Injury Scare: ಐಪಿಎಲ್ಗೂ ಮುನ್ನ ಹೆಚ್ಚಾಗ್ತಿದೆ ಆಟಗಾರರ ಇಂಜುರಿ ಪಟ್ಟಿ.. ಪ್ರಮುಖರೇ ಔಟ್?
Injury Scare: ಸದ್ಯ 16ನೇ ಆವೃತ್ತಿಯ IPLಗೂ ಮುನ್ನ ಇಂಜುರಿ ಕಾಟ ಹೆಚ್ಚಾಗಿದೆ. ಫ್ರಾಂಚೈಸಿಗಳು ಆತಂಕದಲ್ಲಿ ದಿನ ದೂಡುತ್ತಿವೆ. ಮಾರ್ಚ್ 31 ರಿಂದ ಮತ್ತಷ್ಟು ರಂಗೇರುತ್ತಿದ್ದ ಕಲರ್ಫುಲ್ ಲೀಗ್ಗೆ ಈಗ ಇಂಜುರಿ ಕೊಳ್ಳಿ ಇಡುತ್ತಿದೆ. ಈಗಾಗಲೇ ಪ್ರಮುಖ ಆಟಗಾರರೇ ಟೂರ್ನಿಯಿಂದ ಹೊರ ಬಿದ್ದು, ಇಂಜುರಿ ಆಟಗಾರರ ಪಟ್ಟಿ ದಿನದಿಂದ ದಿನ ಬೆಳೆಯುತ್ತಲೇ ಇದೆ.
ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಅಂದರೆ, ಕ್ರಿಕೆಟಿಗರ ಸ್ವರ್ಗ. ಇಲ್ಲಿ ಝಣ, ಝಣ ಕಾಂಚಾಣ ಹರಿಯುತ್ತದೆ.! ಈ ಟೂರ್ನಿಯಲ್ಲಿ ವಿಶ್ವದ ಘಟಾನುಘಟಿ ಕ್ರಿಕೆಟಿಗರು ಭಾಗವಹಿಸುತ್ತಾರೆ. ಕೋಟಿ, ಕೋಟಿ ಹಣವನ್ನ ಜೇಬಿಗಿಳಿಸಿಕೊಳ್ಳುತ್ತಾರೆ.! ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗದಿದ್ದರೂ ಪರವಾಗಿಲ್ಲ, ಐಪಿಎಲ್ ಆಡಿದರೆ ಸಾಕು ಎಂಬುದರ ಮಟ್ಟಿಗೆ ಕ್ರಿಕೆಟಿಗರನ್ನು ಆವರಿಸಿ ಬಿಟ್ಟಿದೆ ಈ ಕಲರ್ಫುಲ್ ಲೀಗ್!
ವಿಶ್ವದ ಕ್ರಿಕೆಟ್ ದೊಡ್ಡಣ್ಣ ಬಿಸಿಸಿಐ ನಡೆಸುವ ಈ ಲೀಗ್ಗೆ ಅಷ್ಟೊಂದು ಮೌಲ್ಯ ಇದೆ. ಇಲ್ಲಿ ಹರಿಯುವ ಆದಾಯ ವಿಶ್ವದ ಯಾವ ರಾಷ್ಟ್ರ ಆಯೋಜಿಸುವ ಕ್ರಿಕೆಟ್ ಲೀಗ್ನಲ್ಲೂ ಇಲ್ಲ. ಅದಕ್ಕೆ ಇರಬೇಕು, ಆಡಿದರೆ ಐಪಿಎಲ್ ಆಡುತ್ತೇವೆ ಅಂತ ವಿದೇಶಿ ಕ್ರಿಕೆಟಿಗರು ಕೂಡ ಭಾರತಕ್ಕೆ ಓಡೋಡಿ ಬರೋದು. ಇಷ್ಟೆಲ್ಲಾ ಇರುವ ಈ ಹೊಡಿ ಬಡಿ ಆಟದಲ್ಲಿ ಗಾಯಗಳು ಸರಣಿಯಾಗಿ ಕಾಣಿಸಿಕೊಳ್ಳುತ್ತಿವೆ.
ಸದ್ಯ 16ನೇ ಆವೃತ್ತಿಯ IPLಗೂ ಮುನ್ನ ಇಂಜುರಿ ಕಾಟ ಹೆಚ್ಚಾಗಿದೆ. ಫ್ರಾಂಚೈಸಿಗಳು ಆತಂಕದಲ್ಲಿ ದಿನ ದೂಡುತ್ತಿವೆ. ಮಾರ್ಚ್ 31 ರಿಂದ ಮತ್ತಷ್ಟು ರಂಗೇರುತ್ತಿದ್ದ ಕಲರ್ಫುಲ್ ಲೀಗ್ಗೆ ಈಗ ಇಂಜುರಿ ಕೊಳ್ಳಿ ಇಡುತ್ತಿದೆ. ಈಗಾಗಲೇ ಪ್ರಮುಖ ಆಟಗಾರರೇ ಟೂರ್ನಿಯಿಂದ ಹೊರ ಬಿದ್ದು, ಗಾಯದ ಆಟಗಾರರ ಪಟ್ಟಿ ದಿನದಿಂದ ದಿನ ಬೆಳೆಯುತ್ತಲೇ ಇದೆ. ಶ್ರೇಯಸ್ ಅಯ್ಯರ್ ಕೂಡ ಈಗ ಈ ಲೀಸ್ಟ್ಗೆ ಸೇರಿದ್ದಾರೆ. ಹಾಗಾದರೆ ಈ IPLಗೆ ಯಾರೆಲ್ಲಾ ಮಿಸ್ ಆಗಲಿದ್ದಾರೆ ಬನ್ನಿ ನೋಡೋಣ.!
ಮುಂಬೈ ತಂಡಕ್ಕೆ ಭಾರಿ ಹೊಡೆತ.!
ಟೂರ್ನಿಗೂ ಮುನ್ನ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ಗೆ (Mumbai Indians) ಈ ಭಾರಿ ಆಘಾತವಾಗಿದೆ. ಯಾರ್ಕರ್ ಸ್ಪೆಷಲಿಸ್ಟ್, ಮ್ಯಾಚ್ ವಿನ್ನರ್ ಟೀಮ್ ಇಂಡಿಯಾ ವೇಗಿ ಜಸ್ಪ್ರಿತ್ ಬೂಮ್ರಾ (Jasprit Bumrah), ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, 6 ತಿಂಗಳ ಕಾಲ ಕ್ರಿಕೆಟ್ ಸೇವೆಗೆ ದೂರ ಇರಲಿದ್ದಾರೆ. ಸದ್ಯ ಬೆನ್ನಿನ ಗಾಯಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆಯಾಗಿದ್ದು, ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ನು ಆಸಿಸ್ ವೇಗಿ ಜಾಯ್ ರಿಚರ್ಡ್ಸನ್ (Jhye Richardson) ಗಾಯದ ಸಮಸ್ಯೆಯಿಂದ ಈ ಬಾರಿ ಐಪಿಎಲ್ನಿಂದ ಹೊರಗುಳಿಯಲಿದ್ದಾರೆ. ಇದು ಮುಂಬೈಗೆ ಹೊಡೆತ ನೀಡಿದೆ.
ಡೆಲ್ಲಿ ಕ್ಯಾಪಿಟಲ್ಸ್ಗೆ ತ್ರಿಬಲ್ ಶಾಕ್!
ಮುಂಬೈಗೆ ಡಬಲ್ ಶಾಕ್ ಆದರೆ, ಡೆಲ್ಲಿ ಕ್ಯಾಪಿಟಲ್ಸ್ಗೆ (Delhi Capitals) ತ್ರಿಬಲ್ ಶಾಕ್. ತಂಡದ ನಾಯಕನೇ ಐಪಿಎಲ್ನಿಂದ ಹೊರ ಬಿದ್ದಿದ್ದು, ಹಿನ್ನಡೆ ತಂದಿದೆ. ಡಿಸೆಂಬರ್ 30ರಂದು ಭೀಕರ ಅಪಘಾತಕ್ಕೆ ಒಳಗಾಗಿದ್ದರು. ರಿಷಭ್ ಪಂತ್ (Rishabh Pant) ರಿಕವರ್ ಆಗಲು ಇನ್ನೂ ಕನಿಷ್ಠ ಒಂದು ವರ್ಷವಾದರೂ ಬೇಕಾಗುತ್ತದೆ. ಇನ್ನು ಬೌಲಿಂಗ್ ಬಲವಾಗಿದ್ದ ಆ್ಯನ್ರಿಚ್ ನೋಕಿಯಾ (Anrich Nortje) ಸಹ ಗಾಯದಿಂದ ಈ ಆವೃತ್ತಿಯಿಂದ ಹೊರ ಬೀಳುವ ಸಾಧ್ಯತೆ ಇದೆ. ಜೊತೆಗೆ ಸರ್ಫರಾಜ್ ಖಾನ್ಗೂ (Sarfaraz Khan) ಇಂಜುರಿಯಾಗಿದ್ದು, ಕಣಕ್ಕಿಳಿಯುವುದು ಕಷ್ಟ ಎನ್ನಲಾಗಿದೆ.
