March 31 Kannada News Updates: ಏಪ್ರಿಲ್ 1ರಿಂದ ಮಹತ್ವದ ಬದಲಾವಣೆ, ತೆರಿಗೆ ಖರೀದಿದಾರರಿಗೆ, ಆಭರಣ ಖರೀದಿದಾರರಿಗೆ ಮಾಹಿತಿ
Mar 31, 2023 08:31 PM IST
ರಾಜ್ಯ, ದೇಶ ಹಾಗೂ ವಿದೇಶದ ಎಲ್ಲಾ ಬ್ರೇಕಿಂಗ್ ಸುದ್ದಿಗಳು ಇಲ್ಲಿ ಲಭ್ಯ. ಪ್ರತಿ ಕ್ಷಣದ ನಿಖರ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ವರುಣ ಕ್ಷೇತ್ರದಿಂದ ಅಲ್ಲ, ಶಿಕಾರಿಪುರದಿಂದಲ್ಲೇ ವಿಜಯೇಂದ್ರ ಸ್ಪರ್ಧೆ: ಬಿಎಸ್ ಯಡಿಯೂರಪ್ಪ
ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಮಣಿಸಲು ವರುಣಾ ಕ್ಷೇತ್ರದಲ್ಲಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಕಣಕ್ಕಿಳಿಯಲಿದ್ದಾರೆ ಎನ್ನುವ ವದಂತಿಯನ್ನು ಬಿಎಸ್ವೈ ತಳ್ಳಿಹಾಕಿದ್ದಾರೆ. ವಿಜಯೇಂದ್ರ ಅವರು ಶಿಕಾರಿಪುರದಿಂದಲೇ ಚುನಾವಣೆ ಎದುರಿಸಲಿದ್ದು, ವರುಣದಿಂದ ಸ್ಪರ್ಧಿಸುವ ಪ್ರಶ್ನೆಯೇ ಉದ್ಭವಿಸದು ಎಂದಿದ್ದಾರೆ.
ಬಿವೈ ವಿಜಯೇಂದ್ರ ಅವರು ನನ್ನ ಕ್ಷೇತ್ರವಾದ ಶಿಕಾರಿಪುರದಿಂದಲೇ ಸ್ಪರ್ಧೆ ನಡೆಸಲಿದ್ದಾರೆ. ಹೀಗಾಗಿ, ವರುಣಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೇಳುವ ಪ್ರಶ್ನೆ ಉದ್ಭವಿಸದು ಎಂದು ಅವರು ಹೇಳಿದ್ದಾರೆ.
ಏಪ್ರಿಲ್ 1ರಿಂದ ಆದಾಯ ತೆರಿಗೆ ನಿಯಮಗಳಲ್ಲಿ ಮಹತ್ತರ 10 ಬದಲಾವಣೆ
2023-24 ಹೊಸ ಹಣಕಾಸು ವರ್ಷ (financial year 2023-24) ಏಪ್ರಿಲ್ 1 ರಂದು ಆರಂಭವಾಗುತ್ತದೆ. ಕೇಂದ್ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಡಿರುವ ಘೋಷಣೆಗಳು ಇದೇ ಸಮಯದಲ್ಲಿ ಜಾರಿಗೆ ಬರುತ್ತವೆ. ಆದಾಯ ತರಿಗೆ ನಿಯಮಗಳಲ್ಲಿ ಆಗುವ ಬದಲಾವಣೆಗಳು ತೆರಿಗೆ ಪಾವತಿದಾರರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ. ಏಪ್ರಿಲ್ 1ರಿಂದ ಆದಾಯ ತೆರಿಗೆ ನಿಯಮಗಳಲ್ಲಿ ಆಗುವ ಪ್ರಮುಖ ಹತ್ತು ಬದಲಾವಣೆಗಳ ವಿವರ ಇಲ್ಲಿದೆ
ನಾಳೆಯಿಂದ ಆರಂಕಿ ಹಾಲ್ಮಾರ್ಕ್ ಇದ್ರೆ ಮಾತ್ರ ಆಭರಣ ಮಾರಾಟ
ನಾಳೆಯಿಂದ ಚಿನ್ನಾಭರಣಗಳು ಮತ್ತು ಚಿನ್ನದ ಕಲಾಕೃತಿಗಳನ್ನು ಮಾರಾಟ ಮಾಡಲು ಹೊಸ ನಿಯಮವೊಂದು ಜಾರಿಗೆ ಬರಲಿದೆ. ನಾಳೆಯಿಂದ ಮಾರಾಟವಾಗುವ ಚಿನ್ನಾಭರಣಗಳು ಮತ್ತು ಚಿನ್ನದ ಕಲಾಕೃತಿಗಳಲ್ಲಿ ಆರಂಕಿಯ ಆಲ್ಪಾನ್ಯೂಮರಿಕ್ ಹಾಲ್ಮಾರ್ಕ್ ಯೂನಿಕ್ ಐಡೆಂಟಿಫಿಕೇಷನ್ (ಎಚ್ಯುಐಡಿ) ಸಂಖ್ಯೆ ಇರುವುದು ಕಡ್ಡಾಯವಾಗಿದೆ. ಈ ಕುರಿತ ವರದಿ ಇಲ್ಲಿದೆ.
60 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಆಮ್ ಆದ್ಮಿ
ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಳೆದ ವಾರವಷ್ಟೇ 80 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಆಮ್ ಆದ್ಮಿ ಪಾರ್ಟಿಯು 60 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿತು. ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆ ಹಾಗೂ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಹಾಸನದಲ್ಲಿ ರಾಮನವಮಿ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಗಲಭೆ
ರಾಮನವಮಿ ಪ್ರಯುಕ್ತ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಮಸೀದಿ ಮುಂದೆ ಮೆರವಣಿಗೆ ಸಾಗುತ್ತಿರುವಾಗ ಎರಡು ಗುಂಪುಗಳ ನಡುವೆ ಮಾರಾಮಾರಿ ಸಂಭವಿಸಿ ಹಿಂಸಾಚಾರಕ್ಕೆ ತಿರುಗಿದೆ. ಈ ಸಂದರ್ಭದಲ್ಲಿ ಇಬ್ಬರಿಗೆ ಚೂರಿ ಇರಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟು ನಾಲ್ಕು ಜನರಿಗೆ ಗಾಯವಾಗಿದೆ. ಅವರಲ್ಲಿ ಮೂವರನ್ನು ಮುರುಳಿ ಹರ್ಷ ಮತ್ತು ರಾಖಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಮಾಅಹಿತಿ ನೀಡಿದ್ದಾರೆ. ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬಿಗುವಿನ ವಾತಾವರಣವಿದೆ.
ಪಿಎಲ್ ಮ್ಯಾಚ್ ಪ್ರಯುಕ್ತ ನಮ್ಮ ಮೆಟ್ರೋ ರೈಲಿನಿಂದ ಹೊಸ ಟೈಂಟೇಬಲ್
ಉದ್ಯಾನನಗರಿಯಲ್ಲಿ ಐಪಿಎಲ್ ಪಂದ್ಯಗಳು ಆರಂಭವಾಗುತ್ತಿದ್ದು, ಮ್ಯಾಚ್ ನೋಡೋಕೆ ಹೋದರೆ ವಾಪಸ್ ಬರೋದು ಹೇಗಪ್ಪ ಅನ್ನೋರಿಗೆ ನಮ್ಮ ಮೆಟ್ರೋ ಪರಿಹಾರ ಒದಗಿಸಿದೆ. ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳು ಇರುವ ದಿನ ನಮ್ಮ ಮೆಟ್ರೋ ರೈಲುಗಳು ತಡರಾತ್ರಿಯರೆಗೂ ಸಂಚರಿಸಲಿವೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳು ನಿಗದಿಯಾಗಿರುವ ದಿನಗಳಲ್ಲಿ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸಮಯವನ್ನು ವಿಸ್ತರಿಸಲಾಗುವುದು ಎಂದು ಬಿಎಂಆರ್ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏಪ್ರಿಲ್ 2, 10, 17, 26 ಮತ್ತು ಮೇ 21 ರಂದು ಐಪಿಎಲ್ ಪಂದ್ಯಗಳು ನಡೆಯಲಿದ್ದು, ಬಿಎಂಆರ್ಸಿಎಲ್ (ಬೆಂಗಳೂರು ಮೆಟ್ರೋ ರೈಲು ನಿಗಮ) ಮೆಟ್ರೋ ರೈಲುಗಳಲ್ಲಿ ಭಾರಿ ಜನಸಂದಣಿ ಇರುವ ನಿರೀಕ್ಷೆಯಿದೆ.
ಬಿಜೆಪಿ ಬಿಟ್ಟು ಜೆಡಿಎಸ್ಗೆ ಮರಳಿದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ
ಮಲ್ಲಿಕಾರ್ಜುನ ಖೂಬಾ ಅವರು ಇಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರ ಸಮಕ್ಷಮದಲ್ಲಿ ಮರಳಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಜೆಡಿಎಸ್ ಪಕ್ಷದ ಶಾಲು ಹಾಕುವ ಮೂಲಕ ಮಾಜಿ ಮುಖ್ಯಮಂತ್ರಿಗಳು ಖೂಬಾ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಶುಭ ಸಮಯ ಇದ್ದ ಕಾರಣಕ್ಕೆ ಮಾಜಿ ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾಗಿ ಖೂಬಾ ಅವರು ತಿಳಿಸಿದ್ದಾರೆ.
ಕುಟುಂಬ ಸಮೇತರಾಗಿ ಘಾಟಿ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟ ಸಿಎಂ
ದೊಡ್ಡಬಳ್ಳಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಕುಟುಂಬ ಸಮೇತರಾಗಿ ಘಾಟಿ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ರಿವಾಲ್ವಿಂಗ್ ರೆಸ್ಟೋರೆಂಟ್ನಲ್ಲಿ ಬೆಂಕಿ
ಹರಿಯಾಣದ ಪಂಚಕುಲದಲ್ಲಿರುವ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಅಮರಾವತಿ ಮಾಲ್ನಲ್ಲಿರುವ ರಿವಾಲ್ವಿಂಗ್ ರೆಸ್ಟೋರೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಕಳೆದ 24 ಗಂಟೆಗಳಲ್ಲಿ 3,095 ಕೋಡ್ ಕೇಸ್
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,095 ಹೊಸ ಕೋವಿಡ್ ಪ್ರಕರಣಗಳ ದಾಖಲಾಗಿದ್ದು, ಸಕ್ರಿಯ ಪ್ರಕರಣಗಳು ಸಂಖ್ಯೆ 15,208ಕ್ಕೆ ತಲುಪಿದೆ.
ದೆಹಲಿಯಲ್ಲಿ ಭಾರಿ ಅಗ್ನಿ ದುರಂತ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಅಗ್ನಿ ದುರಂತ ಸಂಭವಿಸಿದೆ. ವಜೀರ್ಪುರ ಪ್ರದೇಶದ ಕಾರ್ಖಾನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. 25 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯ ಮುಂದುವರೆದಿದೆ.
ಇಂದೋರ್ ದೇವಾಲಯ ಘಟನೆ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ - ಸಿಎಂ ಚೌಹಾಣ್
ಇಂದೋರ್ ದೇವಾಲಯ ದುರಂತದ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಶಿವರಾಜ ಸಿಂಗ್ ಚೌಹಾಣ್, ಈ ಸಂಬಂಧ ಎಫ್ಐಆರ್ ದಾಖಲಾಗಿದ್ದು, ಘಟನೆಯ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸದ್ಯದ ಆದ್ಯತೆ ರಕ್ಷಣಾ ಕಾರ್ಯಾಚರಣೆ. ಗಾಯಾಳುಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಪ್ರಧಾನಿಯವರು ಸಂತ್ರಸ್ತರಿಗೆ ಪರಿಹಾರದ ಮೊತ್ತವನ್ನು ಘೋಷಿಸಿದ್ದಾರೆ. ರಾಜ್ಯಾದ್ಯಂತ ಇಂತಹ ಸ್ಟೆಪ್ವೆಲ್ಗಳು ಮತ್ತು ಬೋರ್ವೆಲ್ಗಳ ಪರಿಶೀಲನೆಗೆ ಆದೇಶಿಸಿದ್ದೇವೆ ಎಂದು ಹೇಳಿದ್ದಾರೆ. ದೇವಾಲಯದೊಳಗೆ ಇದ್ದ ಬಾಲಿಯ ಮೆಟ್ಟಿಲುಗಳು ಕುಸಿದ ಪರಿಣಾಮ 35 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.
