ಇಂದಿನ ಲೇಖನವಾದ 'ಮರೆತು ಹೋದ ಕನ್ನಡ ನಾಡಿನ ಜಲಿಯನ್ ವಾಲಾ ಬಾಗ್' ಕುರಿತಾಗಿ ಮಾಜಿ ಪ್ರಧಾನಿ ಚರ್ಚಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಜನಿಸಿರುವ ಗೌಡರು 1953ರಲ್ಲಿ ಕಾಂಗ್ರೆಸ್ ಪಕ್ಷದಿಂದ ಆರಂಭವಾದ ತಮ್ಮ ರಾಜಕೀಯ ಹೋರಾಟವನ್ನು ಹಂಚಿಕೊಂಡರು.

1970-80ರ ದಶಕದಲ್ಲಿ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಸಾಸಲು ಮತ್ತು ಸಿರಿಗೆರೆಯ ಮಠದಲ್ಲಿ ಹಲವಾರು ಬಾರಿ ಭೇಟಿ ಮಾಡಿ ರಾಜಕೀಯ ಮಾರ್ಗದರ್ಶನ ನೀಡುವಂತೆ ಪ್ರಾರ್ಥಿಸಿದ್ದಾಗಿ, ಶ್ರೀಗಳ ಸಾಮಾಜಿಕ ಕಳಕಳಿಗೆ ಆಗಿನ ತಲೆಮಾರಿನ ರಾಜಕೀಯ ಧುರೀಣರಲ್ಲಿ ಎದುರಾಡುವ ಸಾಮರ್ಥ್ಯ ಇರಲಿಲ್ಲ. ಇದಕ್ಕೆ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರ ಘಟನೆಯೇ ಸಾಕ್ಷಿಯಾಗಿದೆ. ತರಳಬಾಳು ಹುಣ್ಣಿಮೆ ಮಹೋತ್ಸವವು ಭಾವೈಕ್ಯತೆಯ ಸಂಗಮವಾಗಿ ಈ ನಾಡಿಗೆ ಮಾದರಿಯಾದ ಸಮಾರಂಭ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತರಳಬಾಳು ಜಗದ್ಗುರು ಬೃಹನ್ಮಠದ ಮಾದರಿ ಸಮಾಜ ಸೇವಾಕಾರ್ಯಾಗಳನ್ನು ಸ್ಮರಿಸಿದ ಹೆಚ್ ಡಿ ದೇವೇಗೌಡರು ತಮ್ಮ ನೇತೃತ್ವದಲ್ಲಿ ಜಾರಿಯಾದ 20ಕ್ಕೂ ಅಧಿಕ ಏತನೀರಾವರಿ ಯೋಜನೆಗಳ ಮೂಲಕ 500ಕ್ಕೂ ಅಧಿಕ ಕೆರೆಗಳಿಗೆ ನೀರು ತುಂಬಿಸಿ, ವಿಶೇಷವಾಗಿ ಜಗಳೂರು ಮತ್ತು ಭರಮಸಾಗರ ಯೋಜನೆಗಳ ಮೂಲಕ ಲಕ್ಷಾಂತರ ರೈತರಿಗೆ ಸಂಜೀವಿನಿಯಾಗಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ದೋಷಗಳನ್ನು ಸರಿಪಡಿಸಲು ತಾವು ಶ್ರಮಿಸಿ, ತಮ್ಮ ಮಾರ್ಗದರ್ಶನದಲ್ಲಿ ಹೊರ ತಂದ ಭೂಮಿ ಆನ್ಲೈನ್ ತಂತ್ರಾಂಶವು ಕಂದಾಯ ಇಲಾಖೆಯ ಮೂಲಕ ನೀಡುವ ನೆರೆ ಹಾಗೂ ಬರ ಪರಿಹಾರಕ್ಕೆ ಯಾವುದೇ ಲಂಚರಹಿತವಾಗಿ‌ ರೈತ ಫಲಾನುಭವಿಗಳಿಗೆ ಡಿಬಿಟಿಯ ಮೂಲಕ ಸಹಸ್ರಾರು ಕೋಟಿ ರೂಪಾಯಿ ತಲುಪುತ್ತಿರುವುದು ದೇಶಕ್ಕೆ ಮಾದರಿ ಕಾರ್ಯವಾಗಿದೆ. ಕರ್ನಾಟಕದಲ್ಲಿ 2018ರಲ್ಲಿಯೇ ಈ ಕಾರ್ಯ ಕೈಗೂಡಿದ್ದು ಸ್ಮರಣೀಯವಾದುದೆಂದು ಗೌಡರು ಅಭಿಪ್ರಾಯ ಪಟ್ಟರು.

