Dhanveerah: ಡಬಲ್ ಸರ್ಪ್ರೈಸ್ ನೀಡಿದ ನಟ ಧನ್ವೀರ್ ಗೌಡ; ಒಟಿಟಿಗೆ ಬಂತು ಕೈವ, ಸೆಟ್ಟೇರಿತು ಹಯಗ್ರೀವ
Feb 04, 2024 10:30 AM IST
Dhanveerah: ಡಬಲ್ ಸರ್ಪ್ರೈಸ್ ನೀಡಿದ ನಟ ಧನ್ವೀರ್ ಗೌಡ; ಒಟಿಟಿಗೆ ಬಂತು ಕೈವ, ಸೆಟ್ಟೇರಿತು ಹಯಗ್ರೀವ
- Hayagrriva Movie Launched: ಧನ್ವೀರ್ ಗೌಡ ನಾಯಕನಾಗಿ ನಟಿಸಿದ್ದ ಕೈವ ಸಿನಿಮಾ ಒಟಿಟಿಗೆ ಬಂದಿದೆ. ಅದೇ ರೀತಿ ಹಯಗ್ರೀವ ಚಿತ್ರ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸೆಟ್ಟೇರಿದೆ. ಹಯಗ್ರೀವ ಚಿತ್ರದಲ್ಲಿ ಧನ್ವೀರ್ಗೆ ಜೋಡಿಯಾಗಿ ಸಂಜನಾ ಆನಂದ್ ನಟಿಸಲಿದ್ದಾರೆ.
Dhanveerah Gowda: ಬಜಾರ್ ಹುಡುಗ ಧನ್ವೀರ್ ಗೌಡ ನಟನೆಯ ಕೈವ ಸಿನಿಮಾ ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸದ್ದು ಮಾಡಿತ್ತು. 70ರ ಕಾಲಘಟ್ಟದ ರೌಡಿಸಂ ಕಥಾಹಂದರ ಹಿನ್ನೆಲೆಯಲ್ಲಿ ಮೂಡಿಬಂದ ಚಿತ್ರವನ್ನು ಜಯತೀರ್ಥ ನಿರ್ದೇಶನ ಮಾಡಿದ್ದರು. ಇದೀಗ ಇದೇ ಸಿನಿಮಾ ಒಟಿಟಿ ಅಂಗಳಕ್ಕೆ ಕಾಲಿಟ್ಟಿದೆ. ಹೀಗೆ ಒಟಿಟಿಗೆ ಬಂದ ದಿನವೇ ಧನ್ವೀರ್ ಗೌಡ ನಟಿಸಲಿರುವ ಮತ್ತೊಂದು ಸಿನಿಮಾದ ಮುಹೂರ್ತವೂ ನೆರವೇರಿದೆ.
ಸಮೃದ್ಧಿ ಮಂಜುನಾಥ್ ತಮ್ಮ ಕೆ.ವೆ.ಸಿ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ನಿರ್ಮಿಸುತ್ತಿರುವ ಹೊಸ ಸಿನಿಮಾಕ್ಕೆ ಹಯಗ್ರೀವ ಎಂಬ ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ಮುಹೂರ್ತ ಸಮಾರಂಭ ನಾಡದೇವತೆ ಮೈಸೂರಿನ ಚಾಮುಂಡೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ನೆರವೇರಿದೆ. ಈ ಚಿತ್ರದಲ್ಲಿ ಧನ್ವೀರ್ ಗೌಡ ನಾಯಕನಾಗಿ ನಟಿಸಲಿದ್ದು, ಅವರಿಗೆ ಜೋಡಿಯಾಗಿ ಸಂಜನಾ ಆನಂದ್ ಕಾಣಿಸಿಕೊಳ್ಳಲಿದ್ದಾರೆ. ರಘುಕುಮಾರ್ ಒ.ಆರ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ಧನ್ವೀರ್ ಗೌಡ, ಒಳ್ಳೆಯ ತಂಡ ಮತ್ತು ಒಳ್ಳೆಯ ಶೀರ್ಷಿಕೆ ಸಿಕ್ಕಿದೆ. ಬಹಳ ದಿನಗಳಿಂದ ಪ್ಲಾನ್ ಮಾಡಿ, ಒಂದೊಳ್ಳೆಯ ಕಥೆ ಮಾಡಿ ಈ ಚಿತ್ರ ಮಾಡುತ್ತಿದ್ದೇವೆ. ಅಭಿಮಾನಿಗಳಿಗೆ ಖುಷಿಯಾಗುವಂತಹ ಕಥೆ ಇದೆ. ಈ ಚಿತ್ರದಲ್ಲಿ ನೀಗ್ರೋಗಳ ಜೊತೆಗೆ ಫೈಟ್ ಇದೆ. ‘ಬಜಾರ್’ ನಂತರ ಸಿಕ್ಸ್ ಪ್ಯಾಕ್ ಮಾಡಿಕೊಳ್ಳುತ್ತಿದ್ದೇನೆ. ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಕಥೆ ಮತ್ತು ಪಾತ್ರ ವಿಭಿನ್ನವಾಗಿದೆ ಎಂದರು.
ನಾನು ಯೂಟ್ಯೂಬ್ನಲ್ಲಿ ‘ದಿ ಬೆಲ್’ ಎಂಬ ಕಿರುಚಿತ್ರ ನೋಡಿದೆ. ಆ ಕಿರುಚಿತ್ರ ಬಹಳ ಖುಷಿ ನೀಡಿತು. ಆ ಕಿರುಚಿತ್ರದ ನಿರ್ದೇಶಕ ರಘುಕುಮಾರ್ ಅವರನ್ನು ಎಂಟು ತಿಂಗಳ ಹಿಂದೆ ಕರೆಸಿ ಮಾತನಾಡಿದೆ. ಒಂದು ಚಿತ್ರ ಮಾಡಿಕೊಡಿ ಎಂದು ಹೇಳಿದೆ. ಅವರು ತಮ್ಮ ತಂಡದೊಂದಿಗೆ ಒಂದೊಳ್ಳೆಯ ಕಥೆ ಮಾಡಿದ್ದಾರೆ. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಕನ್ನಡದಲ್ಲಿ ಇಲ್ಲಿಯವರೆಗೂ ಈ ತರಹದ ಚಿತ್ರ ಬಂದಿಲ್ಲ ಎಂಬುದು ನಿರ್ಮಾಪಕ ಸಮೃದ್ದಿ ಮಂಜುನಾಥ್ ಅವರ ಮಾತು.
ಪೌರಾಣಿಕ ಹಿನ್ನೆಲೆಯಲ್ಲಿ ಸುತ್ತಲಿದೆ ಕಥೆ
ನಿರ್ಮಾಪಕರು ಫೋನ್ ಮಾಡಿ ಸಿನಿಮಾ ಮಾಡಿಕೊಡಿ ಎಂದರು. ನನ್ನ ಹತ್ತಿರ ಒಂದು ಕಥೆ ಇತ್ತು. ಅದನ್ನು ಅವರಿಗೆ ಹೇಳಿದಾಗ, ಇಷ್ಟಪಟ್ಟು ಈ ಚಿತ್ರ ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಈ ಚಿತ್ರದಲ್ಲಿ ಮುಖ್ಯವಾಗಿ ಪೌರಾಣಿಕ ಅಂಶಗಳ ಜೊತೆಗೆ ಕ್ರೈಮ್ ಇದೆ. ಲವ್, ಸೆಂಟಿಮೆಂಟ್, ಸಸ್ಪೆನ್ಸ್ ಸೇರಿದಂತೆ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳು "ಹಯಗ್ರೀವ" ಚಿತ್ರದಲ್ಲಿದೆ. ಹಯಗ್ರೀವ ಎಂಬ ಪೌರಾಣಿಕ ಪಾತ್ರದ ಸುತ್ತ ಚಿತ್ರ ಸುತ್ತುತ್ತದೆ. ಬೆಂಗಳೂರಿನಲ್ಲಿ ಇಡೀ ಚಿತ್ರದ ಚಿತ್ರೀಕರಣ ನಡೆಯಲಿದೆ. ಕನ್ನಡದಲ್ಲಿ ಇದುವರೆಗೂ ಯಾರೂ ಈ ತರಹದ ಪ್ರಯತ್ನವನ್ನು ಮಾಡಿಲ್ಲ ಎಂಬುದು ನನ್ನ ಅನಿಸಿಕೆ ಎನ್ನುತ್ತಾರೆ ನಿರ್ದೇಶಕ ರಘುಕುಮಾರ್.
ಸಂಜನಾ ಆನಂದ್ ನಾಯಕಿ
ನಾಯಕಿಯಾಗಿ ಸಂಜನಾ ಆನಂದ್ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಇನ್ನುಳಿದ ಪಾತ್ರಗಳಲ್ಲಿ ರಂಗಾಯಣ ರಘು, ತಾರಾ, ಸಾಧು ಕೋಕಿಲ, ರವಿಶಂಕರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸುತ್ತಿದ್ದಾರೆ. ಕಾರ್ತಿಕ್, ಛಾಯಾಗ್ರಹಣ ಹಾಗೂ ಉಮೇಶ್ ಅವರ ಸಂಕಲನವಿರುವ ಈ ಚಿತ್ರಕ್ಕೆ ರಘುಕುಮಾರ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆಯನ್ನು ಶೈಲೇಶ್ ರಾಜ್ ಹಾಗೂ ಚೇತನ್ ಸಿದ್ ಬರೆದಿದ್ದಾರೆ. ಅರ್ಜುನ್ ಮಾಸ್ಟರ್ ಸಾಹಸ ನಿರ್ದೇಶನ ಮಾಡಲಿದ್ದಾರೆ
ಒಟಿಟಿಗೆ ಕೈವ
ಧನ್ವೀರ್ ಗೌಡ ಮೇಘಾ ಶೆಟ್ಟಿ ನಾಯಕ ನಾಯಕಿಯಾಗಿ ನಟಿಸಿದ ಕೈವ ಸಿನಿಮಾ ಡಿ. 8ರಂದು ರಾಜ್ಯಾದ್ಯಂತ ಬಿಡುಗಡೆ ಆಗಿತ್ತು. ಜಯತೀರ್ಥ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ರೆಟ್ರೋ ರೌಡಿಸಂ ಹಿನ್ನೆಲೆಯ ಕಥೆಗೆ ಪ್ರೇಕ್ಷಕನಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಸುದೀರ್ಘ ದಿನಗಳ ಬಳಿಕ ಒಟಿಟಿಗೆ ಎಂಟ್ರಿಕೊಟ್ಟಿದೆ ಕೈವ ಸಿನಿಮಾ. ಅಮೆಜಾನ್ ಪ್ರೈಂನಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆರಂಭಗಿಸಿದೆ.