Independence day: ಇಲ್ಲಿ ನಿತ್ಯವೂ ಸ್ವಾತಂತ್ರ್ಯೋತ್ಸವ: ಮೈಸೂರಿನ ಹೋಟೆಲ್ನಲ್ಲಿ ದೇಶಪ್ರೇಮದ ಉತ್ಸವ
Independence Day Mysuru special ಮೈಸೂರಿನ ಬೋಗಾದಿ ರಸ್ತೆಯಲ್ಲಿರುವ ಅಂಕಲ್ ಲೋಬೋಸ್ ಹೊಟೇಲ್ನಲ್ಲಿ ನಿತ್ಯ ಧ್ವಜ ವಂದನೆ, ರಾಷ್ಟ್ರಗೀತೆ ಹಾಡಲಾಗುತ್ತದೆ. ಇಲ್ಲಿಗೆ ಊಟಕ್ಕೆ ಬರುವ ಸೈನಿಕರಿಗೆ ರಿಯಾಯಿತಿ ದರದಲ್ಲಿ ಊಟವೂ ಇರಲಿದೆ. ಹೇಗಿದೆ ಈ ಆಚರಣೆ. ಇಲ್ಲಿದೆ ವರದಿ..
ಮೈಸೂರು: ಆಗಸ್ಟ್ 15 ಬಂದರೆ ಎಲ್ಲ ಕಡೆಯೂ ತ್ರಿವರ್ಣದ್ದೇ ಕಾರುಬಾರು. ನಮ್ಮ ಮೈಸೂರೂ ದೇಶಪ್ರೇಮಕ್ಕೆ ಹೊರತಾಗಿಲ್ಲ. ಇಲ್ಲಿಯೂ ದೇಶಪ್ರೇಮ ಬಿಂಬಿಸುವ ಜಾಗಗಳಿವೆ. ಜನಗಳಿದ್ದಾರೆ. ಇವರನ್ನೆಲ್ಲಾ ನೋಡಿದರೆ ಎಂತಹವರಿಗೂ ದೇಶಪ್ರೇಮದ ಮಹತ್ವ ತಿಳಿಯುತ್ತದೆ.
ಟ್ರೆಂಡಿಂಗ್ ಸುದ್ದಿ
ಮೈಸೂರಿಗೆ ಬಂದಾಗ ಒಮ್ಮೆಯಾದರೂ ಇಲ್ಲಿಗೆ ಭೇಟಿ ಕೊಡಲೇ ಬೇಕು ಎನಿಸುತ್ತದೆ. ಈ ಹೋಟೆಲ್ ಬಗ್ಗೆ ನೀವು ಮಾತ್ರವಲ್ಲ, ಇಡೀ ದೇಶದ ಜನರು ತಿಳಿದುಕೊಳ್ಳಬೇಕು. ಇಲ್ಲಿ ದಿನವೂ ಸೈನಿಕರಿಗೆ ನಮನ ಸಲ್ಲಿಸಲಾಗುತ್ತದೆ. ಇಲ್ಲಿಗೆ ಬಂದವರಿಗೂ ದೇಶಪ್ರೇಮದ ಕಂಪನ್ನು ಪಸರಿಸಲಾಗುತ್ತದೆ.
ಹೀಗಿರಲಿದೆ ನಿತ್ಯ ಧ್ವಜ ವಂದನೆ
ಮೈಸೂರಿನ ಬೋಗಾದಿಯಲ್ಲಿರುವ ಈ ಹೋಟೆಲ್ ಹೆಸರು ‘ಅಂಕಲ್ ಲೋಬೋಸ್ ಸುಗ್ಗಿಮನೆ’. ಇಲ್ಲಿ ಪ್ರತಿನಿತ್ಯ ರಾಷ್ಟ್ರಗೀತೆಯ ಝೇಂಕಾರ ಮೊಳಗುತ್ತದೆ. ರಾಷ್ಟ್ರಗೀತೆಯಿಂದಲೇ ದಿನ ಶುರುವಾಗುತ್ತದೆ. ಈ ಹೋಟೆಲ್ ಮೇಲೆ ಧ್ವಜವನ್ನು ಹಾಕಲಾಗಿದೆ.
ಬೆಳಿಗ್ಗೆ 10.30ಕ್ಕೆ ಸರಿಯಾಗಿ ಹೋಟೆಲ್ ಮೇಲಿರುವ ಭಾರತ ಧ್ವಜದ ಮುಂದೆ ನಿಂತು ರಾಷ್ಟ್ರಗೀತೆ ಹಾಡುತ್ತಾರೆ. ನಂತರ ಹೋಟೆಲ್ ಎಂದಿನಂತೆ ಕಾರ್ಯನಿರ್ವಹಿಸುತ್ತದೆ. ನಂತರ ಸಂಜೆಯಾಗುವ ಮುನ್ನವೇ ಗೌರವಯುತವಾಗಿ ರಾಷ್ಟ್ರಧ್ವಜವನ್ನ ಇಳಿಸಲಾಗುತ್ತದೆ. ನಂತರ ಅದನ್ನ ಸುರಕ್ಷಿತವಾಗಿ ಇಡಲಾಗುತ್ತದೆ. ಇದು ಇಲ್ಲಿನ ಮಾಲಿಕರು ಹಾಗೂ ಸಿಬ್ಬಂದಿ ದೇಶಕ್ಕೆ ಪ್ರತಿದಿನ ಗೌರವ ಸಲ್ಲಿಸುವ ಪರಿ.
ಸೈನಿಕರ ಕಷ್ಟ ಕಂಡ ಮಾಲೀಕ
ಇಷ್ಟಕ್ಕೆಲ್ಲಾ ಕಾರಣ ಇಲ್ಲಿನ ಮಾಲಿಕರಾದ ಹರೀಶ್ ಕುಮಾರ್. ಹರೀಶ್ ಕುಮಾರ್ ಮೂಲತಃ ಮೈಸೂರಿನವರು. ಇವರು ಕೃಷಿ ಕುಟುಂಬದಿಂದ ಬಂದವರು. ಒಮ್ಮೆ ಹರೀಶ್ ಕಾಶ್ಮೀರಕ್ಕೆ ಹೋಗಿದ್ದರಂತೆ. ಆಗ ನಮ್ಮನ್ನ ಗಡಿಯಲ್ಲಿ ಕಾಯುವ ಸೈನಿಕರು, ಅವರ ಜೀವನವನ್ನು ಕಣ್ಣಾರೆ ಕಂಡಿದ್ದರಂತೆ. ನಮಗಾಗಿ ಅವರು ಹಗಲು-ರಾತ್ರಿಯೆನ್ನದೆ, ಬಿಸಿಲು-ಮಳೆಯೆನ್ನದೆ ದುಡಿಯುತ್ತಾರೆ. ತಮ್ಮ ಆತ್ಮೀಯರು, ಕುಟುಂಬದವರು, ಹೆಂಡತಿ-ಮಕ್ಕಳು, ಮನೆ-ಜನ ಎಲ್ಲವನ್ನೂ ಬಿಟ್ಟು ಬರುತ್ತಾರೆ. ದೇಶಕ್ಕಾಗಿ ತಮ್ಮ ಜೀವ ಪಣಕ್ಕಿಡುತ್ತಾರೆ. ಇದನ್ನೆಲ್ಲಾ ನೋಡಿದ ಹರೀಶ್ ಗೆ ನಮ್ಮ ಸೈನಿಕರಿಗಾಗಿ ಏನಾದರೂ ಮಾಡಬೇಕು ಎಂದುಕೊಂಡರು. ಆಗಲೇ ಮೈಸೂರಿಗೆ ಮರಳಿದ ತಕ್ಷಣ ತಮ್ಮ ಹೋಟೆಲ್ ನಲ್ಲಿ ಈ ದಿನಚರಿಯನ್ನು ಶುರುಮಾಡಿದರು.
ಸಿಬ್ಬಂದಿಗೂ ಖುಷಿ
ಮೊದಮೊದಲು ಈ ಹೊಸ ಆಚರಣೆಯ ಬಗ್ಗೆ ಆಶ್ಚರ್ಯಪಟ್ಟ ಸಿಬ್ಬಂದಿ ದಿನಕಳೆದಂತೆ ಇದೇ ದಿನಚರಿಗೆ ಹೊಂದಿಕೊಂಡರು. ಈಗ ಅಲ್ಲಿನ ಸಿಬ್ಬಂದಿ ಇಂತಹ ಸ್ಥಳದಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಹೆಮ್ಮೆ ಪಡುತ್ತಾರೆ.
ಇಡೀ ಹೋಟೆಲ್ ಅನ್ನು ಹಳ್ಳಿಯ ಸೊಗಡಿನ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಗೋಡೆಗಳ ಮೇಲೆಯೂ ವಿವಿಧ ಚಿತ್ರಗಳನ್ನ ಬಿಡಿಸಲಾಗಿದೆ. ಈ ರೀತಿಯ ವಿನ್ಯಾಸ ಮತ್ತೆಲ್ಲೂ ಇಲ್ಲ. ಕಾರಣದಿಂದಲೇ ಅದೆಷ್ಟೋ ಜನ ಇಲ್ಲಿಗೆ ಬರುತ್ತಾರೆ.
ಊಟದಲ್ಲೂ ರಿಯಾಯಿತಿ
ಇಲ್ಲಿಗೆ ಬರುವ ಸೈನಿಕರು ಹಾಗೂ ನಿವೃತ್ತ ಸೈನಿಕರಿಗೆ ಶೇ.10 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಜೊತೆಗೆ ರ್ಷಕ್ಕೆ ಒಂದು ಬಾರಿ ಇಡೀ ರ್ಷದ ಆದಾಯದ ಶೇ.10ರಷ್ಟನ್ನ ಸೈನಿಕರ ನಿಧಿಗೆ ಕೊಡಲಾಗುತ್ತದೆ. ಇವರು ನಮ್ಮ ಮೈಸೂರಿನಲ್ಲಿರುವುದು ನಮ್ಮ ಹೆಮ್ಮೆ. ನೀವೂ ಮೈಸೂರಿನವರಾಗಿದ್ದರೆ ಇಲ್ಲಿಗೆ ಭೇಟಿ ಕೊಡಿ. ಇಲ್ಲವಾದರೆ ಮುಂದಿನ ಬಾರಿ ಮೈಸೂರಿಗೆ ಬಂದಾಗ ತಪ್ಪದೇ ಅಂಕಲ್ ಲೋಬೋಸ್ ಗೆ ಒಂದು ವಿಸಿಟ್ ಹಾಕಿ.