ಸಾರ್ವಜನಿಕ ಕಾರ್ಯಕ್ರಮಗಳಿಗೆ ಕೆಲವು ದಿನಗಳವರೆಗೆ ವಿರಾಮ ನೀಡಿ ಆರೋಗ್ಯ ಕಾಪಾಡಿಕೊಳ್ಳಲು ಜಗದ್ಗುರುಗಳು ಸಲಹೆ ನೀಡಿದರು. "ನಿಮ್ಮ ಈ ಹೋರಾಟದ ಕಿಚ್ಚು ದೇಶದ ಯುವ ಪೀಳಿಗೆಗೆ ಸ್ಪೂರ್ತಿಯಾಗುವ ಆಶಯ ನಮ್ಮದು. ಪ್ರಜಾಸತ್ತಾತ್ಮಕ ವ್ಯವಸ್ಥೆಯ ಕೆಳ ಸ್ತರದಿಂದ ಆರಂಭಿಸಿದ ನಿಮ್ಮ ಜೀವನ ಹೋರಾಟ ಪ್ರಧಾನಿಯಾಗುವವರೆಗೆ ಸಾಗಿದೆ. ಸಮಾಜದಲ್ಲಿನ ಅಸಮಾನತೆಗಳನ್ನು ಸರಿಪಡಿಸಿ, ಸಾಮಾಜಿಕ-ಆರ್ಥಿಕ ಅಭಿವೃದ್ಧಿಯೊಂದಿಗೆ ಆದರ್ಶ ರಾಜ್ಯವೊಂದರ ನಿಮ್ಮ ಕನಸು, ತುರ್ತು ಪರಿಸ್ಥಿತಿ ದಿನಗಳಲ್ಲಿ ಜೈಲು ವಾಸ, ರಾಜಕೀಯ ಜೀವನ, ಕುಟುಂಬದ ಸಹಕಾರವನ್ನು ಕುರಿತು ಸಿಂಹಾವಲೋಕನಗೈಯುವ ಆತ್ಮಕಥೆಯನ್ನು ರಚಿಸಲು ಈ ವಿಶ್ರಾಂತಿ ಸಮಯವನ್ನು ಬಳಸಿಕೊಳ್ಳುವಂತೆ ಜಗದ್ಗುರು ದೇವೇಗೌಡರಿಗೆ ಒತ್ತಾಯ ಪೂರ್ವಕವಾಗಿ ಸೂಚಿಸಿದರು. ಜಗದ್ಗುರುಗಳ ಸೂಚನೆಯನ್ನು ಪ್ರಸಾದವೆಂದು ಸ್ವೀಕರಿಸಿರುವುದಾಗಿ ಆತ್ಮಚರಿತ್ರೆ ಬರೆಯಲು ಸೂಕ್ತ ವ್ಯಾಖ್ಯಾನಕಾರರನ್ನು ನೀಡುವಂತೆ ಕೋರಿದರು.

ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ನಿವಾಸದಲ್ಲಿ ತರಳಬಾಳು ಜಗದ್ಗುರುಗಳ ಆಗಮನವು ಸಂತಸ ತಂದಿತ್ತು. ಗೌಡರ ಕುಟುಂಬವು ಅತ್ಯಂತ ಶ್ರದ್ಧಾ ಭಕ್ತಿಯಿಂದ ಸ್ವಾಗತಿಸಿತು.

IPL_Entry_Point