Budget reaction 2023: ಸಮಗ್ರ ಅಭಿವೃದ್ಧಿ ದೃಷ್ಟಿಕೋನದ ಬಜೆಟ್ ಎಂದ ಬಿಸಿ ನಾಗೇಶ್, ಅಮೃತ ಕಾಲದ ಆಯವ್ಯಯವೆಂದ ಶಶಿಕಲಾ ಅ ಜೊಲ್ಲೆ
Feb 01, 2023 07:49 PM IST
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಕೇಂದ್ರ ಬಜೆಟ್ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಕಾಲ ಸಚಿವ ಬಿಸಿ ನಾಗೇಶ್ ಮತ್ತು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಅ ಜೊಲ್ಲೆ ಪ್ರತಿಕ್ರಿಯೆ ಇಲ್ಲಿದೆ.
ಬೆಂಗಳೂರು: ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿ, ಪ್ರತಿ ಪ್ರಜೆಯ ಏಳಿಗೆಯನ್ನು ಸಾಧ್ಯವಾಗಿಸುವ ಸಮಗ್ರ ಅಭಿವೃದ್ಧಿ ದೃಷ್ಟಿಕೋನದ ಪರಿಪೂರ್ಣ ಬಜೆಟ್ನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ನೀಡಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ಹೇಳಿದರು.
ಕೃಷಿ, ನೀರಾವರಿ, ಮೂಲಸೌಕರ್ಯ, ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿ, ಉದ್ಯಮ, ಕೈಗಾರಿಕೆ, ಆರೋಗ್ಯ, ವಿಜ್ಞಾನ ತಂತ್ರಜ್ಞಾನ, ಸಾರಿಗೆ, ಡಿಜಿಟಲೀಕರಣ ಸೇರಿದಂತೆ ಪ್ರತಿಯೊಂದು ವಲಯದ ಸಮಗ್ರ ಅಭಿವೃದ್ಧಿಯ ಬಜೆಟ್ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ ಎಂದು ಸಚಿವ ನಾಗೇಶ್ ಹೇಳಿದರು.
ತುಮಕೂರು ಜಿಲ್ಲೆಯನ್ನು ಒಳಗೊಂಡಂತೆ ಬರ ಪರಿಸ್ಥಿತಿಯನ್ನು ಎದುರಿಸುವ ಕರ್ನಾಟಕದ ಕೇಂದ್ರ ಭಾಗದ ಪ್ರದೇಶಗಳಲ್ಲಿ ಸುಸ್ಥಿರ ಹನಿ ನೀರಾವರಿಯ ಅನುಷ್ಠಾನ ಮತ್ತು ಕುಡಿಯುವ ನೀರು ಪೂರೈಸಲು ಜಲ ಮೂಲಗಳನ್ನು ತುಂಬಿಸುವ ಬೃಹತ್ ನೀರಾವರಿ ಯೋಜನೆಯಾದ 'ಭದ್ರಾ ಮೇಲ್ದಂಡೆ ಯೋಜನೆ’ಗೆ 5,300 ಕೋಟಿ ರೂ.ಯನ್ನು ಘೋಷಿಸಿರುವುದಕ್ಕೆ ರಾಜ್ಯದ ಜನತೆಯ ಪರವಾಗಿ ಪ್ರಧಾನಮಂತ್ರಿಗಳಿಗೆ ಧನ್ಯವಾದಗಳು ಎಂದು ಸಚಿವರು ಹೇಳಿದರು.
ಮಕ್ಕಳು ಮತ್ತು ವಯಸ್ಕರಿಗೆ ವಿವಿಧ ಭಾಷೆಗಳಲ್ಲಿ ಗುಣಮಟ್ಟದ ಪುಸ್ತಕಗಳನ್ನು ಒದಗಿಸಲು ‘ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ’ ಸ್ಥಾಪಿಸಲಾಗುತ್ತದೆ. ಡಿಜಿಟಲ್ ಗ್ರಂಥಾಲಯದ ಸಂಪನ್ಮೂಲಗಳ ಪ್ರಯೋಜನ ಪಡೆದುಕೊಳ್ಳಲು ಅಗತ್ಯ ಮೂಲಸೌಕರ್ಯಕ್ಕಾಗಿ ಪಂಚಾಯಿತಿ ಮತ್ತು ವಾರ್ಡ್ ಮಟ್ಟದಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಲು ಉತ್ತೇಜನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಈ ಕ್ರಮವು ಮಕ್ಕಳು ಹಾಗೂ ವಯಸ್ಕರಲ್ಲಿ ಓದಿನ ಹವ್ಯಾಸವನ್ನು ಹೆಚ್ಚಿಸಿ ಜ್ಞಾನಾರ್ಜನೆ, ಶೈಕ್ಷಣಿಕ ಅಭಿವೃದ್ಧಿಗೆ ನೆರವಾಗುತ್ತದೆ ಎಂದು ಸಚಿವ ನಾಗೇಶ್ ಅವರು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಶಿಕ್ಷಣ ನೀತಿ-2020ಕ್ಕೆ ಪೂರಕವಾಗಿ ದೇಶದಲ್ಲಿ 15 ಸಾವಿರ ಶಾಲೆಗಳನ್ನು ‘ಪ್ರಧಾನಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ’ (ಪಿಎಂ ಶ್ರೀ) ಶಾಲೆಗಳಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿದೆ. ವಯಸ್ಕರ ಶಿಕ್ಷಣದಲ್ಲಿ ಪ್ರಗತಿ ಸಾಧಿಸಲು ‘ನವಭಾರತದ ಸಾಕ್ಷರತಾ ಯೋಜನೆ’ಯನ್ನು (NILP) ಅನುಷ್ಠಾನಗೊಳಿಸಲಾಗುತ್ತಿದೆ. ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಅನುದಾನವನ್ನು ಒದಗಿಸಿದೆ ಎಂದು ಸಚಿವರು ಹೇಳಿದ್ದಾರೆ.
ತೆರಿಗೆ ಮಿತಿಯನ್ನು ಹೆಚ್ಚಳ ಮಾಡುವ ಮೂಲಕ ಜನ ಸಾಮಾನ್ಯರು, ಮಧ್ಯಮ ವರ್ಗಕ್ಕೆ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಉಡುಗೊರೆ ನೀಡಿದೆ.
ಮುಂದಿನ 25 ವರ್ಷಗಳ ಅಮೃತ ಕಾಲವನ್ನು ಗಮನದಲ್ಲಿಟ್ಟುಕೊಂಡು ಪರಸ್ಪರ ಪೂರಕವಾದ ಏಳು ಆದ್ಯತಾ ವಲಯಗಳನ್ನು ಪ್ರಧಾನವಾಗಿಟ್ಟುಕೊಂಡು ದೂರದೃಷ್ಟಿಯ, ಮುನ್ನೋಟದ ಬಜೆಟ್ ಅನ್ನು ಕೇಂದ್ರ ಸರ್ಕಾರ ನೀಡಿದೆ ಎಂದು ಸಚಿವ ನಾಗೇಶ್ ಅವರು ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಅಮೃತ ಸಿಂಚನ ನೀಡುವ ಅಮೃತ ಕಾಲದ ಆಯವ್ಯಯ: ಶಶಿಕಲಾ ಅ ಜೊಲ್ಲೆ,
ಎಲ್ಲಾ ವರ್ಗಗಳ ಅಭ್ಯುದಯಕ್ಕೆ ಅಮೃತ ಸಿಂಚನ ನೀಡುವಂತಹ ಬಜೆಟನ್ನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಸಪ್ತ ಪ್ರಮುಖಾಂಶಗಳ ಆಧಾರದ ಮೇಲೆ ಇಂದು ಮಂಡಿಸಲಾಗಿರುವ ಕೇಂದ್ರ ಆಯವ್ಯಯ ಎಲ್ಲಾ ವರ್ಗಗಳ ಅಭಿವೃದ್ದಿಗೆ ಪೂರಕವಾಗಿದೆ. ಮಹಿಳೆಯರ ಸಬಲೀಕರಣಕ್ಕೆ ಹಾಗೂ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎನ್ಡಿಎ ಸರ್ಕಾರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಪರಿಕಲ್ಪನೆಯನ್ನ ಮುಂದುವರೆಸಿದ್ದು, ಸರ್ವರ ಅಭಿವೃದ್ದಿಗೆ ಪೂರಕವಾದ ಆಯವ್ಯಯ ಮಂಡಿಸಿದ್ದಾರೆ. ದೇಶದಲ್ಲಿ ಮೂಲಸೌಕರ್ಯಗಳ ಅಭಿವೃದ್ದಿಗೆ 10 ಲಕ್ಷ ಕೋಟಿ, ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ಘೋಷಿಸಿರುವುದು ಸ್ವಾಗತಾರ್ಹ. ಸಾರಿಗೆ ಸಂಪರ್ಕ ಹೆಚ್ಚಳಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಅಭಿವೃದ್ದಿಗೆ ಇನ್ನಷ್ಟು ಪುಷ್ಟಿ ನೀಡಲಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಅ ಜೊಲ್ಲೆ ಅಭಿಪ್ರಾಯಪಟ್ಟಿದ್ದಾರೆ.