February 7 Kannada News Updates:ಜಗತ್ತಿನಲ್ಲೇ ಪ್ರತಿಭಾವಂತೆ, ಭಾರತ ಮೂಲದ ಬಾಲಕಿ ನತಾಶಾ
Feb 07, 2023 05:32 PM IST
ರಾಜ್ಯ, ದೇಶ ಹಾಗೂ ವಿದೇಶದ ಎಲ್ಲಾ ಬ್ರೇಕಿಂಗ್ ಸುದ್ದಿಗಳು ಇಲ್ಲಿ ಲಭ್ಯ. ಪ್ರತಿ ಕ್ಷಣದ ನಿಖರ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ನಾಡದೇವತೆಯ ಹೊಸ ಭಾವಚಿತ್ರ ಅಧಿಕೃತ
ರಾಜ್ಯದ ನಾಡದೇವತೆಯ ಪರಿಪೂರ್ಣವಾದ ಚಿತ್ರವನ್ನು ಅಧಿಕೃತಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಕಲಾವಿದ ಕೆ. ಸೋಮಶೇಖರ್ ಅವರು ಈ ನಾಡದೇವತೆಯ ಪರಿಪೂರ್ಣವಾದ ಚಿತ್ರವನ್ನು ರಚಿಸಿದ್ದಾರೆ. ಈ ಹಿಂದೆ ಇದ್ದ ನಾಡದೇವತೆಯ ಚಿತ್ರವನ್ನು ಕಲಾವಿದ ಬಿ.ಕೆ.ಎಸ್. ವರ್ಮ ರಚಿಸಿದ್ದರು. ಅವರು ನಿನ್ನೆ ನಿಧನರಾಗಿದ್ದು, ಅದೇ ಸಮಯದಲ್ಲಿ ಹೊಸ ಚಿತ್ರ ಅಧಿಕೃತಗೊಂಡಿರುವುದು ಸೋಜಿಗ.
ಅಧಿಕೃತಗೊಂಡ ನಾಡದೇವತೆಯ ಪರಿಪೂರ್ಣ ಚಿತ್ರವನ್ನು ಇನ್ಮುಂದೆ ಶಾಲಾಕಾಲೇಜುಗಳಲ್ಲಿ, ಸರಕಾರಿ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಬಳಸಬೇಕಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇಮಿಸಿದ್ದ ಐವರು ಸದಸ್ಯರ ತಜ್ಞರ ಸಮಿತಿಯ ಶಿಫಾರಸ್ಸಿನ ಮೇರೆಗೆ ಖ್ಯಾತ ಕಲಾವಿದ ಕೆ.ಸೋಮಶೇಖರ್ ಅವರು ಬಿಡಿಸಿದ ಭಾವಚಿತ್ರವನ್ನು ನಾಡ ದೇವತೆ ಚಿತ್ರಕ್ಕೆ ಆಯ್ಕೆ ಮಾಡಲಾಗಿತ್ತು.
ರಾಜ್ಯದ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಭಾಷಾ ವಿಶಿಷ್ಟತೆಯನ್ನು ಒಳಗೊಂಡಿರುವ ಕರ್ನಾಟಕದ ಭೂಪಟದ ಹಿನ್ನೆಲೆಯಲ್ಲಿ ಭುವನೇಶ್ವರಿ ದೇವಿಯನ್ನು ರಚಿಸಲಾಗಿದೆ.
ಜಗತ್ತಿನಲ್ಲೇ ಪ್ರತಿಭಾವಂತೆ, ಭಾರತ ಮೂಲದ ಬಾಲಕಿ ನತಾಶಾ
- ಜಾನ್ ಹಾಪ್ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್ ಪರೀಕ್ಷೆ (ಸಿಟಿಐ)ಯಲ್ಲಿ ಸತತ ಎರಡನೇ ಬಾರಿ ಭಾರತದ ಮೂಲದ ಅಮೆರಿಕದ ಬಾಲಕಿ ಪೆರಿಯನಯಗಂ ತೇರ್ಗಡೆಯಾಗಿದ್ದಾರೆ.
- ಈ ಮೂಲಕ ಜಗತ್ತಿನ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಜೆಇಇ ಮೇನ್ ಸೆಷನ್ 1ರ ಫಲಿತಾಂಶ ಪ್ರಕಟ
NTA JEE (ಮುಖ್ಯ) ಸೆಷನ್-1 ಪೇಪರ್-1 (B.E./B.Tech.) ಫಲಿತಾಂಶ ಘೋಷಿಸಲಾಗಿದೆ. 20 ಅಭ್ಯರ್ಥಿಗಳು 100 ಅಂಕಗಳನ್ನು ಪಡೆದಿದ್ದಾರೆ.
ರಾಜ್ಯಸಭೆಯಲ್ಲಿ ‘ಅದಾನಿ’ ಗದ್ದಲ; ಕಲಾಪ 12 ಗಂಟೆಗೆ ಮುಂದೂಡಿಕೆ
ಅದಾನಿ ಸಮೂಹ ವ್ಯವಹಾರದ ಚರ್ಚೆಗೆ ವಿಪಕ್ಷಗಳ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಗದ್ದಲ, ಕೋಲಾಹಲ ಉಂಟಾಗಿದ್ದು, ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಗಿದೆ.
ಭೂಕಂಪನ ಪರಿಹಾರ ಸಾಮಗ್ರಿ ಹೊತ್ತು ಟರ್ಕಿಯತ್ತ ಹೊರಟ ಭಾರತೀಯ ಸೇನಾ ವಿಮಾನ
ಎನ್ ಡಿಆರ್ ಎಫ್ ತಂಡಗಳು, ವಿಶೇಷವಾಗಿ ತರಬೇತಿ ಪಡೆದ ಶ್ವಾನದಳ, ವೈದ್ಯಕೀಯ ಉತ್ಪನ್ನ ಹಾಗೂ ಇತರ ಅಗತ್ಯ ಉಪಕರಣಗಳೊಂದಿಗೆ ಭೂಕಂಪನ ಪರಿಹಾರ ಸಾಮಗ್ರಿಗಳೊಂದಿಗೆ ಭಾರತದ ಮೊದಲ ಬ್ಯಾಚ್ ಸೇನಾ ವಿಮಾನದ ಮೂಲಕ ಟರ್ಕಿಗೆ ತೆರಳಿದೆ.
ಕೇರಳ ಮಾಜಿ ಸಿಎಂ ಆಸ್ಪತ್ರೆಗೆ ದಾಖಲು
ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಾಂಡಿ ಅವರ ಆರೋಗ್ಯದಲ್ಲಿ ಏರುಪೇರಾಗಿರುವ ಹಿನ್ನೆಲೆಯಲ್ಲಿ ನೆಯ್ಯಟ್ಟಿಂಕರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಟರ್ಕಿ, ಸಿರಿಯಾ ಭೂಕಂಪನಕ್ಕೆ 4 ಸಾವಿರಕ್ಕೂ ಅಧಿಕ ಮಂದಿ ಬಲಿ
ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿರುವ ಪ್ರಬಲ ಭೂಕಂಪನಕ್ಕೆ ಮೃತಪಟ್ಟವರ ಸಂಖ್ಯೆ 4 ಸಾವಿರ ಗಡಿ ದಾಟಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಭಾರತ ಕೂಡ ನೆರವಿನ ಹಸ್ತಚಾಚಿದೆ.
ನಮ್ಮ ಕ್ಲಿನಿಕ್ ಗೆ ಇಂದು ಸಿಎಂ ಚಾಲನೆ
ಬಿಬಿಎಂಪಿ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ನಮ್ಮ ಕ್ಲಿನಿಕ್ ಗಳಿಗೆ ಚಾಲನೆ ನೀಡಲಿದ್ದಾರೆ. ಆರೋಗ್ಯ ಸಚಿವ ಡಾ ಕೆ ಸುಧಾಕರ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತಿ ಇರಲಿದ್ದಾರೆ.
ಚಿನ್ನದ ಬೆಲೆ ಏರಿಕೆ, ಬೆಳ್ಳಿ ದರ ಕೊಂಚ ಇಳಿಕೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 280 ರೂಪಾಯಿ ಏರಿಕೆಯಾಗಿದೆ. ಆ ಬಳಿಕ 57,490 ರೂಪಾಯಿ ಇದೆ. ನಿನ್ನೆ 57,210 ರೂಪಾಯಿ ಇತ್ತು. ಅದೇ ರೀತಿಯಾಗಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 250 ರೂಪಾಯಿ ಹೆಚ್ಚಳಗೊಂಡ ನಂತರ 52,700 ರೂಪಾಯಿಗೆ ಬಂದು ನಿಂತಿದೆ. ನಿನ್ನೆ 52,450 ರೂಪಾಯಿ ಇತ್ತು. ಒಂದು ಕೆಜಿ ಬೆಳ್ಳಿ ಬೆಲೆ ಇಂದು 74,000 ರೂಪಾಯಿ ಇದೆ.
ಪೆರುವಿನಲ್ಲಿ ಭೂಕುಸಿತಕ್ಕೆ 15 ಮಂದಿ ಬಲಿ
ದಕ್ಷಿಣ ಪೆರುವಿನಲ್ಲಿ ಭೂಕುಸಿತ ಉಂಟಾಗಿದ್ದು, ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ. ಅರೆಕ್ವಿಪಾ ಪ್ರದೇಶದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಪೆರುವಿನ ಅಧಿಕಾರಿಗಳು ಎಚ್ಚರಿಸಿದ್ದಾರೆ. ಅರೆಕ್ವಿಪಾದಲ್ಲಿನ ಅಧಿಕಾರಿಗಳು ಈ ಪ್ರದೇಶಕ್ಕೆ ತುರ್ತು ಪರಿಸ್ಥಿತಿಯನ್ನು ಘೋಷಿಸಲು ಸರ್ಕಾರವನ್ನು ಕೇಳಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ
ಕರ್ನಾಟಕ vs ರೈಲ್ವೇಸ್ ಫೈನಲ್ ಫೈಟ್
ರಾಷ್ಟ್ರೀಯ ಮಹಿಳಾ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ರಾಂಚಿಯಲ್ಲಿಂದು ನಡೆಯಲಿದ್ದು, ಕರ್ನಾಟಕ ಮತ್ತು ರೈಲ್ವೇಸ್ ನಡುವೆ ಫೈನಲ್ ಪೈಪೋಟಿ ನಡೆಯಲಿದೆ. ಕರ್ನಾಟಕ ಗೆದ್ದರೆ ಚೊಚ್ಚಲಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲಿದೆ.