Kasaragod News: ಕುಂದಾಪುರದಲ್ಲಿ ಶಂಕಾಸ್ಪದ ರೀತಿಯಲ್ಲಿ ಡಾ.ಕೃಷ್ಣಮೂರ್ತಿ ಶವ ಪತ್ತೆ; ಇಂದು ಅಂತ್ಯಸಂಸ್ಕಾರ; ಬದಿಯಡ್ಕದಲ್ಲಿ ವಿಹಿಂಪ ಹರತಾಳ
Nov 11, 2022 12:26 PM IST
ಬದಿಯಡ್ಕದಲ್ಲಿ ಇಂದು ವಿಶ್ವ ಹಿಂದು ಪರಿಷತ್ ಕರೆ ನೀಡಿದ್ದ ಹರತಾಳಕ್ಕೆ ಬೆಂಬಲ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟು ಮುಚ್ಚಿದ್ದವು. ವಿಹಿಂಪ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
Kasaragod News: ಕುಂದಾಪುರ ಸಮೀಪ ತಲ್ಲೂರು- ಹಟ್ಟಿಯಂಗಡಿಯ ಕಾಡು ಅಜ್ಜಿಮನೆ ಎಂಬಲ್ಲಿ ರೈಲ್ವೇ ಹಳಿಯಲ್ಲಿ ಬದಿಯಡ್ಕದ ಪ್ರಸಿದ್ಧ ದಂತ ವೈದ್ಯ ಡಾ.ಕೃಷ್ಣಮೂರ್ತಿ ಸರ್ಪಂಗಳ ಅವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ನಿನ್ನೆ ಸಿಕ್ಕಿದೆ. ಇಂದು ಬೆಳಗ್ಗೆ ಅವರ ಅಂತ್ಯಸಂಸ್ಕಾರ ಬದಿಯಡ್ಕದಲ್ಲಿ ನೆರವೇರಿದೆ.
ಕಾಸರಗೋಡು: ಕುಂದಾಪುರ ಸಮೀಪ ತಲ್ಲೂರು- ಹಟ್ಟಿಯಂಗಡಿಯ ಕಾಡು ಅಜ್ಜಿಮನೆ ಎಂಬಲ್ಲಿ ರೈಲ್ವೇ ಹಳಿಯಲ್ಲಿ ಬದಿಯಡ್ಕದ ಪ್ರಸಿದ್ಧ ದಂತ ವೈದ್ಯ ಡಾ.ಕೃಷ್ಣಮೂರ್ತಿ ಸರ್ಪಂಗಳ ಅವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ನಿನ್ನೆ ಸಿಕ್ಕಿದೆ. ಇಂದು ಬೆಳಗ್ಗೆ ಅವರ ಅಂತ್ಯಸಂಸ್ಕಾರ ಬದಿಯಡ್ಕದಲ್ಲಿ ನೆರವೇರಿದೆ.
ಇದೇ ವೇಳೆ, ಇಂದು ಬದಿಯಡ್ಕದಲ್ಲಿ ವಿಶ್ವಹಿಂದು ಪರಿಷತ್ ಹರತಾಳಕ್ಕೆ ಕರೆ ನೀಡಿದ್ದು, ಹಿಂದು ಸಮುದಾಯದವರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮೃತದೇಹದ ಗುರುತು ಪತ್ತೆಗೆ ಕುಟುಂಬಸ್ಥರು ಬಹಳ ತ್ರಾಸ ಪಡೆಬೇಕಾಗಿ ಬಂದಿತ್ತು. ನ.9ರಂದು ಬೆಳಗ್ಗೆ ಅಪರಿಚಿತ ಮೃತದೇಹ ಎಂದು ರೈಲ್ವೆ ಟ್ರಾಕ್ಮನ್ ಗಣೇಶ ಕೆ. ನೀಡಿದ ದೂರಿನ ಪ್ರಕಾರ, ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಮೃತದೇಹದ ಗುರುತು ಪತ್ತೆಗಾಗಿ ನಿನ್ನೆ ಮೃತರ ಕುಟುಂಬದ ಹಿರಿಯರು ಮತ್ತು ಆಸ್ಪತ್ರೆ ಸಹಾಯಕರು ಕುಂದಾಪುರಕ್ಕೆ ತೆರಳಿದ್ದರು. ಸಂಜೆ ತನಕವೂ ಮೃತದೇಹದ ಗುರುತು ದೃಢೀರಿಸುವುದು ಸಾಧ್ಯವಾಗಿರಲಿಲ್ಲ. ಬಳಿಕ ಪುತ್ರಿಯನ್ನು ಪೊಲೀಸರು ಕರೆಯಿಸಿಕೊಂಡಿದ್ದರು. ಅವರು ಬಂದು, ಮೃತದೇಹದ ಮೇಲಿದ್ದ ಜನಿವಾರ, ಒಳ ಉಡುಪು ಮತ್ತು ಹಿಂಬದಿ ದೇಹದ ಮಚ್ಚೆಯ ಮೂಲಕ ದೃಢೀಕರಿಸಿದ್ದರು. ಇಷ್ಟಾಗುವ ಹೊತ್ತಿಗೆ ರಾತ್ರಿ 8 ಗಂಟೆ ಆಗಿತ್ತು. ಬದಿಯಡ್ಕ ಪೊಲೀಸ್ ಠಾಣೆಯ ಮೂವರು ಪೊಲೀಸ್ ಸಿಬ್ಬಂದಿ ಕೂಡ ಜತೆಗಿದ್ದರು.
ಪೊಲೀಸ್ ವಶದಲ್ಲಿದ್ದಾರೆ ಐವರು
ಡಾ.ಕೃಷ್ಣಮೂರ್ತಿ ಅವರಿಗೆ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ಶಾಮೀಲಾಗಿರುವ ಮಹಿಳೆಯೊಬ್ಬಳ ಸಂಬಂಧಿ ಸೇರಿ ಐವರು ಪೊಲೀಸ್ ವಶದಲ್ಲಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬಂಧಿತರನ್ನು, ಅಡಕೆ ವ್ಯಾಪಾರಿ, ಮುಸ್ಲಿಂ ಲೀಗ್ ಕುಂಬ್ಡಾಜೆ ಪಂಚಾಯತು ಕಾರ್ಯದರ್ಶಿ ಅಲಿ ತುಪ್ಪಕಲ್ಲು, ಮುಸ್ಲಿಂ ಲೀಗ್ ಬದಿಯಡ್ಕ ಪಂಚಾಯತು ಪದಾಧಿಕಾರಿ ಮುಹಮ್ಮದ್ ಹನೀಫ್ ಯಾನೆ ಅನ್ವರ್, ಕುಂಬ್ಡಾಜೆ ನಿವಾಸಿ ಅಶ್ರಫ್, ಅನ್ನಡ್ಕ ನಿವಾಸಿ ಮುಹಮ್ಮದ್ ಶಿಯಾಬುದ್ದೀನ್, ವಿದ್ಯಾಗಿರಿ ಮುನಿಯೂರು ನಿವಾಸಿ ಉಮರುಲ್ ಫಾರೂಕ್ ಎಂದು ಗುರುತಿಸಲಾಗಿದೆ. ಅಲಿ ಹಾಗೂ ಅನ್ವರ್ ನೇತೃತ್ವದ ಗುಂಪು ಡಾ.ಕೃಷ್ಣಮೂರ್ತಿ ಅವರಿಗೆ ಕ್ಲಿನಿಕ್ ನಲ್ಲಿ ಕೊಲೆ ಬೆದರಿಕೆ ಒಡ್ಡಿತ್ತು. ಇದಾದ ಬಳಿಕ ಡಾಕ್ಟರ್ ನಿಗೂಡವಾಗಿ ನಾಪತ್ತೆಯಾಗಿದ್ದರು. ಆರೋಪಿಗಳು ಬೆದರಿಸಿ ಡಾಕ್ಟರ್ ಕೈಯಿಂದ ಲಕ್ಷಗಟ್ಟಲೆ ಹಣ ಪಡೆಯಲು ಸಂಚು ರೂಪಿಸಿದ್ದರು ಎಂಬುದು ಬಹಿರಂಗವಾಗಿದೆ.
ಹತ್ತಾರು ಅನುಮಾನಗಳ ಹುತ್ತ
- ಎಂಟನೇ ತಾರೀಕು ಮಧ್ಯಾಹ್ನ 12 ಗಂಟೆಗೆ ಗುಂಪು ಬೆದರಿಕೆ ಹಾಕಿದ ಕೂಡಲೇ ಎದ್ದು ಹೊರಟ ಡಾ.ಕೃಷ್ಣಮೂರ್ತಿ, ಪೆರ್ಲ ಕಡೆಗೆ ಹೋಗಿದ್ದನ್ನು ನೋಡಿರುವುದಾಗಿ ಪೂಜಾ ಬೇಕರಿ ಮಾಲೀಕರು ಪೊಲೀಸರಿಗೆ ತಿಳಿಸಿದ್ದಾರೆ.
- ಡಾಕ್ಟರ್ ಕೃಷ್ಣಮೂರ್ತಿ ಅವರ ಬೈಕ್ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿದ ಸ್ಥಿತಿಯಲ್ಲಿ ಕುಂಬಳೆಯಲ್ಲಿ ಪತ್ತೆಯಾಗಿದೆ. ಡಾಕ್ಟರೇ ಅಲ್ಲಿ ಬಂದು ಬೈಕ್ ಪಾರ್ಕ್ ಮಾಡಿದ್ದಕ್ಕೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ.
- ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ಕಂಡರೂ, ಅನುಮಾನಗಳು ಅನೇಕ ಕಾಡಿವೆ. ಅವರು ಬದಿಯಡ್ಕದಿಂದ ಎಂಟನೇ ತಾರೀಕು ಹೊರಟಾಗ ಹಾಕಿದ್ದ ಉಡುಪು ಇರಲಿಲ್ಲ. ಬೇರೆಯದೇ ಉಡುಪು ಮೃತದೇಹದ ಮೇಲಿತ್ತು. ಆ ಬಣ್ಣದ ಶರ್ಟ್ ಅನ್ನು ಡಾಕ್ಟರ್ ಧರಿಸಿದವರೇ ಅಲ್ಲ, ಅದು ಅವರಿಗೆ ಇಷ್ಟವೂ ಇಲ್ಲದ ಬಣ್ಣ ಎಂಬ ಅಂಶ ಗಮನಸೆಳೆದಿದೆ.
- ಮೃತದೇಹದ ಸುತ್ತಮುತ್ತಲಿನ ದೃಶ್ಯಗಳನ್ನು ಗಮನಿಸಿದರೆ, ಅಲ್ಲಿ ಅವರು ಧರಿಸಿದ್ದ ಪಾದರಕ್ಷೆ, ಸೊಂಟದ ಬೆಲ್ಟ್, ಡಿಎಲ್, ಐಡಿಎ ಗುರುತಿನ ಚೀಟಿ ಇದ್ಯಾವುದೂ ಸಿಕ್ಕಿಲ್ಲ. ಅಷ್ಟೇ ಅಲ್ಲ, ಬೈಕ್ ಕೀ, ವಾಚ್, ವ್ಯಾಲೆಟ್ ಕೂಡ ಸಿಕ್ಕಿಲ್ಲ.
- ಪಾದರಕ್ಷೆ ಇಲ್ಲದೆ ಕುಂಬಳೆಯಿಂದ ರೈಲ್ವೆ ಸ್ಟೇಶನ್ಗೋ, ಬಸ್ ನಿಲ್ದಾಣಕ್ಕೋ ನಡೆದು ಹೋಗಿರಬಹುದೇ? ಮೃತದೇಹ ಪತ್ತೆಯಾದ ಜಾಗಕ್ಕೂ ರೈಲ್ವೆ ನಿಲ್ದಾಣಕ್ಕೂ ಅಂದಾಜು 10 ಕಿ.ಮೀ. ಹೆಚ್ಚು ದೂರ ಇದೆ. ರಾತ್ರಿ ಕತ್ತಲಲ್ಲಿ ಟಾರ್ಚ್ ಇಲ್ಲದೇ ಅಲ್ಲಿಗೆ ಹೋಗಿ ತಲುಪುವುದು ಸಾಧ್ಯವೇ ಇಲ್ಲ. ಹೀಗಾಗಿ ಇದು ಆತ್ಮಹತ್ಯೆಯೇ ಅಥವಾ ಯೋಜಿತ ಕೊಲೆಯೇ ಎಂಬ ಅನುಮಾನ ಕಾಡಿದೆ.
ಬದಿಯಡ್ಕದಲ್ಲಿ ಇಂದು ವಿಹಿಂಪ ಹರತಾಳ
ಬದಿಯಡ್ಕದಲ್ಲಿ ನಿನ್ನೆ ಹಿಂದು ಸಮುದಾಯದವರು ಪ್ರತಿಭಟನಾ ಮೆರವಣಿಗೆ ನಡೆಸಿ, ಬೆದರಿಕೆ ಒಡ್ಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದರು. ಬಿಜೆಪಿ ನಾಯಕ ಕುಂಟಾರು ರವೀಶ್ ತಂತ್ರಿ ಮತ್ತು ಇತರೆ ಹಿಂದು ನಾಯಕರು ಪ್ರತಿಭಟನೆಯ ನೇತೃತ್ವವಹಿಸಿದ್ದರು. ಇಂದು ಬದಿಯಡ್ಕದಲ್ಲಿ ಹರತಾಳಕ್ಕೆ ವಿಶ್ವಹಿಂದು ಪರಿಷತ್ ಕರೆ ನೀಡಿತ್ತು.
ಇಂದು ಬೆಳಗ್ಗೆ ಡಾಕ್ಟರ್ ಕೃಷ್ಣಮೂರ್ತಿ ಅವರ ಅಂತ್ಯ ಸಂಸ್ಕಾರ ಬೆಳಗ್ಗೆ 9 ಗಂಟೆಗೆ ನೆರವೇರಿದೆ. ಬಳಿಕ ಪ್ರತಿಭಟನಾ ಮೆರವಣಿಗೆ ನಡೆದಿದ್ದು, ಬದಿಯಡ್ಕ ಪೇಟೆಯ ಬಹುತೇಕ ಅಂಗಡಿ ಮುಂಗಟ್ಟು ಈ ಸಂದರ್ಭದಲ್ಲಿ ಮುಚ್ಚಿದ್ದವು.
ಏನಿದು ಡಾ.ಕೃಷ್ಣಮೂರ್ತಿ ನಾಪತ್ತೆ ಪ್ರಕರಣ?
Dr.Krishnamurthy dentist missing case: ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕದ ಪ್ರಸಿದ್ಧ ದಂತವೈದ್ಯ ಡಾ.ಕೃಷ್ಣಮೂರ್ತಿ. ಎಸ್ (57) ನಾಪತ್ತೆ ಪ್ರಕರಣ ಈಗ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ. ಕುಟುಂಬಸ್ಥರು ನಾಪತ್ತೆ ದೂರು ದಾಖಲಿಸಿದರೆ, ಕ್ಲಿನಿಕ್ನಲ್ಲಿದ್ದ ಸಹಾಯಕರು ಬೆದರಿಕೆಯೊಡ್ಡಿದವರ ವಿರುದ್ಧ ದೂರು ದಾಖಲಿಸಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ.