ಕನ್ನಡ ಸುದ್ದಿ  /  Karnataka  /  Mysuru News Free Obbattu Meal At Indira Canteens By A Fan As Siddaramaih Taking Oath As Karnataka Chief Minister Mgb

Mysuru News: ಇದು ಸಿಹಿ ಸುದ್ದಿ; ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿರುವ ಖುಷಿಗೆ ಮೈಸೂರಿನ ಇಂದಿರಾ ಕ್ಯಾಂಟೀನ್​​ನಲ್ಲಿ ಉಚಿತ ಹೋಳಿಗೆ ಊಟ

Free Obbattu meal at Mysuru Indira Canteens: ಸಿದ್ದರಾಮಯ್ಯ ಅವರ ಕಟ್ಟಾ ಅಭಿಮಾನಿ ಬಸವರಾಜ್ ಎಂಬವವರು ಮೈಸೂರಿನ ಇಂದಿರಾ ಕ್ಯಾಂಟೀನ್‌ನಲ್ಲಿ ಶುಕ್ರವಾರ ( ಮೇ 19) ಹೋಳಿಗೆ ಸಹಿತ ಊಟ ಹಂಚಿದ್ದಾರೆ. ತಮ್ಮ ನೆಚ್ಚಿನ ನಾಯಕ ಮತ್ತೆ ಸಿಎಂ ಆಗುತ್ತಿರುವುದಕ್ಕೆ ಮೈಸೂರಿನ 11 ಇಂದಿರಾಗಾಂಧಿ ಕ್ಯಾಂಟೀನ್‌ಗಳಲ್ಲಿ ಇಂದೂ ಹೋಳಿಗೆ ಊಟ ನೀಡಲು ಯೋಜಿಸಿದ್ದಾರೆ.

ಮೈಸೂರಿನ ಇಂದಿರಾ ಕ್ಯಾಂಟೀನ್​​ನಲ್ಲಿ ಉಚಿತ ಹೋಳಿಗೆ ಊಟ
ಮೈಸೂರಿನ ಇಂದಿರಾ ಕ್ಯಾಂಟೀನ್​​ನಲ್ಲಿ ಉಚಿತ ಹೋಳಿಗೆ ಊಟ

ಮೈಸೂರು: ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ (Siddaramaiah) ಅವರು ಮುಖ್ಯಮಂತ್ರಿಯಾಗಿ ಇಂದು ( ಮೇ 20) ಅಧಿಕಾರ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಅವರು ಮೈಸೂರಿನವರಾದ ಕಾರಣ ವಿಶೇಷವಾಗಿ ಮೈಸೂರಿನಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ.

ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರ ಕಟ್ಟಾ ಅಭಿಮಾನಿ ಬಸವರಾಜ್ ಎಂಬವವರು ಮೈಸೂರಿನ ಇಂದಿರಾ ಕ್ಯಾಂಟೀನ್‌ನಲ್ಲಿ ಶುಕ್ರವಾರ ( ಮೇ 19) ಹೋಳಿಗೆ ಸಹಿತ ಊಟ ಹಂಚಿದ್ದಾರೆ. ತಮ್ಮ ನೆಚ್ಚಿನ ನಾಯಕ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುತ್ತಿರುವುದರ ಸಂಭ್ರಮ ಆಚರಿಸಲು ಅವರು ಮೈಸೂರಿನ 11 ಇಂದಿರಾಗಾಂಧಿ ಕ್ಯಾಂಟೀನ್‌ಗಳಲ್ಲಿ ಇದೇ ರೀತಿ ಇಂದೂ ಹೋಳಿಗೆ ಊಟ ನೀಡಲು ಯೋಜಿಸಿದ್ದಾರೆ. 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಬಸವರಾಜ್ ಅವರು ನಂಜುಮಳಿಗೆ ವೃತ್ತದಲ್ಲಿ ಸಿಹಿ ಹಂಚಿದ್ದರು.

ನಿನ್ನೆ ಶುಕ್ರವಾರ ಇಂದಿರಾ ಕ್ಯಾಂಟೀನ್ನಲ್ಲಿ 150 ಸದಸ್ಯರಿಗೆ ಹೋಳಿಗೆ ವಿತರಿಸಲಾಗಿದೆ. ಇಂದು ಸಿದ್ದರಾಮಯ್ಯನವರ ಅನ್ನ ಭಾಗ್ಯ ಯೋಜನೆಗೆ ಗೌರವಾರ್ಥ ಹೋಳಿಗೆ ವಿತರಿಸಲು ಮುಂದಾಗಿದ್ದಾರೆ. ‘ಕ್ಷೀರ ಭಾಗ್ಯ’ ಯೋಜನೆಯನ್ನು ಗುರುತಿಸಲು ಅವರು ಬಾದಾಮ್ ಹಾಲು ವಿತರಿಸಲು ಯೋಜಿಸಿದ್ದಾರೆ ಎನ್ನಲಾಗಿದೆ. ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್‌ನ ಉಪಾಧ್ಯಕ್ಷರಾಗಿರುವ ಡಿ.ಬಸವರಾಜ್ ಅವರು 1987 ರಿಂದ ಸಿದ್ದರಾಮಯ್ಯ ಅವರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದಾರೆ.

ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಘೋಷಣೆಯಾದ ಬೆನ್ನಲ್ಲೇ ಅವರ ನಿವಾಸದ ಬಳಿ ಹಲವು ಫ್ಲೆಕ್ಸ್ ಗಳು ರಾರಾಜಿಸುತ್ತಿವೆ. 2 ಬಾರಿಗೆ ಸಿಎಂ ಆಗ್ತಿರುವ ಸಿದ್ದರಾಮಯ್ಯಗೆ ಶುಭಕೋರಿ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ಜೊತೆಗೆ ಸಿದ್ದರಾಮಯ್ಯ ನಿವಾಸದ ಬಳಿ ಕೇಕ್ ಕತ್ತರಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರುವ ಸಿದ್ದರಾಮಯ್ಯ ಸರ್ಕಾರಿ ನಿವಾಸದ ಬಳಿ ಸಿಎಂ ಸಿದ್ದರಾಮಯ್ಯ 2.0 ಎಂಬ ಬರಹವುಳ್ಳ ಸುಮಾರು 7 ಕೆಜಿ ತೂಕದ ಕೇಕ್ ಕಟ್ ಮಾಡಿ ಸಂಭ್ರಮಾಚರಣೆ ಮಾಡಿದರು. ಸಿದ್ದರಾಮಯ್ಯ ಸರ್ಕಾರಿ ನಿವಾಸ ಮುಂಭಾಗದ ನಾಮಫಲಕಕ್ಕೆ ಮಲ್ಲಿಗೆ ಹಾರ ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿದರು. ಅಲ್ಲದೇ ಸಿದ್ದು ಹೆಸರಲ್ಲಿ ಅಭಿಮಾನಿಗಳು ಬನ್ನೇರುಘಟ್ಟದ ಪುರಾತನಕಾಲದ ಚಂಪಕದಾಮ ದೇವಾಲಯದಲ್ಲಿ ಅರ್ಚನೆ ಮಾಡಿಸಿ ಪ್ರಸಾದವನ್ನು ತಂದು ಹಂಚಿದರು.

ಇನ್ನೊಂದೆಡೆ ಸಿದ್ದರಾಮಯ್ಯ ಗೆದ್ದ ಖುಷಿಯಲ್ಲಿ ಸಿದ್ದರಾಮನ ಹುಂಡಿ ಗ್ರಾಮದಿಂದ ಅಭಿಮಾನಿ ಜಗದೀಶ್ ಸಿದ್ದು ಭಾವಚಿತ್ರವನ್ನ ಟ್ಯಾಟೋ ಹಾಕಿಸಿಕೊಂಡು ಬಂದಿದ್ದಾರೆ. ಸಿದ್ದರಾಮಯ್ಯ ಆಗೋದನ್ನ ನೋಡ್ಕೊಂಡೇ ವಾಪಸ್ ಹೋಗ್ತೇನೆ ಅಂತ ಸಂತಸ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯನವರ ಮನೆ ಮುಂದೆ ಸಿದ್ದರಾಮಯ್ಯ ಬ್ಯಾನರ್ ಹಿಡಿದು ನಾದಸ್ವರ ವಾದ್ಯ ನುಡಿಸುವ ಮೂಲಕ ಅಭಿಮಾನಿಗಳು ಸಂಭ್ರಮಿಸಿದ್ರು.

ಸಿದ್ದರಾಮಯ್ಯ ಸಹೋದರ ಹೇಳಿದ್ದಿಷ್ಟು

ಇದೇ ಸಂದರ್ಭದಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ, ಈ ಬಾರಿಯೂ ನಮ್ಮ ಅಣ್ಣ ಬಹಳ ಒಳ್ಳೆಯ ಆಡಳಿತ ಮಾಡುತ್ತಾರೆ. ನಮ್ಮ ಅಣ್ಣ ಬಡವರ ಪರ. ನಾವು ಕುಟುಂಬದವರು ಯಾವತ್ತೂ ನಮ್ಮ ಅಣ್ಣನ ಆಡಳಿತದ ಹತ್ತಿರ ಹೋಗಲ್ಲ. ನಮ್ಮ ಅಣ್ಣ ಈ ಸ್ಥಾನಕ್ಕೆ ಬರಲು ಬಹಳ ಕಷ್ಟಪಟ್ಟಿದ್ದಾನೆ. ನಾನು ಅನಕ್ಷರಸ್ಥ. ನಾನು ಏನೂ ಅಂತಾ ಅವನ ಬಳಿ ಹೋಗಿ ಕೇಳಲಿ. ನಾವು ಸಹೋದರರು ಯಾವತ್ತೂ ಫೋನ್ ನಲ್ಲೂ ಮಾತಾಡಲ್ಲ. ನಾನು ಏನಾದ್ರೂ ಇದ್ದರೆ ಮನೆಗೆ ಹೋಗಿ ಮಾತಾಡಿ ಬರ್ತೀನಿ. ವಿಧಾನಸೌಧಕ್ಕೆ ಹೋಗೋ ಅಭ್ಯಾಸವೂ ನಮಗೆ ಇಲ್ಲ ಎಂದು ಸಿದ್ದೇಗೌಡ ಹೇಳಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ನಡುವಿನ ಕುರ್ಚಿ ಕದನ ಅಂತ್ಯವಾಗಿದ್ದು, ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನ ದೊರೆತಿದೆ. ಡಿ.ಕೆ.ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ದೊರೆತಿದೆ. ಕರ್ನಾಟಕದ ನೂತನ ಸರ್ಕಾರದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಶಾಸಕರ ಪ್ರಮಾಣವಚನ ಸ್ವೀಕಾರ ಸಮಾರಂಭ ಇಂದು ಮಧ್ಯಾಹ್ನ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.

ವರದಿ: ಧಾತ್ರಿ ಭಾರದ್ವಾಜ್‌

IPL_Entry_Point