Pralhad Joshi: RSS ವಿರುದ್ಧ ಹೋರಾಟ ಎಂದ ರಾಹುಲ್ಗೆ ಜೋಶಿ ತಿರುಗೇಟು; ಇದು ನೆಹರುಗೆ ಅವಮಾನ ಎಂದ ಸಚಿವ
Sep 30, 2022 08:28 PM IST
ಪ್ರಲ್ಹಾದ್ ಜೋಶಿ
- ಆರ್.ಎಸ್.ಎಸ್ ಬಗ್ಗೆ ನೆಹರೂ ಪ್ರಸಂಶೆ ವ್ಯಕ್ತಪಡಿಸಿದ ವಿಚಾರವನ್ನು ರಾಹುಲ್ ಗಾಂಧಿ ಮೊದಲು ತಿಳಿದುಕೊಳ್ಳಲಿ. ದೇಶದ ರಕ್ಷಣೆ ಮತ್ತು ಏಕತೆಯ ವಿಷಯ ಬಂದಾಗ ಆರ್ಎಸ್ಎಸ್ ಸದಾ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತದೆ ಎಂದು ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆರ್.ಎಸ್.ಎಸ್ ವಿರುದ್ಧ ನಮ್ಮ ಹೋರಾಟ ಎಂದಿರುವ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಯಾತ್ರೆ ಭಾರತ್ ಜೋಡೋ ಅಲ್ಲ, ಭಾರತ್ ತೋಡೋ ಯಾತ್ರೆಯಾಗಿದೆ ಎಂದು ಜೋಶಿ ಲೇವಡಿ ಮಾಡಿದ್ದಾರೆ.
ಆರ್.ಎಸ್ ಎಸ್ ಕುರಿತು ರಾಹುಲ್ ಹೇಳಿಕೆಗೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಜೋಶಿ, ಆರ್.ಎಸ್.ಎಸ್ ಬಗ್ಗೆ ನೆಹರೂ ಪ್ರಸಂಶೆ ವ್ಯಕ್ತಪಡಿಸಿದ ವಿಚಾರವನ್ನು ರಾಹುಲ್ ಗಾಂಧಿ ಮೊದಲು ತಿಳಿದುಕೊಳ್ಳಲಿ. ದೇಶದ ರಕ್ಷಣೆ ಮತ್ತು ಏಕತೆಯ ವಿಷಯ ಬಂದಾಗ ಆರ್ಎಸ್ಎಸ್ ಸದಾ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತದೆ ಎಂದು ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚೀನಾ ವಿರುದ್ಧದ ಯುದ್ಧದ ಸಂದರ್ಭದಲ್ಲಿ ಸಂಘದ ಕಾರ್ಯಕರ್ತರ ನಿಸ್ವಾರ್ಥ ಸೇವೆ ಮೆಚ್ಚಿಕೊಂಡು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು 1963ರ ಗಣರಾಜ್ಯ ಪರೇಡ್ನಲ್ಲಿ ಭಾಗವಹಿಸಲು ಆರ್ಎಸ್ಎಸ್ನ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಟ್ಟಿದ್ದರು.
ಇದೀಗ ಇಂತಹ ಆರ್ಎಸ್ಎಸ್ ವಿರುದ್ಧ ರಾಹುಲ್ ಗಾಂಧಿ ಮಾತನಾಡುತ್ತಿದ್ದಾರೆ. ನಿಮ್ಮ ಮುತ್ತಜ್ಜ ಮತ್ತು ಅಂದಿನ ಪ್ರಧಾನಿ ನೆಹರು ಆಹ್ವಾನಿಸಿದ ಆರ್ಎಸ್ಎಸ್ ವಿರುದ್ಧ ಮಾತನಾಡುವ ಮೂಲಕ ನೀವು ನೆಹರು ಅವರನ್ನು ಅವಮಾನಿಸುತ್ತಿಲ್ಲವೇ? ನೀವು ಯಾರನ್ನಾದರೂ ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದೀರಾ? ಇದು ನಿಮ್ಮ ಡಬಲ್ ಸ್ಟಾಂಡರ್ಡ್ ಅಲ್ಲವೇ? ನಿಮ್ಮ ಪಕ್ಷದ ಹಿರಿಯ ಮುಖಂಡರು ಹಾಗೂ ದೇಶದ ಮೊದಲ ಪ್ರಧಾನಿಗೆ ನೀವು ಕೊಡುವ ಗೌರವ ಇದೇನಾ? ಎಂದು ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯಗೆ ಟಾಂಗ್
ಪಿಎಫ್ಐ ನಿಷೇಧ ಕುರಿತಂತೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಜೋಶಿ, ರಾಷ್ಟ್ರೀಯ ಸುರಕ್ಷತೆ ವಿಚಾರದಲ್ಲಿ ಬಿಜೆಪಿ ಯಾವತ್ತು ಮತಬ್ಯಾಂಕ್ ರಾಜಕಾರಣ ಮಾಡಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕೇಂದ್ರ ಬಿಜೆಪಿ ಸರ್ಕಾರ ಪಿಎಫ್ಐ ಬ್ಯಾನ್ ಮಾಡಿರುವುದನ್ನು ಕಂಡು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಒಳಗೊಳಗೆ ಕುದಿಯುತ್ತಿದೆ. ಪಿಎಫ್ಐ ಬ್ಯಾನ್ ಮಾಡಿರುವುದನ್ನು ವಿರೋಧಿಸಿದರೆ ಜನ ಒದೆಯುತ್ತಾರೆ ಅಷ್ಟೇ. ಪಿಎಫ್ಐ ಪರ ಮಾತನಾಡಿದರೆ ದೇಶದ ಜನರ ಕಂಗೆಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಜೋಶಿ ಎಚ್ಚರಿಕೆ ನೀಡಿದ್ದಾರೆ.
ಪಿಎಫ್ಐ ಬ್ಯಾನ್ ಮಾಡಿರುವ ಬಿಜೆಪಿ ಸರ್ಕಾರದ ನಿಲುವನ್ನ ವಿರೋಧಿಸಲು ಕಾಂಗ್ರೆಸ್ಗೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಪಿಎಫ್ಐ ವಿರುದ್ಧ ದೇಶ ದ್ರೋಹದ ಕೃತ್ಯಗಳ ಸಾಕಷ್ಟು ಸಾಕ್ಷಿಗಳು ನಮ್ಮ ಬಳಿ ಇವೆ. ಹೀಗಾಗಿ ಏನಾದರು ಮಾಡಿ ಮುಸ್ಲಿಂ ಒಲೈಕೆ ಮಾಡಬೇಕು ಎಂಬ ಕಾರಣಕ್ಕೆ ಆರ್ ಎಸ್ ಎಸ್ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ರಾಷ್ಟ್ರೀಯ ಸುರಕ್ಷತೆಯೇ ಸರ್ವೋಚ್ಛ ಆದ್ಯತೆಯಾಗಿದೆ. ಸಂಘಟನೆಯ ನಿಷೇಧದಿಂದ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಗೆ ಅಪಾಯಕಾರಿಯಾಗಿದ್ದ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ. ನಮ್ಮ ದೇಶ ಸುರಕ್ಷತೆಗೆ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.