September 23 Kannada News Updates: ಟೀಂ ಇಂಡಿಯಾ ಗೆಲ್ಲೋಕೆ 91 ರನ್ ಗಳ ಗುರಿ
Sep 23, 2022 07:00 AM IST
ರಾಜ್ಯ, ದೇಶ ಹಾಗೂ ವಿದೇಶದ ಎಲ್ಲಾ ಬ್ರೇಕಿಂಗ್ ಸುದ್ದಿಗಳು ಇಲ್ಲಿ ಲಭ್ಯ. ಪ್ರತಿ ಕ್ಷಣದ ನಿಖರ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಟೀಂ ಇಂಡಿಯಾ ಗೆಲ್ಲೋಕೆ 91 ರನ್ ಗಳ ಗುರಿ
ನಾಗ್ಪುರದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ನಿಗದಿತ 8 ಓವರ್ ಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 90 ರನ್ ಗಳಿಸಿದ್ದು, ಟೀಂ ಇಂಡಿಯಾ ಗೆಲ್ಲೋಕೆ 91 ರನ್ ಗಳ ಗುರಿ ನೀಡಿದೆ.
46 ರನ್ ಗೆ 4 ವಿಕೆಟ್ ಕಳೆದುಕೊಂಡ ಆಸೀಸ್
ನಾಗ್ಪುರದಲ್ಲಿ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ 5 ಓವರ್ ಗಳಿಗೆ 4 ವಿಕೆಟ್ ನಷ್ಟಕ್ಕೆ ಆಸ್ಟ್ರೇಲಿಯಾ 46 ರನ್ ಗಳಿಸಿದೆ. ಉಭಯ ತಂಡಗಳಿಗೆ 8 ಓವರ್ ಗಳನ್ನು ನಿಗದಿ ಪಡಿಸಲಾಗಿದೆ.
ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ
ನಾಗ್ಪುರದಲ್ಲಿ ನಡೆಯುತ್ತಿರುವ ಆಸೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಇಬ್ಬನಿ ಇದ್ದ ಕಾರಣ ಪಂದ್ಯ ತಡವಾಗಿ ಆರಂಭವಾಗಿದೆ. ಉಭಯ ತಂಡಗಳಿಗೆ 8 ಓವರ್ ಗಳನ್ನು ನಿಗದಿ ಮಾಡಿ ಪಂದ್ಯ ನಡೆಸಲಾಗುತ್ತಿದೆ.
ದೆಹಲಿಯಲ್ಲಿ ಭಾರಿ ಮಳೆ ಸಂಚಾರ ಅಸ್ತವ್ಯಸ್ತ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ.
ಇಂಡೋ-ಪೆಸಿಫಿಕ್ ಕ್ವಾಡ್ ಸಭೆ ಸಚಿವ ಜೈಶಂಕರ್ ಭಾಗಿ
ಇಂದು ವಿಶ್ವಸಂಸ್ಥೆಯ ನೇತೃತ್ವದ ಬಹುಪಕ್ಷೀಯ ವ್ಯವಸ್ಥೆಯನ್ನು ಹೇಗೆ ಬಲಪಡಿಸುವುದು ಎಂಬುದರ ಕುರಿತು ಚರ್ಚಿಸಲು ಇದು ನಮಗೆ ಒಂದು ಅವಕಾಶವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಅವರು ನ್ಯೂಯಾರ್ಕ್ನಲ್ಲಿ ನಡೆದ ಇಂಡೋ-ಪೆಸಿಫಿಕ್ ಕ್ವಾಡ್ ಸಭೆಯಲ್ಲಿ ತಿಳಿಸಿದ್ದಾರೆ.
ಭಾರತ-ಆಸೀಸ್ 2ನೇ ಟಿ20 ಟಾಸ್ ವಿಳಂಬ
ನಾಗ್ಪುರದಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಿನ 2ನೇ ಟಿ20 ಟಾಸ್ ವಿಳಂಬವಾಗಿದೆ.
