ಕನ್ನಡ ಸುದ್ದಿ  /  ಮನರಂಜನೆ  /  Darshan Fan Issue: 'ಕ್ರಾಂತಿ' ಪ್ರಚಾರ ಮಾಡಲು ಹೋಗಿ ಕೆಲಸ ಕಳೆದುಕೊಂಡ ಅಭಿಮಾನಿ...ದರ್ಶನ್‌ ಪ್ರತಿಕ್ರಿಯೆ ಹೇಗಿತ್ತು..?

Darshan Fan Issue: 'ಕ್ರಾಂತಿ' ಪ್ರಚಾರ ಮಾಡಲು ಹೋಗಿ ಕೆಲಸ ಕಳೆದುಕೊಂಡ ಅಭಿಮಾನಿ...ದರ್ಶನ್‌ ಪ್ರತಿಕ್ರಿಯೆ ಹೇಗಿತ್ತು..?

ನನ್ನ ವೈಯಕ್ತಿಕ ಜೀವನದಲ್ಲಿ ದೊಡ್ಡ ಹೊಡೆತ ಬಿದ್ದಿದೆ. ಅದು ನನ್ನ ತಪ್ಪು ಎಂದೇ ಹೇಳಬಹುದು. ಏಕೆಂದರೆ ದರ್ಶನ್‌ ಸರ್‌ ಬೇಡ ಎಂದಿದ್ದರು. ಆದರೂ ನಾನು ಅವರ ಮಾತು ಕೇಳಲಿಲ್ಲ. ನನಗೆ ಮಾಹಿತಿ ನೀಡದೆ ಕಂಪನಿಯವರು ಕೆಲಸದಿಂದ ತೆಗೆದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನನಗೆ ಬೇರೆ ಕಂಪನಿಯಲ್ಲಿ ಕೆಲಸ ದೊರೆಯುವುದು ಬಹಳ ಕಷ್ಟ. ಮುಂದೆ ಏನು ಮಾಡಬೇಕು ತಿಳಿಯುತ್ತಿಲ್ಲ ಎಂದು ಅವಿನಾಶ್‌ ಹೇಳಿಕೊಂಡಿದ್ದರು.

ದರ್ಶನ್‌ ಜೊತೆ ಅಭಿಮಾನಿ ಅವಿನಾಶ್‌ ನಾಗರಾಜ್
ದರ್ಶನ್‌ ಜೊತೆ ಅಭಿಮಾನಿ ಅವಿನಾಶ್‌ ನಾಗರಾಜ್ (‌PC: Avinash Nagaraj)

ಜನವರಿ 26 ರಂದು ತೆರೆ ಕಂಡ ದರ್ಶನ್‌ ಅಭಿನಯದ 'ಕ್ರಾಂತಿ' ಸಿನಿಮಾ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ನೆಗೆಟಿವ್‌ ಪ್ರಚಾರದ ನಡುವೆಯೂ ಜನರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಿರುರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ. ಈ ಖುಷಿಯನ್ನು ಹಂಚಿಕೊಳ್ಳಲು ಚಿತ್ರತಂಡ ಗುರುವಾರ ಬೆಂಗಳೂರಿನ ಖಾಸಗಿ ಹೋಟೆಲ್‌ ಒಂದರಲ್ಲಿ ಪ್ರೆಸ್‌ ಮೀಟ್‌ ಆಯೋಜಿಸಿತ್ತು.

ಈ ನಡುವೆ 'ಕ್ರಾಂತಿ' ಸಿನಿಮಾ ಪ್ರಚಾರ ಮಾಡಲು ಹೋದ ದರ್ಶನ್‌ ಅಭಿಮಾನಿಯೊಬ್ಬರು ಕೆಲಸ ಕಳೆದುಕೊಂಡಿದ್ದಾರೆ. ಅವಿನಾಶ್‌ ನಾಗರಾಜ್‌ ಎಂಬ ದರ್ಶನ್‌ ಅಭಿಮಾನಿ ಕಳೆದ 2 ತಿಂಗಳಿಂದ 'ಕ್ರಾಂತಿ' ಸಿನಿಮಾ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು. ತಮ್ಮ ಬೈಕ್‌ನಲ್ಲಿ ಚಿತ್ರದ ಪೋಸ್ಟರ್‌ ಅಂಟಿಸಿಕೊಂಡು ಪ್ರಚಾರ ಮಾಡಿದ್ದರು. ವಾಹನ ಚಲಾಯಿಸುವಾಗ ತಮಗಾಗಿ ಹಿಂದೆ ಬಂದು ವಿಡಿಯೋ ಮಾಡುವ, ಹಚ್ಚೆ ಹಾಕಿಸಿಕೊಳ್ಳುವ ಅಭಿಮಾನಿಗಳಿಗೆ ದರ್ಶನ್‌ ಅನೇಕ ಬಾರಿ ಬುದ್ಧಿ ಹೇಳಿದ್ದಾರೆ. ಇಂತಹ ಹುಚ್ಚಾಟಕ್ಕೆ ಕೈ ಹಾಕದಂತೆ ಎಚ್ಚರಿಸಿದ್ದಾರೆ. ಅವಿನಾಶ್‌ಗೆ ಕೂಡಾ ದರ್ಶನ್‌ ಈ ರೀತಿ ಕೆಲಸ ಬಿಟ್ಟು ಪ್ರಚಾರ ಮಾಡದಂತೆ ಹೇಳಿದ್ದಾರೆ. ಆದರೆ ಇದನ್ನು ಕೇಳದ ಆತ, ತನ್ನ ಖುಷಿಗಾಗಿ ಚಿತ್ರದ ಪ್ರಚಾರ ಮಾಡಲು ಹೋಗಿ ಈಗ ಕಷ್ಟ ಅನುಭವಿಸುತ್ತಿದ್ದಾರೆ.

ಇದೇ ವಿಚಾರವಾಗಿ ಅವಿನಾಶ್‌ ಸೆಲ್ಫಿ ವಿಡಿಯೋ ಮೂಲಕ ಬೇಸರ ವ್ಯಕ್ತಪಡಿಸಿದ್ದರು. ''ನನ್ನ ವೈಯಕ್ತಿಕ ಜೀವನದಲ್ಲಿ ದೊಡ್ಡ ಹೊಡೆತ ಬಿದ್ದಿದೆ. ಅದು ನನ್ನ ತಪ್ಪು ಎಂದೇ ಹೇಳಬಹುದು. ಏಕೆಂದರೆ ದರ್ಶನ್‌ ಸರ್‌ ಬೇಡ ಎಂದಿದ್ದರು. ಆದರೂ ನಾನು ಅವರ ಮಾತು ಕೇಳಲಿಲ್ಲ. ನನಗೆ ಮಾಹಿತಿ ನೀಡದೆ ಕಂಪನಿಯವರು ಕೆಲಸದಿಂದ ತೆಗೆದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನನಗೆ ಬೇರೆ ಕಂಪನಿಯಲ್ಲಿ ಕೆಲಸ ದೊರೆಯುವುದು ಬಹಳ ಕಷ್ಟ. ಮುಂದೆ ಏನು ಮಾಡಬೇಕು ತಿಳಿಯುತ್ತಿಲ್ಲ ಎಂದು ಅವಿನಾಶ್‌ ಹೇಳಿಕೊಂಡಿದ್ದರು. ಈ ವಿಡಿಯೋ ವೈರಲ್‌ ಆಗಿದ್ದು ದರ್ಶನ್‌ ಅವರಿಗೂ ಮುಟ್ಟಿದೆ.

ಗುರುವಾರ ಬೆಂಗಳೂರಿನಲ್ಲಿ ನಡೆದ 'ಕ್ರಾಂತಿ' ಸಕ್ಸಸ್‌ ಮೀಟ್‌ಗೆ ಅವಿನಾಶ್‌, ದರ್ಶನ್‌ ಅವರನ್ನು ಭೇಟಿ ಮಾಡಲು ಬಂದಿದ್ದಾರೆ. ಆತನನ್ನು ನೋಡಿದ ದರ್ಶನ್‌ ಏನಪ್ಪಾ ಕೆಲಸ ಕಳೆದುಕೊಂಡ್ಯಾ..? ಎಂದು ಕೈ ತೋರಿಸುತ್ತಾ ಅಲ್ಲಿಂದ ಮುಂದೆ ಹೋಗಿದ್ದಾರೆ. ಅವಿನಾಶ್‌ ಪರಿಸ್ಥಿತಿ ನೋಡಿ ಸೋಷಿಯಲ್‌ ಮೀಡಿಯಾದಲ್ಲಿ ಪರ ವಿರೋಧ ಕಮೆಂಟ್‌ ವ್ಯಕ್ತವಾಗುತ್ತಿದೆ. ಅಭಿಮಾನ ಇರಬೇಕು, ಆದರೆ ಕೆಲಸ ಕಳೆದುಕೊಳ್ಳುವ ಮಟ್ಟಿಗೆ ಇರಬಾರದು. ಸಿನಿಮಾ ಹಿಟ್‌ ಆಗುವುದು, ಬಿಡುವುದು, ಪ್ರಮೋಷನ್‌ ಮಾಡುವುದು ಚಿತ್ರತಂಡಕ್ಕೆ ಬಿಟ್ಟ ವಿಚಾರ. ನಿಮಗೆ ದರ್ಶನ್‌ ಬಗ್ಗೆ ಪ್ರೀತಿ ಇದ್ದರೆ ಟಿಕೆಟ್‌ ಪಡೆದು ಸಿನಿಮಾ ನೋಡಿ, ನಿಮ್ಮ ಸ್ನೇಹಿತರು, ಕುಟುಂಬದವರನ್ನೂ ಕರೆದುಕೊಂಡು ಹೋಗಿ, ಅದನ್ನು ಹೊರತುಪಡಿಸಿ ಕೆಲಸ ಬಿಟ್ಟು ತಿಂಗಳುಗಟ್ಟಲೆ ಹೀಗೆ ಹೊರಗೆ ಇದ್ದರೆ ಯಾವ ಕಂಪನಿಯಾದರೂ ಕೆಲಸದಿಂದ ತೆಗೆದೇ ತೆಗೆಯುತ್ತಾರೆ ಎಂದು ಜನರು ಅವಿನಾಶ್‌ಗೆ ಬುದ್ಧಿ ಹೇಳುತ್ತಿದ್ದಾರೆ.

'ಕ್ರಾಂತಿ' ಚಿತ್ರವನ್ನು ಮೀಡಿಯಾ ಹೌಸ್‌ ಸ್ಟುಡಿಯೋಸ್‌ ಬ್ಯಾನರ್‌ ಅಡಿ ಶೈಲಜಾ ನಾಗ್‌ ಹಾಗೂ ಬಿ. ಸುರೇಶ್‌ ನಿರ್ಮಿಸಿದ್ದಾರೆ. ಚಿತ್ರಕ್ಕೆ ವಿ. ಹರಿಕೃಷ್ಣ, ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹಾಡುಗಳಿಗೆ ಹರಿಕೃಷ್ಣ ಅವರೇ ಸಂಗೀತ ನೀಡಿದ್ದಾರೆ. ದರ್ಶನ್‌, ರಚಿತಾ ರಾಮ್‌, ರವಿಚಂದ್ರನ್‌, ಸುಮಲತಾ ಅಂಬರೀಶ್‌ ಹಾಗೂ ಇನ್ನಿತರು ಸಿನಿಮಾದಲ್ಲಿ ನಟಿಸಿದ್ದಾರೆ.

IPL_Entry_Point