Kasaragod News: ಡಾ.ಕೃಷ್ಣಮೂರ್ತಿ ನಾಪತ್ತೆ ಪ್ರಕರಣ; ಬದಿಯಡ್ಕದಲ್ಲಿ ʻಮಾಫಿಯಾ ರಾಜ್ʼ! ಹಿಂದು ಸಮುದಾಯದಿಂದ ತೀವ್ರ ಪ್ರತಿಭಟನೆ
Nov 10, 2022 05:34 PM IST
ಬದಿಯಡ್ಕ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿರುವ ಐಡಿಎ ಸದಸ್ಯರು (ಎಡಚಿತ್ರ), ಡಾಕ್ಟರ್ ಕೃಷ್ಣಮೂರ್ತಿ ಅವರು ಕುಂಬಳೆಯಲ್ಲಿ ಬಿಟ್ಟು ಹೋಗಿರುವ ಬೈಕ್ (ಮಧ್ಯ ಚಿತ್ರ), ನಾಪತ್ತೆಯಾಗಿರುವ ಡಾ.ಕೃಷ್ಣಮೂರ್ತಿ (ಬಲ ಚಿತ್ರ)
Dr.Krishnamurthy dentist missing case: ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕದ ಪ್ರಸಿದ್ಧ ದಂತವೈದ್ಯ ಡಾ.ಕೃಷ್ಣಮೂರ್ತಿ. ಎಸ್ (57) ನಾಪತ್ತೆ ಪ್ರಕರಣ ಈಗ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ. ಕುಟುಂಬಸ್ಥರು ನಾಪತ್ತೆ ದೂರು ದಾಖಲಿಸಿದರೆ, ಕ್ಲಿನಿಕ್ನಲ್ಲಿದ್ದ ಸಹಾಯಕರು ಬೆದರಿಕೆಯೊಡ್ಡಿದವರ ವಿರುದ್ಧ ದೂರು ದಾಖಲಿಸಿದ್ದಾರೆ.
ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕದ ಪ್ರಸಿದ್ಧ ದಂತವೈದ್ಯ ಡಾ.ಕೃಷ್ಣಮೂರ್ತಿ. ಎಸ್ (57) ನಾಪತ್ತೆ ಪ್ರಕರಣ ಈಗ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ. ಈ ಪ್ರಕರಣದ ಹಿಂದೆ ಸ್ಥಳೀಯ ಮಾಫಿಯಾ ಕೆಲಸ ಮಾಡಿದೆ ಎಂದು ಆರೋಪಿಸಿ ಹಿಂದು ಸಮುದಾಯದವರು ಇಂದು ಬೆಳಗ್ಗೆ ಪ್ರತಿಭಟನಾ ಜಾಥಾ ನಡೆಸಿ, ಪೊಲೀಸರಿಗೆ ಮನವಿ ಸಲ್ಲಿಸಿದರು.
ಬದಿಯಡ್ಕದಲ್ಲಿರುವ ದಂತವೈದ್ಯ ಡಾ.ಕೃಷ್ಣಮೂರ್ತಿ ಅವರ ಕ್ಲಿಒನಿಕ್ಗೆ ಮಂಗಳವಾರ ಒಂದು ಗುಂಪು ಆಗಮಿಸಿದ್ದು, ವಾಕ್ಸಮರ ನಡೆದಿತ್ತು. ನಿಮ್ಮನ್ನು ಬದುಕಲು ಬಿಡಲ್ಲ ಎಂದು ಬೆದರಿಸಿತ್ತು. ಇದರಿಂದ ಕಳವಳಗೊಂಡ ಡಾಕ್ಟರ್ ಕೃಷ್ಣಮೂರ್ತಿ ಗಡಿಬಿಡಿಯಲ್ಲಿ ಬೈಕ್ ಕೀ ತೆಗೆದುಕೊಂಡು ಹೊರಗೋಡಿದ್ದರು. ಬಳಿಕ ಬೈಕ್ ಏರಿ ಎಲ್ಲಿ ಹೋದರು ಎಂಬುದು ಗೊತ್ತಾಗಿರಲಿಲ್ಲ.
ನಿನ್ನೆ ಕುಂಬಳೆಯಲ್ಲಿ ಬೈಕ್ ಪತ್ತೆಯಾಗಿತ್ತು. ಆದರೆ ಅವರ ಸುಳಿವು ಸಿಕ್ಕಿರಲಿಲ್ಲ. ಮೊಬೈಲ್ ಫೋನ್ ಕೊಂಡೊಯ್ಯದ ಕಾರಣ, ಮನೆಯವರೂ ಆತಂಕಕ್ಕೆ ಒಳಗಾಗಿದ್ದರು. ಪೊಲೀಸರಿಗೆ ನಾಪತ್ತೆ ಪ್ರಕರಣ ದಾಖಲಿಸುವಂತೆ ದೂರು ನೀಡಲಾಗಿತ್ತು. ಆದರೆ ಆರಂಭದಲ್ಲಿ ಪೊಲೀಸರು ದೂರು ಸ್ವೀಕರಿಸಲು ಹಿಂದೇಟು ಹಾಕಿದ್ದರು ಎಂದು ಮೂಲಗಳು ತಿಳಿಸಿವೆ.
ಏನಿದು ನಾಪತ್ತೆ ಪ್ರಕರಣ?
ಕ್ಲಿನಿಕ್ನಲ್ಲಿದ್ದ ಸಹಾಯಕರು ಡಾಕ್ಟರ್ ಕೃಷ್ಣಮೂರ್ತಿ ಅವರ ಆಪ್ತರಿಗೆ ನೀಡಿದ ಮಾಹಿತಿ ಇಷ್ಟು - ಕ್ಲಿನಿಕ್ಗೆ ಶನಿವಾರ ಮುನಿಯೂರು ಎಂಬಲ್ಲಿಂದ ಒಬ್ಬ ಮಹಿಳೆ ಬಂದು ಚಿಕಿತ್ಸೆ ಪಡೆದು ಹೋಗಿದ್ದರು. ಸೋಮವಾರ ಬೆಳಗ್ಗೆ ಮಹಿಳೆಯ ಕಡೆಯವರು ಬಂದು ಡಾಕ್ಟರ್ ಬಳಿ, ಮಹಿಳೆಯ ಜತೆಗೆ ಅಸಭ್ಯ ವರ್ತನೆ ತೋರಿದ್ದೀರಿ ಎಂದು ಆರೋಪಿಸಿ ಗಲಾಟೆ ಮಾಡಿದ್ದರು. ಸಂಜೆ ಮತ್ತೆ ಮಾತುಕತೆಗೆ ಬರುವುದಾಗಿ ಬೆದರಿಕೆ ಹಾಕಿ ಹೋಗಿದ್ದರು.
ದಿಢೀರ್ ಎದುರಾದ ಆರೋಪದಿಂದ ಡಾಕ್ಟರ್ ಬಹಳ ಕಳವಳಗೊಂಡಿದ್ದರು. ಸಂಜೆ ಮಹಿಳೆಯ ಕಡೆಯವರಿಗಾಗಿ ಕಾಯುತ್ತಿದ್ದರು. ಆದರೆ ಸಂಜೆ ಯಾರೂ ಬಂದಿರಲಿಲ್ಲ. ಮಾರನೇ ದಿನ ಬೆಳಗ್ಗೆ ಮುಸ್ಲಿಂ ಲೀಗ್ನ ಸ್ಥಳೀಯ ನಾಯಕರು ಕ್ಲಿನಿಕ್ಗೆ ಮಾತುಕತೆಗೆ ಆಗಮಿಸಿದ್ದರು. ಆಗಲೂ ಏರುಧ್ವನಿಯ ಮಾತುಕತೆ ಆಗಿತ್ತು. ಆ ಗುಂಪಿನ ನಡುವೆ ಇದ್ದ ಡಾಕ್ಟರ್ ಅಲ್ಲಿ ಟೇಬಲ್ ಮೇಲಿದ್ದ ಬೈಕ್ ನ ಕೀ ಎತ್ತಿಕೊಂಡು, ʻಇವರು ನನ್ನನ್ನು ಬದುಕಲು ಬಿಡರುʼ ಎನ್ನುತ್ತ ದಾಪುಗಾಲಿಡುತ್ತ ಹೊರಗೆ ಹೋಗಿದ್ದರು. ಅದಾದ ನಂತರ ಅವರ ಸುಳಿವು ಇಲ್ಲ.
ಮಾತುಕತೆ ಮೂಲಕ ಪ್ರಕರಣ ಬಗೆಹರಿಸಲು ಮುಂದಾಗಿದ್ದರು!
ಡಾಕ್ಟರ್ ಕೃಷ್ಣಮೂರ್ತಿ ಅವರು ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಲು ಕುಟುಂಬದವರು ಪೊಲೀಸ್ ಠಾಣೆಗೆ ಹೋಗಿದ್ದರು. ಆಗ ಅಲ್ಲಿ, ಒಂದೆರಡು ದಿನದಲ್ಲಿ ಡಾಕ್ಟರ್ ಕೃಷ್ಣಮೂರ್ತಿ ಅವರು ವಾಪಸ್ ಬರುತ್ತಾರೆ. ದೂರು ಯಾಕೆ ಕೊಡುತ್ತೀರಿ. ಅವರು ಬಂದ ಬಳಿಕ ಬೆದರಿಕೆ ಹಾಕಿದವರ ಜತೆಗೆ ಮಾತುಕತೆ ಮಾಡಿ ಬಿಕ್ಕಟ್ಟು ಪರಿಹರಿಸೋಣ ಎಂಬ ಮಾತು ಬಂದಿತ್ತು. ಬಳಿಕ ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಅವರು ಪ್ರಕರಣವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದರು. ಕೂಡಲೇ ಅವರು ಬದಿಯಡ್ಕ ಪೊಲೀಸ್ ಠಾಣೆಗೆ ಸಂಪರ್ಕಿಸಿದ ಬಳಿಕ ಪೊಲೀಸರು ದೂರು ಸ್ವೀಕರಿಸಿ ಎಫ್ಐಆರ್ ದಾಖಲಿಸಿದರು ಎಂಬುದು ಬಹಿರಂಗವಾಗಿದೆ.
ಕುಟುಂಬದವರು ನೀಡಿದ ದೂರಿನಲ್ಲಿ ನಾಪತ್ತೆ ಪ್ರಕರಣವಷ್ಟೇ ದಾಖಲಾಗಿದೆ. ಇದರ ಜತೆಗೆ ಆಸ್ಪತ್ರೆಯ ಸಹಾಯಕ ನೀಡಿದ ದೂರಿನಲ್ಲಿ, ಕ್ಲಿನಿಕ್ನಲ್ಲಿ ಏನಾಯಿತು ಎಂಬ ವಿವರವಿದ್ದು, ಡಾಕ್ಟರ್ಗೆ ಶಸ್ತ್ರಾಸ್ತ್ರ ತೋರಿಸಿ ಬೆದರಿಕೆ ಒಡ್ಡಿದ ವಿವರ ಇದೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ, ಮಹಿಳೆ ಕೂಡ ದೂರು ದಾಖಲಿಸಿರುವುದಾಗಿ ಮಾಹಿತಿ ಇದೆ. ಆದರೆ, ಬದಿಯಡ್ಕ ಪೊಲೀಸರು ಯಾವುದನ್ನೂ ಅಧಿಕೃತವಾಗಿ ದೃಢೀಕರಿಸಿಲ್ಲ.
ಇಂದು ಪ್ರತಿಭಟನಾ ಜಾಥಾ, ಠಾಣೆ ಎದುರು ಐಡಿಎ ಸದಸ್ಯರ ಪ್ರತಿಭಟನೆ
ಡಾ.ಕೃಷ್ಣಮೂರ್ತಿ ಸರ್ಪಂಗಳ ಅವರ ನಾಪತ್ತೆ ಪ್ರಕರಣದಲ್ಲಿ ಸುಳ್ಳು ಬೆದರಿಕೆ ಒಡ್ಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಹಿಂದು ಸಮುದಾಯದವರು ಬದಿಯಡ್ಕ ಪೇಟೆಯಲ್ಲಿ ಪ್ರತಿಭಟನಾ ಜಾಥಾ ನಡೆಸಿದರು. ಇಂಡಿಯಾ ಡೆಂಟಲ್ ಅಸೋಸಿಯೇಷನ್ ಸದಸ್ಯರು ಬದಿಯಡ್ಕ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಡಾ.ಕೃಷ್ಣಮೂರ್ತಿ ಅವರ ಮನೆಯ ಆವರಣದಿಂದ ಪೊಲೀಸ್ ಠಾಣೆ ತನಕ ಈ ಜಾಥಾ ನಡೆದಿದ್ದು, ಕಿರು ಪ್ರತಿಭಟನಾ ಸಭೆಯೂ ನಡೆಯಿತು. ಸ್ಥಳಕ್ಕಾಗಮಿಸಿದ ಕುಂಟಾರು ರವೀಶ್ ತಂತ್ರಿ ಕೂಡ ಮಾತನಾಡಿದ್ದು, ಪೊಲೀಸ್ ಇಲಾಖೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. ಇಂದಿನ ಈ ಪ್ರತಿಭಟನೆ ಸಾಂಕೇತಿಕವಷ್ಟೆ. ಈ ಕೃತ್ಯವೆಸಗಿದವರ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವುದು ಹಿಂದು ಸಮಾಜಕ್ಕೆ ಸಾಧ್ಯವಾಗದ ಕೆಲಸವೇನಲ್ಲ ಎಂದು ಎಚ್ಚರಿಸಿರುವುದಾಗಿ ಸ್ಥಳೀಯ ಮಾಧ್ಯಮ ವರದಿಮಾಡಿದೆ.
ಬದಿಯಡ್ಕದಲ್ಲಿ ಮಾಫಿಯಾ ರಾಜ್ !
ಹಿಂದು ಸಮುದಾಯದ ಸ್ಥಳೀಯ ನೇತಾರ ಸುಧಾಮ ಮಾತನಾಡುತ್ತ, ಬದಿಯಡ್ಕದಲ್ಲಿ ಇತ್ತೀಚೆಗೆ ಮಾಫಿಯಾ ಒಂದು ಸಕ್ರಿಯವಾಗಿದೆ. ಮುಸ್ಲಿಂ ಲೀಗ್ನ ಕೆಲವು ನಾಯಕರು ಇದರಲಿ ಷಾಮೀಲಾಗಿದ್ದಾರೆ. ವಿದ್ಯಾಗಿರಿ ಶಾಲೆಯ ಅಧ್ಯಾಪಕರೊಬ್ಬರ ವಿರುದ್ಧದ ಬ್ಲ್ಯಾಕ್ಮೇಲ್ ಪ್ರಕರಣ ಕೂಡ ಇದೇ ಮಾಫಿಯಾ ಕೈವಾಡದ್ದು. ಇದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಮನೆ ಸಮೀಪದ ಜಾಗ ಮಾರಲ್ಲ ಎಂದಿದ್ದ ಡಾಕ್ಟರ್
ಡಾಕ್ಟರ್ ಕೃಷ್ಣಮೂರ್ತಿ ಅವರು ಮನೆ ಸಮೀಪದ ಜಾಗವನ್ನು ಮಾರಾಟ ಮಾಡುವುದಿಲ್ಲ ಎಂದು ಇತ್ತೀಚೆಗೆ ಹೇಳಿದ್ದರು. ಅಲ್ಲಿ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಒಂದು ನಿರ್ಮಾಣವಾಗುವುದಿದೆ. ಅವರು ಜಾಗ ಅತಿಕ್ರಮಿಸಲು ಮುಂದಾದ ಸಂದರ್ಭದಲ್ಲಿ ಡಾಕ್ಟರ್ ತಮ್ಮ ಜಾಗಕ್ಕೆ ಬೇಲಿ ಕೂಡ ಹಾಕಿಸಿದ್ದರು ಎಂಬ ಮಾತು ಕೂಡ ಆಪ್ತವಲಯದಲ್ಲಿ ಕೇಳಿಬಂದಿದೆ.