ಕನ್ನಡ ಸುದ್ದಿ  /  Karnataka  /  Wear A Bindi First Karnataka Bjp Mp Yells At Female Vendor On Women's Day

MP Muniswamy's Video: 'ಮೊದಲು ಹಣೆಗೆ ಬೊಟ್ಟು ಇಟ್ಕೋ' - ಮಹಿಳಾ ದಿನದಂದೇ ಮಹಿಳಾ ವ್ಯಾಪಾರಿ ಮೇಲೆ ಕೂಗಾಡಿದ ಕೋಲಾರ ಬಿಜೆಪಿ ಸಂಸದ

ಮಹಿಳಾ ದಿನದಂದೇ ಕೋಲಾರದ ಬಿಜೆಪಿ ಲೋಕಸಭಾ ಸಂಸದ ಎಸ್ ಮುನಿಸ್ವಾಮಿ ಅವರು ಮಹಿಳಾ ವ್ಯಾಪಾರಿಯೊಬ್ಬರಿಗೆ ಆವಾಜ್​ ಹಾಕಿರುವ ಘಟನೆ ನಡೆದಿದೆ.

ಮಹಿಳಾ ವ್ಯಾಪಾರಿ ಮೇಲೆ ಕೂಗಾಡಿದ ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ
ಮಹಿಳಾ ವ್ಯಾಪಾರಿ ಮೇಲೆ ಕೂಗಾಡಿದ ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ

ಕೋಲಾರ: ನಿನ್ನೆ (ಮಾರ್ಚ್​ 8) ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಮಹಿಳೆಯರನ್ನು ಗೌರವಿಸಲು, ಮಹಿಳೆಯರ ಸಾಧನೆಗೆ ಪ್ರೋತ್ಸಾಹಿಸಲು, ಮಹಿಳಾ ಸಬಲೀಕರಣವನ್ನು ಬೆಂಬಲಿಸುವ ಸಲುವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಆದರೆ ಇದೇ ದಿನದಂದೇ ಕೋಲಾರದ ಬಿಜೆಪಿ ಲೋಕಸಭಾ ಸಂಸದ ಎಸ್ ಮುನಿಸ್ವಾಮಿ ಅವರು ಮಹಿಳಾ ವ್ಯಾಪಾರಿಯೊಬ್ಬರಿಗೆ ಆವಾಜ್​ ಹಾಕಿದ್ದಾರೆ.

ಕೋಲಾರ ಜಿಲ್ಲೆಯ ಮುಳುಬಾಗಿಲು ಪಟ್ಟಣದ ಮತ್ಯಾಲಪೇಟೆಯಲ್ಲಿನ ಚೆನ್ನಯ್ಯ ರಂಗಮಂದಿರದಲ್ಲಿ ಮಹಿಳಾ ದಿನಾಚರಣೆ ನಿಮಿತ್ತ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿತ್ತು. ಇದನ್ನು ಸಂಸದ ಎಸ್ ಮುನಿಸ್ವಾಮಿ ಉದ್ಘಾಟಿಸಿದರು. ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಸುಜಾತ ಎಂಬುವವರು ಬಟ್ಟೆಯ ಮಳಿಗೆ ಹಾಕಿದ್ದರು. ಆದರೆ ಆ ಮಹಿಳೆ ಹಣೆಗೆ ಬೊಟ್ಟು ಇಟ್ಟಿಲ್ಲವೆಂದು ಮುನಿಸ್ವಾಮಿ ತರಾಟೆಗೆ ತೆಗೆದುಕೊಂಡು ಮಹಿಳೆಯ ಮೇಲೆ ಕೂಗಾಡಿದ್ದಾರೆ.

ಹಣೆಗೆ ಬೊಟ್ಟು ಯಾಕೆ ಇಟ್ಟಿಲ್ಲ? ಗಂಡ ಬದುಕಿದ್ದಾನೆ ತಾನೇ? ಈಕೆಗೆ ಬೊಟ್ಟು ಕೊಡಮ್ಮ. ಹಣ ಕೊಟ್ಟು ಬಲವಂತವಾಗಿ ಮತಾಂತರ ಮಾಡಿದ್ದಾರೆ ಅಲ್ಲವಾ? ವೈಷ್ಣವಿ ಎಂದು ಅಂಗಡಿಗೆ ಯಾಕೆ ಹೆಸರನ್ನು ಇಟ್ಟುಕೊಂಡಿದ್ದೀಯಾ? ಮೊದಲು ಬೊಟ್ಟು ಇಟ್ಕೋ ಎಂದು ಮಹಿಳೆಯನ್ನು ನಿಂದಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಸಂಸದ ಮುನಿಸ್ವಾಮಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಈ ಘಟನೆ ಬಿಜೆಪಿಯ "ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ" ಎಂದು ಪ್ರತಿಪಕ್ಷ ಕಾಂಗ್ರೆಸ್‌ ಕೂಡ ತೀವ್ರ ದಾಳಿ ನಡೆಸಿದೆ. ಕಾಂಗ್ರೆಸ್ ಸಂಸದ ಕಾರ್ತಿ ಪಿ ಚಿದಂಬರಂ ವಿಡಿಯೋಗೆ ಪ್ರತಿಕ್ರಿಯಿಸಿ, ಬಿಜೆಪಿ ಭಾರತವನ್ನು "ಹಿಂದುತ್ವ ಇರಾನ್" ಆಗಿ ಪರಿವರ್ತಿಸುತ್ತದೆ ಎಂದು ಬರೆದಿದ್ದಾರೆ. ಬಿಜೆಪಿಯ ಅಯತೊಲ್ಲಾಗಳು ಬೀದಿಗಳಲ್ಲಿ ಗಸ್ತು ತಿರುಗುವ "ನೈತಿಕ ಪೊಲೀಸ್​ಗಿರಿ"ಯನ್ನು ಹೊಂದಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ.

ಮೊನ್ನೆಯಷ್ಟೇ ಮಹಿಳಾ ದ್ವಿಚಕ್ರ ವಾಹನ ಸವಾರರ ಬೈಕ್‌ಗಳ ಕೀಗಳನ್ನು ವಕೀಲರೊಬ್ಬರು ಕಸಿದುಕೊಂಡು ಬೆಂಗಳೂರಿನ ನೈಸ್ ರಸ್ತೆಯ ಮಧ್ಯದಲ್ಲಿ ಗಂಟೆಗಟ್ಟಲೆ ನಿಲ್ಲಿಸಿದ್ದ ಘಟನೆ ನಡೆದಿತ್ತು. ಮಹಿಳಾ ದಿನಾಚರಣೆ ಅಂಗವಾಗಿ ಬೈಕ್​ ರೈಡ್​ ಮಾಡುತ್ತಿದ್ದ ಸಂದರ್ಭದಲ್ಲಿ ಮಹಿಳೆಯರು ನೀರು ಕುಡಿಯಲು ರಸ್ತೆ ಬದಿ ನಿಂತಿದ್ದರು. ಈ ವೇಳೆ ಘಟನೆ ನಡೆದಿದೆ.

ಏನಿದು ಘಟನೆ?

ಇತ್ತೀಚೆಗೆ ಮೂವರು ಮಹಿಳಾ ಬೈಕರ್‌ಗಳು ಬೆಂಗಳೂರಿನ ಕೋಣನಕುಂಟೆ ಬಳಿ ರೈಡ್​ಗೆ ತೆರಳಿದ್ದರು. ಬಿಸಿಲು ಹೆಚ್ಚಾಗಿದ್ದ ಕಾರಣಕ್ಕೆ ನೀರು ಕುಡಿಯಲು ರಸ್ತೆ ಬದಿಯಲ್ಲಿ ಬೈಕ್‌ ನಿಲ್ಲಿಸಿದ್ಧಾರೆ. ಆಗ ದೂರದಿಂದ ಒಬ್ಬ ವ್ಯಕ್ತಿ ಈ ಯುವತಿಯರನ್ನು ಅಸಭ್ಯವಾಗಿ ಬೈದು ಅಲ್ಲಿಂದ ತೆರಳುವಂತೆ ಹೇಳಿದ್ದಾನೆ. ಆದರೆ ಯುವತಿಯರಿಗೆ ಆತನ ಮಾತುಗಳಿಂದ ಕೋಪ ಬಂದಿದೆ. ನಂತರ ಮತ್ತೊಬ್ಬ ವ್ಯಕ್ತಿ, ಅತ್ತ ರಸ್ತೆ ಬದಿಯಿಂದ ಯುವತಿಯರು ನಿಂತಿದ್ದ ಜಾಗಕ್ಕೆ ಬಂದು ಇದು ನನ್ನ ಜಾಗ ಇಲ್ಲಿಂದ ಮುಂದೆ ಹೋಗಿ ಎಂದಿದ್ದಾರೆ. ನಾವು ಹೋಗುವುದಿಲ್ಲ, ನಾವು ಏನು ತಪ್ಪು ಮಾಡಿದ್ದೇವೆ? ನೀರು ಕುಡಿಯಲು ಇಲ್ಲಿ ನಿಂತಿದ್ದೇವೆ, ನಿಮ್ಮ ಮನೆ ಇರುವುದು ರಸ್ತೆಯ ಮತ್ತೊಂದು ಬದಿಯಲ್ಲಿ, ಎಂದಿದ್ದಾರೆ. ಆದರೆ ಆ ವ್ಯಕ್ತಿ ಯುವತಿಯ ಬೈಕ್‌ ಕೀ ಕಸಿದುಕೊಂಡು ಅಲ್ಲಿಂದ ಹೊರಟಿದ್ಧಾರೆ.

ಈ ಎಲ್ಲಾ ಘಟನೆಯನ್ನು ಯುವತಿಯರು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ್ದಾರೆ. ಕೂಡಲೇ ಯುವತಿಯರು ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿಯರ ಬೈಕ್‌ ಕೀ ಕಿತ್ತುಕೊಂಡ ವ್ಯಕ್ತಿ ಮಂಜುನಾಥ್‌ ಲಾಯರ್‌ ಆಗಿದ್ದು, ಆತ ಕೂಡಾ ಯುವತಿಯರ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಆತನ ನಡೆಗೆ ವಿರೋಧ ವ್ಯಕ್ತವಾಗುತ್ತಿದೆ. ಲಾಯರ್‌ ಆದ ಮಾತ್ರಕ್ಕೆ ಇಷ್ಟು ಅಸಭ್ಯವಾಗಿ ನಡೆದುಕೊಳ್ಳುವುದು ಸರೀನಾ ಎಂದು ಪ್ರಶ್ನಿಸುತ್ತಿದ್ದಾರೆ.

IPL_Entry_Point

ವಿಭಾಗ