ಸೆಪ್ಟೆಂಬರ್ 28ರಂದು ವಿಶ್ವಕಪ್ಗೆ ಭಾರತ ಪರಿಷ್ಕೃತ ತಂಡ ಪ್ರಕಟ; ಅಶ್ವಿನ್ಗೆ ಅವಕಾಶ ಖಚಿತ, ಅಕ್ಷರ್ ಔಟ್
Sep 27, 2023 07:37 PM IST
ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್.
- ಮಣಿಕಟ್ಟು ಮತ್ತು ಸ್ನಾಯುಸೆಳೆತಕ್ಕೆ ಒಳಗಾಗಿರುವ ಅಕ್ಷರ್ ಪಟೇಲ್ ಇನ್ನೂ ಚೇತರಿಸಿಕೊಂಡಿಲ್ಲ ಎಂದು ವರದಿಯಾಗಿದೆ. ಹಾಗಾಗಿ ಅವರ ಅನುಪಸ್ಥಿತಿಯು ರವಿಚಂದ್ರನ್ ಅಶ್ವಿನ್ರನ್ನು ಏಕದಿನ ವಿಶ್ವಕಪ್ ತಂಡಕ್ಕೆ ಮರಳಲು ದಾರಿ ಮಾಡಿಕೊಟ್ಟಿದೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಇರುವಾಗ ಟೀಮ್ ಇಂಡಿಯಾಗೆ ಹೊಸ ತಲೆ ನೋವು ಶುರುವಾಗಿದೆ. ಸೆಪ್ಟೆಂಬರ್ 28ರಂದು ಭಾರತ ತನ್ನ ಪರಿಷ್ಕೃತ ತಂಡ ಪ್ರಕಟಿಸಲಿದ್ದು, ಯಾರಿಗೆ ಅವಕಾಶ ನೀಡಬೇಕು ಎಂಬ ಗೊಂದಲಕ್ಕೆ ಒಳಗಾಗಿದೆ. ಗಾಯದಿಂದ ಚೇತರಿಸಿಕೊಳ್ಳದ ಕಾರಣ ಸ್ಪಿನ್ ಆಲ್ರೌಂಡರ್ ಅಕ್ಷರ್ ಪಟೇಲ್ರನ್ನು ಕೈ ಬಿಡುವ ಸಾಧ್ಯತೆ ಇದ್ದು, ಅನುಭವಿ ಆಫ್ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ಗೆ ಅದೃಷ್ಟದ ಬಾಗಿಲು ತೆರೆಯುವ ಅವಕಾಶ ಹೆಚ್ಚಿದೆ ಎಂದು ಹೇಳಲಾಗಿದೆ. ಆದರೆ, ಅಶ್ವಿನ್ ಸ್ಥಾನ ಕಸಿಯುವ ಯತ್ನದಲ್ಲಿದ್ದಾರೆ ವಾಷಿಂಗ್ಟನ್ ಸುಂದರ್.
ಎಲ್ಲಾ ಕ್ರಿಕೆಟ್ ಮಂಡಳಿಗಳು ಸಹ ತಮ್ಮ ತಂಡದಲ್ಲಿ ಬದಲಾವಣೆ ಸೂಚಿಸಲು ಸೆಪ್ಟೆಂಬರ್ 28ರವರೆಗೂ ಅವಕಾಶ ನೀಡಲಾಗಿದೆ. ಅದರಂತೆ ಸೆಪ್ಟೆಂಬರ್ 28ರಂದು ಭಾರತ ತಮ್ಮ ಪರಿಷ್ಕೃತ ತಂಡವನ್ನು ಪ್ರಕಟಿಸಲಿದೆ. ಈ ತಂಡದಲ್ಲಿ ಏಕದಿನ ಕ್ರಿಕೆಟ್ಗೆ ಮರಳಿದ ನಂತರ ಅದ್ಭುತ ಪ್ರದರ್ಶನ ನೀಡುತ್ತಿರುವ ಅಶ್ವಿನ್, ಪ್ರಧಾನ ತಂಡದಲ್ಲಿ ಅವಕಾಶ ಪಡೆಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮತ್ತೊಂದೆಡೆ ಆಸೀಸ್ ವಿರುದ್ಧ 3ನೇ ಏಕದಿನ ಪಂದ್ಯಕ್ಕೆ ಅಶ್ವಿನ್ಗೆ ರೆಸ್ಟ್ ನೀಡಿದ್ದು ಅನುಮಾನ ಮೂಡಿಸಿದೆ. ಅಶ್ವಿನ್ ಈಗಾಗಲೇ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಎನ್ನುತ್ತಿವೆ ಮೂಲಗಳು.
