ಕನ್ನಡ ಸುದ್ದಿ  /  Nation And-world  /  India News Mumbai Teen A 14 Yr Old Girl Dies By Suicide Cops Say She Was Stressed About Her 1st Period Health News Uks

ಮೊದಲ ಋತುಸ್ರಾವದ ಸಂಕಟ; ಮುಂಬೈನಲ್ಲಿ 14 ವರ್ಷದ ಬಾಲಕಿ ಆತ್ಮಹತ್ಯೆ, ಋತುಮತಿಯಾಗುವ ಮಗಳಿಗೆ ಇವಿಷ್ಟು ತಿಳಿದಿರಲಿ

ಮುಂಬೈನ ಮಲಾಡ್‌ನಲ್ಲಿ ಮೊದಲ ಋತುಸ್ರಾವದ ಸಂಕಟ ತಾಳಲಾರದೆ 14 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ. ಇದು ಋತುಚಕ್ರದ ಕುರಿತು ಹದಿಹರೆಯದ ಬಾಲಕಿಯರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವನ್ನು ಎತ್ತಿ ತೋರಿಸಿದೆ. ಆದ್ದರಿಂದ ಋತುಮತಿಯಾಗುವ ಮಗಳಿಗೆ ಇವಿಷ್ಟು ತಿಳಿದಿರಲಿ.

ಮೊದಲ ಋತುಸ್ರಾವದ ಸಂಕಟ (ಸಾಂಕೇತಿಕ ಚಿತ್ರ)
ಮೊದಲ ಋತುಸ್ರಾವದ ಸಂಕಟ (ಸಾಂಕೇತಿಕ ಚಿತ್ರ) (Canva)

ಮುಂಬಯಿ: ಮೊದಲ ಸಲ ಋತುಸ್ರಾವ ಸಂಭವಿಸಿದಾಗ ಉಂಟಾದ ಸಂಕಟ ತಾಳಲಾರದೇ ಮುಂಬೈನ 14 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮುಂಬಯಿನ ಮಲಾಡ್ ಪ್ರದೇಶದಲ್ಲಿ ಮಾರ್ಚ್ 26ರಂದು ಈ ಹೃದಯ ವಿದ್ರಾವಕ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲ ಬಾರಿಗೆ ಋತುಸ್ರಾವವಾದ ಕಾರಣ ಅದರ ನೋವು, ಸಂಕಟವನ್ನು ತನ್ನ ಕುಟುಂಬದವರೊಂದಿಗೆ ಹೇಳಿಕೊಂಡಿದ್ದಳು. ತಾಯಿ ಮತ್ತು ಕುಟುಂಬ ಸದಸ್ಯರು ಆಕೆಯನ್ನು ಸಮಾಧಾನಗೊಳಿಸುವ ಪ್ರಯತ್ನ ಮಾಡಿದ್ದರು. ಆದರೆ ಆಕೆ ಅತಿರೇಕದ ಕ್ರಮಕ್ಕೆ ಮುಂದಾಗಿ ಪ್ರಾಣ ಕಳೆದುಕೊಂಡಳು ಎಂದು ಪೊಲೀಸರು ತಿಳಿಸಿದ್ದಾರೆ.

ಮಲಾಡ್‌ನಲ್ಲಿ ಬಾಲಕಿಯ ಆತ್ಮಹತ್ಯೆ ವಿಚಾರ ಬೆಳಕಿಗೆ ಬಂದ ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಆಗ ಬಾಲಕಿಯ ಮೃತದೇಹ ಆಸ್ಪತ್ರೆಯಲ್ಲಿತ್ತು. ಪೊಲೀಸರ ಪ್ರಾಥಮಿಕ ತನಿಖೆಯ ವೇಳೆ, ಮೊದಲ ಋತುಸ್ರಾವದ ಸಂಕಟ ತಾಳಲಾರದೇ ಬಾಲಕಿ ಆತ್ಮಹತ್ಯೆ ಮಾಡಿಕೊಂಡಳು ಎಂದು ಕುಟುಂಬ ಸದಸ್ಯರು ಹೇಳಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

14 ವರ್ಷದ ಬಾಲಕಿಯ ಆತ್ಮಹತ್ಯೆ ಕೇಸ್; ಪೊಲೀಸ್ ತನಿಖೆಯಲ್ಲಿ ಬಹಿರಂಗವಾದ ಅಂಶ

ಬಾಲಕಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಗೊತ್ತಾದ ಕೂಡಲೇ ಕುಟುಂಬದವರು ಆಕೆಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಷ್ಟರಲ್ಲಾಗಲೇ ತಡವಾಗಿತ್ತು. ಆಸ್ಪತ್ರೆಗೆ ದಾಖಲಿಸುವ ಮೊದಲೇ ಆಕೆ ಮೃತಪಟ್ಟಿರುವುದಾಗಿ ಡಾಕ್ಟರ್‌ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಅಸಹಜನ ಸಾವಿನ ಕುರಿತು ತನಿಖೆ ಶುರುಮಾಡಿದ ಪೊಲೀಸರಿಗೆ, ಮೊದಲ ಋತುಸ್ರಾವದ ಸಂಕಟಕ್ಕೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವುದು ಮನವರಿಕೆಯಾಗಿದೆ. ಕುಟುಂಬ ಸದಸ್ಯರನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸಿದಾಗ, ಬಾಲಕಿಗೆ ಋತುಚಕ್ರದ ಬಗ್ಗೆ ಅರಿವು ಇಲ್ಲದೇ ಇರುವುದು ಗಮನಸೆಳೆದಿದೆ. ಇದೇ ಕಾರಣಕ್ಕೆ ಆಕೆ ಅತಿರೇಕದ ಹೆಜ್ಜೆ ಇಟ್ಟಳು ಎಂಬ ಅಂಶವನ್ನು ಪೊಲೀಸರು ಗುರುತಿಸಿಕೊಂಡರು ಎಂದು ಇಂಡಿಯಾ ಟುಡೇ ವರದಿ ಹೇಳಿದೆ.

ಬಾಲಕಿಯ ಮೃತದೇಹದ ಪೋಸ್ಟ್‌ ಮಾರ್ಟಂ ಆಗಿದ್ದು, ತಪ್ಪು ನಡೆದಿರುವ ಯಾವುದೇ ಲಕ್ಷಣ ಇಲ್ಲ. ಹಾಗಾಗಿ ಕುಟುಂಬ ಸದಸ್ಯರನ್ನಾಗಲೀ, ಇತರರ ಮೇಲೆ ಸಂದೇಹ ಪಡುವಂತದ್ದು ಏನೂ ಇಲ್ಲ ಎಂದು ಪೊಲೀಸರು ತಿಳಿಸಿದ್ದಾಗಿ ವರದಿ ವಿವರಿಸಿದೆ.

ಬಾಲಕಿಯ ಆತ್ಮಹತ್ಯೆ ಪ್ರಕರಣ ಸಂಬಂಧ ಪೊಲೀಸರು ಇನ್ನೂ ತನಿಖೆ ಮುಂದುವರಿಸಿದ್ದು, ಕುಟುಂಬ ಸದಸ್ಯರು, ಆಕೆಯ ಸ್ನೇಹಿತರು, ಸಹಪಾಠಿಗಳು ಮತ್ತು ಶಾಲೆಯ ಶಿಕ್ಷಕರು, ಸ್ಥಳೀಯರ ಹೇಳಿಕೆಯನ್ನು ಪಡೆಯುತ್ತಿದ್ದಾರೆ. ಸಂದೇಹಾಸ್ಪದ ಯಾವುದೇ ಹೇಳಿಕೆ ಬಂದರೂ ವಿಚಾರಣೆ ಬಿಗಿಗೊಳಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಋತುಮತಿಯಾಗುವ ಮಗಳಿಗೆ ಇವಿಷ್ಟು ತಿಳಿದಿರಲಿ

ಮುಂಬೈನ 14 ವರ್ಷದ ಬಾಲಕಿಯ ಆತ್ಮಹತ್ಯೆ ಪ್ರಕರಣವು ಋತುಚಕ್ರದ ಕುರಿತಾಗಿ ಆಕೆಗೆ ತಿಳಿವಳಿಕೆ ಇಲ್ಲದೇ ಇರುವ ಅಂಶದ ಕಡೆಗೆ ಗಮನಸೆಳೆದಿದೆ. ಹೀಗಾಗಿ ಹದಿಹರೆಯದವರಲ್ಲಿ, ಅವರ ಪಾಲಕರಲ್ಲಿ ಋತುಚಕ್ರದ ಕುರಿತು ಜಾಗೃತಿ ಮೂಡಿಸಬೇಕಾದ ಅಗತ್ಯವನ್ನು ಇದು ಪ್ರತಿಪಾದಿಸಿದೆ. ಹದಿಹರೆಯದ ಬಾಲಕಿಯರಿಗೆ ಋತುಚಕ್ರದ ತಿಳಿವಳಿಕೆ ನೀಡಬೇಕಾದ್ದು ಅವಶ್ಯ. ಆ ಸಮಯವನ್ನು ನಿರ್ವಹಿಸಬೇಕಾದ್ದು ಹೇಗೆ ಎಂಬುದರ ಕುರಿತು ಸಮಾಲೋಚನೆ ಮೂಲಕ ತಿಳಿವಳಿಕೆ ಮೂಡಿಸಬೇಕಾದ ಅಗತ್ಯವಿದೆ.

ಮಗಳಲ್ಲಿ ಋತುಮತಿಯಾಗುವ ಲಕ್ಷಣ ಕಂಡುಬಂದರೆ ತಾಯಿಗೆ ಸಂಭ್ರಮದೊಂದಿಗೆ ಆತಂಕವೂ ಶುರುವಾಗುತ್ತೆ. ಚರ್ಚೆಯೇ ಕಷ್ಟ ಎನಿಸುವ ವಿಷಯವನ್ನು ನಿಭಾಯಿಸುವುದು ಹೇಗೆ ಎಂಬುದನ್ನು ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್ ಅವರು ಮನಮುಟ್ಟುವಂತೆ ವಿವರಿಸಿದ್ದಾರೆ. ಹೆಣ್ಣುಮಕ್ಕಳ ತಂದೆ-ತಾಯಂದಿರು ಓದಲೇಬೇಕಾದ ಬರಹ ಇದು.

ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

IPL_Entry_Point