ನಾನು ಕೇಳಿದ್ದನ್ನು ನೀನು ಕೊಡಬೇಕು ಕೊಟ್ಟೇ ಕೊಡ್ತೀಯ, ತಾಂಡವ್ಗಾಗಿ ಬೇಡಿಕೆ ಇಟ್ಟಳಾ ಶ್ರೇಷ್ಠಾ?; ಭಾಗ್ಯಲಕ್ಷ್ಮೀ ಧಾರಾವಾಹಿ
Apr 26, 2024 08:46 AM IST
ಭಾಗ್ಯಲಕ್ಷ್ಮೀ ಧಾರಾವಾಹಿ ಏಪ್ರಿಲ್ 25ರ ಎಪಿಸೋಡ್
Bhagyalakshmi Serial April 25th Episode: ಇಷ್ಟು ದಿನಗಳ ಕಾಲ ನಾನು ಎಲ್ಲವನ್ನೂ ಮುಚ್ಚಿಟ್ಟಿದ್ದು ತಪ್ಪು, ನಿನ್ನ ಮನೆಯವರಿಗೆ ಎಲ್ಲವನ್ನೂ ಹೇಳುತ್ತೇನೆ ಎಂದು ಶ್ರೇಷ್ಠಾ, ತಾಂಡವ್ ಮನೆಗೆ ಬರುತ್ತಾಳೆ. ಭಾಗ್ಯಾಗೆ ನಿಜ ಗೊತ್ತಾದರೆ ಮುಂದೆ ಏನೆಲ್ಲಾ ಆಗಬಹುದು ಎಂದು ನೆನಪಿಸಿಕೊಂಡು ಪೂಜಾ ಗಾಬರಿ ಆಗುತ್ತಾಳೆ.
Bhagyalakshmi Serial: ಶ್ರೇಷ್ಠಾ ಹಾಗೂ ತಾಂಡವ್ ಇನ್ನು 10 ದಿನಗಳಲ್ಲಿ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ತಿಳಿದ ಪೂಜಾ, ಕೋಪದಿಂದ ಭಾವನನ್ನು ಮೀಟ್ ಮಾಡಲು ಬರುತ್ತಾಳೆ. ಆಫೀಸ್ ಅವಾರ್ಡ್ ಕಾರ್ಯಕ್ರಮದಲ್ಲಿ ತಾಂಡವ್ಗೆ ಪ್ರಶಸ್ತಿ ಬಂದಿದ್ದನ್ನು ನೋಡಿ ಇನ್ನಷ್ಟು ಆಕ್ರೋಶ ವ್ಯಕ್ತಪಡಿಸುತ್ತಾಳೆ. ಮನೆಯಲ್ಲಿ ಮಾಡಬಾರದ ಕೆಲಸ ಮಾಡಿ ಇಲ್ಲಿ ನೀತಿ ನಿಯಮ ಎಂದು ಮಾತನಾಡುತ್ತಿದ್ದೀರ ಎಂದು ಕೇಳುತ್ತಾಳೆ.
ಅದೇ ಸಮಯಕ್ಕೆ ಅಲ್ಲಿಗೆ ಬರುವ ಶ್ರೇಷ್ಠಾಗೂ ಪೂಜಾಗೂ ಮದುವೆ ವಿಚಾರವಾಗಿ ವಾದ ವಿವಾದ ಉಂಟಾಗುತ್ತದೆ. ಕೋಪದಿಂದ ಕುದಿಯುವ ಶ್ರೇಷ್ಠಾ, ಇಷ್ಟು ದಿನಗಳು ಸುಮ್ಮನೆ ಇದ್ದದ್ದು ತಪ್ಪಾಯ್ತು. ಇನ್ನಾದರೂ ಮನೆಯವರಿಗೆ ಎಲ್ಲಾ ಹೇಳಿಬಿಡುತ್ತೇನೆ ಎಂದು ಕುಸುಮಾಳನ್ನು ಭೇಟಿ ಮಾಡಲು ಬರುತ್ತಾಳೆ. ಆದರೆ ಮದುವೆ ಹತ್ತಿರ ಇದ್ದು ಈ ರೀತಿ ಏಕಾಏಕಿ ಮನೆಗೆ ಬಂದ ಶ್ರೇಷ್ಠಾಳನ್ನು ನೋಡಿ ಕುಸುಮಾ ಗಾಬರಿ ಆಗುತ್ತಾಳೆ. ಏನು ಬಂದಿದ್ದು ಎಂದು ಕೇಳುತ್ತಾಳೆ. ಶ್ರೇಷ್ಠಾಳನ್ನು ನೋಡಿ ತನ್ವಿ, ಸುನಂದಾ ಕೂಡಾ ಕೋಪಗೊಳ್ಳುತ್ತಾರೆ. ನಾನು ನಿಮ್ಮೆಲ್ಲರ ಬಳಿ ಏನೋ ಮಾತನಾಡಬೇಕು ಎನ್ನುತ್ತಾಳೆ. ಸರಿ ಹೇಳು ಎಂದು ಕುಸುಮಾ ಹೇಳುತ್ತಾಳೆ. ಹೇಳುತ್ತೇನೆ, ಆದರೆ ಭಾಗ್ಯಾ ಕೂಡಾ ಬರಬೇಕು ಎನ್ನುತ್ತಾಳೆ.
ಭಾಗ್ಯಾಳನ್ನು ಕರೆಸುವಂತೆ ಕುಸುಮಾಗೆ ಹೇಳುವ ಶ್ರೇಷ್ಠಾ
ಶ್ರೇಷ್ಠಾ ಮಾತುಗಳಿಂದ ಗೊಂದಲಕ್ಕೆ ಒಳಗಾಗುವ ಕುಸುಮಾ, ಮದುವೆ ಆಗುತ್ತಿರುವುದು ನೀನು, ಏನೋ ಮಾತನಾಡಬೇಕೆಂದು ನಮ್ಮ ಮನೆಗೆ ಬಂದಿದ್ದೀಯ, ಅದಕ್ಕೂ ಭಾಗ್ಯಾಗೂ ಏನು ಸಂಬಂಧ? ಅವಳ ಜೊತೆ ನಿನ್ನದೇನು ಮಾತು ಎಂದು ಕೇಳುತ್ತಾಳೆ. ನೀವು ಕರೆಸಿ ಆಂಟಿ ಈ ವಿಚಾರ ಹೇಳಬೇಕೆಂದರೆ ಅವಳೇ ಮುಖ್ಯ ಎನ್ನುತ್ತಾಳೆ. ಕುಸುಮಾ ಭಾಗ್ಯಾಗೆ ಕರೆ ಮಾಡಿ ತನ್ವಿ ಆಗಲೇ ಮನೆಗೆ ಬಂದಿದ್ದಾಳೆ ನೀನೇಕೆ ಬಂದಿಲ್ಲ, ಎಲ್ಲಿಗೆ ಹೋಗಿದ್ದೀಯ ಎಂದು ಕೇಳುತ್ತಾಳೆ. ಆದರೆ ಭಾಗ್ಯಾಗೆ ತಾನು ಕೆಲಸ ಹುಡುಕಿ ಹೋದ ವಿಚಾರ ಅತ್ತೆಗೆ ತಿಳಿದುಹೋಯ್ತಾ ಎಂಬ ಭಯ. ಬೇಗ ಮನೆಗೆ ಬಾ ಎಂದು ಕುಸುಮಾ ಭಾಗ್ಯಾಗೆ ಸೂಚಿಸುತ್ತಾಳೆ. ತರಕಾರಿ ತೆಗೆದುಕೊಳ್ಳುತ್ತಿದ್ದ ಭಾಗ್ಯಾ ಅಲ್ಲಿಂದ ಗಡಿಬಿಡಿಯಿಂದಲೇ ಮನೆಗೆ ಹೊರಡುತ್ತಾಳೆ.
ಇತ್ತ ಪೂಜಾ ಹಾಗೂ ತಾಂಡವ್ಗೆ ಶ್ರೇಷ್ಠಾ ಎಲ್ಲವನ್ನು ಹೇಳಿಬಿಟ್ಟರೆ ಮುಂದೇನು ಗತಿ ಎಂದು ಯೋಚಿಸುತ್ತಿದ್ದಾರೆ. ನಿಜ ತಿಳಿದರೆ ಅಮ್ಮ ನನ್ನನ್ನು ಸಿಗಿದು ತೋರಣ ಕಟ್ಟುತ್ತಾರೆ, ಹೇಗಾದರೂ ಮಾಡಿ ಶ್ರೇಷ್ಠಾಳನ್ನು ತಡೆಯಲೇಬೇಕು ಎಂದುಕೊಳ್ಳುತ್ತಾನೆ. ಅಕ್ಕ ಗಂಡನನ್ನು ಬಿಟ್ಟು ಮಕ್ಕಳೊಂದಿಗೆ ಮನೆಗೆ ಬಂದರೆ ನನ್ನ ಮದುವೆ ಆಗುವುದಿಲ್ಲ, ಮಕ್ಕಳು ಹಿಂಸೆ ಕೊಡುತ್ತಾರೆ ಎನ್ನುವಂತೆ ಪೂಜಾ ಕನಸು ಕಾಣುತ್ತಾಳೆ. ತಾಂಡವ್ ಬಳಿ ಬರುವ ಪೂಜಾ, ಹೇಗಾದರೂ ಮಾಡಿ ಅವಳನ್ನು ತಡೆಯಿರಿ, ಇಲ್ಲವಾದರೆ ನಿಮ್ಮನ್ನು ಕಂಬಿ ಎಣಿಸುವಂತೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡುತ್ತಾಳೆ. ಶ್ರೇಷ್ಠಾ ಬಳಿ ಬರುವ ಪೂಜಾ , ನಿನ್ನ ಜೊತೆ ಮಾತನಾಡಬೇಕು ನಡಿ ಹೊರಗೆ ಎಂದು ಅವಳ ಕೈ ಹಿಡಿದು ಹೊರಗೆ ಎಳೆದು ತರುತ್ತಾಳೆ.
ಶ್ರೇಷ್ಠಾ ಮಾತು ಕೇಳಿ ಮನೆಯವರು ಕನ್ಫ್ಯೂಸ್
ಶ್ರೇಷ್ಠಾ ಜೊತೆ ಹೊರಗೆ ಬರುವ ಪೂಜಾಳನ್ನು ಕುಸುಮಾ ನೋಡುತ್ತಾಳೆ. ಇವಳನ್ನು ಕರೆದುಕೊಂಡು ಎಲ್ಲಿಗೆ ಹೋಗುತ್ತಿದ್ದೀಯ ಎಂದು ಕೇಳುತ್ತಾಳೆ. ನಾನು ಇವಳ ಜೊತೆ ಮಾತನಾಡಬೇಕು ಎಂದು ಪೂಜಾ ಹೇಳುತ್ತಾಳೆ. ಶ್ರೇಷ್ಠಾ, ಭಾಗ್ಯಾ ಜೊತೆ ಮಾತನಾಡಬೇಕು ಎಂದಿದ್ದಾಳೆ, ನಿನ್ನದೇನು ಮಾತು ನಡಿ ಒಳಗೆ ಎಂದು ಮೂವರನ್ನೂ ಒಳಗೆ ಕರೆದೊಯ್ಯುತ್ತಾಳೆ. ಭಾಗ್ಯಾಳನ್ನು ನೋಡುತ್ತಿದ್ದಂತೆ ಅವಳ ಮುಂದೆ ಬಂದು ನಿಲ್ಲುವ ಶ್ರೇಷ್ಠಾ, ಭಾಗ್ಯಾ ನಿನಗಾಗಿ ಕಾಯುತ್ತಿದ್ದೆ. ನಾನು ನಿನ್ನನ್ನು ಏನೋ ಕೇಳುತ್ತೇನೆ, ಅದನ್ನು ನೀನು ಕೊಡಲೇಬೇಕು, ಕೊಟ್ಟೇ ಕೊಡುತ್ತೀಯ ಎನ್ನುತ್ತಾಳೆ. ಶ್ರೇಷ್ಠಾ ಮಾತುಗಳನ್ನು ಕೇಳಿ ಎಲ್ಲರೂ ಕನ್ಫ್ಯೂಸ್ ಆಗುತ್ತಾರೆ.
ಶ್ರೇಷ್ಠಾಗೆ ತಾಂಡವ್ ಮನೆಯವರ ಬಳಿ ಎಲ್ಲವನ್ನೂ ಹೇಳುವ ಉದ್ದೇಶ ಇದೆಯೋ, ಅಥವಾ ಪೂಜಾ, ತಾಂಡವ್ನನ್ನು ಬೆದರಿಸಲು ಈ ರೀತಿ ಮಾಡುತ್ತಿದ್ದಾಳೋ ಎಂಬುದು ಮುಂದಿನ ಎಪಿಸೋಡ್ನಲ್ಲಿ ತಿಳಿಯಲಿದೆ.