Bhagyalakshmi Serial: ತಾಂಡವ್ ಪರ ನಿಂತ ಸುನಂದಾ, ಸೊಸೆ ಭಾಗ್ಯಾಗಾಗಿ ಕೆಲಸಕ್ಕೆ ಸೇರಲು ನಿರ್ಧರಿಸಿದ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ
May 04, 2024 08:30 AM IST
ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial Today Episode: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮೇ3ರ ಸಂಚಿಕೆ; ಸುನಂದಾ, ಮಗಳ ಪರ ಬಿಟ್ಟು ಅಳಿಯ ತಾಂಡವ್ ಪರ ನಿಲ್ಲುತ್ತಾಳೆ. ನೀನು ನಿನ್ನ ಅತ್ತೆ ಮಾವನನ್ನು ನಂಬಿ ಕೂತರೆ ನಿನ್ನ ಸಂಸಾರ ಹಾಳಾಗುತ್ತದೆ, ಗಂಡನ ಬಳಿ ಕ್ಷಮೆ ಕೇಳು ಎನ್ನುತ್ತಾಳೆ. ಸುನಂದಾ ವರ್ತನೆಗೆ ಕುಸುಮಾ ಬೇಸರ ವ್ಯಕ್ತಪಡಿಸುತ್ತಾಳೆ.
ಭಾಗ್ಯಲಕ್ಷ್ಮೀ ಧಾರಾವಾಹಿ: ಭಾಗ್ಯಾ ಹಾಗೂ ಆಕೆಯ ಪರ ನಿಂತವರ ಪರಿಸ್ಥಿತಿ ದಿನೇ ದಿನೆ ಕಠಿಣವಾಗುತ್ತಿದೆ. ಮನೆ ನಡೆಸಬೇಕು, ಶ್ರೇಷ್ಠಾ ಸಾಲ ತೀರಿಸಬೇಕು, ಮಕ್ಕಳ ವಿದ್ಯಾಭ್ಯಾಸ ನೋಡಿಕೊಳ್ಳಬೇಕು. ಇದೆಲ್ಲದಕ್ಕೂ ಹಣ ಹೊಂದಿಸಬೇಕು. ಸದ್ಯಕ್ಕೆ ಕುಸುಮಾ, ಧರ್ಮರಾಜ್ ಬಳಿ ಇರುವ ಹಣ ಖರ್ಚಾಗುತ್ತಿದೆ. ಸಾಲ ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಸ್ವಲ್ಪ ದಿನ ಕಳೆಯುವಷ್ಟರಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ.
ಮತ್ತೊಂದೆಡೆ ಸುನಂದಾ, ಕುಸುಮಾ ಪರ ತಿರುಗಿ ಬಿದ್ದಿದ್ದಾಳೆ. ಭಾಗ್ಯಾಳಿಂದ ನನಗೆ ಡಿವೋರ್ಸ್ ಬೇಕೇ ಬೇಕು ಹೇಗಾದರೂ ಮಾಡಿ ಈ ಕೆಲಸ ಮಾಡಿಕೊಡಿ ಎಂದು ತಾಂಡವ್, ಲಾಯರ್ ಬಳಿ ಫೋನಿನಲ್ಲಿ ಮಾತನಾಡುವುದನ್ನು ಸುನಂದಾ ಕೇಳಿಸಿಕೊಳ್ಳುತ್ತಾಳೆ. ನನ್ನ ಮಗಳ ಜೀವನ ಹಾಳು ಮಾಡಬೇಡಿ ಎಂದು ಸುನಂದಾ ತಾಂಡವ್ ಬಳಿ ಮನವಿ ಮಾಡುತ್ತಾಳೆ. ನಿಮ್ಮ ಮಗಳು ನನಗೆ ಬಹಳ ಅವಮಾನ ಮಾಡಿದ್ಧಾಳೆ. ಅವಳು ಸ್ಕೂಲ್ಗೆ ಹೋಗುವುದನ್ನು ಬಿಟ್ಟು, ಮೊದಲಿನಂತೆ ನನ್ನ ಸೇವೆ ಮಾಡಿಕೊಂಡು ಇದ್ದರೆ, ನನ್ನ ಬಳಿ ಕ್ಷಮೆ ಕೇಳಿದರೆ ಆಗ ಡಿವೋರ್ಸ್ ಕೊಡಬೇಕೋ ಬೇಡವೋ ಎಂದು ಯೋಚಿಸುವುದಾಗಿ ತಾಂಡವ್ ಹೇಳುತ್ತಾನೆ. ಇದಕ್ಕೆ ಬೇಸರ ವ್ಯಕ್ತಪಡಿಸುವ ಸುನಂದಾ, ಕುಸುಮಾ ಮೇಲೆ ಕೋಪಗೊಳ್ಳುತ್ತಾಳೆ.
