Belagavi Crime: ಪತಿ ಮೃತಪಟ್ಟನೆಂದು ಮಗುವನ್ನು ಸಾಯಿಸಿ, ತಾನೂ ಆತ್ಮಹತ್ಯೆಗೆ ಶರಣಾದ ಪತ್ನಿ
Oct 22, 2022 05:30 PM IST
ಸಾಂದರ್ಭಿಕ ಚಿತ್ರ
- ಪತಿ ಆತ್ಮಹತ್ಯೆಗೆ ಶರಣಾದ ಕೆಲವೇ ಗಂಟೆಗಳಲ್ಲಿ ಮಹಿಳೆಯೊಬ್ಬರು ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಬೆಳಗಾವಿ: ಪತಿ ಆತ್ಮಹತ್ಯೆಗೆ ಶರಣಾದ ಕೆಲವೇ ಗಂಟೆಗಳಲ್ಲಿ ಮಹಿಳೆಯೊಬ್ಬರು ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಮೃತರನ್ನು ಬೆಳಗಾವಿ ತಾಲೂಕಿನ ವಂಟಮುರಿ ಗ್ರಾಮದ ನಿವಾಸಿ ಹೊಳೆಪ್ಪ ಮಾರುತಿ ಮಾಸ್ತಿ (25), ಅವರ ಪತ್ನಿ ವಾಸತಿ (22) ಮತ್ತು ಅವರ ಒಂದೂವರೆ ವರ್ಷದ ಗಂಡು ಮಗು ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಹೊಳೆಪ್ಪ ಕುಡಿದ ಅಮಲಿನಲ್ಲಿ ಮನೆಗೆ ಬಂದು ಗುರುವಾರ ರಾತ್ರಿ ತನ್ನ ಹೆಂಡತಿಯೊಂದಿಗೆ ಜಗಳವಾಡಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆಂಡತಿಗೆ ಹೆದರಿಸಲು ವಿಷ ಕುಡಿದಿದ್ದಾನೆ.
ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾನೆ. ಮನನೊಂದ ವಾಸಂತಿ ತನ್ನ ಮಗುವನ್ನು ಕತ್ತು ಹಿಸುಕಿ ಕೊಂದು ತಾನೂ ಮರಕ್ಕೆ ನೇಣು ಹಾಕಿಕೊಂಡಿದ್ದಾಳೆ.
ವಾಸಂತಿ ಹಾಗೂ ಮಗುವಿನ ಮೃತದೇಹವು ಗ್ರಾಮದಿಂದ ದೂರದಲ್ಲಿರುವ ಜಮೀನಿನಲ್ಲಿ ಪತ್ತೆಯಾಗಿದೆ. ದಂಪತಿಯ ಮೂರು ವರ್ಷದ ಮಗಳು ಆಟವಾಡಲು ಹೊರಗೆ ಹೋಗಿದ್ದರಿಂದ ಬದುಕುಳಿದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಾಲಕಿ ಈಗ ತನ್ನವರನ್ನು ಕಳೆದುಕೊಂಡು ಅನಾಥಳಾಗಿದ್ದಾಳೆ.
ಕುಡಿಯಲು ದುಡ್ಡು ಕೊಟ್ಟಿಲ್ಲವೆಂದು ಹೆಂಡತಿ-ಮಗುವನ್ನು ಹಾರೆಯಿಂದ ಹೊಡೆದು ಕೊಂದ ಭೂಪ
ಮದ್ಯಪಾನ ಮಾಡಲು ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಪತ್ನಿ ಹಾಗೂ 4 ವರ್ಷದ ಮಗುವನ್ನು ಪತಿರಾಯ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮಾವಿನಹಳ್ಳಿಯಲ್ಲಿ ಮೊನ್ನೆಯಷ್ಟೇ ನಡೆದಿದ್ದು, ಅಲ್ಲಿನ ಜನರು ಬೆಚ್ಚಿಬಿದ್ದಿದ್ದಾರೆ.
ಆರೋಪಿಯನ್ನು ಮೋಹನ್ ಕುಮಾರ್ ಅಲಿಯಾಸ್ ಸ್ವಾಮಿ ಎಂದು ಗುರುತಿಸಲಾಗಿದೆ. ಮೃತರನ್ನು ಕಾವ್ಯ ಹಾಗೂ ಅವರ ಮಗ ಜೀವನ್ ಎಂದು ಗುರುತಿಸಲಾಗಿದೆ. ಆರು ವರ್ಷಗಳ ಹಿಂದೆ ಮೋಹನ್ ಕುಮಾರ್ ಚಿಕ್ಕನಾಯಕನಹಳ್ಳಿ ಮೂಲದ ಕಾವ್ಯರನ್ನು ವಿವಾಹವಾಗಿದ್ದನು. ಮದುವೆಯಾದಾಗಿನಿಂದಲೂ ದಿನನಿತ್ಯ ಕುಡಿದು ಜಗಳವಾಡುತ್ತಿದ್ದನು.
ಇದರಿಂದ ಬೇಸತ್ತು ಕಾವ್ಯ ತವರು ಮನೆ ಸೇರಿದ್ದರು. ಇತ್ತೀಚೆಗಷ್ಟೆ ಪಂಚಾಯತಿ ನಡೆಸಿ, ಇಬ್ಬರಿಗೂ ರಾಜಿ ಮಾಡಿಸಲಾಗಿದ್ದು, ಬಳಿಕ ಕಾವ್ಯ ಗಂಡನ ಮನೆಗೆ ಹಿಂದಿರುಗಿದ್ದರು. ಆದರೆ ಮೋಹನ್ ಕುಮಾರ್ ಮಾತ್ರ ಕುಡಿತದ ಚಟ ಬಿಟ್ಟಿರಲಿಲ್ಲ. ಇದರಿಂದ ಸಂಸಾರ ನಿರ್ವಹಣೆ ಕಷ್ಟವಾಗಿತ್ತು.
ಮೊನ್ನೆ ಬೆಳಗ್ಗೆ ಮೋಹನ್ ಕುಮಾರ್ ಹೆಂಡತಿ ಬಳಿ ಕುಡಿಯಲು ಹಣ ಕೇಳಿದ್ದಾನೆ. ಕಾವ್ಯ ಹಣ ನೀಡಲು ನಿರಾಕರಿಸಿದ್ದು, ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದ್ದು, ಸಿಟ್ಟಿಗೆದ್ದ ಮೋಹನ್ ಕುಮಾರ್ ಹಾರೆಯಿಂದ ಹೆಂಡತಿ ಹಾಗೂ ಮಗುವನ್ನು ಹೊಡೆದು ಕೊಂದಿದ್ದಾನೆ. ಘಟನೆ ಬಳಿಕ ಆತನ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಗ್ರಾಮಸ್ಥರು ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.