Kannada News  /  Nation And-world  /  Bengaluru-mysuru Highway Flooded Because Villagers, Govt Issues Statement
Bengaluru-Mysuru highway: ಬೆಂಗಳೂರು-ಮೈಸೂರು ದಶಪಥದಲ್ಲಿ ಪ್ರವಾಹ ಉಂಟಾಗಲು ಗ್ರಾಮಸ್ಥರು ಕಾರಣ... ಹೆದ್ದಾರಿ ಸಚಿವಾಲಯ ಸ್ಪಷ್ಟನೆ
Bengaluru-Mysuru highway: ಬೆಂಗಳೂರು-ಮೈಸೂರು ದಶಪಥದಲ್ಲಿ ಪ್ರವಾಹ ಉಂಟಾಗಲು ಗ್ರಾಮಸ್ಥರು ಕಾರಣ... ಹೆದ್ದಾರಿ ಸಚಿವಾಲಯ ಸ್ಪಷ್ಟನೆ

Bengaluru-Mysuru highway: ಬೆಂಗಳೂರು-ಮೈಸೂರು ದಶಪಥದಲ್ಲಿ ಪ್ರವಾಹ ಉಂಟಾಗಲು ಗ್ರಾಮಸ್ಥರು ಕಾರಣ... ಹೆದ್ದಾರಿ ಸಚಿವಾಲಯ ಸ್ಪಷ್ಟನೆ

19 March 2023, 17:41 ISTHT Kannada Desk
19 March 2023, 17:41 IST

ರಾಮನಗರ ಸ್ಟ್ರೆಷ್‌ ಬಳಿ ಹೆದ್ದಾರಿ ಜಲಾವೃತವಾಗಲು "ಗ್ರಾಮಸ್ಥರು ಚರಂಡಿ ಮಾರ್ಗವನ್ನು ಮುಚ್ಚಿರುವುದು ಕಾರಣʼʼ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದೆ.

ಬೆಂಗಳೂರು: ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದ ಬೆಂಗಳೂರು-ಮೈಸೂರು ದಶಪಥವು ಇತ್ತೀಚೆಗೆ ಸುರಿದ ಭಾರಿ ಮಳೆಗೆ ಜಲಾವೃತಗೊಂಡಿತ್ತು. ಹೆದ್ದಾರಿಯಲ್ಲಿ ಈ ರೀತಿಯ ಪ್ರವಾಹ ಉಂಟಾಗಲು ಕಾರಣವೇನು ಎನ್ನುವುದಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸ್ಪಷ್ಟನೆ ನೀಡಿದೆ.

ಟ್ರೆಂಡಿಂಗ್​ ಸುದ್ದಿ

ರಾಮನಗರ ಸ್ಟ್ರೆಷ್‌ ಬಳಿ ಹೆದ್ದಾರಿ ಜಲಾವೃತವಾಗಲು "ಗ್ರಾಮಸ್ಥರು ಚರಂಡಿ ಮಾರ್ಗವನ್ನು ಮುಚ್ಚಿರುವುದು ಕಾರಣʼʼ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದೆ.

“ಮಾದಾಪುರದ ಗ್ರಾಮಸ್ಥರು ಮತ್ತು ಇತರರು ತಮ್ಮ ಕೃಷಿ ಜಮೀನು ಮತ್ತು ಗ್ರಾಮಕ್ಕೆ (ಕಿ.ಮೀ. 42+640 ರಲ್ಲಿ) ಶಾರ್ಟ್‌ಕಟ್ ಪ್ರವೇಶಕ್ಕೆ ಪ್ರಯತ್ನಿಸಿದ್ದಾರೆ. 3 ಮೀ ಅಗಲದವರೆಗೆ ಚರಂಡಿಯನ್ನು ಮಣ್ಣಿನಿಂದ ಮುಚ್ಚುವ ಮೂಲಕ ಸರ್ವಿಸ್ ರಸ್ತೆಯಿಂದ ತಮ್ಮದೇ ಆದ ಮಾರ್ಗವನ್ನು ನಿರ್ಮಿಸಲು ಪ್ರಯತ್ನಿಸಿದ್ದಾರೆ. ಇದರಿಂದ ಒಳಚರಂಡಿ ಮಾರ್ಗಕ್ಕೆ ತಡೆಯಾಗಿದೆ. ಗ್ರಾಮಸ್ಥರು ನಿರ್ಮಿಸಿದ್ದ ಮಾರ್ಗವನ್ನು ಮಾರ್ಚ್ 18 ರಂದು ಮುಂಜಾನೆಯೇ ತೆಗೆದುಹಾಕಲಾಗಿದೆ, ”ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಒಂದಿಷ್ಟು ಜನರು ಒಳಚರಂಡಿ ಮಾರ್ಗವನ್ನು ಮಣ್ಣು ಹಾಕಿ ಮುಚ್ಚಿದ್ದರಿಂದ ಶುಕ್ರವಾರ ಸುರಿದ ಮಳೆಗೆ ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ಹೈವೇ ಮುಳುಗಡೆಯಾಗಿತ್ತು. ತುರ್ತು ಕಾಮಗಾರಿ ನಡೆಸಿದ್ದು, ಸಮಸ್ಯೆ ಬಗೆಹರಿಸಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಸ್ಪಷ್ಟನೆ ನೀಡಿದೆ.

ಶುಕ್ರವಾರ ರಾತ್ರಿ ಅಕಾಲಿಕವಾಗಿ ಮಳೆ ಸುರಿದಿದೆ. ಸಾಮಾನ್ಯ 0.1 ಮಿ.ಮೀ ಬದಲಾಗಿ 3.9 ಮಿ ಮೀ ಮಳೆಯಾಗಿತ್ತು. ಪರಿಣಾಮ ಪ್ರಾಣಿಗಳ ಓಡಾಟಕ್ಕಾಗಿ ನಿರ್ಮಿಸಿರುವ ಮೇಲ್ಸೇತುವೆಯ ಕೆಳಗೆ (ಕಿಲೋ ಮೀಟರ್ 42.640 ರಲ್ಲಿ) ಜನರು ಒಳಚರಂಡಿ ಮಾರ್ಗವನ್ನು ನಿರ್ಬಂಧಿಸಿದ್ದರಿಂದ ಮುಳುಗಡೆಯಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.

'ಎಕ್ಸ್‌ಪ್ರೆಸ್‌ವೇನಲ್ಲಿ ಮಳೆ ನೀರುವ ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದ್ದು, ರಸ್ತೆ ಮೇಲೆ ನಿಲ್ಲುವ ನೀರು ಹರಿದು ಹೋಗಲು ನಿರ್ಮಿಸಲಾಗಿದ್ದ ಚರಂಡಿಯನ್ನೇ ಯಾರೋ ಅನಧಿಕೃತವಾಗಿ ಮುಚ್ಚಿದ್ದರಿಂದ ಇಷ್ಟೆಲ್ಲಾ ರಾದ್ಧಾಂತ ಸಂಭವಿಸಿದೆ. ಓಡಾಟಕ್ಕಾಗಿ ಚರಂಡಿ ಮುಚ್ಚಿ ತಾತ್ಕಾಲಿಕ ರಸ್ತೆಯನ್ನು ನಿರ್ಮಾಣ ಮಾಡಲಾಗಿತ್ತು..' ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದ್ದಾರೆ.

ಬಹುಶಃ ಬೈದು, ಟೀಕಿಸಿ, ಕುಹಕವಾಡಿ ಮುಗಿಯಿತು ಅಂದುಕೊಳ್ಳುತ್ತೀನಿ! ಮಳೆ ನೀರು ಹೋಗುವ ಚರಂಡಿಯನ್ನು ಯಾರೋ ರಸ್ತೆ ಮಾಡಿಕೊಳ್ಳಲು ಅನಧಿಕೃತವಾಗಿ ಮುಚ್ಚಿದ್ದರಿಂದ ಮೈಸೂರು-ಬೆಂಗಳೂರು ಹೆದ್ದಾರಿ ಕೆಲಕಾಲ ಈಜುಕೊಳವಾಗಿತ್ತು. ಎರಡು Hume Pipe ಹಾಕಿ ಸರಿಪಡಿಸಿದ್ದೇವೆ. ಧನ್ಯವಾದಗಳು ಎಂದು ಪ್ರತಾಪ್‌ ಸಿಂಹ ಟ್ವೀಟ್‌ ಮಾಡಿದ್ದಾರೆ.

ರಾಮನಗರ ತಾಲೂಕಿನ ಸಂಗಬಸವನದೊಡ್ಡಿಯ ಬಳಿ ಬರುವ ಹೆದ್ದಾರಿಯ ಕೆಳಸೇತುವೆ, ಶುಕ್ರವಾರ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಇದರಿಂದಾಗಿ ವಾಹನಗಳು ಸರತಿ ಸಾಲಿನಲ್ಲಿ ಚಲಿಸುತ್ತಿದ್ದು, ಟ್ರಾಫಿಕ್‌ ಜಾಮ್‌ ಹಾಗೂ ಸರಣಿ ಅಪಘಾತಗಳು ಸಂಭವಿಸಿವೆ.

ಹೆದ್ದಾರಿ ಉದ್ಘಾಟನೆಯಾಗಿ ಒಂದು ವಾರವೂ ಕಳೆದಿಲ್ಲ. ಆಗಲೇ ಮಳೆಗೆ ರಸ್ತೆ ಜಲಾವೃತಗೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ದುಬಾರಿ ಟೋಲ್‌ ಸಂಗ್ರಹ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ವಾಹನ ಸವಾರರ ಸಮಸ್ಯೆ ಕೇಳಲು ಸ್ಥಳಕ್ಕೆ ಬರದಿರುವುದೂ ಹಲವರನ್ನು ಆಕ್ರೋಶಗೊಳಿಸಿತ್ತು.