ಕನ್ನಡ ಸುದ್ದಿ  /  ಕರ್ನಾಟಕ  /  Priyanka Gandhi: ಪ್ರಿಯಾಂಕಾ ಗಾಂಧಿ ಹಣೆ ಮೇಲೆ ತಿಲಕ, ಕತ್ತಿನಲ್ಲಿ ಹಾರ, ತಲೆಗೆ ಮುಟ್ಟಾಳೆ; ಹಾರದ ವಿಶೇಷತೆ ಹೀಗಿದೆ ನೋಡಿ..

Priyanka Gandhi: ಪ್ರಿಯಾಂಕಾ ಗಾಂಧಿ ಹಣೆ ಮೇಲೆ ತಿಲಕ, ಕತ್ತಿನಲ್ಲಿ ಹಾರ, ತಲೆಗೆ ಮುಟ್ಟಾಳೆ; ಹಾರದ ವಿಶೇಷತೆ ಹೀಗಿದೆ ನೋಡಿ..

Priyanka Gandhi: ಕರ್ನಾಟಕ ಚುನಾವಣಾ ಪ್ರಚಾರ ಕಣದಲ್ಲಿ ಇಂದು ದೇಶದ ಗಮನಸೆಳೆದುದು ಪ್ರಿಯಾಂಕಾ ಗಾಂಧಿ ಧರಿಸಿದ್ದ ಮಾಲೆ. ಈ ಮಾಲೆಯ ವಿಶೇಷತೆ ಏನು? ಎಲ್ಲಿ ತಯಾರಾಗುತ್ತೆ? ಧಾರ್ಮಿಕ ವಿಶೇಷತೆ ಇದೆಯಾ? ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದ

ಚಿಕ್ಕಮಗಳೂರು ಜಿಲ್ಲೆಯ ಪ್ರಚಾರ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ
ಚಿಕ್ಕಮಗಳೂರು ಜಿಲ್ಲೆಯ ಪ್ರಚಾರ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ (KPCC)

ರಾಜ್ಯದಲ್ಲಿ ಚುನಾವಣಾ ಪ್ರಚಾರ ರಂಗೇರ ತೊಡಗಿದೆ. ರಾಜಕೀಯ ನೇತಾರರ ಭಾಷಣ, ವೇಷಭೂಷಣದಿಂದ ಹಿಡಿದು ಪ್ರತಿಯೊಂದನ್ನೂ ಮತದಾರರು ಗಮನಿಸುತ್ತಿದ್ದು, ಕೆಲವೊಂದು ಅಂಶಗಳು ತೀವ್ರ ಚರ್ಚೆಗೆ ಒಳಗಾಗುವುದು ಸಾಮಾನ್ಯ. ಇಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಚಿಕ್ಕಮಗಳೂರು, ಮೈಸೂರು ಭಾಗದಲ್ಲಿ ಪ್ರಚಾರದಲ್ಲಿ ಭಾಗಿಯಾದರು.

ಚಿಕ್ಕಮಗಳೂರಿನ ಬಾಳೆಹೊನ್ನೂರು ಮತ್ತು ಶೃಂಗೇರಿಗಳಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಅವರ ಕತ್ತಿನಲ್ಲಿದ್ದ ಚಂದದ ಹಾರ ದೇಶದ ಗಮನಸೆಳೆದಿದೆ. ಅಷ್ಟೇ ಅಲ್ಲ ಆ ಮಾಲೆಯ ಬಗ್ಗೆ ಕುತೂಹಲ ಕೆರಳಿದೆ. ನಿಮ್ಮ ಕುತೂಹಲವೂ ಕೆರಳಿತಲ್ಲವೇ? ಈ ವಿಡಿಯೋದಲ್ಲಿ ಆರಂಭದ 5 ನಿಮಿಷ ಆದ ಬಳಿಕ ಒಂದೆರಡು ನಿಮಿಷದ ದೃಶ್ಯವನ್ನು ನೋಡಿ ಒಮ್ಮೆ.