ಮಣಿಕಟ್ಟು ಮತ್ತು ಸ್ನಾಯುಸೆಳೆತಕ್ಕೆ ಒಳಗಾಗಿರುವ ಅಕ್ಷರ್ ಪಟೇಲ್ ಇನ್ನೂ ಚೇತರಿಸಿಕೊಂಡಿಲ್ಲ ಎಂದು ವರದಿಯಾಗಿದೆ. ಹಾಗಾಗಿ ಅವರ ಅನುಪಸ್ಥಿತಿಯು ರವಿಚಂದ್ರನ್ ಅಶ್ವಿನ್ ಅವರನ್ನು ಏಕದಿನ ವಿಶ್ವಕಪ್ ತಂಡಕ್ಕೆ ಮರಳಲು ದಾರಿ ಮಾಡಿಕೊಟ್ಟಿದೆ. ಮೆಗಾ ಟೂರ್ನಿಗೆ ಎರಡೇ ವಾರಗಳು ಉಳಿದಿರುವಾಗ, ಟೀಮ್ ಇಂಡಿಯಾ ತಮ್ಮ 3ನೇ ವಿಶ್ವಕಪ್ ಗೆಲುವಿಗೆ ಟಾರ್ಗೆಟ್ ಮಾಡಿರುವ ಮೆನ್ ಇನ್ ಬ್ಲೂ, ಅನುಭವಿ ಆಟಗಾರನ ಅನುಭವ ಬಳಸಿಕೊಳ್ಳಲು ನಿರ್ಧರಿಸಿದೆ. ಇದಕ್ಕೂ ಮೊದಲು ಸುಂದರ್ರನ್ನು ತಂಡಕ್ಕೆ ಕರೆ ತರಲು ನಿರ್ಧರಿಸಲಾಗಿತ್ತು. ಆದರೆ ಅವರು ತಂಡದ ಮ್ಯಾನೇಜ್ಮೆಂಟ್ ನಂಬಿಕೆಯನ್ನು ಉಳಿಸಿಕೊಳ್ಳಲು ವಿಫಲರಾದರು.
ಅಶ್ವಿನ್ಗೆ ಸುಂದರ್ ಪೈಪೋಟಿ
ಅಕ್ಷರ್ ಪಟೇಲ್ ಅಲಭ್ಯರಾದರೆ ಅಶ್ವಿನ್ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಆದರೆ ವಾಷಿಂಗ್ಟನ್ ಸುಂದರ್ಗೂ ಅವಕಾಶ ನೀಡಬೇಕೆಂಬ ಚರ್ಚೆಯೂ ನಡೆದಿತ್ತು. 3ನೇ ಏಕದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರೆ ಸುಂದರ್ ಆಯ್ಕಗೆ ಒತ್ತು ಕೊಡಲು ಮ್ಯಾನೇಜ್ಮೆಂಟ್ ಚಿಂತನೆ ನಡೆಸಿತ್ತು. ಆದರೆ ಅವರು ಸುಂದರ್ ಸಿಕ್ಕ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಂಡರು. ಬ್ಯಾಟಿಂಗ್-ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಆದರೆ ಅಶ್ವಿನ್ಗೆ ಸಿಕ್ಕ ಅವಕಾಶ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಆಸ್ಟ್ರೇಲಿಯಾ ಎದುರಿನ ಎರಡು ಪಂದ್ಯಗಳಲ್ಲಿ ಅಶ್ವಿನ್ 4 ವಿಕೆಟ್ ಪಡೆದು ಮಿಂಚಿದರು. ಆದರೆ, ಸುಂದರ್ಗೆ ಆಡುವ ಅವಕಾಶ ಸಿಗಲಿಲ್ಲ.
ಏಕದಿನ ವಿಶ್ವಕಪ್ಗೆ ಇಬ್ಬರಲ್ಲಿ ಒಬ್ಬರನ್ನು ತಂಡಕ್ಕೆ ಆಯ್ಕೆ ಮಾಡಬೇಕೆಂಬ ಉದ್ದೇಶದಿಂದ ಸುಂದರ್ಗೆ 3ನೇ ಪಂದ್ಯದಲ್ಲಿ ಅವಕಾಶ ಕೊಡಲಾಗಿತ್ತು. ಆದರೆ, ಸಿಕ್ಕ ಅವಕಾಶದಲ್ಲಿ ಸುಂದರ್ ವಿಫಲರಾದರು. ಬೌಲಿಂಗ್ನಲ್ಲಿ 10 ಓವರ್ ಮಾಡಿ, ವಿಕೆಟ್ ಪಡೆಯಲು ವಿಫಲರಾದರು. ಮತ್ತೊಂದೆಡೆ ಬ್ಯಾಟಿಂಗ್ನಲ್ಲಿ ಆರಂಭಿಕನಾಗಿ ಬಡ್ತಿ ಪಡೆದರೂ, 18 ರನ್ಗಳಿಸಿ ನಿರಾಸೆ ಮೂಡಿಸಿದರು. ಆ ಮೂಲಕ ಟೀಮ್ ಮ್ಯಾನೇಜ್ಮೆಂಟ್ ನಂಬಿಕೆಯನ್ನು ಉಳಿಸಿಕೊಳ್ಳಲು ವಿಫಲರಾದರು. ಇದು ಅಶ್ವಿನ್ ಆಯ್ಕೆಗೆ ಹೆಚ್ಚಿನ ವರದಾನವಾಗಿದೆ ಎಂದು ವರದಿಯಾಗಿದೆ.
ಅಶ್ವಿನ್ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಕ್ಕಿದೆ?
ಈಗಾಗಲೇ ವಿಶ್ವಕಪ್ ತಂಡದಲ್ಲಿ ಅವಕಾಶ ಸಿಕ್ಕಿರುವ 3ನೇ ಏಕದಿನ ಪಂದ್ಯದಲ್ಲಿ ಅಶ್ವಿನ್ಗೆ ವಿಶ್ರಾಂತಿ ನೀಡಲಾಗಿದೆ. ಮೆಗಾ ಟೂರ್ನಿಗೂ ಮುನ್ನ ಆಟಗಾರರನ್ನು ತಾಜಾತನದಿಂದ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಈ ಕಾರಣಕ್ಕೆ ಅಶ್ವಿನ್ ಬೆಂಚ್ಗೆ ಸೀಮಿತರಾದರು ಎನ್ನಲಾಗಿದೆ. ಆದರೆ ಅಂತಿಮ ಸ್ಥಾನವನ್ನು ಯಾರು ಪಡೆಯುತ್ತಾರೆ ಎಂಬುದನ್ನು ರಾಹುಲ್ ದ್ರಾವಿಡ್ ಇನ್ನೂ ನಿರ್ಧರಿಸಿಲ್ಲ. ಆದರೆ, ಅಶ್ವಿನ್ಗೆ ಬೆಂಚ್ ಕಾಯಿಸಿದ್ದೇಕೆ? ವಿಶ್ವಕಪ್ ತಂಡದಲ್ಲಿ ಅವಕಾಶ ಸಿಗುತ್ತದೆಯೇ ಎಂದು ಅನುಮಾನವೂ ಎದ್ದಿದೆ.
ಏಕದಿನ ವಿಶ್ವಕಪ್ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್/ಆರ್ ಅಶ್ವಿನ್/ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.