ಕನ್ನಡ ಸುದ್ದಿ  /  Entertainment  /  Kannada Director Ram Vaiday Got Rajinikanth Blessings

Rajinikanth Blessed Ram Vaidya: ರಜನಿಕಾಂತ್‌ ಆಶೀರ್ವಾದ ಪಡೆದ ಸ್ಯಾಂಡಲ್‌ವುಡ್‌ ನಿರ್ದೇಶಕ ರಾಮಚಂದ್ರ ವೈದ್ಯ

ರಜನಿಕಾಂತ್ ಅವರ ಸಹಿ ಇರುವ ಪುಸ್ತಕ ನನಗೆ ತಲುಪಿದ್ದು, ಈ ಶುಭಾಶಯ ನೋಡಿ ಥ್ರಿಲ್ ಆಗಿದೆ. ರಜನಿಕಾಂತ್ ಅವರ ಸರಳತೆ ನನ್ನನ್ನು ಅಕ್ಷರಶಃ ಮೂಕನನ್ನಾಗಿಸಿದೆ. ಈ ಪುಸ್ತಕ ರೂಪದಲ್ಲಿ ಅವರ ಆಶೀರ್ವಾದ ಸಿಕ್ಕಿದ್ದು ನನ್ನ ಬದುಕಿನ ಅವಿಸ್ಮರಣೀಯ ಕ್ಷಣ'' ಎಂದು ಸಂತಸ ಹಂಚಿಕೊಂಡಿದ್ದಾರೆ.

ರಜನಿಕಾಂತ್‌ ಹಸ್ತಾಕ್ಷರ ಇರುವ ಪುಸ್ತಕ ಪಡೆದ ಕನ್ನಡ ನಿರ್ದೇಶಕ
ರಜನಿಕಾಂತ್‌ ಹಸ್ತಾಕ್ಷರ ಇರುವ ಪುಸ್ತಕ ಪಡೆದ ಕನ್ನಡ ನಿರ್ದೇಶಕ

ಕನ್ನಡ ಕಿರುತೆರೆ ನಿರ್ದೇಶನ ವಿಭಾಗದಲ್ಲಿ ಹೆಸರು ಅನುಭವ ಗಳಿಸಿದ ರಾಮಚಂದ್ರ ವೈದ್ಯ ಇದೀಗ 'ಒಂದಂಕೆ ಕಾಡು' ಎಂಬ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಬರುತ್ತಿದ್ದಾರೆ. ದಟ್ಟ ಕಾನನ, ಬಗೆದಷ್ಟು ನಿಗೂಢವೆನಿಸುವ ಸೃಷ್ಟಿ. ಮೇಲ್ನೋಟಕ್ಕೆ ತಣ್ಣಗೆ, ಹಸಿರಾಗಿ ಕಾಣುವ ಕಾಡಿನ ಒಳ ಹೊಕ್ಕರೆ ಊಹೆಗೂ ಮೀರಿದ ವಿಷಯಗಳು, ವಿವರಗಳು ಕಾಣಸಿಗುತ್ತದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವನ್ನು ರಾಮಚಂದ್ರ ನಿರ್ದೇಶಿಸುತ್ತಿದ್ದಾರೆ.

'ಒಂದಂಕೆ ಕಾಡು' ಚಿತ್ರಕ್ಕೆ ರಾಮಚಂದ್ರ ವೈದ್ಯ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಇದು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತೆರೆ ಕಾಣಲಿದೆ. ತೆಲುಗಿನಲ್ಲಿ 'ಅನಗನಗಾ ಒಕ ಅಡವಿ' ಎಂಬ ಹೆಸರಿನಲ್ಲಿ ಈ ಚಿತ್ರ ತಯಾರಾಗಿದೆ. ರಥರ್ವ, ಸೋನಿ, ಮಧು ಹೆಗ್ಡೆ, ಸುಮಂತ್ ಭಟ್, ಪ್ರೇರಣಾ ಕಂಬಂ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ನಿರ್ದೇಶಕ ರಾಮಚಂದ್ರ ವೈದ್ಯ ಅವರಿಗೆ ಸೂಪರ್ ಸ್ಟಾರ್ ರಜನಿಕಾಂತ್ ಶುಭ ಹಾರೈಸಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಾಮಚಂದ್ರ ವೈದ್ಯ, ''ನಮ್ಮ ಸ್ನೇಹಿತರೊಬ್ಬರು ಇತ್ತೀಚೆಗೆ ರಜನಿಕಾಂತ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ನನ್ನ ಸಿನಿಮಾ ಬಗ್ಗೆ ರಜನಿಕಾಂತ್ ಅವರ ಬಳಿ, ನನ್ನ ಸ್ನೇಹಿತರು ಮಾಹಿತಿ ಹಂಚಿಕೊಂಡಿದ್ದಾರೆ. ಅದನ್ನು ಕೇಳಿದ ಬಳಿಕ ರಜನಿಕಾಂತ್ ಒಂದು ಪುಸ್ತಕಕ್ಕೆ ತಮ್ಮ ಆಟೋಗ್ರಾಫ್ ಹಾಕಿ ಇದು ಆ ಯುವ ನಿರ್ದೇಶಕರಿಗೆ ನನ್ನ ಕಾಣಿಕೆ, ಇದನ್ನು ಅವರಿಗೆ ತಲುಪಿಸಿ'' ಎಂದು ಹೇಳಿದ್ದಾರೆ.

''ಆ ಪುಸ್ತಕ ನನಗೆ ತಲುಪಿದೆ. ಇದೊಂದು ಜೀವನಸ್ಪೂರ್ತಿಯ ಪುಸ್ತಕವಾಗಿದ್ದು, ಜೀವನದ ಬಗ್ಗೆ ಸಕಾರಾತ್ಮಕ ಚಿಂತನೆಯನ್ನು ಮೂಡಿಸುತ್ತದೆ. ರಜನಿಕಾಂತ್ ಅವರ ಸಹಿ ಇರುವ ಪುಸ್ತಕ ನನಗೆ ತಲುಪಿದ್ದು, ಈ ಶುಭಾಶಯ ನೋಡಿ ಥ್ರಿಲ್ ಆಗಿದೆ. ರಜನಿಕಾಂತ್ ಅವರ ಸರಳತೆ ನನ್ನನ್ನು ಅಕ್ಷರಶಃ ಮೂಕನನ್ನಾಗಿಸಿದೆ. ಈ ಪುಸ್ತಕ ರೂಪದಲ್ಲಿ ಅವರ ಆಶೀರ್ವಾದ ಸಿಕ್ಕಿದ್ದು ನನ್ನ ಬದುಕಿನ ಅವಿಸ್ಮರಣೀಯ ಕ್ಷಣ'' ಎಂದು ಸಂತಸ ಹಂಚಿಕೊಂಡಿದ್ದಾರೆ.

'ಒಂದಂಕೆ ಕಾಡು' ಸಿನಿಮಾ ಮಾರ್ಚ್ ತಿಂಗಳಲ್ಲಿ ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗುತ್ತಿದೆ. ರಜನಿಕಾಂತ್ ಅವರಿಂದ ಬಂದ ಶುಭಾಶಯ ಚಿತ್ರತಂಡದ ಉತ್ಸಾಹ ಹೆಚ್ಚಿಸಿದೆ. ಶ್ರೀ ಮಹಾಕಾಳಿ ಪ್ರೊಡಕ್ಷನ್ಸ್ ನಿರ್ಮಾಣದ ಚೊಚ್ಚಲ ಚಿತ್ರ ಇದಾಗಿದೆ. ಗಣೇಶ್ ಹೆಗ್ಡೆ ಛಾಯಾಗ್ರಹಣದಲ್ಲಿ ಕರ್ನಾಟಕದ ಪ್ರಕೃತಿ ಸೌಂದರ್ಯ ಅದ್ಭುತವಾಗಿ ಮೂಡಿ ಬಂದಿದೆ. ಶ್ರೀಕಾಂತ್, ಈ ಚಿತ್ರದ ಸಂಕಲನದ ಜವಾಬ್ದಾರಿ ವಹಿಸಿಕೊಡಿದ್ದಾರೆ. ಟಿ.ಜಿ. ನಂದೀಶ್ ಸಂಭಾಷಣೆ, ಮಧು ಹೆಗ್ಡೆ ಸಂಗೀತ ನಿರ್ದೇಶನ ನಮ್ಮ ಚಿತ್ರಕ್ಕಿದೆ. ಹೃದಯಶಿವ, ಡಾ. ಉಮೇಶ್ ಸಾಹಿತ್ಯ ಬರೆದಿದ್ದಾರೆ. ಅನುರಾಧ ಭಟ್, ಕಪಿಲ್ ನಾಯರ್, ಕೀರ್ತನ್ ಹೊಳ್ಳ ಹಾಗೂ ಇನ್ನಿತರರು ನಮ್ಮ ಸಿನಿಮಾಗೆ ಹಾಡಿದ್ದಾರೆ ಎಂದು ರಾಮಚಂದ್ರ ವೈದ್ಯ ಮಾಹಿತಿ ನೀಡಿದ್ದಾರೆ.

IPL_Entry_Point