New satellite towns around Bengaluru; ಬೆಂಗಳೂರು ಸುತ್ತ 4 ಹೊಸ ಸ್ಯಾಟಲೈಟ್ ಟೌನ್ ಯೋಜನೆ ರೂಪಿಸಿದ್ದಾರೆ ಸಿಎಂ ಬೊಮ್ಮಾಯಿ
ಜನಸಂಖ್ಯೆಯ ಹೆಚ್ಚಳದ ಕಾರಣ, ಕರ್ನಾಟಕ ಸರ್ಕಾರವು ಬೆಂಗಳೂರಿನ ಪ್ರದೇಶ ವ್ಯಾಪ್ತಿಯನ್ನು ವಿಸ್ತರಿಸಲು ನಿರ್ಧರಿಸಿದೆ. ಇದರಂತೆ, ಬೆಂಗಳೂರಿನ ಸುತ್ತ ನಾಲ್ಕು ಹೊಸ ಸ್ಯಾಟಲೈಟ್ ಟೌನ್ ರೂಪಿಸುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿಂತನೆ ನಡೆಸಿದ್ದಾರೆ.
ಬೆಂಗಳೂರು: ಭಾರಿ ಮಳೆಯ ಕಾರಣ ಇತ್ತೀಚಿನ ಪ್ರವಾಹದ ಸಮಯದಲ್ಲಿ ಕಳಪೆ ಮೂಲಸೌಕರ್ಯಗಳ ವಿಚಾರವಾಗಿ ವಿಪರೀತ ಟೀಕೆಗಳ ಸುರಿಮಳೆಯನ್ನು ಎದುರಿಸುತ್ತಿರುವ ಕರ್ನಾಟಕದ ರಾಜಧಾನಿ ಬೆಂಗಳೂರು ಶೀಘ್ರವೇ ನಾಲ್ಕು ಹೊಸ ಸ್ಯಾಟಲೈಟ್ ಟೌನ್ಗಳನ್ನು ಹೊಂದಲಿದೆ!
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸರ್ಕಾರ ಬೆಂಗಳೂರಿನಲ್ಲಿ ನಾಲ್ಕು ಸ್ಯಾಟಲೈಟ್ ಟೌನ್ಗಳನ್ನು ಮತ್ತು ರಾಜ್ಯದಲ್ಲಿ ಆರು ಸಮಗ್ರ ಪಟ್ಟಣಗಳನ್ನು ನಿರ್ಮಿಸಲು ಯೋಜಿಸುತ್ತಿದೆ ಎಂದು ಘೋಷಿಸಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
ನಗರ ಯೋಜನಾ ಪರಿಕಲ್ಪನೆಯಲ್ಲಿ, ಸ್ಯಾಟಲೈಟ್ ಟೌನ್ ಎಂಬುದು ಮೆಟ್ರೋಪಾಲಿಟನ್ ಪ್ರದೇಶದ ದೊಡ್ಡ ಭಾಗಕ್ಕೆ ಸಮೀಪವಿರುವ ಒಂದು ಸಣ್ಣ ಮೆಟ್ರೋಪಾಲಿಟನ್ ಪ್ರದೇಶವಾಗಿರುತ್ತದೆ.
ನಾಲ್ಕು ಹೊಸ ಸ್ಯಾಟಲೈಟ್ ಟೌನ್ಗಳು ಯಾವುವು?
ಗ್ರಾಮೀಣ ಪಟ್ಟಣಗಳಾದ ದೇವನಹಳ್ಳಿ, ನೆಲಮಂಗಲ, ದೊಡ್ಡಬಳ್ಳಾಪುರ ಮತ್ತು ಇನ್ನೊಂದು ಪಟ್ಟಣ.
ವರದಿಯಲ್ಲಿರುವ ಮಾಹಿತಿ ಪ್ರಕಾರ, ಗ್ರಾಮಾಂತರ ಪಟ್ಟಣಗಳಾದ ದೇವನಹಳ್ಳಿ, ನೆಲಮಂಗಲ, ದೊಡ್ಡಬಳ್ಳಾಪುರ ಮತ್ತು ಇನ್ನೊಂದು ಪಟ್ಟಣವನ್ನು ಉಪಗ್ರಹ ಪಟ್ಟಣಗಳಾಗಿ ಅಭಿವೃದ್ಧಿ ಹೊಂದಲಿವೆ. ಬೆಂಗಳೂರು ಮಹಾನಗರದ ಈಶಾನ್ಯಕ್ಕೆ 40 ಕಿಲೋಮೀಟರ್ ದೂರದ ದೇವನಹಳ್ಳಿ ಇದೆ. ಇದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಳವಾಗಿದೆ. ನೆಲಮಂಗಲ ಪಟ್ಟಣವು ಬೆಂಗಳೂರು ಗ್ರಾಮಾಂತರದ ರಾಷ್ಟ್ರೀಯ ಹೆದ್ದಾರಿ 75 ಮತ್ತು 4 ರ ಜಂಕ್ಷನ್ ಪಾಯಿಂಟ್ ಸಮೀಪದಲ್ಲಿದೆ. ದೊಡ್ಡಬಳ್ಳಾಪುರ ಹಲವಾರು MNC ಗಳನ್ನು ಹೊಂದಿರುವ ಕೈಗಾರಿಕಾ ನಗರವಾಗಿದೆ. ನಾಲ್ಕನೇ ನಗರದ ವಿವರಗಳನ್ನು ಇನ್ನೂ ಬಹಿರಂಗಗೊಳಿಸಿಲ್ಲ.
