Kalaburagi Crime: ಆಸ್ತಿ ವಿವಾದ; ವಕೀಲೆ ಸ್ಕೂಟರ್ ಗೆ ಡಿಕ್ಕಿ ಹೊಡೆಸಿ ಕೊಂದ ಕಿರಾತಕರು; ಇಬ್ಬರ ಬಂಧನ
Mar 24, 2023 12:23 PM IST
ಸಾಮಾಜಿಕ ಕಾರ್ಯಕರ್ತೆ ಹಾಗೂ ವಕೀಲೆಯನ್ನು ಹತ್ಯೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ವಕೀಲೆಗೆ ಡಿಕ್ಕಿ ಹೊಡೆಸಿ ಹತ್ಯೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಲಬುರಗಿ: ಮಹಿಳಾ ಸಾಮಾಜಿಕ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದ ವಕೀಲೆಯೊಬ್ಬರನ್ನು ನಡು ರಸ್ತೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಬುಧವಾರ (ಮಾರ್ಚ್ 22) ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಇತರ ಮೂವರಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಗರದಲ್ಲಿ ವಕೀಲೆಯಾಗಿ ಕೆಲಸ ಮಾಡುತ್ತಿದ್ದ ಮಜತ್ ಸುಲ್ತಾನ (35) ಮೃತ ದುರ್ದೈವಿ. ಪೊಲೀಸ್ ಅಧಿಕಾರಿಗಳ ಪ್ರಕಾರ, ಮಜತ್ ಸುಲ್ತಾನಾ ತನ್ನ ಝಮ್ ಝಮ್ ನಗರ ನಿವಾಸದಿಂದ ಬೇರೆ ಕಡೆ ಇದ್ದ ಹೊಸ ಮನೆಗೆ ಪೀಠೋಪಕರಣಗಳನ್ನು ಸಾಗಿಸುತ್ತಿದ್ದಾಗ ದುರಂತ ಸಂಭವಿಸಿದೆ.
ಆಕೆ ತನ್ನ ಸ್ಕೂಟರ್ನಲ್ಲಿ ಗೂಡ್ಸ್ ವ್ಯಾನ್ ಅನ್ನು ಹಿಂಬಾಲಿಸುತ್ತಾ ಹೋಗುತ್ತಿದ್ದಾಗ ಆರೋಪಿಗಳು ಹಗರಗಿ ಕ್ರಾಸ್ನಲ್ಲಿ ಹಿಂದಿನಿಂದ ಬಂದು ಸ್ಕೂಟರ್ ಗೆ ಡಿಕ್ಕಿ ಹೊಡೆಸಿದ್ದಾರೆ. ಬೈಕ್ನಿಂದ ಆಕೆ ಬೀಳುತ್ತಿದ್ದ ಪರಿಣಾಮ ತಲೆಗೆ ಪೆಟ್ಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಕೂಡಲೇ ನೆರದಿದ್ದ ಇತರೆ ವಾಹನ ಸವಾರರು ಗಾಯಾಳುವನ್ನು ಗುಲ್ಬರ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಐಎಂಎಸ್)ಗೆ ಸಾಗಿಸುತ್ತಿದ್ದಾಗ ಸುಲ್ತಾನಾ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಸುಲ್ತಾನಾ ಅವರ ಪತಿ ಮೊಹಮ್ಮದ್ ಸದ್ದಾಂ ಮತ್ತು ಅವರ ಸಹೋದರರಾದ ನಯೀಮ್ ಮತ್ತು ನದೀಮ್ ನಡುವಿನ ಆಸ್ತಿ ವಿವಾದದಿಂದಾಗಿ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುದ್ದಿವಾಹಿನಿ ನಡೆಸುತ್ತಿದ್ದ ಮೊಹಮ್ಮದ್ ಅವರ ಸಂಬಂಧಿಕರಾದ ಅಜೀಂ ಗೌಂಡಿ, ವಸೀಂ ಗೌಂಡಿ ಸದ್ದಾಂ ಸೇರಿದಂತೆ ನಾಲ್ವರೂ ಸುಲ್ತಾನಾಳನ್ನು ಕೊಲ್ಲಲು ಯೋಜನೆ ರೂಪಿಸಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಪೂರ್ವಿಕರ ಮನೆ ಹಂಚಿಕೆ ವಿಚಾರವಾಗಿ ನಮ್ಮ ಸಹೋದರರಾದ ನಯೀಮ್ ಮತ್ತು ನದೀಮ್ ಅವರೊಂದಿಗೆ ಆರು ವರ್ಷಗಳಿಂದ ಆಸ್ತಿ ವಿವಾದವಿದೆ. ನಾವು ಮನೆಯನ್ನು ಬೇರೆ ಪ್ರದೇಶಕ್ಕೆ ಶಿಫ್ಟ್ ಮಾಡಲು ಯೋಚನೆ ಮಾಡಿದ್ದೆವು. ಆದರೆ ಹೊಸ ಮನೆಗೆ ತೆರಳುವ ಮಾರ್ಗ ಮಧ್ಯೆದಲ್ಲಿ ನನ್ನ ಹೆಂಡತಿಯನ್ನು ಕೊಂದಿದ್ದಾರೆ ಎಂದು ಸದ್ದಾಂ ಆರೋಪಿಸಿದ್ದಾರೆ.
