Weekend with Ramesh: ‘ಒಬ್ಬೊಬ್ಬರಿಗೂ 20 ಇಡ್ಲಿ, 15 ದೋಸೆ, 30 ಪೂರಿ ಬೇಕಿತ್ತು.. ನಾವೆಲ್ರೂ ಆಗ ತಿಂಡಿಪೋತರೇ’ ಎಂದ ಪ್ರಭುದೇವ
Apr 02, 2023 09:30 AM IST
‘ಒಬ್ಬೊಬ್ಬರಿಗೂ 20 ಇಡ್ಲಿ, 15 ದೋಸೆ, 30 ಪೂರಿ ಬೇಕಿತ್ತು.. ನಾವೆಲ್ರೂ ಆಗ ತಿಂಡಿಪೋತರೇ’ ಎಂದ ಪ್ರಭುದೇವ
- ಚಿಕ್ಕಂದಿನಲ್ಲಿ ತಾವೆಷ್ಟು ತಿಂಡಿಪೋತರು ಎಂಬುದನ್ನೂ ಪ್ರಭುದೇವ ಹೇಳಿಕೊಂಡು ನಗಾಡಿದ್ದಾರೆ. ಅಯ್ಯೋ ಅದನ್ನ ಕೇಳಬೇಡಿ ಬಿಡಿ ಎನ್ನುತ್ತಲೇ, ನಾವೆಲ್ಲರೂ ಏನಿಲ್ಲ ಅಂದರೂ 15, 20 ದೋಸೆ, 20 ಇಡ್ಲಿ ತಿಂತಾಯಿದ್ವಿ ಎಂದಿದ್ದಾರೆ.
Weekend with Ramesh: ವೀಕೆಂಡ್ ವಿಥ್ ರಮೇಶ್ ಸೀಸನ್ ಐದರ ಎರಡನೇ ಅತಿಥಿಯಾಗಿ ಯಾರು ಬರಲಿದ್ದಾರೆ ಎಂಬ ಕುತೂಹಲ ಮೊದಲೇ ತಣಿದಿತ್ತು. ದೇಶಕಂಡ ಖ್ಯಾತ ಕೋರಿಯೋಗ್ರಾಫರ್, ನಟ, ನಿರ್ದೇಶಕ ಪ್ರಭುದೇವ ಬರಲಿದ್ದಾರೆ ಎಂದಾಗ ಎಲ್ಲರಲ್ಲೂ ಕುತೂಹಲವಿತ್ತು. ಅವರ ಏಪಿಸೋಡ್ನ ಪ್ರೋಮೋ ಸಹ ರಿಲೀಸ್ ಆಗಿತ್ತು. ಇದೀಗ ಶನಿವಾರ ಅವರ ಏಪಿಸೋಡ್ನ ಮೊದಲ ಭಾಗ ಪ್ರಸಾರವಾಗಿದೆ.
ಪ್ರಭುದೇವ ಹುಟ್ಟಿದ್ದು, ಬೆಳೆದಿದ್ದು ಚೈನೈನಲ್ಲಾದರೂ, ಅವರ ಕನ್ನಡ ಮಾತ್ರ ಅಚ್ಚುಕಟ್ಟಾಗಿದೆ. ಮೈಸೂರು ಬಳಿಯ ದೂರ ಗ್ರಾಮದಲ್ಲಿ ಆಡಿದ ನೆನಪು, ಅಲ್ಲಿನ ಸ್ನೇಹಿತರು, ಅಜ್ಜಿ ಮನೆಯಲ್ಲಿನ ತುಂಟಾಟ, ಕೆರೆ, ಕಟ್ಟೆ, ತೋಟ, ಸುತ್ತಾಟ, ಎಮ್ಮೆ ಕಾಯುವುದು ಹೀಗೆ ಎಲ್ಲ ಕ್ಷಣವನ್ನೂ ಪ್ರಭುದೇವ ರೆಡ್ ಸೀಟ್ ಮೇಲೆ ಕೂತು ಹಳೆಯದನೆಲ್ಲ ಮೆಲುಕು ಹಾಕಿದ್ದಾರೆ. ಬಾಲ್ಯವನ್ನು ಮಗದೊಮ್ಮೆ ಸವಿದಿದ್ದಾರೆ.
ಈ ನಡುವೆ ಚಿಕ್ಕಂದಿನಲ್ಲಿ ತಾವೆಷ್ಟು ತಿಂಡಿಪೋತರು ಎಂಬುದನ್ನೂ ಪ್ರಭುದೇವ ಹೇಳಿಕೊಂಡು ನಗಾಡಿದ್ದಾರೆ. ಅಯ್ಯೋ ಅದನ್ನ ಕೇಳಬೇಡಿ ಬಿಡಿ ಎನ್ನುತ್ತಲೇ, ನಾವೆಲ್ಲರೂ ಏನಿಲ್ಲ ಅಂದರೂ 15, 20 ದೋಸೆ, 20 ಇಡ್ಲಿ ತಿಂತಾಯಿದ್ವಿ ಎಂದಿದ್ದಾರೆ. ಆ ತಿಂಡಿಯ ವಿಚಾರವನ್ನು ಪ್ರಭುದೇವ ವೀಕೆಂಡ್ ಟೆಂಟ್ನಲ್ಲ ಹೇಳಿಕೊಂಡಿದ್ದು ಹೀಗೆ..
ನಾವೆಲ್ಲ ತಿಂಡಿಪೋತರೇ..
"ಚಿಕ್ಕವರಿದ್ದಾಗ.. ಚೆನ್ನಾಗಿ ತಿಂತಿದ್ವಿ.. ನಾವು 3 ಜನ, ಒಬ್ಬೊಬ್ಬರಿಗೂ 20 ಇಡ್ಲಿ, 15 ದೋಸೆ, 30 ಪೂರಿ ಬೇಕಿತ್ತು.. ಎಲ್ಲರೂ ಹಾಗೇ ತಿಂತಿದ್ವಿ. ನಾನು, ಪ್ರಸಾದ್, ರಾಜು, ನಾಗರಾಜು ಎಲ್ಲರಿಗೂ ಅಷ್ಟಷ್ಟು ಬೇಕೇ ಬೇಕು. ಇಡ್ಲಿ ಮಾಡುತ್ತಿದ್ದರೆ ಆ ಇಡೀ ಸೆಟ್ ನಂದೇ ಎಂದು ಬುಕ್ ಮಾಡುತ್ತಿದ್ದೆವು. ಅದಾದ ಮೇಲೆ ದೋಸೆ ಮಾಡ್ತಿದ್ರೆ, ಮೊದಲು ಕೂತವರಿಗೇ ದೋಸೆ.. ನಾನು 15 ದೋಸೆ ತಿಂದರೆ, ನಂದಾದ ಮೇಲೆ ಉಳಿದ ರಾಜು 16, ಪ್ರಸಾದ್ 17 ಹೀಗೆ ಎಲ್ಲರೂ ತಿಂತಾಯಿದ್ವಿ. ಚಿಕ್ಕಂದಿನಲ್ಲಿ ನಾವೆಲ್ಲ ತಿಂಡಿಪೋತರೆ" ಎಂದು ಪ್ರಭುದೇವ್ ಹೇಳಿಕೊಂಡಿದ್ದಾರೆ.
ಈಗ ಎರಡೇ ಚಮಚ ತಿಂತಿನಿ..
ಈಗಿನ ಆಹಾರ ಕ್ರಮ ಹೇಗಿರುತ್ತದೆ ಎಂದು ರಮೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಭುದೇವ, "ಈಗ ನಾನು ಪ್ರತಿ ದಿನ ಡಯಟ್ನಲ್ಲಿರುತ್ತೇನೆ. ಏನೂ ತಿನ್ನಬೇಕು ಏನು ತಿನ್ನಬಾರದು ಎಂದು ಲೆಕ್ಕ ಹಾಕಿರ್ತಿನಿ. ಸಂಜೆ 6.30ರ ನಂತರ ನಾನು ಏನನ್ನೂ ಮುಟ್ಟಲ್ಲ. ಅನ್ನ ಊಟ ಮಾಡುತ್ತೇನೆ. ಬಿಳಿ ಅನ್ನದ ಬದಲು ಬ್ರೌನ್ ರೈಸ್ ತಿಂತೀನಿ. ಅದೂ ಕೇವಲ ಎರಡೇ ಚಮಚ ಅಷ್ಟೇ" ಎಂದಿದ್ದಾರೆ. ನಿತ್ಯ ಒಂದು ಗಂಟೆ ವ್ಯಾಯಾಮ ತಪ್ಪಿಸುವುದಿಲ್ಲವಂತೆ ಪ್ರಭುದೇವ.