CSK, ಪಂಜಾಬ್ಗೆ ಸ್ಟಾರ್ಗಳೇ ಅಲಭ್ಯ!
CSK ತಂಡವೂ ಇಂಜುರಿ ಆಘಾತಕ್ಕೆ ಒಳಗಾಗಿದೆ. ಕೈಲ್ ಜೆಮಿಸನ್ (Kyle Jamieson) ಗಾಯದ ಸಮಸ್ಯೆಯಿಂದ IPLನಿಂದ ಹಿಂದೆ ಸರಿದಿದ್ದಾರೆ. ಕಳೆದೊಂದು ವರ್ಷದಿಂದಲೂ ಜೆಮಿಸನ್ ಮೈದಾನಕ್ಕೆ ಎಂಟ್ರಿ ನೀಡಲಿಲ್ಲ. ಇನ್ನು ಪಂಜಾಬ್ ಕಿಂಗ್ಸ್ ತಂಡಕ್ಕೆ ಜಾನಿ ಬೈರ್ಸ್ಟೋ (Jonny Bairstow) ಅಲಭ್ಯರಾಗುವ ಸಾಧ್ಯತೆ ಇದೆ. ಕಳೆದ ವರ್ಷ ಕಾಲಿನ ಗಾಯದ ಸಮಸ್ಯೆಗೆ ಸಿಲುಕಿದ್ದ ಬೈರ್ಸ್ಟೋಗೆ ಕಳೆದ ವರ್ಷವೇ ಶಸ್ತ್ರ ಚಿಕಿತ್ಸೆ ನಡೆದಿದ್ದು, ರಿಕವರ್ ಆಗಿರುವ ಕುರಿತು ಯಾವುದೇ ಮಾಹಿತಿ ಹೊರ ಬಿದ್ದಿಲ್ಲ.
ರಾಜಸ್ಥಾನ್, ಆರ್ಸಿಬಿ, ಕೆಕೆಆರ್ಗೂ ತಪ್ಪಲಿಲ್ಲ.!
ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳಿಗೂ ಭಾರಿ ನಷ್ಟವಾಗಲಿದೆ. ರಾಜಸ್ಥಾನ್ಗೆ ವೇಗಿ ಪ್ರಸಿದ್ಧ್ ಕೃಷ್ಣ (Prasidh Krishna) ಕೈ ಕೊಟ್ಟರೆ, ಬೆಂಗಳೂರಿಗೆ ವಿಲ್ ಜಾಕ್ಸ್ ಶಾಕ್ ನೀಡಿದ್ದಾರೆ. ಜೋಶ್ ಹೇಜಲ್ವುಡ್ ಕೂಡ ಗಾಯದ ಸಮಸ್ಯೆಗೆ ಒಳಗಾಗಿದ್ದು, ಟೂರ್ನಿಯೊಳಗೆ ಚೇತರಿಸಿಕೊಳ್ಳುವುದು ಅನುಮಾನ ಎನ್ನಲಾಗಿದೆ. ಹಾಗೆಯೇ ಕೊಲ್ಕತ್ತಾ ತಂಡಕ್ಕೆ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಅವರೇ ಆಘಾತ ನೀಡಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಅಯ್ಯರ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಹೊರ ಬೀಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಐಪಿಎಲ್ನಿಂದ ಹೊಗುಳಿಯುತ್ತಾರಾ ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.