ಆಸ್ತಿಯಲ್ಲಿ ಹೆಚ್ಚಿನ ಪಾಲು ನೀಡುವಂತೆ ಆರೋಪಿಗಳು ಹಲವಾರು ಬಾರಿ ಬೆದರಿಕೆ ಹಾಕಿದ್ದಾರೆ ಅಂತಲೂ ದಾರಿದ್ದಾರೆ. ನಾಲ್ವರೂ ನನ್ನ ಪತ್ನಿಯನ್ನು ಕೊಲ್ಲಲು ಪ್ಲಾನ್ ಮಾಡಿದ್ರು. ಏಕೆಂದರೆ ಅವಳು ವಕೀಲೆಯಾಗಿ ಸಹೋದರರ ಪ್ರಯತ್ನಗಳನ್ನು ಯಶಸ್ವಿಯಾಗಿ ವಿಫಲಗೊಳಿಸಿದ್ದಳು. ಇದು ಅವರನ್ನು ಕೆರಳಿಸಿತು. ಈ ಹಿಂದೆ ನಮ್ಮ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದ ಪರಿಣಾಮ ಕೆಲಕಾಲ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದೇವೆ. ನಂತರ ನಾವು ಅವರಿಂದ ದೂರ ಉಳಿಯಲು ನಿರ್ಧರಿಸಿದ್ದೇವೆ ಎಂದು ಸದ್ದಾಂ ವಿವರಿಸಿದ್ದಾರೆ.
ಘಟನೆ ನಡೆದ ಕೂಡಲೇ ಪೊಲೀಸ್ ಕಮಿಷನರ್ ಆರ್ ಚೇತನ್ ಮತ್ತು ಡಿಸಿಪಿ ಎ ಶ್ರೀನಿವಾಸುಲು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ನಿಫರ್ ಡಾಗ್ ಸ್ಕ್ವಾಡ್ ಮತ್ತು ಬೆರಳಚ್ಚು ತಜ್ಞರು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎಂದು ವಿಶ್ವವಿದ್ಯಾಲಯ ಪೊಲೀಸ್ ಇನ್ಸ್ಪೆಕ್ಟರ್ ಕಣಿಮೇಶ್ವರ ತಿಳಿಸಿದ್ದಾರೆ.
ಪೊಲೀಸರು ಐಪಿಸಿ ಸೆಕ್ಷನ್ 302 (ಕೊಲೆ) ಸೇರಿದಂತೆ ಹಲವು ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಾವು ಆರೋಪಿ ಮೊಹಮ್ಮದ್ ನಯೀಮ್, ಸದ್ದಾಂ ಸಹೋದರನನ್ನು ಬಂಧಿಸಿದ್ದೇವೆ ಮತ್ತು ಇತರ ಆರೋಪಿಗಳನ್ನು ಬಂಧಿಸಲು ಬಲೆ ಬೀಸಿದ್ದೇವೆ. ಅವರು ಎಲ್ಲಿದ್ದಾರೆ ಎಂಬುದರ ಬಗ್ಗೆ ಸುಳಿವು ಸಿಕ್ಕಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.