ಮೈದಾನ ಒದ್ದೆಯಾದ ಕಾರಣ ಟಾಸ್ ವಿಳಂಬವಾಗಿದೆ. ನಾಗ್ಪುರದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ರೇಸ್ ಕೋರ್ಸ್ ಕಾಂಪೌಂಡ್ ಗೆ ಪೇ ಸಿಎಂ ಪೋಸ್ಟರ್ ಅಂಟಿಸಿದ ಕೈ ನಾಯಕರು
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ ಮತ್ತಿತರ ಮುಖಂಡರು ಇಂದು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ವೋಲ್ವೋ ಕಚೇರಿ ಎದುರು ರೇಸ್ ಕೋರ್ಸ್ ಕಾಂಪೌಂಡ್ ಗೆ ಪ್ರತಿಭಟನಾರ್ಥವಾಗಿ ಪೇ ಸಿಎಂ ಪೋಸ್ಟರ್ ಅಂಟಿಸಿದರು.
ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ - ಸಿಎಂ ಬೊಮ್ಮಾಯಿ
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ. ಅವರು ಆದಷ್ಟೂ ಬೇಗನೇ ಮಾಡೋಣ ಎಂದು ಭರವಸೆ ನೀಡಿದ್ದಾರೆ. ಸದನ ಮುಕ್ತಾಯವಾಗಲು ಕಾಯುತ್ತಿದ್ದೆವು. ನನ್ನನ್ನು ಕರೆಸಿ ಮಾತನಾಡಿದರೆ, ಆದಷ್ಟೂ ಬೇಗನೇ ಪ್ರಕ್ರಿಯೆ ಪ್ರಾರಂಭ ಮಾಡಲಾಗುವುದು.
ಕೆಲವೇ ದಿನಗಳಲ್ಲಿ ಈ ಬಗ್ಗೆ ವರಿಷ್ಠರ ಅನುಮತಿ ಪಡೆದು ವಿಸ್ತರಣೆ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹಾಕಿ ಇಂಡಿಯಾದ ಅಧ್ಯಕ್ಷರಾಗಿ ದಿಲೀಪ್ ಟಿರ್ಕಿ ಅವಿರೋಧ ಆಯ್ಕೆ
ಹಾಕಿ ಇಂಡಿಯಾದ ಅಧ್ಯಕ್ಷರಾಗಿ ದಿಲೀಪ್ ಕುಮಾರ್ ಟಿರ್ಕಿ ಅವರು ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ಅವರು, ಭಾರತೀಯ ಹಾಕಿಯನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಆರೋಪಗಳು ನಿಜವಲ್ಲ - ಸಿಎಂ ಬೊಮ್ಮಾಯಿ
ಕಾಂಗ್ರೆಸ್ ಮಾಡುತ್ತಿರುವ ಯಾವುದೇ ಆರೋಪಗಳು ನಿಜವಲ್ಲ. ಅವರು ಯಾವುದೇ ಸಾಕ್ಷ್ಯವನ್ನು ನೀಡಿಲ್ಲ. ಇದೆಲ್ಲವೂ ರಾಜಕೀಯ ಪ್ರೇರಿತವಾಗಿದೆ. ಪುರಾವೆಗಳನ್ನು ತೋರಿಸಲಿ ಎಂದು ಸವಾಲು ಹಾಕಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಅವರ (ಕಾಂಗ್ರೆಸ್) ಅಧಿಕಾರಾವಧಿಯಲ್ಲಿ, ಹಲವಾರು ಹಗರಣಗಳನ್ನು ವಿಚಾರಣೆಗೆ ಒಳಪಡಿಸಬೇಕು. ಕ್ಯೂಆರ್ ಕೋಡ್ ('ಪೇಸಿಎಂ') ದುಷ್ಟ ವಿನ್ಯಾಸವಾಗಿದೆ ಎಂದು ಕಾಂಗ್ರೆಸ್ 'ಪೇಸಿಎಂ' ಪೋಸ್ಟರ್ ಡ್ರೈವ್ ಕುರಿತು ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡ್ರಗ್ಸ್ ಕೇಸ್: ಮಲಯಾಳಿ ಕಿರುತೆರೆ ನಟ ಸೇರಿ ಮೂವರು ಆರೋಪಿಗಳು ಅರೆಸ್ಟ್
ಕೇರಳದಿಂದ ಬೆಂಗಳೂರು ನಗರಕ್ಕೆ ಬಂದು ಶಾಲಾ - ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕವಸ್ತು ಮಾರಾಟ ಮಾಡುತ್ತಿದ್ದ ಮಲಯಾಳಿ ಕಿರುತೆರೆ ನಟ ಸೇರಿ ಮೂವರನ್ನು ಹೆಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಪಂಜಾಬ್ ಪೊಲೀಸರರು ಕಾರ್ಯಾಚರಣೆ; ಇಬ್ಬರು ಶಂಕಿತ ಉಗ್ರರ ಬಂಧನ
ಪಂಜಾಬ್ ಪೊಲೀಸರರು ಇವತ್ತು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕೆನಡಾ ಮೂಲದ ಲಖ್ಬೀರ್ ಲಾಂಡಾ ಮತ್ತು ಪಾಕ್ ಮೂಲದ ಹರ್ವಿಂದರ್ ರಿಂಡಾ ನಿಯಂತ್ರಣದಲ್ಲಿರುವ ಐಎಸ್ಐ ಬೆಂಬಲಿತ ಭಯೋತ್ಪಾದನಾ ಘಟಕವನ್ನು ಪಂಜಾಬ್ ಪೊಲೀಸರು ಭೇದಿಸಿದ್ದಾರೆ. ಒಂದು ಎಕೆ-56 ರೈಫಲ್, 2 ಮ್ಯಾಗಜೀನ್ಗಳು ಮತ್ತು 90 ಲೈವ್ ಕಾರ್ಟ್ರಿಡ್ಜ್ಗಳನ್ನು ವಶಪಡಿಸಿಕೊಂಡು ಇಬ್ಬರು ಶಂಕಿತ ಉಗ್ರರರನ್ನು ಬಂಧಿಸಲಾಗಿದೆ: ಡಿಜಿಪಿ ಪಂಜಾಬ್ ಪೊಲೀಸ್
ಸೆ. 30 ರಂದು ಗುಂಡ್ಲುಪೇಟೆಯಿಂದ ಭಾರತ್ ಜೋಡೋ ಯಾತ್ರೆ ಆರಂಭ
ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ ಸೆ. 30 ರಂದು ಬೆಳಗ್ಗೆ 9 ಗಂಟೆಗೆ ಗುಂಡ್ಲುಪೇಟೆಯಿಂದ ಆರಂಭವಾಗಲಿದೆ. ಅ. 2 ರಂದು ಬದನವಾಳು ಗ್ರಾಮದಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ದಸರಾ ಹಬ್ಬದ ಪ್ರಯುಕ್ತ 2 ದಿನಗಳ ಕಾಲ ಯಾತ್ರೆಗೆ ಬಿಡುವು ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬಿಎಂಎಸ್ ಟ್ರಸ್ಟ್ ಅಕ್ರಮದ ತನಿಖೆಗೆ ಒತ್ತಾಯಿಸಿ ಸದನದ ಬಾವಿಗಿಳಿದ ಜೆಡಿಎಸ್!
ಬಿಎಂಎಸ್ ಟ್ರಸ್ಟ್ ಅಕ್ರಮ ಹಾಗೂ 40 ಪರ್ಸೆಂಟ್ ಆರೋಪ, ಕೊನೆಯ ದಿನದ ಅಧಿವೇಶನದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಬಿಎಂಎಸ್ ಟ್ರಸ್ಟ್ ಅಕ್ರಮದ ಬಗ್ಗೆ ತನಿಖೆಗೆ ಪಟ್ಟು ಹಿಡಿದು ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಸರ್ಕಾರ ತನಿಖೆಗೆ ಒಪ್ಪದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಜೆಡಿಎಸ್ ಸದಸ್ಯರು ಧಿಕ್ಕಾರ ಘೋಷಣೆ ಕೂಗಿದರು. ಸ್ಪೀಕರ್ ಅವರ ಸತತ ಮನವಿಯ ಹೊರತಾಗಿಯೂ ಆಡಳಿತಾರೂಢ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆಯಿತು
ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಈಸ್ಟರ್ನ್ ಏರ್ ಕಮಾಂಡರ್ ಡಿಕೆ ಪಟ್ನಾಯಕ್!
ಈಸ್ಟರ್ನ್ ಏರ್ ಕಮಾಂಡರ್ ಏರ್ ಮಾರ್ಷಲ್ ಡಿಕೆ ಪಟ್ನಾಯಕ್, ಇಂದು(ಸೆ.೨೩-ಶುಕ್ರವಾರ) ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದರು. ಈ ವೇಳೆ ದೇಶಕ್ಕಾಗಿ ಹುತಾತ್ಮರಾದ ಸೈನಿಕರಿಗೆ ಗೌರವ ವಂದನೆ ಸಲ್ಲಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಪ್ರಾಯೋಗಿಕ ಕಲಿಕೆಗೆ ಪೂರಕ: ಪ್ರಧಾನಿ ಮೋದಿ
ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ, ನಾವು ಸುಸ್ಥಿರ ಫಲಿತಾಂಶಗಳೊಂದಿಗೆ ಪ್ರಾಯೋಗಿಕ ಕಲಿಕೆಯನ್ನು ಸಂಯೋಜಿಸಬೇಕಾಗಿದೆ. ನಮ್ಮ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವ ಮಹತ್ವವನ್ನು ನಾವು ಯುವಕರಿಗೆ ಕಲಿಸಬೇಕಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದರೆ. ಮೋದಿ ಗುಜರಾತ್ನ ಏಕತಾ ನಗರದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು.
ಮಳೆ..ಮಳೆ.. ಗುರುಗ್ರಾಮ್ನಲ್ಲಿ ವರ್ಕ್ ಫ್ರಮ್ ಹೋಮ್ ಆರ್ಡರ್, ನೋಯ್ಡಾದಲ್ಲಿ ಶಾಲೆ ಬಂದ್!
ಭಾರೀ ಮಳೆಯಿಂದಾಗಿ ನೋಯ್ಡಾ ಶಾಲೆಗಳಿಗೆ ಶುಕ್ರವಾರದಿಂದ 1 ರಿಂದ 8 ನೇ ತರಗತಿಯವರೆಗೆ ರಜೆ ಘೋಷಣೆ ಮಾಡಲಾಗಿದೆ. ಅಲ್ಲದೇ ಗುರುಗ್ರಾಮ್ನಲ್ಲೂ ಭಾರೀ ಮಳೆ ಸುರಿಯುತ್ತಿದ್ದು, ವರ್ಕ್ ಫ್ರಮ್ ಹೋಮ್ ಆದೇಶ ಹೊರಡಿಸಲಾಗಿದೆ. ಭಾರೀ ಮಳೆಯಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಭಾರತ-ಪಾಕ್ ಸಂಬಂಧ ಸುಧಾರಣೆಗೆ ಪ್ರಯತ್ನಗಳೇ ನಡೆಯುತ್ತಿಲ್ಲ: ಬಿಲಾವಲ್ ಭುಟ್ಟೋ!
ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದ ʼಕೌನ್ಸಿಲ್ ಆಫ್ ಫಾರಿನ್ ರಿಲೇಷನ್ʼ ಸಭೆ ಉದ್ದೇಶಿಸಿ ಮಾತನಾಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ, ಕಾಶ್ಮೀರ ಸಮಸ್ಯೆಯನ್ನು ಪ್ರಸ್ತಾಪಿಸಿದ್ಧಾರೆ. ಅಲ್ಲದೇ ಭಾರತ-ಪಾಕಿಸ್ತಾನ ನಡುವಣ ರಾಜತಾಂತ್ರಿಕ ಸಂಬಂಧ ಸುಧಾರಣೆಗೆ ಯಾವುದೇ ಪ್ರಯತ್ನಗಳು ನಡೆಯದಿರುವುದು ಕಳವಳಕಾರಿ ಎಂದು ಬಿಲಾವಲ್ ಹೇಳಿದ್ದಾರೆ.
ಮತ್ತೆ ಚಿನ್ನ, ಬೆಳ್ಳಿ ಏರಿಕೆ: ನಿಲ್ಲದಾಗಿದೆ ಕಡಿಮೆಯಾಗುವ ಕನವರಿಕೆ..!
ಇಂದು(ಸೆ 23-ಶುಕ್ರವಾರ) ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಚಿನ್ನದ ಬೆಲೆ 5,020 ರೂ. ಆಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್) ಚಿನ್ನದ ಬೆಲೆ 5,024 ರೂ. ಆಗಿದೆ.
ಅದರಂತೆ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ 46,050 ರೂ. ಆಗಿದ್ದು, 10 ಗ್ರಾಂ ಅಪರಂಜಿ ಚಿನ್ನ(24 ಕ್ಯಾರಟ್)ದ ಬೆಲೆ ಬೆಲೆ 50,240 ರೂ. ದಾಖಲಾಗಿದೆ. ಅದೇ ರೀತಿ ಬಳ್ಳಿ ಬೆಲೆಯಲ್ಲೂ ಏರಿಕೆ ಕಂಡುಬಂದಿದ್ದು, ದೇಶದಲ್ಲಿ ಒಂದು ಕೆಜಿಗೆ 58,000 ರೂ. ಅಗಿದ್ದರೆ, ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 63,000 ರೂ. ಆಗಿದೆ
ಕೋಲ್ಕತ್ತಾದಲ್ಲಿ ಗಮನ ಸೆಳೆದ ವ್ಯಾಟಿಕನ್ ಸಿಟಿ ಮಾದರಿಯ ದುರ್ಗಾ ಪೂಜೆ ಪೆಂಡಾಲ್
ದುರ್ಗಾ ಪೂಜೆಗೆ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾ ಸಜ್ಜಾಗುತ್ತಿದೆ. ಅದರಂತೆ ಶ್ರೀ ಭೂಮಿ ಸ್ಪೋರ್ಟಿಂಗ್ ಕ್ಲಬ್ ವತಿಯಿಂದ ನಿರ್ಮಿಸಲಾಗಿರುವ ವ್ಯಾಟಿಕನ್ ಸಿಟಿ ಮಾದರಿಯ ಪೆಂಡಾಲ್ವೊಂದು ಗಮನ ಸೆಳೆಯುತ್ತಿದೆ. ವ್ಯಾಟಿಕನ್ ಸಿಟಿಯ ಸೇಂಟ್ ಪೀಟರ್ಸ್ ಬ್ಯಾಸಿಲಿಯಾ ಮಾದರಿಯ ಈ ದುರ್ಗಾ ಪೂಜಾ ಪೆಂಡಾಲ್ ಭಕ್ತಾದಿಗಳನ್ನು ಆಕರ್ಷಿಸುತ್ತಿದೆ.
ಮಾನ ಮರ್ಯಾದೆ ಇರುವವರು ರಾಜಕೀಯದಲ್ಲಿ ಇರುವ ಸ್ಥಿತಿ ಇಲ್ಲ: ಜೆಸಿ ಮಾಧುಸ್ವಾಮಿ ಬೇಸರ!
ಪೇಸಿಎಂ ಅಭಿಯಾನಕ್ಕೆ ಬೇಸರ ವ್ಯಕ್ತಪಡಿಸಿರುವ ಕಾನೂನು ಸಚಿವ ಜೆಸಿ ಮಾಧುಸ್ವಾಮಿ, ಮುಖ್ಯಮಂತ್ರಿಯನ್ನು ಈ ಸ್ಥಿತಿಯಲ್ಲಿ ನಿಲ್ಲಿಸಿ ನೋಡುವ ದುರ್ದೈವ ನಮಗೆ ಬಂದಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಶೂನ್ಯ ವೇಳೆಯಲ್ಲಿ ಪೇಸಿಎಂ ವಿಚಾರ ಕುರಿತು ಮಾತನಾಡಿದ ಅವರು, ಮಾನ ಮರ್ಯಾದೆ ಇರುವವರು ರಾಜಕೀಯದಲ್ಲಿ ಇರುವ ಸ್ಥಿತಿ ಈಗಿಲ್ಲ ಎಂದು ನೋವಿನಿಂದ ನುಡಿದರು.
ಮೋದಿ ಭಾರತದಿಂದ ಹೊರಗೆ ಆಸ್ತಿ ಮಾಡಿದ್ದಾರಾ?: ಭ್ರಷ್ಟ ನವಾಜ್ ಜನ್ಮ ಜಾಲಾಡಿದ ಇಮ್ರಾನ್!
ಭ್ರಷ್ಟಾಚಾರದ ವಿಚಾರದಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್ (ನವಾಜ್) ನಾಯಕ ನವಾಜ್ ಷರೀಫ್ ಅವರನ್ನು ಟೀಕಿಸಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಹೋಲಿಕೆ ಮಾಡಿದ್ದಾರೆ. ನಮ್ಮ ನೆರೆಯ ದೇಶದ ಪ್ರಧಾನಿ ಮೋದಿ ಅವರು ಭಾರತದಿಂದ ಹೊರಗೆ ಆಸ್ತಿ ಮಾಡಿಲ್ಲ. ಆದರೆ ನವಾಜ್ ಷರೀಫ್ ಅವರಂತೆ, ವಿದೇಶಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಹೊಂದಿರುವ ರಾಜಕಾರಣಿ ಈ ಜಗತ್ತಿನಲ್ಲಿ ಮತ್ತೊಬ್ಬರಿಲ್ಲ ಎಂದು ಇಮ್ರಾನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯ ವೇಳಾಪಟ್ಟಿ ಪ್ರಕಟ: ಈಗ ಶುರುವಾಗಲಿದೆ ಆಟ!
ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ನಡೆಯಲಿರುವ ಚುನಾವಣೆಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಸೆ. 22ರಿಂದಲೇ ಚುನಾವಣಾ ಅಧಿಸೂಚನೆ ಜಾರಿಯಾಗಿದ್ದು,ಸೆ. 24 ರಿಂದ 30ರವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಅದರಂತೆ ಅ. 1ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಕ್ರಮಬದ್ಧವಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಅಂದೇ ಘೋಷಣೆ ಮಾಡಲಾಗುವುದು ಎಂದು ಕಾಂಗ್ರೆಸ್ ತಿಳಿಸಿದೆ. ನಾಮಪತ್ರ ಹಿಂಪಡೆಯಲು ಅ. 8 ಕೊನೆಯ ದಿನವಾಗಿದ್ದು, ಅ. 17ರಂದು ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಅ. 19ರಂದು ಎಐಸಿಸಿ ಕೇಂದ್ರ ಕಚೇರಿಯಲ್ಲಿ ಮತಗಳ ಎಣಿಕೆ ಹಾಗೂ ಫಲಿತಾಂಶ ಘೋಷಣೆಯಾಗಲಿದೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.