ಕನ್ನಡ ಸುದ್ದಿ  /  Nation And-world  /  Odisha News Children Marriage With Stray Dogs In Balasore Mgb

Children marriage with dogs: ದುಷ್ಟಶಕ್ತಿಗಳನ್ನು ದೂರ ಇರಿಸಲು ಬೀದಿ ನಾಯಿಗಳ ಜೊತೆ ಮಕ್ಕಳ ಮದುವೆ ಮಾಡಿಸಿದ ಪೋಷಕರು

ಮಳೆ ಬರಲೆಂದು ಕತ್ತೆಗಳಿಗೆ ಮದುವೆ ಮಾಡಿಸುವುದನ್ನು ನಾವು ಕೇಳಿರುತ್ತೇವೆ. ಆದರೆ ಒಡಿಶಾದ ಬಾಲಸೋರ್ ಜಿಲ್ಲೆಯ ಬಂಧಸಾಹಿ ಎಂಬ ಗ್ರಾಮದಲ್ಲಿ ದುಷ್ಟಶಕ್ತಿಗಳಿಂದ ತೊಂದರೆ ಎದುರಾಗಬಾರದು ಎಂಬ ಕಾರಣಕ್ಕೆ ಬೀದಿ ನಾಯಿಗಳ ಜೊತೆ ಮಕ್ಕಳ ಮದುವೆ ಮಾಡಿಸಲಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಾಲಸೋರ್ (ಒಡಿಶಾ): ನಾವು ಆಧುನಿಕ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಬಹುತೇಕ ಮಂದಿ ವಿದ್ಯಾವಂತರೇ ಇದ್ದಾರೆ. ಆದರೂ ಮೂಢನಂಬಿಕೆ ಎಂಬ ಸಾಮಾಜಿಕ ಪಿಡುಗು ಮಾತ್ರ ಇನ್ನೂ ಕೆಲವೆಡೆ ಜೀವಂತವಾಗಿದೆ. ಅದರಲ್ಲಿಯೂ ಶಿಕ್ಷಣ ಪಡೆಯದ ಜನರು ಕೆಲವು ಮೂಢನಂಬಿಕೆಗಳಿಂದ ಇನ್ನೂ ಹೊರ ಬಂದಿಲ್ಲ. ಇದಕ್ಕೆ ಒಡಿಶಾದಲ್ಲಿ ಇತ್ತೀಚೆಗೆ ನಡೆದ ಘಟನೆಯೇ ಸಾಕ್ಷಿ.

ಮಳೆ ಬರಲೆಂದು ಕತ್ತೆಗಳಿಗೆ ಮದುವೆ ಮಾಡಿಸುವುದನ್ನು ನಾವು ಕೇಳಿರುತ್ತೇವೆ. ಆದರೆ ಒಡಿಶಾದ ಬಾಲಸೋರ್ ಜಿಲ್ಲೆಯ ಬಂಧಸಾಹಿ ಎಂಬ ಗ್ರಾಮದಲ್ಲಿ ದುಷ್ಟಶಕ್ತಿಗಳಿಂದ ತೊಂದರೆ ಎದುರಾಗಬಾರದು ಎಂಬ ಕಾರಣಕ್ಕೆ ಬೀದಿ ನಾಯಿಗಳ ಜೊತೆ ಮಕ್ಕಳ ಮದುವೆ ಮಾಡಿಸಲಾಗಿದೆ.

ಬುಡಕಟ್ಟು ಸಮುದಾಯದ ಜನರು ವಾಸಿಸುವ ಗ್ರಾಮ ಇದಾಗಿದ್ದು, ಮಗುವಿನ ಮೇಲಿನ ದವಡೆಯ ಮೇಲೆ ಮೊದಲ ಹಲ್ಲು ಹುಟ್ಟುವುದು ಅಶುಭ ಎಂದು ಇಲ್ಲಿನ ಜನ ನಂಬುತ್ತಾರೆ. ನಾಯಿಗಳ ಜೊತೆ ಮದುವೆ ಮಾಡಿಸದಿದ್ದರೆ ಭವಿಷ್ಯದಲ್ಲಿ ಮಗುವಿಗೆ ಅಪಾಯ ಎದುರಾಗುತ್ತದೆ ಎಂದು ನಂಬಿದ್ದಾರೆ. ನಾಯಿಗಳ ಜೊತೆ ಮದುವೆ ಮಾಡಿಸಿದರೆ ಆ ಮಕ್ಕಳಿಗೆ ಭವಿಷ್ಯದಲ್ಲಿ ಎದುರಾಗುವ ಕೆಡಕುಗಳೆಲ್ಲಾ ನಾಯಿಗಳ ಮೇಲೆ ಹಾದು ಹೋಗುತ್ತದೆ ಎಂಬುದು ಅವರ ಮೂಢನಂಬಿಕೆ.

ಹೀಗೆ ಮೇಲಿನ ದವಡೆಯ ಮೇಲೆ ಮೊದಲ ಹಲ್ಲು ಹುಟ್ಟಿದ ಇಬ್ಬರು ಮಕ್ಕಳಿಗೆ ಬೀದಿ ನಾಯಿಗಳ ಜೊತೆ ಮದುವೆ ಮಾಡಿಸಲಾಗಿದೆ. ಮಚುವಾ ಸಿಂಗ್ ಎಂಬವರ 11 ವರ್ಷದ ಮಗನಿಗೆ ಹೆಣ್ಣು ನಾಯಿ ಹಾಗೂ ಮನಶ್ ಸಿಂಗ್ ಎಂಬವರ 5 ವರ್ಷದ ಮಗಳಿಗೆ ಗಂಡು ನಾಯಿ ಜೊತೆ ಶಾಸ್ತ್ರಬದ್ಧವಾಗಿ ವಿವಾಹ ಮಾಡಿಸಿದ್ದಾರೆ.

ಏಳು ಮನೆಗಳಿಂದ ಸಾಸಿವೆ ಎಣ್ಣೆ, ಅರಿಶಿನ ಮತ್ತು ನೀರನ್ನು ತಂದು, ಸೂರ್ಯ ದೇವರು ಮತ್ತು ಗ್ರಾಮ ದೇವತೆಗೆ ಸಿಂಧೂರ ಮತ್ತು ಆಭರಣಗಳನ್ನು ಅರ್ಪಿಸಿ, ಮದುವೆಯ ಸಾಂಪ್ರದಾಯಿಕ ಆಚರಣೆಗಳನ್ನು ನಡೆಸಿ ನಾಯಿಗಳ ಜೊತೆ ಮಕ್ಕಳ ಮದುವೆ ಮಾಡಿಸಿದ್ದಾರೆ. ಮದುವೆ ಕಾರ್ಯಕ್ರಮಕ್ಕೆ ಇಡೀ ಗ್ರಾಮವೇ ಸಾಕ್ಷಿಯಾಗಿತ್ತು. ಬುಡಕಟ್ಟು ಜನಾಂಗದ ನೃತ್ಯ ಮತ್ತು ಹಾಡುಗಳು ಇದ್ದವು. ಹೀಗೆ ಸಂಪ್ರದಾಯ ಬದ್ಧವಾಗಿ ನಾಯಿಗಳ ಜೊತೆ ಮಕ್ಕಳ ಮದುವೆ ಮಾಡಿಸಿದರೆ ಗ್ರಹಗಳನ್ನು ಮೆಚ್ಚಿಸಿ ದುಷ್ಟಶಕ್ತಿಗಳಿಂದ ಮಕ್ಕಳನ್ನು ದೂರ ಇಡಬಹುದು ಎನ್ನುತ್ತಾರೆ ಇಲ್ಲಿನ ಜನರು.

ಆರ್ಥಿಕ ಏಳಿಗೆಗಾಗಿ ಮಾಟಮಂತ್ರದ ಹೆಸರಿನಲ್ಲಿ ಇಬ್ಬರು ಮಹಿಳೆಯರನ್ನು ಬಲಿ ನೀಡಿರುವ ಘಟನೆ ದೇವರನಾಡು ಕೇರಳದಲ್ಲಿ ಕಳೆದ ವರ್ಷ ನಡೆದಿತ್ತು. ಕೇರಳದ ಪತ್ತನಂತಿಟ್ಟ ಜಿಲ್ಲೆಯ ಎಳಂದೂರಿನಲ್ಲಿ ನಡೆದಿದ್ದು, ಈ ಸಂಬಂಧ ದಂಪತಿ ಸೇರಿದಂತೆ ಮೂವರನ್ನು ಬಂಧಿಸಲಾಗಿತ್ತು. ಆರೋಪಿಗಳು ತಮ್ಮ ಆರ್ಥಿಕ ಏಳಿಗೆಗಾಗಿ ಪೂಜೆ ನಡೆಸಿ ಮಾಟಮಂತ್ರದ ಭಾಗವಾಗಿ ಮಹಿಳೆಯರನ್ನು ಅಪಹರಿಸಿ, ಬಲಿಕೊಟ್ಟಿದ್ದಾರೆ. ನಂತರ ಬಲಿಯಾದವರ ಶವಗಳನ್ನು ತುಂಡು-ತುಂಡುಗಳಾಗಿ ಕತ್ತರಿಸಿ ತಿರುವಲ್ಲಾ ಬಳಿ ಹೂತು ಹಾಕಿದ್ದರು ಎಂದು ತಿಳಿಸಿದ್ದಾರೆ.

ದೇವರ ಆದೇಶವೆಂದು ಹೇಳಿ 6 ವರ್ಷದ ಬಾಲಕನ ಬಲಿ ನೀಡಿರುವ ಘೋರ ಘಟನೆ ಈ ಹಿಂದೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿತ್ತು. ದಕ್ಷಿಣ ದೆಹಲಿಯ ಲೋಧಿ ಕಾಲೋನಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಘಟನೆ ನಡೆದಿತ್ತು. ಕೊಲೆಯಾದ ಬಾಲಕ ಅದೇ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶದ ಬರೇಲಿ ಮೂಲದ ಕಾರ್ಮಿಕರೊಬ್ಬರ ಮಗನಾಗಿದ್ದನು.

IPL_Entry_Point

ವಿಭಾಗ