KYC fraud: ಕೆವೈಸಿ ವಂಚನೆಗೆ ಸಿಲುಕಿ 1.5 ಲಕ್ಷ ರೂಪಾಯಿ ಕಳೆದುಕೊಂಡ ಬಾಲಿವುಡ್ ನಟ
Oct 10, 2023 05:36 PM IST
ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಅವರು ಕೆವೈಸಿ ವಂಚನೆಗೆ ಸಿಲುಕಿ 1.5 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
KYC fraud: ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಅವರು ಕೆವೈಸಿ ವಂಚನೆಗೆ ಸಿಲುಕಿ 1.5 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆನ್ಲೈನ್ ವಂಚನೆಗೆ ಸಿಲುಕಿ ಜನ ಸಾಮಾನ್ಯರು ಮಾತ್ರವಲ್ಲದೆ ಸೆಲೆಬ್ರಿಟಿಗಳೂ ಹಣ ಕಳೆದುಕೊಳ್ಳುತ್ತಿರುವುದಕ್ಕೆ ಇದು ತಾಜಾ ನಿದರ್ಶನವಾಗಿದೆ.
ಬೆಂಗಳೂರು: ಸೈಬರ್ ವಂಚನೆಗೆ ಈಗ ಸಾಕಷ್ಟು ಜನರು ಹಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಅವರು ಸೈಬರ್ ವಂಚನೆಗೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ. ಅವರು 1.50 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಕೆವೈಸಿ ಅಪ್ಡೇಟ್ ಸಂದೇಶವನ್ನು ನಂಬಿ ಇವರು ಹಣ ಕಳೆದುಕೊಂಡಿದ್ದಾರೆ.
ಈ ಘಟನೆ ಭಾನುವಾರ ನಡೆದಿದೆ. ನಿನ್ನೆ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಬಾಂದ್ರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. "ನಟನಿಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಸಂದೇಶ ಬಂದಿದೆ. ಸಂದೇಶದಲ್ಲಿ, ಬ್ಯಾಂಕ್ಗೆ ಲಿಂಕ್ ಮಾಡಲಾದ ಅವರ ಕೆವೈಸಿ ವಿವರಗಳನ್ನು ನವೀಕರಿಸಲು ಸೂಚಿಸಲಾಗಿದೆ. ಕೆವೈಸಿ ಅಪ್ಡೇಟ್ ಮಾಡದೆ ಇದ್ದರೆ ನಿಮ್ಮ ಬ್ಯಾಂಕ್ ಖಾತೆ ಅಮಾನತುಗೊಳ್ಳಲಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿತ್ತು" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
"ಹೆಚ್ಚು ಯೋಚನೆ ಮಾಡದೆ ಅವರು ಆ ಕೆವೈಸಿ ಸಂದೇಶದಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ್ದಾರೆ. ಅಲ್ಲಿ ಲಿಂಕ್ನಲ್ಲಿ ನೀಡಲಾದ ಸೂಚನೆಗಳನ್ನು ಪಾಲಿಸಿದ್ದಾರೆ. ಅವರ ಬ್ಯಾಂಕ್ ಖಾತೆಯಿಂದ 1,49,999 ರೂಪಾಯಿ ಕಡಿತಗೊಂಡಿದೆ" ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದಾದ ಬಳಿಕ ನಟ ಬ್ಯಾಂಕ್ನ ಶಾಖಾ ವ್ಯವಸ್ಥಾಪಕರನ್ನು ಸಂಪರ್ಕಿಸಿದ್ದಾರೆ. ಅವರ ಸಲಹೆಯ ಮೇರೆಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಪರಿಚಿತ ವಂಚಕರ ವಿರುದ್ಧ ಸೆಕ್ಷನ್ 420 (ವಂಚನೆ) ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ಗಳು ಸೇರಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಶಿವದಾಸನಿ ಅವರು ಮಸ್ತ್, ಮಸ್ತಿ ಮತ್ತು ಹಂಗಾಮಾ ಸೇರಿದಂತೆ ಹಲವಾರು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ.
ಇತ್ತೀಚೆಗೆ, ಮಾಜಿ ಚಲನಚಿತ್ರ ನಿರ್ಮಾಪಕಿ, ಜಾಕಿ ಶ್ರಾಫ್ ಅವರ ಪತ್ನಿ ಮತ್ತು ಟೈಗರ್ ಶ್ರಾಫ್ ಅವರ ತಾಯಿ ಆಯೇಶಾ ಶ್ರಾಫ್ ಅವರು 58 ಲಕ್ಷ ರೂಪಾಯಿ ಕಳೆದುಕೊಂಡಿದ್ದರು.
ಕಳೆದ ವರ್ಷ ಬ್ಯಾಂಕ್ ಕೆವೈಸಿ ವಿವರಗಳನ್ನು ನವೀಕರಿಸುವ ನೆಪದಲ್ಲಿ ನಟ ಅಣ್ಣು ಕಪೂರ್ ಅವರಿಗೆ 4 ಲಕ್ಷ ರೂಪಾಯಿಗಳನ್ನು ವಂಚಿಸಿದ ವ್ಯಕ್ತಿಯನ್ನು ಬಂಧಿಸಲಾಗಿತ್ತು.
