PM CARES Fund: ನೂತನ ಟ್ರಸ್ಟಿಗಳಲ್ಲಿ ರತನ್ ಟಾಟಾಗೆ ಸ್ಥಾನ, ಸಲಹಾ ಮಂಡಳಿಗೆ ಸುಧಾಮೂರ್ತಿ ನಾಮನಿರ್ದೇಶನ
ಮಾಜಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ರಾಜೀವ್ ಮೆಹ್ರಿಷಿ, ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾ ಮೂರ್ತಿ ಮತ್ತು ಟೀಚ್ ಫಾರ್ ಇಂಡಿಯಾ ಸಹಸಂಸ್ಥಾಪಕ ಆನಂದ್ ಶಾ ಅವರನ್ನು ಕೇರ್ಸ್ ಫಂಡ್ ಸಲಹಾ ಮಂಡಳಿಗೆ ನಾಮನಿರ್ದೇಶನ ಮಾಡಲಾಗಿದೆ.
ನವದೆಹಲಿ: ಖ್ಯಾತ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ, ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಕೆಟಿ ಥಾಮಸ್ ಮತ್ತು ಲೋಕಸಭೆಯ ಮಾಜಿ ಉಪಸಭಾಪತಿ ಕರಿಯಾ ಮುಂಡಾ ಸೇರಿದಂತೆ ವಿವಿಧ ಗಣ್ಯ ವ್ಯಕ್ತಿಗಳನ್ನು ಪಿಎಂ ಕೇರ್ಸ್ ಫಂಡ್ನ ಟ್ರಸ್ಟಿಗಳಾಗಿ ನಾಮನಿರ್ದೇಶನ ಮಾಡಲಾಗಿದೆ. ಈ ಬಗ್ಗೆ ಸರ್ಕಾರ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ನಿನ್ನೆಯಷ್ಟೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರ್ಮನ್ ಅವರೊಂದಿಗೆ ಹೊಸದಾಗಿ ನೇಮಕಗೊಂಡ ಸದಸ್ಯರು ಭಾಗವಹಿಸಿದ ಟ್ರಸ್ಟಿಗಳ ಮಂಡಳಿಯ ಸಭೆ ನಡೆದಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ಮೋದಿ ವಹಿಸಿದ್ದರು. ಇದಾದ ಒಂದು ದಿನದ ಬಳಿಕ ಈ ಘೋಷಣೆ ಬಂದಿದೆ.
“ಪಿಎಂ ಕೇರ್ಸ್ ಫಂಡ್ನ ಅವಿಭಾಜ್ಯ ಅಂಗವಾಗಲು ಟ್ರಸ್ಟಿಗಳನ್ನು ಪ್ರಧಾನ ಮಂತ್ರಿ ಸ್ವಾಗತಿಸಿದ್ದಾರೆ” ಎಂದು ಪ್ರಧಾನಮಂತ್ರಿ ಕಾರ್ಯಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದರಲ್ಲಿ ಸಚಿವರುಗಳಾದ ಸೀತಾರಾಮನ್ ಮತ್ತು ಶಾ ಕೂಡಾ ಇತರ ಟ್ರಸ್ಟಿಗಳಾಗಿದ್ದಾರೆ.
ಮಾಜಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ರಾಜೀವ್ ಮೆಹ್ರಿಷಿ, ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾ ಮೂರ್ತಿ ಮತ್ತು ಟೀಚ್ ಫಾರ್ ಇಂಡಿಯಾ ಸಹಸಂಸ್ಥಾಪಕ ಆನಂದ್ ಶಾ ಅವರನ್ನು ಕೇರ್ಸ್ ಫಂಡ್ ಸಲಹಾ ಮಂಡಳಿಗೆ ನಾಮನಿರ್ದೇಶನ ಮಾಡಲಾಗಿದೆ.
“ಹೊಸ ಟ್ರಸ್ಟಿಗಳು ಮತ್ತು ಸಲಹೆಗಾರರ ಭಾಗವಹಿಸುವಿಕೆಯು ಪಿಎಂ ಕೇರ್ಸ್ ಫಂಡ್ನ ಕಾರ್ಯಚಟುವಟಿಕೆಗೆ ವ್ಯಾಪಕ ದೃಷ್ಟಿಕೋನಗಳನ್ನು ಒದಗಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು” ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯದ ಹೇಳಿಕೆ ತಿಳಿಸಿದೆ.
2020ರಲ್ಲಿ ವಿಶ್ವವ್ಯಾಪಿ ಹಬ್ಬಿದ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ತುರ್ತು ಪರಿಹಾರ ಕ್ರಮಗಳ ಭಾಗವಾಗಿ ಪಿಎಂ ಕೇರ್ಸ್ ನಿಧಿಯನ್ನು ರಚಿಸಲಾಗಿದೆ. ಪ್ರಧಾನ ಮಂತ್ರಿ ಇದರ ಪದನಿಮಿತ್ತ ಅಧ್ಯಕ್ಷರಾಗಿದ್ದಾರೆ. ಇದಕ್ಕೆ ನೀಡುವ ಎಲ್ಲಾ ದೇಣಿಗೆಯು ಆದಾಯ ತೆರಿಗೆಯಿಂದ ಸಂಪೂರ್ಣವಾಗಿ ವಿನಾಯಿತಿ ಇರುತ್ತದೆ.
2020ರ ಮಾರ್ಚ್ನಿಂದ 2022ರ ಫೆಬ್ರವರಿ ನಡುವೆ ಕೋವಿಡ್ ಹಬ್ಬಿ ತಮ್ಮ ಪೋಷಕರು, ಪಾಲಕರು, ದತ್ತು ಪಡೆದ ಪೋಷಕನ್ನು ಕಳೆದುಕೊಂಡ ಮಕ್ಕಳ ಭವಿಷ್ಯದ ಉದ್ದೇಶದಿಂದ ಕಳೆದ ವರ್ಷ ಮೇ 29ರಂದು ಪಿಎಂ ಕೇರ್ಸ್ ಅನ್ನು ಪ್ರಾರಂಭಿಸಲಾಯಿತು.