Witchcraft Effects: ರಸ್ತೆ ಬದಿ ಇಟ್ಟ ನಿಂಬೆ, ಮೊಟ್ಟೆ, ಮೆಣಸಿನಕಾಯಿ ತುಳಿದರೆ ಅಪಶಕುನವೇ? ಅದು ವಾಮಾಚಾರವೇ?
Oct 14, 2022 12:58 PM IST
ರಸ್ತೆ ಬದಿ ಇಟ್ಟ ನಿಂಬೆ, ಮೊಟ್ಟೆ, ಮೆಣಸಿನಕಾಯಿ ತುಳಿದರೆ ಅಪಶಕುನವೇ? ಅದು ವಾಮಾಚಾರವೇ?
- ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆ ವಾಮಾಚಾರವನ್ನು ಹೆಚ್ಚು ನಂಬುವುದಿಲ್ಲ. ಹಳೇ ಜನ, ವಯಸ್ಸಾದವರು ಈಗಲೂ ಅದನ್ನು ನಂಬಿಕೊಂಡೇ ಬಂದಿದ್ದಾರೆ. ವಾಮಾಚಾರ ಎನ್ನುತ್ತಿದ್ದಂತೆ, ಅವರಿಗೆ ಮೊದಲಿಗೆ ನೆನಪಾಗುವುದು ಮಾಟ ಮಂತ್ರ ಎಂಬ ಕಟ್ಟುಪಾಡುಗಳು.
ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆ ವಾಮಾಚಾರವನ್ನು ಹೆಚ್ಚು ನಂಬುವುದಿಲ್ಲ. ಹಳೇ ಜನ, ವಯಸ್ಸಾದವರು ಈಗಲೂ ಅದನ್ನು ನಂಬಿಕೊಂಡೇ ಬಂದಿದ್ದಾರೆ. ವಾಮಾಚಾರ ಎನ್ನುತ್ತಿದ್ದಂತೆ, ಅವರಿಗೆ ಮೊದಲಿಗೆ ನೆನಪಾಗುವುದು ಮಾಟ ಮಂತ್ರ ಎಂಬ ಕಟ್ಟುಪಾಡುಗಳು. ಹಾಗಂತ ಹಿರಿಯರು ಮಾಡಿದ್ದು ಸುಳ್ಳು ಎಂದು ಹೇಳುವುದಕ್ಕೂ ಬರುವುದಿಲ್ಲ. ಅವರ ಮಾತಿನಲ್ಲಿಯೂ ಸತ್ಯ ಅಡಗಿರುತ್ತದೆ. ಏಕೆಂದರೆ, ದಾರಿಯಲ್ಲಿ ಹೋಗುವಾಗ ಕೆಲವೊಂದು ವಸ್ತುಗಳನ್ನು ನಾವು ದಾಟಬಾರದು. ಅದು ವಾಮಾಚಾರವಲ್ಲದಿದ್ದರೂ, ಅದು ನಕಾರಾತ್ಮಕತೆಯ ಸಂಕೇತ. ಇದು ನಿಮ್ಮ ನಿತ್ಯ ಜೀವನದ ಮೇಲೆ ಪರಿಣಾಮ ಬೀರಲೂಬಹುದು. ಆ ಬಗ್ಗೆ ಇಲ್ಲೊಂದಿಷ್ಟು ಮಾಹಿತಿ ಇದೆ..
ತಾಜಾ ಫೋಟೊಗಳು
ಪೂಜಾ ಸಾಮಗ್ರಿ, ಆಹಾರದ ಮೇಲೆ ಹಾದು ಹೋಗಬೇಡಿ..
ಹೀಗೆ ವಾಮಾಚಾರದ ವಿಚಾರದಲ್ಲಿ ಪೂಜಾ ಸಾಮಗ್ರಿ ಮತ್ತು ಆಹಾರವನ್ನು ಸಹಜವಾಗಿ ಜನರು ಓಡಾಡೋ ಅಡ್ಡರಸ್ತೆಯಲ್ಲಿಯೇ ಅರಿಶಿನ, ಕುಂಕುಮ, ಕುಂಬಳಕಾಯಿ, ನಿಂಬೆಹಣ್ಣು ಇತ್ಯಾದಿ ವಸ್ತುಗಳನ್ನು ಇರಿಸಲಾಗಿರುತ್ತದೆ. ಈ ಅಡ್ಡರಸ್ತೆ ಯಾವಾಗಲೂ ರಾಹುವನ್ನು ಪ್ರತಿನಿಧಿಸುತ್ತದೆ. ಆ ಅಡ್ಡರಸ್ತೆಯಲ್ಲಿಟ್ಟ ಆಹಾರ ಆ ಸಂದರ್ಭದಲ್ಲಿ ಪಿತೃವನ್ನು ಪ್ರತಿನಿಧಿಸುತ್ತದೆ. ಅಂಥ ಸಂದರ್ಭದಲ್ಲಿ ಹೀಗೆ ರಸ್ತೆಯಲ್ಲಿಟ್ಟ ಪೂಜಾ ಸಾಮಗ್ರಿ, ಆಹಾರವನ್ನು ದಾಟುವಂತಿಲ್ಲ. ಅಷ್ಟೇ ಅಲ್ಲ ಬೂದಿ, ಅರ್ಧ ಸುಟ್ಟ ಕಟ್ಟಿಗೆಯೂ ನೆಗೆಟಿವ್ ಸಂಕೇತ.
ಸತ್ತ ಪ್ರಾಣಿಯಿಂದ ದೂರವಿರಿ..
ದಾರಿಯಲ್ಲಿ ಸತ್ತ ಪ್ರಾಣಿ ಕಣ್ಣಿಗೆ ಕಾಣುತ್ತಿದ್ದಂತೆ, ನೀವು ನೋಡುವ ದಿಕ್ಕನ್ನು ಬದಲಿಸಿ. ಅದರಿಂದ ಕೊಂಚ ದೂರವೇ ನಿಮ್ಮ ಕೆಲಸಕ್ಕೆ ನೀವು ತೆರಳಿ. ಅದನ್ನು ಬಿಟ್ಟು, ಹಾಗೆ ಸತ್ತ ಪ್ರಾಣಿಯನ್ನು ದಾಟುವುದಾಗಲಿ, ಅದರ ಮೇಲೆ ವಾಹನ ಚಲಾಯಿಸಿಕೊಂಡು ಹೋಗುವುದಾಗಲಿ ಮಾಡುವುದು ಒಳ್ಳೆಯದಲ್ಲ. ಹಾಗೆ ಮಾಡುವುದರಿಂದ ಅದು ನಿಮ್ಮ ಮೇಲೆ ನೆಗೆಟಿವ್ ರೀತಿಯಲ್ಲಿ ಪರಿಣಾಮ ಬೀರಲೂಬಹುದು. ಏಕೆಂದರೆ, ಸತ್ತ ಪ್ರಾಣಿಗಳಲ್ಲಿ ನಕಾರಾತ್ಮಕ ಶಕ್ತಿಗಳಿರುತ್ತವೆ. ಅದರ ಮೃತ ದೇಹವನ್ನು ದಾಟುವ ಮೂಲಕ, ಆ ನಕಾರಾತ್ಮಕ ಶಕ್ತಿಯು ನಿಮ್ಮ ಜೀವನವನ್ನು ಪ್ರವೇಶಿಸಲೂಬಹುದು.
ಕೂದಲಿನ ಮೇಲೆ ಕಾಲಿಡಬೇಡಿ..
ರಸ್ತೆಯ ಮೂಲಕ ಹಾದುಹೋಗುವಾಗ ನೀವು ಅನೇಕ ಬಾರಿ ರಸ್ತೆಯ ಮೇಲೆ ಕೂದಲಿನ ಗುಂಪನ್ನು ನೋಡಿರಬಹುದು. ಈ ರೀತಿಯ ಕೂದಲನ್ನು ನೋಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಅಂತಹ ಕೂದಲಿನ ರಾಶಿಯಲ್ಲಿ ರಾಹುವಿನ ಪ್ರಭಾವ ಹೆಚ್ಚು. ಒಂದು ವೇಳೆ ರಸ್ತೆ ಮಧ್ಯೆ ಕಂಡರೂ, ಅವುಗಳನ್ನು ದಾಟುವುದು ಬೇಡ. ಬದಲಿಗೆ ಮತ್ತೊಂದು ಬದಿಯ ಮೂಲಕ ಸಾಗಿ.
ನಿಂಬೆ, ಮೊಟ್ಟೆ ದಾಟುವುದು ಅಪಶಕುನವೇ?
ದಾರಿಯಲ್ಲಿ ಹೋಗುವಾಗ ಮೆಣಸಿನಕಾಯಿ, ನಿಂಬೆ, ಮೊಟ್ಟೆ, ಸೂಜಿ ಹೀಗೆ ಹಲವು ಬಗೆಯ ವಸ್ತುಗಳು ಕಾಣಿಸಿದರೆ, ಅವುಗಳಿಂದ ಕೊಂಚ ದೂರವಿರಿ. ಅದರಿಂದ ಏನೂ ಆಗದಿದ್ದರೂ ಅದನ್ನು ನೋಡುತ್ತಿದ್ದಂತೆ ನಿಮ್ಮ ಮನಸು ವಿಚಲಿತಗೊಳ್ಳಬಹುದು. ನೆಗೆಟಿವ್ ವಿಚಾರಗಳು ನಿಮ್ಮನ್ನು ಆವರಿಸಬಹುದು. ಹಾಗಾಗಿ ರಸ್ತೆ ಮಧ್ಯ ಕಾಣಿಸಿದರೆ, ಅದನ್ನು ದಾಟುವ ಸಾಹಸಕ್ಕೆ ಕೈಹಾಕಬೇಡಿ, ಅದರ ಮೇಲೆ ಬೇಕು ಅಂತಲೇ ಗಾಡಿ ಚಲಾಯಿಸಬೇಡಿ.
(ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Hindustan Times Kannada ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)