ಜನಸಂಖ್ಯೆಯ ಹೆಚ್ಚಳದ ಕಾರಣ, ಕರ್ನಾಟಕ ಸರ್ಕಾರವು ಬೆಂಗಳೂರಿನ ಪ್ರದೇಶ ವ್ಯಾಪ್ತಿಯನ್ನು ವಿಸ್ತರಿಸಲು ನಿರ್ಧರಿಸಿದೆ. ಇದರಂತೆ, ಬೆಂಗಳೂರಿನ ಸುತ್ತ ನಾಲ್ಕು ಹೊಸ ಸ್ಯಾಟಲೈಟ್ ಟೌನ್ ರೂಪಿಸುವುದಕ್ಕೆ ಚಿಂತನೆ ನಡೆಸಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಳೆದ ಮಾರ್ಚ್ ತಿಂಗಳಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಇದೇ ರೀತಿ ಹೇಳಿಕೆ ನೀಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಬೆಂಗಳೂರಿನ ಜನಸಂಖ್ಯೆಯು ಈಗಿರುವ 1.3 ಕೋಟಿಯಿಂದ 2040 ರಲ್ಲಿ ಮೂರರಿಂದ ನಾಲ್ಕು ಕೋಟಿಗೆ ಏರುತ್ತದೆ ಎಂಬ ಮುನ್ನೋಟದೊಂದಿಗೆ ಮುಖ್ಯಮಂತ್ರಿ ಬೊಮ್ಮಾಯಿ ನಗರವನ್ನು ಸ್ಯಾಟಲೈಟ್ಗಳಿದ ಸುತ್ತುವರಿದ ಗ್ರಹದಂತೆ ಅಭಿವೃದ್ಧಿಪಡಿಸಬೇಕು ಎಂದು ಆ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದರು.
"ಬೆಂಗಳೂರು, ನನ್ನ ಪ್ರಕಾರ, ರೈಲು, ರಸ್ತೆ, ಹೈಟೆಕ್ ಪ್ರಯಾಣದ ವ್ಯವಸ್ಥೆಗಳು ಮತ್ತು ಪ್ರಯಾಣಿಕರಿಗೆ ಸುಲಭವಾದ ಸಾರಿಗೆಯ ಜತೆಗೆ ಉಪಗ್ರಹ ಪಟ್ಟಣಗಳಿರುವ ಒಂದು ಗ್ರಹದಂತಿರಬೇಕು" ಎಂದು ಬೊಮ್ಮಾಯಿ ಅವರು ಬೆಂಗಳೂರು 2040 ಸಮ್ಮಿಟ್ನಲ್ಲಿ ಹೇಳಿದ್ದರು.
ನವ ಬೆಂಗಳೂರು
ಬೊಮ್ಮಾಯಿ ಅವರು "ಬೆಂಗಳೂರಿನ ಸುತ್ತ ನಾಲ್ಕು ಹೊಸ ಬೆಂಗಳೂರು"ಗಳ ಪಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಈ ಉಪಗ್ರಹ ಪಟ್ಟಣಗಳು ಎಲ್ಲ ಸೌಕರ್ಯಗಳನ್ನು ಹೊಂದಿರುತ್ತದೆ. ನಗರವು ಸಾಕಷ್ಟು ಬೆಳೆದು ಹೊಸ ಪ್ರದೇಶಗಳನ್ನು ಸೇರಿಸಿರುವುದರಿಂದ ಬೆಂಗಳೂರು ವ್ಯಾಪ್ತಿ ವಿಸ್ತರಿಸುವ ಸಮಯ ಪಕ್ವವಾಗಿದೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.
‘ನವ ಕರ್ನಾಟಕದಿಂದ ನವ ಭಾರತ’ (ನವ ಕರ್ನಾಟಕದ ಮೂಲಕ ನವ ಭಾರತ) ಎಂಬ ಹೊಸ ಘೋಷಣೆಯನ್ನು ಪರಿಚಯಿಸಿದ ಬೊಮ್ಮಾಯಿ ಅವರು ರಾಜ್ಯದಲ್ಲಿ ಆರು ಹೊಸ ಸಮಗ್ರ ನಗರಗಳನ್ನು ಯೋಜಿಸುತ್ತಿರುವುದಾಗಿ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.