Kalaburgi railway station: ರೈಲು ನಿಲ್ದಾಣಕ್ಕೆ ಹಸಿರು ಬಣ್ಣ; ಹಿಂದೂಪರ ಸಂಘಟನೆ ವಿರೋಧದ ಬಳಿಕ ಹೊಸ ಬಣ್ಣ
Dec 13, 2022 03:30 PM IST
ವಿವಾದದ ಬಳಿಕ ಕಲಬುರಗಿ ರೈಲು ನಿಲ್ದಾಣಕ್ಕೆ ಹೊಸ ಬಣ್ಣ ಬಳಿಯಲಾಗಿದೆ.
- ಘಟನೆ ವಿರೋಧಿಸಿ ಹಿಂದೂ ಜಾಗೃತಿ ಸೇನೆಯು ಪ್ರತಿಭಟನೆ ನಡೆಸಿದ ಕೆಲವೇ ಗಂಟೆಗಳ ಬಳಿಕ, ರೈಲ್ವೆ ಇಲಾಖೆಯು ಹಸಿರು ಬಣ್ಣ ಬಳಿಯುವುದನ್ನು ನಿಲ್ಲಿಸಿದೆ. ಅದರ ಬೆನ್ನಲ್ಲೇ ಬಿಳಿ ಬಣ್ಣ ಬಳಿಯಲು ಪ್ರಾರಂಭಿಸಿದೆ.
ಕಲಬುರಗಿ: ಮೈಸೂರಿನ ಗುಂಬಜ್ ಬಸ್ ನಿಲ್ದಾಣ ವಿವಾದ ತಣ್ಣಗಾದ ಬೆನ್ನಲ್ಲೇ ಕಲಬುರಗಿಯಲ್ಲಿ ಮತ್ತೊಂದು ವಿವಾದ ಎದ್ದಿದೆ. ನಗರದ ರೈಲು ನಿಲ್ದಾಣದ ಗೋಡೆಗೆ ಬಳಿದಿರುವ ಬಣ್ಣದಿಂದಾಗಿ ಹೊಸ ವಿವಾದ ಹುಟ್ಟಿಕೊಂಡಿದೆ. ರೈಲ್ವೆ ನಿಲ್ದಾಣದ ಮುಂಭಾಗದ ಗೋಡೆಗೆ ಹಸಿರು ಬಣ್ಣ ಬಳಿಯಲಾಗಿದ್ದು, ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಘಟನೆ ವಿರೋಧಿಸಿ ಹಿಂದೂ ಜಾಗೃತಿ ಸೇನೆಯು ಪ್ರತಿಭಟನೆ ನಡೆಸಿದ ಕೆಲವೇ ಗಂಟೆಗಳ ಬಳಿಕ, ರೈಲ್ವೆ ಇಲಾಖೆಯು ಹಸಿರು ಬಣ್ಣ ಬಳಿಯುವುದನ್ನು ನಿಲ್ಲಿಸಿದೆ. ಅದರ ಬೆನ್ನಲ್ಲೇ ಬಿಳಿ ಬಣ್ಣ ಬಳಿಯಲು ಪ್ರಾರಂಭಿಸಿದೆ. ಹೀಗಾಗಿ ವಿವಾದಕ್ಕೆ ಸದ್ಯ ಅಂತ್ಯ ಸಿಕ್ಕಿದೆ.
ರೈಲ್ವೆ ನಿಲ್ದಾಣದ ಮಧ್ಯದಲ್ಲಿ ಗುಮ್ಮಟದಂತಹ ಆಕಾರ ಇರುವುದರಿಂದ, ನಿಲ್ದಾಣದ ರಚನೆಯು ಮಸೀದಿಯನ್ನು ಹೋಲುತ್ತದೆ ಎಂದು ಹಿಂದೂ ಜಾಗೃತಿ ಸೇನೆ ಹೇಳಿಕೊಂಡಿದೆ. ಹೀಗಾಗಿ ಸಂಘಟನೆ ಸದಸ್ಯರು ಮಂಗಳವಾರ ಮುಂಜಾನೆ ರೈಲ್ವೆ ಇಲಾಖೆಯ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ‘ಮಸೀದಿಯಂತಹ’ ರಚನೆಯನ್ನು ಸರಿಪಡಿಸಲು ಮತ್ತು ಹಸಿರು ಬಣ್ಣವನ್ನು ಬದಲಾಯಿಸಲು ಸಂಘಟನೆ ಮುಖಂಡರು ಒತ್ತಾಯಿಸಿದ್ದಾರೆ.
ಸದ್ಯ ವ್ಯಾಪಕ ವಿರೋಧದ ನಂತರ ರೈಲು ನಿಲ್ದಾಣದಲ್ಲಿ ಮತ್ತೆ ಬಣ್ಣ ಬಳಿಯುವ ಕಾರ್ಯ ಆರಂಭವಾಗಿದೆ. ಘಟನೆ ಹಿನ್ನಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಕಾನೂನು ಸುವ್ಯವಸ್ಥೆಗೆ ತೊಂದರೆಯಾಗದಂತೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಈ ಹಿಂದೆ ನವೆಂಬರ್ನಲ್ಲಿ ಮೈಸೂರಿನಲ್ಲಿ ಗುಂಬಜ್ ಆಕಾರದ ಬಸ್ ನಿಲ್ದಾಣದ ರಚನೆಯಿಂದಾಗಿ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಈ ಬಗ್ಗೆ ಕಿಡಿ ಕಾರಿದ್ದ ಸಂಸದ ಪ್ರತಾಪ್ ಸಿಂಹ, ಬಸ್ ನಿಲ್ದಾಣದ ರಚನೆಯು ಇದೇ ರೀತಿ ಇದ್ದರೆ ಅದನ್ನು ಕೆಡವುದಾಗಿ ಬೆದರಿಕೆ ಹಾಕಿದ್ದರು. “ಮಧ್ಯದಲ್ಲಿ ದೊಡ್ಡ ಗುಮ್ಮಟ ಮತ್ತು ಪಕ್ಕದಲ್ಲಿ ಎರಡು ಚಿಕ್ಕ ಗುಮ್ಮಟಗಳಿದ್ದರೆ ಅದು ಮಸೀದಿ” ಎಂದು ಅವರು ಹೇಳಿಕೊಂಡಿದ್ದರು.
ಆದರೆ, ಸ್ಥಳೀಯ ಅಧಿಕಾರಿಗಳು ಮಸೀದಿಯ ಆಕಾರದಲ್ಲಿದ್ದ ಹಳೆಯ ಮೂರು ಗುಮ್ಮಟವನ್ನು ತೆಗೆದು ಬಸ್ ನಿಲ್ದಾಣದ ಮೇಲ್ಭಾಗದಲ್ಲಿ ಒಂದು ಗುಮ್ಮಟವನ್ನು ಮಾತ್ರ ಹಾಕಿದ್ದರು. ಅಲ್ಲಿಗೆ ವಿವಾದ ಅಂತ್ಯ ಕಂಡಿತ್ತು. ಸದ್ಯ ಕಲಬುರಗಿಯ ಬಣ್ಣದ ವಿವಾದ ಕೂಡಾ ಶಾಂತಿಯುತವಾಗಿದೆ. ರೈಲ್ವೆ ಅಧಿಕಾರಿಗಳು ಬೇರೆ ಬಣ್ಣ ಬಳಿಯುವುದಾಗಿ ಒಪ್ಪಿಕೊಂಡು, ಹೊಸ ಬಣ್ಣ ಬಳಿಯುವ ಕಾರ್ಯ ಆರಂಭಿಸಿದ್ದಾರೆ. ಮೇಲಧಿಕಾರಿಗಳ ಆದೇಶದ ಮೇರೆಗೆ, ಆರ್ಕಿಟೆಕ್ಚರ್ ಸಲಹೆಯಂತೆ ಹೊಸ ಬಣ್ಣ ಬಳಿಯಲಾಗುತ್ತಿದೆ.
ಗಮನಿಸಬಹುದಾದ ಇತರೆ ಸುದ್ದಿಗಳು
ಮೈಸೂರಿನ ಗುಂಬಜ್ ಬಸ್ ನಿಲ್ದಾಣದ 2 ಚಿಕ್ಕ ಗೋಪುರ ತೆರವು: ಪ್ರತಾಪ್ ಸಿಂಹ ಟ್ವೀಟ್ನಲ್ಲೇನಿದೆ?
ಮೈಸೂರಿನ ವಿವಾದಿತ ಗುಂಬಜ್ ಬಸ್ ನಿಲ್ದಾಣದ ಮೂರು ಗೋಪುರಗಳ ಪೈಕಿ, ಇದೀಗ 2 ಚಿಕ್ಕ ಗೋಪುರಗಳನ್ನು ತೆರವುಗೊಳಿಸಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಗುಂಬಜ್ ಬಸ್ ನಿಲ್ದಾಣದ ತೆರವು ವಾಗ್ದಾನವನ್ನು ಈಡೇರಿಸಿರುವುದಾಗಿ ಹೇಳಿದ್ದಾರೆ. ಗುಂಬಜ್ ಮಾದರಿಯ ಈ ಬಸ್ ನಿಲ್ದಾಣಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಕುರಿತಾದ ಮಾಹಿತಿ ಇಲ್ಲಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಗಡಿ ವಿಚಾರ ಸಂಬಂಧ ದೆಹಲಿ ಹೋಗುತ್ತಿದ್ದೇನೆ, ಸಾಧ್ಯವಾದರೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ: ಸಿಎಂ ಬೊಮ್ಮಾಯಿ
ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಗೆ ಹೋಗುತ್ತಿದ್ದೇನೆ. ಈ ವಿಷಯದ ನಂತರ ಸಚಿವ ಸಂಪುಟ ವಿಸ್ತರಣೆ ವಿಚಾರ ಬಂದರೆ ಚರ್ಚೆ ಮಾಡುತ್ತೇವೆ. ಅದಕ್ಕಾಗಿ ಸಿದ್ಧತೆ ಮಾಡಿಕೊಂಡು ಹೋಗಿರುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