ಇಂದೋರ್ ದೇವಸ್ಥಾನ ಬಾವಿ ಕುಸಿತ ಪ್ರಕರಣ - ಮೃತರ ಸಂಖ್ಯೆ 35ಕ್ಕೆ ಏರಿಕೆ
ಇಂದೋರ್ ದೇವಸ್ಥಾನದ ಬಾಲಿಯ ಮೆಟ್ಟಿಲು ಕುಸಿತ ಪ್ರಕರಣದಲ್ಲಿ ಸಾವಿನ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ದುರಂತದಲ್ಲಿ 18 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಇಬ್ಬರು ಡಿಸ್ಚಾರ್ಜ್ ಆಗಿದ್ದಾರೆ. 35 ಜನರು ಸಾವನ್ನಪ್ಪಿದ್ದಾರೆ. ಒಬ್ಬ ವ್ಯಕ್ತಿ ಇನ್ನೂ ನಾಪತ್ತೆಯಾಗಿದ್ದಾರೆ. ಸೇನೆ, ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ ಎಂದು ಇಂದೋರ್ ಜಿಲ್ಲಾಧಿಕಾರಿ ಡಾ ಇಳಯರಾಜ ಟಿ ಮಾಹಿತಿ ನೀಡಿದ್ದಾರೆ.
ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ
ರಾಜ್ಯದಲ್ಲಿ ಇಂದಿನಿಂದ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭವಾಗಲಿದ್ದು, 8.43 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. 3,305 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಏಪ್ರಿಲ್ 15ರವರೆಗೆ ಪರೀಕ್ಷೆಗಳು ನಡೆಯಲಿವೆ.
ಬಿಜೆಪಿ ಅಭ್ಯರ್ಥಿಗಾಗಿ ಇಂದು ಮತದಾನ
ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಆ ಪಕ್ಷದ ನಾಯಕರಿಗೆ ತಲೆನೋವಾಗಿ ಪರಿಣಮಿಸಿದ್ದು, ಇವತ್ತು ಅಭ್ಯರ್ಥಿಗಳ ಆಯ್ಕೆಗಾಗಿ ರಾಜ್ಯದ 224 ಕ್ಷೇತ್ರಗಳಲ್ಲಿ ಮತದಾನ ನಡೆಸುತ್ತಿದೆ. ಆಯಾ ಕ್ಷೇತ್ರಗಳಲ್ಲಿ ಸ್ಥಳೀಯ ಪದಾಧಿಕಾರಿಗಳು ಹಾಗೂ ಮುಖಂಡರು ಮತದಾನದ ಮೂಲಕ ಕ್ಷೇತ್ರದ ಅಭ್ಯರ್ಥಿಗಳ ಹೆಸರುಗಳನ್ನು ಸೂಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸತತ ಎರಡು ದಿನಗಳಿಂದ ಚಿನ್ನದ ದರ ಯಥಾಸ್ಥಿತಿ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 59,720 ರೂಪಾಯಿ ಇದೆ. ನಿನ್ನೆಯೂ ಇದೇ ದರ ಇತ್ತು. ಅದೇ ರೀತಿಯಾಗಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 54,750 ರೂಪಾಯಿಗೆ ಬಂದು ನಿಂತಿದೆ. ನಿನ್ನೆ ಕೂಡ ಇದೇ ದರದಲ್ಲಿ ವಹಿವಾಟು ನಡೆಸಸಿತ್ತು. ಒಂದು ಕೆಜಿ ಬೆಳ್ಳಿ ಬೆಲೆ ಇಂದು 76,200 ರೂಪಾಯಿ ಇದೆ.
ಇಂದಿನಿಂದ 16ನೇ ಆವೃತ್ತಿಯ ಐಪಿಎಲ್ ಹಂಗಾಮ
16ನೇ ಆವೃತ್ತಿ ಐಪಿಎಲ್ ಇಂದಿನಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯ ಅಹಮದಾಬಾದ್ ನಲ್ಲಿ ಚೆನ್ನೈ ಹಾಗೂ ಗುಜರಾತ್ ತಂಡಗಳ ನಡುವೆ ಸಂಜೆ 7.30ಕ್ಕೆ ಆರಂಭವಾಗಲಿದೆ. ಇದಕ್ಕೂ ಮುನ್ನ ಸಿನಿ ತಾರೆಯರಿಂದ ನೃತ್ಯ, ಸಂಗೀತ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆಯಲಿವೆ.