ವಿಶ್ವಕಪ್ ಸೋಲಿನ ಆಘಾತದಿಂದ ಚೇತರಿಸಿಕೊಳ್ಳಲು ಉದ್ಯೋಗಿಗಳಿಗೆ ಒಂದು ದಿನ ರಜೆ ನೀಡಿದ ಕಂಪನಿ!
Nov 21, 2023 07:51 PM IST
ಭಾರತ ತಂಡ.
- Cricket World Cup 2023: ಏಕದಿನ ವಿಶ್ವಕಪ್ನಲ್ಲಿ ಭಾರತದ ಸೋಲಿನ ನೋವಿನಿಂದ ಹೊರಬರಲಿ ಎಂಬ ಕಾರಣಕ್ಕೆ ಗುರುಗ್ರಾಮ್ ಮೂಲದ ಕಂಪನಿಯೊಂದು ಪಂದ್ಯ ಮುಗಿದ ಮರು ದಿನವೇ ರಜೆಯನ್ನು ಘೋಷಿಸಿದೆ. ಈ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.
ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಮುಗಿದು ಎರಡು ದಿನಗಳಾಗಿದೆ. ಆದರೂ ಸೋಲಿನ ನೋವು ಈಗಲೂ ಕಾಡುತ್ತಿದೆ. 140 ಕೋಟಿ ಅಭಿಮಾನಿಗಳ ಪ್ರಾರ್ಥನೆಗೆ ಫಲ ಸಿಗಲೇ ಇಲ್ಲ ಎಂಬ ಕೊರಗು ಎಲ್ಲರಿಗೂ ಕಾಡುತ್ತಿದೆ. ನವೆಂಬರ್ 19ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಮಣಿಸಿ ಆಸ್ಟ್ರೇಲಿಯಾ 6ನೇ ಬಾರಿಗೆ ಚಾಂಪಿಯನ್ ಗೆಲ್ಲುವ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸನ್ನು ಭಂಗಗೊಳಿಸಿತು.
ಟೀಮ್ ಇಂಡಿಯಾದ ನಿರಾಶಾದಾಯಕ ಸೋಲು ಸಾಕಷ್ಟು ಮಂದಿಗೆ ಆಘಾತ ನೀಡಿದೆ. ಹಾಗಾಗಿ ಭಾರತದ ಸೋಲಿನ ಆಘಾತದಿಂದ ಚೇತರಿಸಿಕೊಳ್ಳಲು ಹರಿಯಾಣದ ಗುರುಗ್ರಾಮ್ ಮೂಲಕ ಕಂಪನಿಯೊಂದು ತಮ್ಮ ಉದ್ಯೋಗಿಗಳಿಗೆ ಒಂದು ದಿನದ ಮಟ್ಟಿಗೆ ರಜೆ ನೀಡಿದೆ ಎಂಬ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಸೋಲಿನ ನೋವಿನಿಂದ ಹೊರಬರಲಿ ಎಂಬ ಕಾರಣಕ್ಕೆ ಪಂದ್ಯ ಮುಗಿದ ಮರು ದಿನವೇ ರಜೆಯನ್ನು ಘೋಷಿಸಿದೆ. ಈ ಸುದ್ದಿ ಸಖತ್ ವೈರಲ್ ಆಗಿದೆ.
ಗುರುಗ್ರಾಮ್ ಮೂಲದ ಮಾರ್ಕೆಟಿಂಗ್ ಮೂವ್ಸ್ ಮತ್ತು ಮಾರ್ಕೆಟಿಂಗ್ ಮೂವ್ಸ್ ಏಜೆನ್ಸಿ ಎಂಬ ಕಪನಿ ರಜೆ ಘೋಷಿಸಿತ್ತು. ಉದ್ಯೋಗಿಗಳಿಗೆ ರಜೆ ನೀಡಿರುವ ಮಾಹಿತಿಯನ್ನು ದೀಕ್ಷಾ ಗುಪ್ತಾ ಅವರು ಸೋಷಿಯಲ್ ಮೀಡಿಯಾ ಲಿಂಕ್ಡ್ ಇನ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಸುದೀರ್ಘ ಬರಹ ಬರೆದಿರುವ ದೀಕ್ಷಾ, ಇದು ಕೇವಲ ಸೋಲಲ್ಲ, ಇದು 1.4 ಬಿಲಿಯನ್ ಹೃದಯಾಘಾತಕ್ಕೆ ಸಮ. ವಿಶ್ವಕಪ್ನ ಇತಿಹಾಸದಲ್ಲಿ ನವೆಂಬರ್ 19 ಅನ್ನು ಅತ್ಯಂತ ನಿರಾಶಾದಾಯಕ ಎಂದು ಗುರುತಿಸಲಾಯಿತು ಎಂದು ಬರೆದಿದ್ದಾರೆ.
ದೀಕ್ಷಾ ಅವರ ಲಿಂಕ್ಡ್ ಇನ್ ಪೋಸ್ಟ್ ಹೀಗಿದೆ!
ನಮ್ಮ ಮೆನ್ ಇನ್ ಬ್ಲೂ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿಯಲು ಸಾಧ್ಯವಾಗಲಿಲ್ಲ. ಟೀಂ ಇಂಡಿಯಾ ಇಡೀ ರಾಷ್ಟ್ರಕ್ಕೆ ವಿಶ್ವಕಪ್ ಟ್ರೋಫಿ ತರುವ ಭರವಸೆ ನೀಡಿತ್ತು. ದುರದೃಷ್ಟವಶಾತ್, ಟ್ರೋಫಿ ಮನೆಗೆ ಬರುವುದನ್ನು ನೋಡುವ ನಮ್ಮ ಕನಸು ನಿನ್ನೆ ರಾತ್ರಿ ಭಗ್ನಗೊಂಡಿದೆ. ಈ ವಿಶ್ವಕಪ್ನ ಕ್ರೇಜ್ ಯಾರಿಂದಲೂ ಮರೆಮಾಡಲ್ಪಟ್ಟಿಲ್ಲ. ಇಡೀ ಇಂಟರ್ನೆಟ್ ವಿಶ್ವಕಪ್ ಅಲೆಯಲ್ಲಿದೆ ಎಂದು ಭಾವುಕರಾಗಿದ್ದಾರೆ.
ಹೆಸರಾಂತ ಏಜೆನ್ಸಿಗಳಲ್ಲಿ ಒಂದಾದ ಮಾರ್ಕೆಟಿಂಗ್ ಮೂವ್ಸ್ ಮತ್ತು ಮಾರ್ಕೆಟಿಂಗ್ ಮೂವ್ಸ್ ಏಜೆನ್ಸಿಯಲ್ಲಿ ನಾನು ಸೇವೆ ಸಲ್ಲಿಸುತ್ತಿದ್ದು, ನಾನು ವಿಶ್ವಕಪ್ 2023ಗಾಗಿ ನನ್ನ ತಂಡದೊಂದಿಗೆ ಕೆಲವು ಪ್ರಮುಖ ಬ್ರ್ಯಾಂಡ್ ಅಭಿಯಾನಗಳನ್ನು ಮುನ್ನಡೆಸುತ್ತಿದ್ದೆ. ಪ್ರತಿ ದಿನವೂ ಕ್ರೇಜ್ ಮತ್ತು ಉತ್ಸಾಹ ನೋಡಿ ಕೆಲಸ ಮಾಡುವುದನ್ನು ಆನಂದಿಸಿದೆ.
ವಿಶ್ವಕಪ್ಗೆ ಸಂಬಂಧಿಸಿ 20+ ಯೋಜನೆಗಳು, 25+ ದಿನಗಳು, 90+ ಮೀಟಿಂಗ್ಗಳು ನಡೆದಿವೆ. ಕಡಿಮೆ ಅವಧಿಯಲ್ಲಿ ಇಷ್ಟೆಲ್ಲಾ ಸಾಧಿಸಿದ್ದೇವೆ ಎಂದರೆ ಅದಕ್ಕೆ ಕಾರಣ ವಿಶ್ವಕಪ್ ಎಂದು ನಾನು ಹೇಳಬಲ್ಲೆ. ಅಭಿಯಾನದಲ್ಲಿ ಸಂಪೂರ್ಣವಾಗಿ ಮುಳುಗಿದ್ದ ನನಗೆ ಮತ್ತು ನಮ್ಮ ತಂಡಕ್ಕೆ ಈ ಸೋಲನ್ನು ನಿಭಾಯಿಸುವುದು ಕಷ್ಟಕರವಾಗಿತ್ತು.
ಆದರೆ ಇಲ್ಲಿ ಒಂದು ಟ್ವಿಸ್ಟ್ ಸಿಕ್ಕಿದೆ. ಇಂದು ಬೆಳಿಗ್ಗೆ (ನವೆಂಬರ್ 20) ನಮ್ಮ ಬಾಸ್ ಒಂದು ದಿನದ ರಜೆಯನ್ನು ನೀಡಿರುವ ಸಂದೇಶ ಕಂಡು ಅಚ್ಚರಿಯಾಗಿದೆ. ಸೋಲಿನ ಆಘಾತದಿಂದ ಚೇತರಿಸಿಕೊಳ್ಳಲು ಒಂದು ದಿನ ವಿಶ್ರಾಂತಿ ರಜೆ ಎಂದು ಹೇಳಿದ್ದರು. ಇದು ವಿಶ್ರಾಂತಿ ಮಾತ್ರವಲ್ಲ, ಸೋಲಿನ ನೋವಿನಿಂದ ಚೇತರಿಸಿಕೊಳ್ಳಲು ಮಾನಸಿಕವಾಗಿ ಬಲಿಷ್ಠರಾಗಿ ಮರಳಲು ನೀಡಿದ ರಜೆ. ಹಾಗಾಗಿ ನಮ್ಮ ಬಾಸ್ ಚಿರಾಗ್ ಅಲವಾಧಿ ಬಾಸ್ ಅವರಿಗೆ ಧನ್ಯವಾದಗಳು ಎಂದು ಪೋಸ್ಟ್ನಲ್ಲಿ ದೀಕ್ಷಾ ಗುಪ್ತಾ ಬರೆದುಕೊಂಡಿದ್ದಾರೆ.