ಈಗ ಆನ್ಲೈನ್ನಲ್ಲಿ ವಿವಿಧ ರೂಪದಲ್ಲಿ ವಂಚನೆ ನಡೆಯುತ್ತಿದೆ. ಮೆಸೆಜ್, ವಾಟ್ಸಪ್ ಮುಂತಾದ ಕಡೆ ಇರುವ ಅನಧಿಕೃತ ಲಿಂಕ್ಗಳನ್ನು ಕ್ಲಿಕ್ ಮಾಡದೆ ಇರುವ ಮೂಲಕ ಸುರಕ್ಷಿತವಾಗಿರಬೇಕು. ಕೆವೈಸಿ ಅಪ್ಡೇಟ್ ಅಥವಾ ಇತರೆ ಯಾವುದೇ ಕಾರ್ಯಗಳನ್ನು ಬ್ಯಾಂಕ್ನ ಅಥವಾ ಇತರೆ ಸಂಸ್ಥೆಗಳ ಅಧಿಕೃತ ವೆಬ್ಸೈಟ್ ಮುಖಾಂತರವೇ ಮಾಡಬೇಕು.
ಆನ್ಲೈನ್ ಸುರಕ್ಷತೆಗೆ ಈ ಸಲಹೆ ಪಾಲಿಸಿ
- ಸದಾ ಎಚ್ಚರಿಕೆಯಿಂದ ಇರಿ: ಅಪರಿಚಿತರಿಂದ ಬರುವ ಸಂದೇಶ, ಇಮೇಲ್ ಕುರಿತು ಯಾವತ್ತೂ ನಂಬಿಕೆ ಇಟ್ಟುಕೊಳ್ಳಬೇಡಿ. ಇನ್ಸ್ಟಾಗ್ರಾಂನಲ್ಲಿ ಕಾಣಿಸುವ ಜಾಹೀರಾತುಗಳನ್ನು ಹಲವು ರೀತಿಯಿಂದ ದೃಢೀಕರಿಸಲು ಪ್ರಯತ್ನಿಸಿ.
- ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ: ನಿಮಗೆ ಗೊತ್ತಿರದ ಮೂಲದಿಂದ ಬಂದಿರುವ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ. ಇದು ನಿಮ್ಮನ್ನು ಅಸುರಕ್ಷಿತ ವೆಬ್ಸೈಟ್ಗಳಿಗೆ ಕರೆದೊಯ್ಯಬಹುದು. ನಿಮ್ಮ ಮೊಬೈಲ್ಗೆ ವೈರಸ್ ಅಟ್ಯಾಕ್ ಆಗಬಹುದು.
- ವೈಯಕ್ತಿಕ ಮಾಹಿತಿಗೆ ಗಾರ್ಡ್ ಹಾಕಿ: ಇನ್ಸ್ಟಾಗ್ರಾಂನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ, ಮೊಬೈಲ್ ಸಂಖ್ಯೆ ಇತರರಿಗೆ ಕಾಣಿಸುವುದು ಬೇಡ. ಈ ಮಾಹಿತಿಯು ವಂಚಕರ ಕೈ ಸೇರಿದರೆ ಯಾವುದಾದರೂ ರೀತಿ ನಿಮ್ಮನ್ನು ವಂಚನೆಯ ಖೆಡ್ಡಾಕ್ಕೆ ಬೀಳಿಸಬಹುದು.
- ರಿಕ್ವೆಸ್ಟ್ ವೇರಿಫಿಕೇಷನ್ ಮಾಡಿ: ನಿಮಗೆ ಇಂತಹ ಆನ್ಲೈನ್ ವ್ಯವಹಾರಗಳ ಸಂದರ್ಭದಲ್ಲಿ ಏನೇ ಸಂದೇಹ ಬಂದರೂ ನಂಬಿಕೆಗೆ ಅರ್ಹವಾಗಿರುವ ಚಾನೆಲ್ಗಳ ಮೂಲಕ ಆ ಸಂಸ್ಥೆಯನ್ನು ಸಂಪರ್ಕಿಸಿ. ಇನ್ಸ್ಟಾಗ್ರಾಂನಲ್ಲಿ ಯಾವುದಾದರೂ ಜಾಹೀರಾತು ಕಂಡರೆ ಆ ಜಾಹೀರಾತು ನೀಡಿದ ಮೂಲ ಕಂಪನಿ ನಿಜಕ್ಕೂ ಅಸ್ತಿತ್ವದಲ್ಲಿಯೇ ಎಂದು ಹುಡುಕಿ.
- ವಂಚಕರನ್ನು ಗುರುತಿಸಿ: ವಂಚಕರು ನಿಮ್ಮೊಂದಿಗೆ ವ್ಯವಹರಿಸುವ ರೀತಿ ಸಂಶಯಸ್ಪದವಾಗಿರುತ್ತದೆ. ಆರಂಭದಲ್ಲಿ ನಂಬಿಕೆಗೆ ಪಾತ್ರವಾಗಲು ಕೆಲವು ನೂರು ರೂಪಾಯಿ ರಿಟರ್ನ್ ನೀಡಬಹುದು. ಆದರೆ, ನಂತರ ದೊಡ್ಡ ಮೊತ್ತದ ಹಣ ನೀಡಬೇಡಿ. ನಿಮ್ಮ ಬ್ಯಾಂಕ್ ಮಾಹಿತಿ, ಆಧಾರ್ ಮಾಹಿತಿ, ಒಟಿಪಿ ಇತ್ಯಾದಿ ನೀಡಬೇಡಿ.