ಮೇಲಿನ ವಿಡಿಯೋ ಬಾಳೆಹೊನ್ನೂರಿನ ಕಲಾರಂಗ ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯದ್ದು. ಇದರಲ್ಲಿ ಅವರಿಗೆ ಹಾಕಿದ ಮಾಲೆ ದೂರದಿಂದ ನೋಡಿದರೆ ಸ್ವಲ್ಪ ದೊಡ್ಡ ಗಾತ್ರದ ರುದ್ರಾಕ್ಷಿ ಮಾಲೆಯಂತೆ ಭಾಸವಾಗುತ್ತದೆ. ಬೆಳ್ಳಿಯನ್ನು ಪೋಣಿಸಿದಂತೆ ಕಾಣುತ್ತದೆ. ಸಾರ್ವಜನಿಕ ಸಭೆಯ ಆರಂಭದಿಂದಲೇ ಪ್ರಿಯಾಂಕಾ ಗಾಂಧಿ ಕತ್ತಿನಲ್ಲಿದ್ದ ಹಾರ ಜನಮನ ಸೆಳೆದಿತ್ತು. ಇದಲ್ಲದೆ, ತಲೆ ಮೇಲೆ ಅಡಕೆ ಹಾಳೆಯ ಟೋಪಿ (ಮುಟ್ಟಾಳೆ) ಧರಿಸಿ ಗಮನಸೆಳೆದರು.

ಧಾರ್ಮಿಕ ಪ್ರಾಮುಖ್ಯತೆ ಇರುವ ಮಾಲೆಯಂತೆ ಕಾಣುತ್ತಿತ್ತು. ಈ ಚುನಾವಣೆಯಲ್ಲಿ ಅಲ್ಲಲ್ಲಿ ಹಿಂದುತ್ವದ ವಿಚಾರ ಪ್ರಸ್ತಾಪವಾಗುತ್ತಿರುವ ಕಾರಣ, ಕಾಂಗ್ರೆಸ್‌ ನಾಯಕರು ಕೂಡ ತಾವು ಹಿಂದು ವಿರೋಧಿಗಳಲ್ಲ ಎಂದು ಪದೇಪದೆ ಹೇಳುತ್ತಿದ್ದಾರೆ. ಹೀಗಾಗಿ ಪ್ರಿಯಾಂಕಾ ಗಾಂಧಿ ಕೂಡ ಧಾರ್ಮಿಕ ಪ್ರಾಮುಖ್ಯತೆ ಇರುವ ಮಾಲೆ ಧರಿಸಿದರೇ ಎಂಬ ಸಂದೇಹ ಮೂಡಿದ್ದು ಅಚ್ಚರಿ ಉಂಟುಮಾಡಿಲ್ಲ.

ಪ್ರಿಯಾಂಕಾ ಗಾಂಧಿ ಮುಖದ ಮೇಲೆ ಒಂದು ಕೆಂಪು ತಿಲಕ. ಕೊರಳಲ್ಲಿ ಎದ್ದು ಕಾಣುತ್ತಿದ್ದ ಮಾಲೆ. ಆ ಮಾಲೆಗೂ ಧರ್ಮಕ್ಕೂ ಏನಾದರೂ ಏನಾದರೂ ಸಂಬಂಧ ಇದೆಯೇ ಎಂಬ ಕುತೂಹಲ ಅನೇಕರದ್ದು. ಈ ಬಗ್ಗೆ ವಿಚಾರಿಸಿದಾಗ ವ್ಯಕ್ತವಾದ ಅಂಶಗಳಿವು.

ಈ ಹಾರ ಚಿಕ್ಕಮಗಳೂರು, ಶಿವಮೊಗ್ಗ ಸೇರಿ ಮಲೆನಾಡು ಭಾಗದಲ್ಲಿ ಈಗ ಸಾಮಾನ್ಯವಾಗಿದೆ. ಹಾವೇರಿಯಲ್ಲಿ ಏಲಕ್ಕಿ ಮಾಲೆ ಹೇಗೆಯೋ ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲಿ ಅಡಕೆ ಮಾಲೆ ಹಾಗೆ ಎಂದು ಬಾಳೆಹೊನ್ನೂರಿನ ಪತ್ರಕರ್ತ ಮಿತ್ರ ಸಚಿನ್‌ ತಿಳಿಸಿದರು.

ಅಡಕೆ ಮಾಲೆಯ ವಿಶೇಷತೆ ಏನು?

ಹಾವೇರಿಯ ಏಲಕ್ಕಿ ಮಾಲೆ ರಾಜ್ಯದ ಬಹುತೇಕ ಭಾಗದಲ್ಲಿ ಸನ್ಮಾನ ಸಮಾರಂಭಗಳಲ್ಲಿ ಬೇಡಿಕೆಯುಳ್ಳದ್ದು. ಅದು ಬಹುತೇಕರಿಗೆ ಪರಿಚಿತವೂ ಕೂಡ. ಆದರೆ, ಈ ಅಡಕೆ ಮಾಲೆ ಸದ್ಯ ಮಲೆನಾಡು ಭಾಗದಲ್ಲಿ ಫೇಮಸ್ಸು.

ಬೇಯಿಸಿದ ಅಡಕೆಯನ್ನು ದಾರದಲ್ಲಿ ಪೋಣಿಸಿ, ನಡುವೆ ಕೃತಕ ಮುತ್ತುಗಳನ್ನು, ಕೆಲವೊಮ್ಮೆ ಕೃತಕ ಶೃಂಗಾರ ವಸ್ತುಗಳನ್ನು ಬಳಸಿಕೊಂಡು ಈ ಮಾಲೆಯನ್ನು ಸಿದ್ಧಪಡಿಸಲಾಗುತ್ತದೆ. ಬೇಯಿಸಿದ ಅಡಕೆ ಮತ್ತು ರುದ್ರಾಕ್ಷಿ ದೂರದಿಂದ ನೋಡಿದರೆ ಒಂದೇ ರೀತಿ ಕಾಣುತ್ತದೆ. ಹತ್ತಿರದಿಂದ ನೋಡಿದರೆ ವ್ಯತ್ಯಾಸ ಗೊತ್ತಾಗುತ್ತದೆ. ಈ ಅಡಕೆ ಮಾಲೆಗೆ ಒಂದು ಆಕರ್ಷಣೆ ಇದೆ. ಸಾಮಾನ್ಯವಾಗಿ ಎರಡು ಎಳೆಯ ಅಡಕೆ ಮಾಲೆಗೆ ಹೆಚ್ಚಿನ ಬೇಡಿಕೆ. ಆದಾಗ್ಯೂ, ಬೇಡಿಕೆ ಇದ್ದರಷ್ಟೆ ಅದನ್ನು ತಯಾರಿಸಿ ಕೊಡಲಾಗುತ್ತದೆ. ಮುಂಚಿತವಾಗಿ ಮಾಡಿಟ್ಟುಕೊಳ್ಳುವುದಿಲ್ಲ ಎಂದು ಶಿವಮೊಗ್ಗದ ಕಿಶನ್‌ ಹ್ಯಾಂಡಿಕ್ರಾಫ್ಟ್ಸ್‌ನವರು ತಿಳಿಸಿದರು.

ಈ ಹಾರದ ದರ ಆಯಾ ಸಮಯದಲ್ಲಿನ ಅಡಕೆ ಧಾರಣೆ ಮತ್ತು ಇತರೆ ಖರ್ಚು ವೆಚ್ಚಗಳನ್ನು ಆಧರಿಸಿ ಬದಲಾಗುತ್ತದೆ. ಅದೇ ರೀತಿ ಹಾರದ ಗಾತ್ರವೂ ಇಲ್ಲಿ ಪರಿಗಣಿಸಲ್ಪಡುತ್ತದೆ ಎಂದು ಇನ್ನೊಬ್ಬ ವ್ಯಾಪಾರಿ ತಿಳಿಸಿದರು.

IPL_Entry_Point