logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Attack On Cops: Omg: ಹೀಗೇಕೆ ಪೊಲೀಸರನ್ನು ಅಟ್ಟಾಡಿಸುತ್ತಿದ್ದಾರೆ 'ಜನ?: ಗಣದ ಮನ' ನೋಯಿಸಿದರೆ ಏನಾಗುತ್ತೆ?

Attack on Cops: OMG: ಹೀಗೇಕೆ ಪೊಲೀಸರನ್ನು ಅಟ್ಟಾಡಿಸುತ್ತಿದ್ದಾರೆ 'ಜನ?: ಗಣದ ಮನ' ನೋಯಿಸಿದರೆ ಏನಾಗುತ್ತೆ?

Nikhil Kulkarni HT Kannada

Feb 04, 2023 11:07 AM IST

ಪೊಲೀಸರ ಮೇಲೆ ದಾಳಿ ಮಾಡಿದ ಗುಂಪು

    • ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬೃಹತ್ ಜನಸಮೂಹವೊಂದು, ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಗೆ ಬಂದ ಪೊಲೀಸರು ಮತ್ತು ಆಡಳಿತದ ಜಂಟಿ ತಂಡದ ಮೇಲೆ ದಾಳಿ ಮಾಡಿದೆ. ಈ ದಾಳಿಯಲ್ಲಿ ಒಂಬತ್ತು ಜನರು ಗಂಭೀರವಾಗಿ ಗಾಯಗೊಂಡಿದ್ದು, ಕಲ್ಲು ತೂರಾಟದಲ್ಲಿ ಪೊಲೀಸರ ವಾಹನಗಳು ಹಾಗೂ ಜೆಸಿಬಿ ಯಂತ್ರ ಸಂಪೂರ್ಣವಾಗಿ ಜಖಂಗೊಂಡಿವೆ.
ಪೊಲೀಸರ ಮೇಲೆ ದಾಳಿ ಮಾಡಿದ ಗುಂಪು
ಪೊಲೀಸರ ಮೇಲೆ ದಾಳಿ ಮಾಡಿದ ಗುಂಪು (ANI)

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬೃಹತ್ ಜನಸಮೂಹವೊಂದು, ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಗೆ ಬಂದ ಪೊಲೀಸರು ಮತ್ತು ಆಡಳಿತದ ಜಂಟಿ ತಂಡದ ಮೇಲೆ ದಾಳಿ ಮಾಡಿದೆ. ಈ ದಾಳಿಯಲ್ಲಿ ಒಂಬತ್ತು ಜನರು ಗಂಭೀರವಾಗಿ ಗಾಯಗೊಂಡಿದ್ದು, ಕಲ್ಲು ತೂರಾಟದಲ್ಲಿ ಪೊಲೀಸರ ವಾಹನಗಳು ಹಾಗೂ ಜೆಸಿಬಿ ಯಂತ್ರ ಸಂಪೂರ್ಣವಾಗಿ ಜಖಂಗೊಂಡಿವೆ.

ಟ್ರೆಂಡಿಂಗ್​ ಸುದ್ದಿ

ಭಾರತದ ಅತಿದೊಡ್ಡ ಬಜಾಜ್ ಪಲ್ಸರ್‌ ಮಾರುಕಟ್ಟೆಗೆ; ಪಲ್ಸರ್ NS400Z ಬೈಕ್‌ ದರ 1.85 ಲಕ್ಷ ರೂ, ವಿನ್ಯಾಸ ವಿಶೇಷ ವಿವರ ಹೀಗಿದೆ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

Explainer: ಪ್ರಜ್ವಲ್ ರೇವಣ್ಣ ಪಲಾಯನಕ್ಕೆ ಪವರ್‌ ತುಂಬಿದ ರಾಜತಾಂತ್ರಿಕ ಪಾಸ್‌ಪೋರ್ಟ್; ಏನಿದರ ವಿಶೇಷ?

ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಸಂಜಯ್ ಸಾಹು ನೇತೃತ್ವದ ತಂಡವು ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಲು, ಉಜ್ಜಯಿನಿ ಜಿಲ್ಲೆಯ ಜಿತಾರ್ ಖೇಡಿ ಗ್ರಾಮಕ್ಕೆ ತೆರಳಿತ್ತು. ಆಗ ಸ್ಥಳೀಯರ ಗುಂಪೊಂದು ಪೊಲೀಸರು ಮತ್ತು ಜೆಸಿಬಿ ಮೇಲೆ ಕಲ್ಲು ಎಸೆಯಲು ಪ್ರಾರಂಭಿಸಿತು.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಉದ್ರಿಕ್ತ ಜನರ ಗುಂಪನ್ನು ಚದುರಿಸಲು ಪ್ರಯತ್ನಿಸಿದರಾದರೂ, ಭಾರೀ ಸಂಖ್ಯೆಯಲ್ಲಿ ಸೇರಿದ್ದ ಸ್ಥಳೀಯರು, ಪೊಲೀಸರು ಮತ್ತು ಅಧಿಕಾರಗಳತ್ತ ಕಲ್ಲಿ ತೂರಲು ಆರಂಭಿಸಿದರು. ಈ ವೇಳೆ ಸಾಹು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಸಂಜಯ್ ಸಾಹು ಹಾಗೂ ಇತರ ಅಧಿಕಾರಗಳನ್ನು, ಕಲ್ಲು ತೂರಾಟದಿಂದ ರಕ್ಷಿಸಲು ಮತ್ತೊಂದು ಪೊಲೀಸ್ ವಾಹನದಲ್ಲಿ ಸ್ಥಳಾಂತರಿಸಬೇಕಾಯಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದಾಳಿ ಮಾಡಿದ ಗುಂಪಿನಲ್ಲಿದ್ದ ಜನರನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.

ಸ್ಥಳೀಯರು ಪೊಲೀಸರು ಹಾಗೂ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ಮಡೆಸುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸ್ಥಳೀಯ ನಿವಾಸಿಗಳ ದೊಡ್ಡ ಗುಂಪೊಂದು, ತಮ್ಮ ಸುರಕ್ಷತೆಗಾಗಿ ಓಡಿಹೋಗಲು ಪ್ರಯತ್ನಿಸುತ್ತಿರುವ ಪೊಲೀಸರ ಮೇಲೆ ವಿವೇಚನೆಯಿಲ್ಲದೆ ಕಲ್ಲುಗಳನ್ನು ಎಸೆಯುವುದನ್ನು ಕಾಣಬಹುದಾಗಿದೆ. ಮತ್ತೊಂದು ವಿಡಿಯೋದಲ್ಲಿ, ಮಹಿಳೆಯರು ಒತ್ತುವರಿ ತೆರವು ಕಾರ್ಯಾಚರಣೆಗೆ ಬಂದಿದ್ದ ಬುಲ್ಡೋಜರ್‌ಗೆ ಕಲ್ಲು ಎಸೆಯುವುದನ್ನು ಹಾಗೂ ಅದರ ಗಾಜಿನ ಕಿಟಕಿಗಳನ್ನು ಒಡೆದು ಹಾಕುವುದನ್ನು ಕಾಣಬಹುದು.

ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಗ್ರಹದ ಬಳಿ ಇರುವ ಜಿತಾರ್ ಖೇಡಿ ಗ್ರಾಮದ 6,000 ಚದರ ಅಡಿ ಸರ್ಕಾರಿ ಭೂಮಿಯನ್ನು, ಕೆಲವರು ಬೇಲಿ ಹಾಕುವ ಮೂಲಕ ಅತಿಕ್ರಮಿಸಿದ್ದಾರೆ. ನಾವು ಈ ಅತಿಕ್ರಮಣವನ್ನು ತಡೆಯಲು ಕಾರ್ಯಾಚರಣೆ ಆರಂಭಿಸಿದ್ದೇವು. ಆದರೆ ಸ್ಥಳೀಯರು ಅಮಾನುಷವಾಗಿ ನಮ್ಮತ್ತ ಕಲ್ಲುಗಳನ್ನು ತೂರಿದರು. ಈ ಘಟನೆಯಲ್ಲಿ ಪೊಲೀಸರೂ ಸೇರಿದಂತೆ ಒಟ್ಟು ಒಂಬತ್ತು ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಸಂಜಯ್ ಸಾಹು ಮಾಹಿತಿ ನೀಡಿದ್ದಾರೆ.

ಆದರೆ ಈ ಕುರಿತು ಗ್ರಾಮಸ್ಥರ ವಾದವೇ ಬೇರೆಯಾಗಿದ್ದು, ನಮ್ಮ ದೈನಂದಿನ ಬದುಕನ್ನು ಕಸಿಯುವ ಕುತಂತ್ರದ ಭಾಗವಾಗಿಯೇ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದ ಗಂಭೀರ ಆರೋಪ ಮಾಡಿದ್ದಾರೆ. ಈ ಜಮೀನಿನಲ್ಲಿ ಎಲ್ಲ ಸಮುದಾಯದವರ ಶುಭ ಕಾರ್ಯಗಳು ನಡೆಯುತ್ತಿದ್ದವು. ಒತ್ತುವರಿ ನಂತರ ಸಾಮಾಜಿಕ ಕಾರ್ಯಕ್ರಮಗಳ ಮೇಲೆ ನಿರ್ಬಂಧ ಹೇರಲಾಗಿದೆ. ಇದು ನಮ್ಮ ಸಾಮಾಜಿಕ ಬೆರೆಯುವಿಕೆಯನ್ನು ನಿರ್ಬಂಧಗೊಳಿಸಿದಂತಲ್ಲವೇ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ಸ್ಥಳೀಯರು ನಡೆಸಿದ ಕಲ್ಲು ತೂರಾಟದಲ್ಲಿ ಒಂಬತ್ತು ಪೊಲೀಸ್ ಸಿಬ್ಬಂದಿ ಮತ್ತು ಜೆಸಿಬಿ ಚಾಲಕ ಗಾಯಗೊಂಡಿದ್ದು, ಕಾನೂನು ಉಲ್ಲಂಘಿಸಿದ ಎಲ್ಲರನ್ನು ಶಿಕ್ಷಿಸಲಾಗುವುದು ಎಂದು ಉಜ್ಜಯಿನಿಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂತೋಷ್ ಟ್ಯಾಗೋರ್ ಸ್ಪಷ್ಟಪಡಿಸಿದ್ದಾರೆ. ಅಧಿಕಾರಿಗಳಿಗೆ ಅವರ ಕರ್ತವ್ಯ ನಿರ್ವಹಿಸಲು ಬಿಡದವರ ವಿರುದ್ಧ ಶಿಸ್ತು ಕ್ರಮ ಖಚಿತ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂತೋಷ್ ಟ್ಯಾಗೋರ್ ಎಚ್ಚರಿಕೆ ನೀಡಿದ್ದಾರೆ.

ಏನೇ ವಿವಾದ ಇದ್ದರೂ ಅದನ್ನು ಕಾನೂನು ಮಾರ್ಗದ ಮೂಲಕ ಬಗೆಹರಿಸಿಕೊಳ್ಳಬೇಕಿತ್ತು. ಆದರೆ ಅದರ ಬದಲಾಗಿ ಪೊಲೀಸರು ಮತ್ತು ಅಧಿಕಾರಿಗಳ ಮೇಲೆ ದಾಳಿ ಮಾಡಬಾರದಿತ್ತು ಎಂದು ಕೆಲವರು ಸಾರ್ವಜನಿಕರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು