Kichcha Sudeep: ಪ್ರಚಾರದ ನಡುವೆಯೇ ಫ್ಯಾನ್ಸ್ಗೆ ತಮ್ಮ ಮುಂದಿನ ಸಿನಿಮಾ ಬಗ್ಗೆ ಅಚ್ಚರಿಯ ಅಪ್ಡೇಟ್ ನೀಡಿದ ಕಿಚ್ಚ ಸುದೀಪ್
ರಾಜ್ಯಾದ್ಯಂತ ಬಿಜೆಪಿ ಪರವಾಗಿ ಪ್ರಚಾರದಲ್ಲಿ ಬಿಜಿಯಾಗಿರುವ ನಟ ಸುದೀಪ್, ಆ ಅಬ್ಬರದ ನಡುವೆಯೇ ತಮ್ಮ ಮುಂದಿನ ಸಿನಿಮಾದ ಬಗ್ಗೆ ಅಪ್ಡೇಟ್ ನೀಡಿದ್ದಾರೆ.
Kichcha Sudeep: ಸ್ಯಾಂಡಲ್ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಸದ್ಯ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಚುನಾವಣೆ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಬಿಜೆಪಿ (BJP) ಅಭ್ಯರ್ಥಿಗಳ ಪರ ಕ್ಯಾಂಪೇನ್ ನಡೆಸುತ್ತಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಪರವಾಗಿ ಅಬ್ಬರದ ಪ್ರಚಾರ ನಡುವೆಯೇ, ಅಭಿಮಾನಿಗಳ ಪ್ರೀತಿಯೂ ಕಿಚ್ಚನಿಗೆ ಸಿಕ್ಕಿದೆ. ಹೋದಲೆಲ್ಲ ಅವರನ್ನು ಅಷ್ಟೇ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಪ್ರೀತಿಯಿಂದಲೇ ತಂತಮ್ಮ ಊರಿಗೆ ಬರಮಾಡಿಕೊಂಡಿದ್ದಾರೆ. ಈ ಚುನಾವಣೆ ಗದ್ದಲದ ನಡುವೆಯೇ ತಮ್ಮ ಮುಂದಿನ ಸಿನಿಮಾದ ಅಪ್ಡೇಟ್ ಸಹ ನೀಡಿದ್ದಾರೆ ಸುದೀಪ್!
ಕಿಚ್ಚ ಸುದೀಪ್ ಸದ್ಯ ಯಾವೆಲ್ಲ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ತರಹೇವಾರಿ ಉತ್ತರಗಳು ಹರಿದಾಡುತ್ತಿದ್ದವು. ಆದರೆ, ಅದಕ್ಕೆ ಸೂಕ್ತ ಉತ್ತರ ಮಾತ್ರ ಸಿಕ್ಕಿರಲಿಲ್ಲ. ಇದೀಗ ಚುನಾವಣೆ ಪ್ರಚಾರದ ನಡುವೆಯೇ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಮುಂದಿನ ಸಿನಿಮಾ ಲಾಂಚ್ ಮತ್ತು ಶೂಟಿಂಗ್ ಶುರುವಾಗುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕಿಚ್ಚನ ಈ ಸರ್ಪ್ರೈಸ್ ಅವರ ಫ್ಯಾನ್ಸ್ಗೂ ಅಚ್ಚರಿ ಮೂಡಿಸಿದೆ.
ಯಾವ ಸಿನಿಮಾ, ಯಾವಾಗಿನಿಂದ ಶುರು?
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಸುದೀಪ್, ಮೂರು ಸಿನಿಮಾಗಳ ಪೈಕಿ ಒಂದು ಸಿನಿಮಾದ ಕೆಲಸ ಶುರುವಾಗುತ್ತಿದೆ. ಈ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದಕ್ಕೆ ಖುಷಿಯಿದೆ. ಇದೇ ಮೇ 22ರಂದು ಒಂದು ಸಿನಿಮಾದ ಪ್ರೋಮೋ ಶೂಟ್ ಶುರುವಾಗಲಿದೆ. ಜೂನ್ 1ರಂದು ಆ ಸಿನಿಮಾ ಲಾಂಚ್ ಆಗಲಿದೆ. ಚಿತ್ರದ ಸ್ಕ್ರಿಪ್ಟ್ ಮತ್ತು ಸಿನಿಮಾ ಮೂಡಿಬರಲಿರುವ ಶೈಲಿಯೂ ನನ್ನನ್ನೂ ಅಚ್ಚರಿಗೆ ದೂಡಿದೆ" ಎಂದಿದ್ದಾರೆ ಸುದೀಪ್. ಆದರೆ ಯಾವ ಸಿನಿಮಾ, ನಿರ್ದೇಶಕರು ಯಾರು ಎಂಬ ಬಗ್ಗೆ ಮಾಹಿತಿ ಮಾತ್ರ ಹೊರಬಿದ್ದಿಲ್ಲ.
ಆಟೋಗ್ರಾಫ್ ನಿರ್ದೇಶಕ ಚೇರನ್ ಜತೆ ಸಿನಿಮಾ?
ಕಿಚ್ಚ ಸುದೀಪ್ ಬಗ್ಗೆ ಸದ್ಯ ಹರಿದಾಡುತ್ತಿರುವ ಹೊಸ ಸುದ್ದಿಯೆಂದರೆ, ತಮಿಳಿನ ಖ್ಯಾತ ನಿರ್ದೇಶಕ ಚೇರನ್ ಜತೆ ಕಿಚ್ಚ ಸಿನಿಮಾ ಮಾಡಲಿದ್ದಾರಂತೆ. ತಮಿಳಿನಲ್ಲಿ ಆಟೋಗ್ರಾಫ್ ಸಿನಿಮಾ ನಿರ್ದೇಶನ ಮಾಡಿದ್ದ ಚೇರನ್, ಅದಾದ ಬಳಿಕ ಸಾಕಷ್ಟು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಆ ಚಿತ್ರವನ್ನೇ ಸುದೀಪ್ ಕನ್ನಡದಲ್ಲೂ ರಿಮೇಕ್ ಮಾಡಿದ್ದರು. ಸುದೀಪ್ಗೂ ಈ ಸಿನಿಮಾ ದೊಡ್ಡ ಮೈಲೇಜ್ ತಂದುಕೊಟ್ಟಿತ್ತು. ಈಗ ಈ ನಿರ್ದೇಶಕರ ಸಿನಿಮಾದಲ್ಲಿಯೇ ಸುದೀಪ್ ನಟಿಸಲಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ.
ಮೂರು ಸಿನಿಮಾಗಳಿಗೆ ಹಗಲು ರಾತ್ರಿ ಕೆಲಸ..
ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದ ಹಲವು ಸಿನಿಮಾ ವದಂತಿಗಳ ಬಗ್ಗೆ ಸುದೀಪ್ ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದರು. ಆ ಪತ್ರ ಹೀಗಿದೆ.
"#Kichcha46 ಚಿತ್ರದ ಬಗೆಗಿನ ಮೀಮ್ಗಳನ್ನು ನೋಡುತ್ತಿದ್ದರೆ ನಿಜಕ್ಕೂ ಖುಷಿ ಎನಿಸುತ್ತದೆ. ಇರಲಿ ಅದಕ್ಕೆ ಧನ್ಯವಾದಗಳು. ಈಗ ನಾನೊಂದು ಸಣ್ಣ ಕ್ಲಾರಿಫಿಕೇಷನ್ ನೀಡಲು ನಿರ್ಧರಿಸಿದ್ದೇನೆ.
ನಾನು ಇಷ್ಟೊಂದು ಸುದೀರ್ಘ ಬ್ರೇಕ್ ಯಾವತ್ತೂ ಪಡೆದಿರಲಿಲ್ಲ. ವಿಕ್ರಾಂತ್ ರೋಣ ಸಿನಿಮಾ ಆದ ಬಳಿಕ ಈ ರೀತಿಯ ಒಂದು ಬ್ರೇಕ್ ನನಗೆ ಬೇಕಿತ್ತು. ಕೋವಿಡ್ ಬಳಿಕ ನಾವು ಮತ್ತೆ ಬ್ರೇಕ್ ಪಡೆದಿರಲಿಲ್ಲ. ಅದಾಗುತ್ತಿದ್ದಂತೆ ಬಿಗ್ಬಾಸ್ ಒಟಿಟಿ ಶುರುವಾಯ್ತು, ಟಿವಿಯದ್ದೂ ಮುಗೀತು. ಹೀಗಿರುವಾಗ ನಾನು ಬ್ರೇಕ್ ಪಡೆದರೆ ಅದು ನನಗೂ ಖುಷಿ ಎನಿಸಬೇಕು. ಆಗ ನನಗೆ ಕ್ರಿಕೆಟ್ ಸಿಕ್ಕಿತು. ಒಂದಷ್ಟು ದಿನಗಳ ಕಾಲ ರಿಲ್ಯಾಕ್ಸ್ ಮೂಡ್ನಲ್ಲಿ ಕ್ರಿಕೆಟ್ನಲ್ಲಿ ಭಾಗವಹಿಸಿದ್ದೆ. ಕೆಸಿಸಿ ಮತ್ತು ಕರ್ನಾಟಕ ಬುಲ್ಡೋಸರ್ಸ್ ಜತೆ ಕೆಲ ಸಂತಸದ ಸಮಯ ಕಳೆದೆ. ನನಗನಿಸುತ್ತದೆ ಅದೊಂದು ಒಳ್ಳೆಯ ಬ್ರೇಕ್. ಒಳ್ಳೆಯ ಸಮಯ ಕಳೆದೆ.
ಇನ್ನು ಸಿನಿಮಾ, ಕಥೆ ಕೇಳುವುದು ನನ್ನ ನಿತ್ಯದ ಕೆಲಸಗಳು. ಈವರೆಗೂ ಮೂರು ಸ್ಕ್ರಿಪ್ಟ್ಗಳನ್ನು ಅಂತಿಮ ಮಾಡಿದ್ದೇನೆ. ಆ ಮೂರು ಸ್ಕ್ರಿಪ್ಟ್ಗಳಿಗೆ ಸಾಕಷ್ಟು ತಯಾರಿಯ ಅಗತ್ಯವಿದೆ. ಆ ಕೆಲಸವೂ ನಡೆಯುತ್ತಿದೆ. ಆ ಮೂರು ಸಿನಿಮಾಗಳಿಗೆ ಸಂಬಂಧಿಸಿದ ತಂಡಗಳು ಹಗಲು ರಾತ್ರಿ ಕೆಲಸ ಮಾಡುತ್ತಿವೆ. ಶೀಘ್ರದಲ್ಲಿಯೇ ಸಿನಿಮಾ ಘೋಷಣೆ ಮಾಡಲಿದ್ದೇವೆ" ಎಂದಿದ್ದಾರೆ ಸುದೀಪ್.