Congress Guarantee: ವಿದ್ಯುತ್ ಉಚಿತ ನೀಡುವ ಕಾಂಗ್ರೆಸ್ ಸರಕಾರ ಬಂದಿದೆ, ಬಿಲ್ ಕಟ್ಟೋಲ್ಲ ಹೋಗ್ರಿ ಅಂದ್ರು ಜಾಲಿಕಟ್ಟೆ ಗ್ರಾಮಸ್ಥರು
Karnataka Congress Government: ವಿದ್ಯುತ್ ಉಚಿತ ಎಂದು ಘೋಷಿಸಿದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆ ಕಾರಣಕ್ಕೆ ನಾವು ಹಣ ಪಾವತಿಸುವುದಿಲ್ಲ ಎಂದು ಚಿತ್ರದುರ್ಗದ ಜಾಲಿಕಟ್ಟೆ ಗ್ರಾಮಸ್ಥರು ಹೇಳಿದ್ದಾರೆ.
ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ನಾವು ವಿದ್ಯುತ್ ಬಿಲ್ ಪಾವತಿಸುವುದಿಲ್ಲ ಎಂದು ಗ್ರಾಮಸ್ಥರು ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ತಾಲ್ಲೂಕಿನ ಜಾಲಿಕಟ್ಟೆ ಗ್ರಾಮಕ್ಕೆ ಸೋಮವಾರ ಎಪ್ರಿಲ್ ತಿಂಗಳ ವಿದ್ಯುತ್ ಬಿಲ್ ಪಾವತಿ ಸಂಗ್ರಹಕ್ಕೆ ಸಿದ್ದಾಪುರ ಗ್ರಾಮ ಪಂಚಾಯತಿಯ ಗ್ರಾಮ ವಿದ್ಯುತ್ ಪ್ರತಿನಿಧಿ ಗೋಪಿ ತೆರಳಿದ್ದಾರೆ.
ಈ ವೇಳೆ ಗ್ರಾಮಸ್ಥರು 'ವಿದ್ಯುತ್ ಉಚಿತ ಎಂದು ಘೋಷಿಸಿದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆ ಕಾರಣಕ್ಕೆ ನಾವು ಹಣ ಪಾವತಿಸುವುದಿಲ್ಲ' ಎಂದು ತಿಳಿಸಿದ್ದಾರೆ. ಆದೇಶ ಬರುವವರೆಗೂ ಹಣ ಪಾವತಿಸಬೇಕೆಂದು ಗ್ರಾಮ ವಿದ್ಯುತ್ ಪ್ರತಿನಿಧಿ ವಿವರಿಸಿದ್ದಾರೆ. ಮಾತಿಗೆ ಜಗ್ಗದ ಗ್ರಾಮಸ್ಥರು 'ಆದೇಶದ ಬಗ್ಗೆ ಕಾಂಗ್ರೆಸ್ ನವರಿಗೇ ಕೇಳಿ. ಗ್ರಾಮದಲ್ಲಿ ಯಾರು ಈ ತಿಂಗಳಿನಿಂದ ಹಣ ಪಾವತಿಸುವುದಿಲ್ಲ' ಎಂದು ಹೇಳಿ ಕಳುಹಿಸಿದ್ದಾರೆ.
ಘಟನೆಯನ್ನು ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್( ಗ್ರಾಮಾಂತರ) ಕಿರಣ್ ರೆಡ್ಡಿ ಖಚಿತ ಪಡಿಸಿದ್ದು, ' ಸರ್ಕಾರದ ಆದೇಶ ಬರುವ ತನಕ ವಿದ್ಯುತ್ ಹಣ ಪಾವತಿಸಬೇಕು' ಎಂದು ಸ್ಪಷ್ಟಪಡಿಸಿದ್ದಾರೆ. (ವರದಿ: ಎಚ್. ಮಾರುತಿ, ಬೆಂಗಳೂರು)
ಏನಿದು ಉಚಿತ ವಿದ್ಯುತ್ ಯೋಜನೆ?
ಇದು ಕಾಂಗ್ರೆಸ್ ಪಕ್ಷವು ತನ್ನ ಪ್ರಜಾಧ್ವನಿ ಯಾತ್ರೆ ಆರಂಭಿಸಿದ ಸಂದರ್ಭದಲ್ಲಿ ನೀಡಿದ ಮೊದಲ ಗ್ಯಾರಂಟಿ. ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿಮನೆಗೆ ತಿಂಗಳಗೆ 200 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡ್ತಿವಿ ಎಂದು ಯಾತ್ರೆಯಲ್ಲಿ ಘೋಷಿಸಲಾಗಿತ್ತು. ಇದಕ್ಕೆ ಗೃಹಜ್ಯೋತಿ ಯೋಜನೆ ಎಂದು ಕರೆಯಲಾಗಿತ್ತು. ಪ್ರತಿಮನೆಯನ್ನು ಗೃಹ ಜ್ಯೋತಿ ಯೋಜನೆ ಮೂಲಕ ಬೆಳಗುವ ಭರವಸೆಯನ್ನು ನೀಡಲಾಗಿತ್ತು. ಬಳಿಕ ವಿವಿಧ ಚುನಾವಣಾ ಪ್ರಚಾರಗಳಿ ಉಚಿತ ವಿದ್ಯುತ್ ಕುರಿತು ಹೇಳಲಾಗಿತ್ತು.
ಇದು ಕೇವಲ ಭರವಸೆಯಲ್ಲ, ಇದಕ್ಕೆ ಗ್ಯಾರಂಟಿ ಕಾರ್ಡ್ ಕೊಡುವುದಾಗಿಯೂ ಹೇಳಿದೆ. ಈ ಘೋಷಣೆಯನ್ನು ಈ ವರ್ಷದ ಜನವರಿ ತಿಂಗಳಲ್ಲಿ ಘೋಷಿಸಲಾಗಿತ್ತು. “ಬೆಲೆ ಏರಿಕೆಯ ವಿರುದ್ಧ ಹೋರಾಡಲು ಕನ್ನಡಿಗರಿಗೆ ಸಹಾಯ ಮಾಡಲು ಮತ್ತು ಮಕ್ಕಳಿಗೆ ಶಿಕ್ಷಣ, ಆಹಾರ ಮತ್ತು ಆರೋಗ್ಯದಂತಹ ಅಗತ್ಯ ವಸ್ತುಗಳು ದೊರಕುವಂತಾಗಲು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಿದೆ" ಎಂದು ಭರವಸೆ ನೀಡಲಾಗಿದೆ.
ಗೃಹ ಲಕ್ಷ್ಮೀ ಯೋಜನೆ: , “ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಈ ಯೋಜನೆಯಡಿ ರಾಜ್ಯದ ಪ್ರತಿ ಗೃಹಿಣಿಯರಿಗೆ ತಿಂಗಳಿಗೆ 2,000 ರೂಪಾಯಿ ನೀಡಲಿದೆ. ಇದರಿಂದ 1.5 ಕೋಟಿ ಗೃಹಿಣಿಯರಿಗೆ ಅನುಕೂಲವಾಗಲಿದೆ. ಕುಟುಂಬದ ಮುಖ್ಯಸ್ಥೆಗೆ ಈ ಹಣ ಹಂಚಿಕೆಯಾಗಲಿದೆ" ಎಂದು ಕಾಂಗ್ರೆಸ್ ಭರವಸೆ ನೀಡಿತ್ತು.
ಅನ್ನ ಭಾಗ್ಯ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಅನ್ನ ಭಾಗ್ಯ’ ಯೋಜನೆಯು ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಜನರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ಭರವಸೆ ನೀಡಲಾಗಿದೆ.
ಯುವ ನಿಧಿ: ನಿರುದ್ಯೋಗದ ವಿರುದ್ಧ ಹೋರಾಡಲು ಕಾಂಗ್ರೆಸ್ ಪಕ್ಷವು ಯುವ ನಿಧಿ ಯೋಜನೆಯನ್ನು ಘೋಷಿಸಿದೆ. ಪದವಿ ಪಡೆದ ಯುವ ಜನತೆಗೆ ಉದ್ಯೋಗ ದೊರಕದೆ ಇದ್ದರೆ ಪ್ರತಿತಿಂಗಳು 3000 ರೂ. ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಡಿಪ್ಲೊಮಾ ಪಡೆದ ನಿರುದ್ಯೋಗಿಗಳಿಗೆ ತಿಂಗಳಿಗೆ 1500 ರೂ ನೀಡುವ ಭರವಸೆಯನ್ನು ನೀಡಲಾಗಿದೆ.