ತಾಂಡವ್ ಪಕ್ಷ ಸೇರಿದ ಸುನಂದಾ
ಮಗ ಸೊಸೆಯನ್ನು ಒಂದು ಮಾಡುತ್ತೇನೆ ಎಂದು ದೂರ ಮಾಡುತ್ತಿದ್ದೀರಿ. ಇದೇನಾ ನೀವು ಮಾಡುತ್ತಿರುವುದು. ನಿಮ್ಮ ಹಟದಿಂದ ನನ್ನ ಮಗಳ ಜೀವನ ಹಾಳಾಗುತ್ತಿದೆ ಎನ್ನುತ್ತಾಳೆ. ಸುನಂದಾ ಮಾತನ್ನು ಕೇಳಿ ಭಾಗ್ಯಾ, ಕುಸುಮಾ, ಧರ್ಮರಾಜ್ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಮಗ ಸೊಸೆ ಜೊತೆಯಾಗಿರಬೇಕು, ನಾವೆಲ್ಲರೂ ಸಂತೋಷವಾಗಿರಬೇಕು ಎಂಬ ಕಾರಣಕ್ಕೆ ನಾವೆಲ್ಲರೂ ಇಷ್ಟು ಕಷ್ಟ ಪಡುತ್ತಿದ್ದೇವೆ ಎಂದು ಕುಸುಮಾ ಹೇಳುತ್ತಾಳೆ. ನೀವು ಏನೂ ಮಾಡುತ್ತಿಲ್ಲ. ಅವರ ಸಂಸಾರ ಸರಿ ಆಗಬೇಕು ಎಂದಾದರೆ ಮೊದಲು ಭಾಗ್ಯಾ, ಅಳಿಯನ ಬಳಿ ಕ್ಷಮೆ ಕೇಳಬೇಕು. ಅವಳು ಶಾಲೆಗೆ ಹೋಗುವುದನ್ನು ನಿಲ್ಲಿಸಿ ಗಂಡ ಮಕ್ಕಳನ್ನು ನೋಡಿಕೊಂಡಿರಲಿ ಸಾಕು, ಈ ರೀತಿ ಅವಳು ಕಷ್ಟಪಡುತ್ತಿರುವುದನ್ನು ನನ್ನಿಂದ ನೋಡಲಾಗುತ್ತಿಲ್ಲ ಎನ್ನುತ್ತಾಳೆ.
ಕುಸುಮಾ ಮಾತಿಗೆ ಉತ್ತರಿಸುವ ಭಾಗ್ಯಾ, ನೋಡಲು ಆಗದಿದ್ದರೆ ನೀನು ಮನಗೆ ವಾಪಸ್ ಹೋಗು ಎನ್ನುತ್ತಾಳೆ. ತನ್ನ ಪರ ಮಾತನಾಡುವ ಸುನಂದಾಳನ್ನು ತಾಂಡವ್ ತನ್ನ ಕಡೆ ಬರುವಂತೆ ಆಹ್ವಾನಿಸುತ್ತಾನೆ. ಅತ್ತೆ, ನನ್ನ ಕಷ್ಟ ಅರ್ಥ ಮಾಡಿಕೊಂಡು ನನ್ನ ಪರ ನಿಂತಿದ್ದಾರೆ. ಅವರು ಎಲ್ಲೂ ಹೋಗಬಾರದು, ಅತ್ತೆ ನೀವು ನನ್ನ ಕಡೆ ಬನ್ನಿ ಎನ್ನುತ್ತಾನೆ. ನನ್ನ ಮಗಳು ಚೆನ್ನಾಗಿರಬೇಕೆಂದರೆ ನಾನು ಏನು ಬೇಕಾದರೂ ಮಾಡುತ್ತೇನೆ ಎಂದು ಸುನಂದಾ ಗೆರೆ ದಾಟಿ, ತಾಂಡವ್ ಕಡೆ ಹೋಗುತ್ತಾಳೆ. ಸುನಂದಾ ವರ್ತನೆ ಒಂದು ಕಡೆ ತಾಂಡವ್ಗೆ ಖುಷಿ ಆದರೆ ಮತ್ತೊಂದು ಕಡೆ ಅನುಮಾನ ಉಂಟು ಮಾಡುತ್ತದೆ.
ಕೆಲಸಕ್ಕೆ ಸೇರಲು ನಿರ್ಧರಿಸಿದ ಕುಸುಮಾ
ಫ್ರೆಂಡ್ಸ್ ಜೊತೆ ಟ್ರಿಪ್ ಹೋಗಿ ಬರುತ್ತೇನೆ ಎಂದು ಹೇಳುವ ಪೂಜಾ ಶ್ರೇಷ್ಠಾ ಮನೆಗೆ ಬರುತ್ತಾಳೆ. ಇಲ್ಲಿಕೆ ಏಕೆ ಬಂದೆ ಎಂದು ಶ್ರೇಷ್ಠಾ ಕೇಳುತ್ತಾಳೆ. ಇನ್ಮುಂದೆ ನಾನು ಇಲ್ಲೇ ಇರುತ್ತೇನೆ. ನನ್ನ ಭಾವನನ್ನು ಹೇಗೆ ಮದುವೆ ಆಗುತ್ತೀಯ? ನನ್ನ ಕಣ್ತಪ್ಪಿಸಿ ಇಬ್ಬರೂ ಏನು ಮಾಡಲು ಸಾಧ್ಯ ನೋಡುತ್ತೇನೆ ಎಂದು ಚಾಲೆಂಜ್ ಮಾಡುತ್ತಾಳೆ.
ಮತ್ತೊಂದೆಡೆ ಭಾಗ್ಯಾ, ಕೆಲಸ ಕೊಡಿಸುವ ಬ್ರೋಕರ್ಗೆ ಕರೆ ಮಾಡಿ ನಾನು ಕೆಲಸ ಹುಡುಕುತ್ತಿರುವುದು ಮನೆಯಲ್ಲಿ ಯಾರಿಗೂ ಗೊತ್ತಿಲ್ಲ, ಆಗಲೇ ನನ್ನ ಅತ್ತೆ ಮಾತನಾಡಿದ್ದು ಕ್ಷಮಿಸಿ ಎನ್ನುತ್ತಾಳೆ. ಆಯ್ತು ನಾನು ಮತ್ತೆ ಫೋನ್ ಮಾಡುತ್ತೇನೆ. ನಾನು ಹೇಳಿದ ಜಾಗಕ್ಕೆ ಬಾ ಎಂದು ಬ್ರೋಕರ್ ಹೇಳುತ್ತಾನೆ. ಭಾಗ್ಯಾ ಕೂಡಾ ತಲೆ ಆಡಿಸುತ್ತಾಳೆ. ಕುಸುಮಾ ಕೂಡಾ ಮನೆ ಪರಿಸ್ಥಿತಿ ಬಗ್ಗೆ ಯೋಚಿಸುತ್ತಾಳೆ. ವಯಸ್ಸಾದ ಸಮಯದಲ್ಲಿ ಮಗ ಈ ರೀತಿ ಮಾಡುತ್ತಾನೆ ಎಂದು ಯೋಚಿಸಿರಲಿಲ್ಲ. ಮನೆ ನಡೆಸಲು ನಾನೇ ಏನಾದರೂ ಮಾಡಬೇಕು. ಭಾಗ್ಯಾ ಈ ಮನೆಯ ಗೃಹಲಕ್ಷ್ಮಿ. ಅವಳು ಮನೆ ಮಕ್ಕಳು, ಮಾವನನ್ನು ನೋಡಿಕೊಂಡು ಮನೆಯಲ್ಲೇ ಇರಲಿ, ನಾನು ಕೆಲಸಕ್ಕೆ ಹೋಗುತ್ತೇನೆ ಎಂದು ಮನಸ್ಸಿನಲ್ಲೇ ನಿರ್ಧರಿಸುತ್ತಾಳೆ.
ಭಾಗ್ಯಾಗೆ ಬ್ರೋಕರ್ ನಿಜವಾಗಲೂ ಕೆಲಸ ಕೊಡಿಸುತ್ತಾನಾ? ಕುಸುಮಾ ಕೂಡಾ ಕೆಲಸ ಹುಡುಕಿ ಹೋಗಲಿದ್ದಾಳಾ? ತಾಂಡವ್ ಪರ ಬಂದ ಸುನಂದಾ ಪ್ಲ್ಯಾನ್ ಏನು ಅನ್ನೋದು ಮುಂದಿನ ಎಪಿಸೋಡ್ಗಳಲ್ಲಿ ತಿಳಿಯಲಿದೆ.