HD Deve Gowda Health: ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಆಸ್ಪತ್ರೆಗೆ ದಾಖಲು, ಆರೋಗ್ಯವಾಗಿದ್ದೇನೆ ಎಂದು ಟ್ವೀಟ್ ಮಾಡಿದ ಜೆಡಿಎಸ್ ವರಿಷ್ಠ
ಮಾಜಿ ಪ್ರಧಾನಮಂತ್ರಿ, ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ಅವರು ವಯೋಸಹಜ ಅನೋರೋಗ್ಯ ಕಾರಣದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಇಂದು ಬೆಳಗ್ಗೆ ದಾಖಲಾಗಿದ್ದಾರೆ.
ಬೆಂಗಳೂರು: ಮಾಜಿ ಪ್ರಧಾನಮಂತ್ರಿ, ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ಅವರು ವಯೋಸಹಜ ಅನೋರೋಗ್ಯ ಕಾರಣದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಇಂದು ಬೆಳಗ್ಗೆ ದಾಖಲಾಗಿದ್ದಾರೆ. ಕಾಲು ನೋವಿಗೆ ಇವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ಇವರಿಗೆ ಫಿಜಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದ್ದು, ಒಂದು ವಾರ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ.
ಮಾಜಿ ಪ್ರಧಾನಿ ದೇವೇಗೌಡರಿಗೆ ಹಲವು ದಿನಗಳಿಂದ ಮಂಡಿ ನೋವು ಇದ್ದು, ಮೊಣಕಾಲು ಊದಿಕೊಂಡು ನೋವು ಹೆಚ್ಚಾಗಿತ್ತು. ಹಲವು ದಿನಗಳಿಂದ ಗಣ್ಯರು ಭೇಟಿ ನೀಡುವುದರಿಂದ ಇವರಿಗೆ ವಿಶ್ರಾಂತಿ ಕಡಿಮೆಯಾಗಿತ್ತು. ಹೀಗಾಗಿ, ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಇತರರನ್ನು ಭೇಟಿಯಾಗದೆ ವಿಶ್ರಾಂತಿ ಪಡೆಯುತ್ತಿದ್ದಾರೆ.
"ದೇವೇಗೌಡರು ಆರೋಗ್ಯವಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ" ಎಂದು ಮೂಲಗಳು ತಿಳಿಸಿವೆ.
ಇದೇ ಸಂದರ್ಭದಲ್ಲಿ ಎಚ್ಡಿ ದೇವೇಗೌಡರು ಟ್ವೀಟ್ ಮಾಡಿದ್ದು, ನಾನು ಆರೋಗ್ಯವಾಗಿದ್ದೇನೆ. ನಿಯಮಿತ ತಪಾಸಣೆಗಾಗಿ ಆಸ್ಪತ್ರೆಗೆ ಆಗಮಿಸಿದ್ದೇನೆ ಎಂದು ಹೇಳಿದ್ದಾರೆ.
ಮನೆಯಲ್ಲಿ ಸದಾ ಜೆಡಿಎಸ್ ಕಾರ್ಯಕರ್ತರು ಆಗಮಿಸುತ್ತಾರೆ. ಸದಾ ಗಣ್ಯರು, ಜೆಡಿಎಸ್ ನಾಯಕರು ಬರುತ್ತಿರುತ್ತಾರೆ. ದಿನನಿತ್ಯ ನೂರಾರು ಜನರು ಬರುವ ಕಾರಣ ಮನೆಯಲ್ಲಿ ವಿಶ್ರಾಂತಿ ಕಷ್ಟ. ಹೀಗಾಗಿ, ಇನ್ನೊಂದು ವಾರ ಆಸ್ಪತ್ರೆಯಲ್ಲಿಯೇ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
"ದೇವೇಗೌಡರ ಆರೋಗ್ಯವೇ ಮುಖ್ಯ, ಟಿಕೆಟ್ ಹಂಚಿಕೆ ಕುರಿತು ದೇವೇಗೌಡರ ಸಮ್ಮುಖದಲ್ಲಿ ತೀರ್ಮಾನ ಕೈಗೊಳ್ಳಲಾಗುವುದುʼʼ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹೇಳಿದ್ದರು.
ಏಪ್ರಿಲ್ ತಿಂಗಳಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿರುವ ಕಾರಣ, ಆ ಸಮಯದಲ್ಲಿ ಓಡಾಟ ಹೆಚ್ಚಿರಲಿದೆ. ಹೀಗಾಗಿ, ಈಗ ವಿಶ್ರಾಂತಿ ಪಡೆಯುವುದು ಸೂಕ್ತ ಎಂದು ಮಾಜಿ ಪ್ರಧಾನಿಗೆ ಸೂಚಿಸಲಾಗಿದೆ ಎನ್ನಲಾಗಿದೆ.
ಎಚ್.ಡಿ.ದೇವೇಗೌಡರ ಬಗ್ಗೆ ಸಿಟಿ ರವಿ ಕೀಳು ಹೇಳಿಕೆ ವಿರೋಧಿಸಿ ಪ್ರತಿಭಟನೆ
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಅತ್ಯಂತ ಕೀಳುಮಟ್ಟದ ಹೇಳಿಕೆ ನೀಡಿದ್ದ ಬಿಜೆಪಿ ನಾಯಕ ಹಾಗೂ ಶಾಸಕ ಸಿಟಿ ರವಿ ವಿರುದ್ಧ ಜೆಡಿಎಸ್ ಮುಖಂಡರು, ಕಾರ್ಯಕರ್ತರು ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಎಂ.ರಮೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರಿನ ಮೌರ್ಯ ಹೋಟೆಲ್ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸಿಟಿ ರವಿ ಪ್ರತಿಕೃತಿ ದಹನ ಮಾಡಿ ಅಕ್ರೋಶ ವ್ಯಕ್ತಪಡಿಸಿದರು.
ದೇವೇಗೌಡರು ನಮ್ಮ ಪಕ್ಷದ ಸರ್ವೋಚ್ಚ ನಾಯಕರು. ಇಡೀ ರಾಜ್ಯದ ಜನರು ಅಪಾರ ಗೌರವ ಪ್ರೀತಿ ಇಟ್ಟುಕೊಂಡಿರುವ ಮೇರು ನಾಯಕ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಅತ್ಯಂತ ಗೌರವದಿಂದ ಕಾಣುವ ನಾಯಕರು ದೇವೇಗೌಡರು. ಅಂತಹವರ ಬಗ್ಗೆ ಸಿಟಿ ರವಿ ಕೀಳಾಗಿ ಮಾತನಾಡುವುದು ಖಂಡನೀಯ ಎಂದು ರಮೇಶ್ ಗೌಡ ಅವರು ಕಿಡಿಕಾರಿದರು.
ದೇಶದ ಪ್ರಧಾನಿ ಹುದ್ದೆ ಅಲಂಕರಿಸಿದ್ದ ಏಕೈಕ ಕನ್ನಡಿಗರು ದೇವೇಗೌಡರು. ಅವರನ್ನು ಅಪಮಾನಿಸುವುದು ಎಂದರೆ ಸಮಸ್ತ ಕನ್ನಡಿಗರನ್ನು ಅಪಮಾನಿಸುವುದೇ ಆಗಿದೆ ಎಂದ ಅವರು, ಸಿಟಿ ರವಿ ಬೇಷರತ್ತಾಗಿ ದೇವೆಗೌಡರ ಕ್ಷಮೆ ಕೇಳಬೇಕು. ಇಲ್ಲವಾದರೆ ಜೆಡಿಎಸ್ ಪಕ್ಷದಿಂದ ಉಗ್ರ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಕಷ್ಟ ಬಂದಾಗ ಕುಮಾರಸ್ವಾಮಿ ಅವರ ಮುಂದೆ ಕೈಕಟ್ಟಿಕೊಂಡು ನಿಂತಿದ್ದ ವ್ಯಕ್ತಿಯೊಬ್ಬ ಅಧಿಕಾರ ಸಿಕ್ಕ ಕೂಡಲೇ ಆ ಕುಟುಂಬದ ಬಗ್ಗೆ ಕೆಟ್ಟದ್ದಾಗಿ ಮಾತನಾಡುವುದು ಅವರ ಕೊಳಕು ಸಂಸ್ಕಾರವನ್ನು ತೋರಿಸುತ್ತದೆ. ಇನ್ನಾದರೂ ಸಿಟಿ ರವಿ ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ಇಲ್ಲವಾದರೆ ತಕ್ಕ ಪಾಠ ಕಳಿಸಲಾಗುವುದು ಎಂದು ಅವರು ಹೇಳಿದ್ದಾರೆ.