ಕನ್ನಡ ಸುದ್ದಿ  /  ಕರ್ನಾಟಕ  /  Shramik Niwas: ಶ್ರಮಿಕರಿಗಾಗಿ ಶ್ರಮಿಕ್‌ ನಿವಾಸ್‌ ವಸತಿ ಯೋಜನೆ; ಏನಿದು ಯೋಜನೆ - ಯಾರು ಫಲಾನುಭವಿಗಳು?- ಇಲ್ಲಿದೆ ಫುಲ್‌ ಡಿಟೇಲ್ಸ್‌

Shramik Niwas: ಶ್ರಮಿಕರಿಗಾಗಿ ಶ್ರಮಿಕ್‌ ನಿವಾಸ್‌ ವಸತಿ ಯೋಜನೆ; ಏನಿದು ಯೋಜನೆ - ಯಾರು ಫಲಾನುಭವಿಗಳು?- ಇಲ್ಲಿದೆ ಫುಲ್‌ ಡಿಟೇಲ್ಸ್‌

Shramik Niwas: ರಾಜ್ಯ ಕಾರ್ಮಿಕ ಇಲಾಖೆ ಜಾರಿ ಮಾಡಿರುವ ಈ ಮಹತ್ವಾಕಾಂಕ್ಷಿ ಯೋಜನೆಯಿಂದ ಶ್ರಮಿಕ ವರ್ಗದ, ಅದರಲ್ಲೂ ವಲಸೆ ಕಾರ್ಮಿಕರ, ಬಹು ದಿನಗಳ ವಸತಿ ಸಮಸ್ಯೆ ನಿವಾರಣೆ ಆಗಲಿದೆ. ದೊಡ್ಡಬಳ್ಳಾಪುರದಲ್ಲಿ “ಶ್ರಮಿಕ್ ನಿವಾಸ್” ವಸತಿ ಸಮುಚ್ಚಯ ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದ್ದಾರೆ.

ನಿರ್ಮಾಣ ಹಂತದಲ್ಲಿರುವ ಶ್ರಮಿಕ್‌ ನಿವಾಸ್‌ ಮತ್ತು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್
ನಿರ್ಮಾಣ ಹಂತದಲ್ಲಿರುವ ಶ್ರಮಿಕ್‌ ನಿವಾಸ್‌ ಮತ್ತು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ (Karnataka Varthe)

ಬೆಂಗಳೂರು: ಶ್ರಮಿಕರಿಗಾಗಿಯೇ ಇರುವ ಶ್ರಮಿಕ್ ನಿವಾಸ್ ಎಂಬ ವಸತಿ ಯೋಜನೆ ರಾಜ್ಯದಲ್ಲಿ ಶೀಘ್ರದಲ್ಲೇ ಜಾರಿಯಾಗಲಿದೆ. ಇದು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಕಾರ್ಮಿಕ ಇಲಾಖೆ ಇದನ್ನು ರೂಪಿಸಿದೆ. ಇಂತಹ ಯೋಜನೆ ದೇಶದಲ್ಲೇ ಮೊದಲು ಎಂದು ಇಲಾಖೆ ಮೂಲಗಳು ತಿಳಿಸಿವೆ.

ರಾಜ್ಯ ಕಾರ್ಮಿಕ ಇಲಾಖೆ ಜಾರಿ ಮಾಡಿರುವ ಈ ಮಹತ್ವಾಕಾಂಕ್ಷಿ ಯೋಜನೆಯಿಂದ ಶ್ರಮಿಕ ವರ್ಗದ, ಅದರಲ್ಲೂ ವಲಸೆ ಕಾರ್ಮಿಕರ, ಬಹು ದಿನಗಳ ವಸತಿ ಸಮಸ್ಯೆ ನಿವಾರಣೆ ಆಗಲಿದೆ. ಕಾರ್ಮಿಕರಿಗೂ ಮೂಲಭೂತ ಸೌಕರ್ಯ ಒದಗಿಸಬೇಕೆಂಬ ಆಶಯದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ದೇಶನದಂತೆ ಶ್ರಮಿಕ ವರ್ಗಕ್ಕೆ ಮೂಲಸೌಕರ್ಯದ ಜತೆಗೆ ವಸತಿ ವ್ಯವಸ್ಥೆಗಾಗಿ “ಶ್ರಮಿಕ್ ನಿವಾಸ್” ಜಾರಿ ಮಾಡಲಾಗುತ್ತಿದೆ. ದೊಡ್ಡಬಳ್ಳಾಪುರದಲ್ಲಿ “ಶ್ರಮಿಕ್ ನಿವಾಸ್” ವಸತಿ ಸಮುಚ್ಚಯ ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದ್ದಾರೆ.

ಕಾರ್ಮಿಕ ಇಲಾಖೆಯು ಕರ್ನಾಟಕವನ್ನು ಕಾರ್ಮಿಕ ಸ್ನೇಹಿ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಹಲವು ಶ್ರಮಿಕ ಶ್ರೇಯೋಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದೆ. ಈಗ ಆ ಸಾಲಿಗೆ ಈ ಶ್ರಮಿಕ್ ನಿವಾಸ್ ವಸತಿ ಯೋಜನೆ ಕೂಡ ಸೇರಲಿದೆ.

ಶ್ರಮಿಕ ಮಕ್ಕಳಿಗೆ ಶಿಶುಪಾಲನಾ ಕೇಂದ್ರದಿಂದ ಮೊದಲ್ಗೊಂಡು ಉನ್ನತ ಶಿಕ್ಷಣ ತರಬೇತಿವರೆಗೆ ಪ್ರತಿ ಹಂತದಲ್ಲಿ ಶ್ರಮಿಕ ವರ್ಗಕ್ಕೆ ಇಲಾಖೆ ಬೆನ್ನೆಲುಬಾಗಿ ನಿಂತಿದೆ. ಈಗ ಕಾರ್ಮಿಕರಿಗೆ ಸೂರು ಒದಗಿಸುವ ‘ಶ್ರಮಿಕ್ ನಿವಾಸ್’ ಯೋಜನೆಯನ್ನು ರೂಪಿಸಿದ್ದು, ಅಂತಿಮ ಹಂತದಲ್ಲಿದೆ.

ಶ್ರಮಿಕ್ ನಿವಾಸ್ ಏನಿದು ಯೋಜನೆ ?

ರಾಜ್ಯದಲ್ಲಿನ ಕೈಗಾರಿಕಾ ಅಭಿವೃದ್ಧಿಯಲ್ಲಿ ಶ್ರಮಿಕ ವರ್ಗದ ಪಾತ್ರ ಮಹತ್ವದ್ದಾಗಿದೆ. ಇಂತಹ ಕಾರ್ಮಿಕರು ಮತ್ತು ಅವರ ಕುಟುಂಬ ರಸ್ತೆ ಬದಿ ಸಿಕ್ಕ ಸಿಕ್ಕಲ್ಲಿ ಬದುಕು ಸಾಗಿಸುವುದರಿಂದ ಮೂಲಭೂತ ಸೌಕರ್ಯದ ಕೊರತೆ ಜತೆಗೆ ಅನಾರೋಗ್ಯ ಸಮಸ್ಯೆ ಕೂಡಾ ಅವರನ್ನು ಕಾಡುತ್ತಿದೆ.

ಈ ಎಲ್ಲ ಸಮಸ್ಯೆಗಳನ್ನು ಮನಗಂಡ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಶ್ರಮಿಕ ವರ್ಗಕ್ಕೆ ವಸತಿ ಸೌಲಭ್ಯ ಒದಗಿಸುವ ಸಂಕಲ್ಪ ಮಾಡಿದೆ. ಈ ಸಂಕಲ್ಪದೊಂದಿಗೆ ರೂಪುಗೊಂಡಿರುವುದೇ ಶ್ರಮಿಕ್ ನಿವಾಸ್ ಯೋಜನೆ ಎಂದು ಇಲಾಖೆ ತಿಳಿಸಿದೆ.

ಕೈಗಾರಿಕಾ ಪ್ರದೇಶಗಳು ಸೇರಿ ಬೃಹತ್ ನಿರ್ಮಾಣ ವಲಯಗಳ ಆಸುಪಾಸಿನಲ್ಲಿ ಶ್ರಮಿಕ್ ನಿವಾಸ್ ಯೋಜನೆಯಡಿ ಶ್ರಮಿಕ ವರ್ಗಕ್ಕೆ ವಸತಿ ನೀಡುವ ಸಲುವಾಗಿ ವಸತಿ ಸಮುಚ್ಚಯ ಹಾಗೂ ಬಿಡಿ ಮನೆಗಳ ನಿರ್ಮಾಣಕ್ಕೆ ಮುಂದಾಗಿದೆ.

ದೊಡ್ಡಬಳ್ಳಾಪುರದಲ್ಲಿ ಮೊದಲ “ಶ್ರಮಿಕ್ ನಿವಾಸ್- ಬೃಹತ್ ವಸತಿ ಸಮುಚ್ಚಯ"

ಮೊದಲ ಹಂತದಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ “ಶ್ರಮಿಕ್ ನಿವಾಸ್- ಬೃಹತ್ ವಸತಿ ಸಮುಚ್ಚಯ" ಉದ್ಘಾಟನೆಗೆ ಸಜ್ಜಾಗಿದೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಕೈಗಾರಿಕಾ ವಲಯದ ಬದನಹಳ್ಳಿಯಲ್ಲಿ ಬೃಹತ್ ಏಕ ವಸತಿ ಮತ್ತು ಕುಟುಂಬ ವಸತಿಯ ಸಮುಚ್ಚಯ ನಿರ್ಮಾಣವಾಗಿದೆ. 19 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ವಸತಿ ವ್ಯವಸ್ಥೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಏಕ ವ್ಯಕ್ತಿ ಸಮುಚ್ಚಯದಲ್ಲಿ ಸಾಮೂಹಿಕ ವಸತಿಗೆ ಅವಕಾಶವಿದೆ. ಏಕ ಹಾಸಿಗೆ ವ್ಯವಸ್ಥೆಯಲ್ಲಿ 96 ಕಾರ್ಮಿಕರು ಮತ್ತು ದ್ವಿ ಹಾಸಿಗೆ ವ್ಯವಸ್ಥೆಯಡಿ 196 ಕಾರ್ಮಿಕರ ವಸತಿಗೆ ಅನುಕೂಲ ಲಭಿಸಲಿದೆ.

ಇನ್ನು ಕುಟುಂಬದೊಂದಿಗೆ ಉಳಿದುಕೊಳ್ಳ ಬಯಸುವ ಕಾರ್ಮಿಕರಿಗೆ ಪ್ರತ್ಯೇಕ ಮನೆಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ಒಂದು ಕುಟುಂಬದಲ್ಲಿ ನಾಲ್ಕು ಮಂದಿ ಎಂಬಂತೆ 48 ಕಾರ್ಮಿಕ ಕುಟುಂಬಗಳಿಗೆ ಮೊದಲ ಹಂತದಲ್ಲಿ ವಸತಿ ವ್ಯವಸ್ಥೆ ಸಿಗಲಿದೆ.

ಯಾರಿಗೆ ಸಿಗಲಿದೆ ಈ ಸೌಲಭ್ಯ?

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ “ಶ್ರಮಿಕ್ ನಿವಾಸ್” ಯೋಜನೆಯಲ್ಲಿ ನಿರ್ಮಿಸಲಾಗಿರುವ ವಸತಿ ಸಮುಚ್ಚಯಗಳಲ್ಲಿ ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗಕ್ಕೆ ನೀರು, ವಿದ್ಯುತ್ ಸೇರಿ ಅಗತ್ಯ ಮೂಲ ಸೌಕರ್ಯಕ್ಕೂ ಆದ್ಯತೆ ನೀಡಲಾಗಿದೆ. ಈ ವಸತಿ ಸಮುಚ್ಚಯಗಳನ್ನು ಇಲಾಖೆಯೇ ನಿರ್ವಹಿಸಲಿದೆ. ಕಾರ್ಮಿಕ ಮಂಡಳಿ ಗುರುತಿನ ಚೀಟಿ ಹೊಂದಿರುವ ಕಾರ್ಮಿಕರಿಗೆ ಈ ವಸತಿ ಸೌಲಭ್ಯ ದೊರೆಯಲಿದೆ.

IPL_Entry_Point