ಕನ್ನಡ ಸುದ್ದಿ  /  Sports  /  Cricket News Csk Vs Gt Who Will Win Ipl 2023 If Chennai Super Kings Vs Gujarat Titans Final Is Cancelled Due To Rain Prs

CSK vs GT Final: ಗುಜರಾತ್​-ಚೆನ್ನೈ ಫೈನಲ್​ ಪಂದ್ಯಕ್ಕೆ ವರುಣನ ಕಾಟ; ಮಳೆಯಿಂದ ಅಂತಿಮ ಕದನ ರದ್ದಾದರೆ, ನಿಮಯ ಏನು ಹೇಳುತ್ತದೆ?

CSK vs GT IPL 2023 Final: ಇಂದು (ಮೇ 28ರಂದು) ನಡೆಯುವ ಐಪಿಎಲ್​ ಫೈನಲ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ಮತ್ತು ಗುಜರಾತ್​ ಟೈಟಾನ್ಸ್​ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಆದರೆ ಈ ಪ್ರಶಸ್ತಿ ಸುತ್ತಿನ ಅಂತಿಮ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ಪಂದ್ಯ ರದ್ದಾದರೆ ಮುಂದೇನು? ಈ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಹಾರ್ದಿಕ್​ ಪಾಂಡ್ಯ ಮತ್ತು ಎಂಎಸ್​ ಧೋನಿ
ಹಾರ್ದಿಕ್​ ಪಾಂಡ್ಯ ಮತ್ತು ಎಂಎಸ್​ ಧೋನಿ

ಐಪಿಎಲ್​​-16ರ (IPL 2023) ಟೂರ್ನಿಗೆ ಇಂದೇ ಕೊನೆ ದಿನ. 16ನೇ ಆವೃತ್ತಿಗೆ ಅದ್ಧೂರಿ ಬೀಳ್ಕೊಡುಗೆ ನೀಡಲು ಬಿಸಿಸಿಐ ಸಕಲ ಸಿದ್ಧತೆ ಮಾಡಿಕೊಂಡಿದೆ. ಇಂದು (ಮೇ 28ರಂದು) ನಡೆಯುವ ಫೈನಲ್​​​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ಮತ್ತು ಗುಜರಾತ್​ ಟೈಟಾನ್ಸ್​ ತಂಡಗಳು (Chennai Super Kings vs Gujarat Titans, Final) ನರೇಂದ್ರ ಮೋದಿ ಕ್ರಿಕೆಟ್​ ಮೈದಾನದಲ್ಲಿ (Narendra Modi Stadium Ahmedabad) ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಆದರೆ ಈ ಪ್ರಶಸ್ತಿ ಸುತ್ತಿನ ಅಂತಿಮ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ಪಂದ್ಯ ರದ್ದಾದರೆ ಮುಂದೇನು? ಈ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಮೇ 26ರಂದು ನಡೆದ 2ನೇ ಕ್ವಾಲಿಫೈಯರ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​​ ವಿರುದ್ಧ ಗುಜರಾತ್​ ಟೈಟಾನ್ಸ್ (GT vs MI Qualifier 2)​ ಗೆಲುವು ಸಾಧಿಸಿತ್ತು. ಆ ಮೂಲಕ ಸತತ 2ನೇ ಬಾರಿಗೆ ಫೈನಲ್​ ಪ್ರವೇಶಿಸಿದೆ. ಇದರೊಂದಿಗೆ ಹಾಲಿ ಚಾಂಪಿಯನ್​ ಪಟ್ಟ ಉಳಿಸಿಕೊಳ್ಳಲು ಯೋಜನೆ ರೂಪಿಸಿದೆ. ಈ ಪಂದ್ಯವು ಅಹ್ಮದಾಬಾದ್​​ನ ನರೇಂದ್ರ ಮೋದಿ ಕ್ರಿಕೆಟ್​ ಮೈದಾನದಲ್ಲಿ ನಡೆದಿತ್ತು.

ನಮೋ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯಕ್ಕೂ ಮುನ್ನ ಮಳೆಯ ಕಾಟ ಎದುರಾಗಿತ್ತು. ಜೋರು ಮಳೆಯಾಗಿತ್ತು. ಈ ಕಾರಣದಿಂದ ಪಂದ್ಯ ತಡವಾಗಿ ಆರಂಭಗೊಂಡಿತು. 45 ನಿಮಿಷಗಳ ಕಾಲ ಟಾಸ್​ ವಿಳಂಭವಾಗಿತ್ತು. ರಾತ್ರಿ 7 ಗಂಟೆಗೆ ಆಗಬೇಕಿದ್ದ ಟಾಸ್​ ಅನ್ನು, 7.45ಕ್ಕೆ ಮಾಡಲಾಯಿತು. ಪಂದ್ಯವು 8 ಗಂಟೆಗೆ ಶುರುವಾಯಿತು. ಇದರ ನಡುವೆಯೂ ಪಂದ್ಯ ಓವರ್​​ಗಳನ್ನೂ ಕಡಿತಗೊಳಿಸಿರಲಿಲ್ಲ.

ಅಂದಹಾಗೆ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ್ದ ಗುಜರಾತ್​ 20 ಓವರ್​​ಗಳಲ್ಲಿ 3 ವಿಕೆಟ್​ ಕಳೆದುಕೊಂಡು ಬರೋಬ್ಬರಿ 233 ರನ್​ ಗಳಿಸಿತ್ತು. ಶುಭ್ಮನ್​ ಗಿಲ್​ (129) ಭರ್ಜರಿ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು. ಈ ಗುರಿ ಬೆನ್ನತ್ತಿ ಮುಂಬೈ 18.2 ಓವರ್​ಗಳಲ್ಲಿ 171 ರನ್​​ಗಳಿಗೆ ಆಲೌಟ್​ ಆಗಿತ್ತು. ಸೂರ್ಯಕುಮಾರ್​ (61) ಅವರ ಹೋರಾಟದ ನಡುವೆಯೂ 61 ರನ್​ಗಳಿಂದ ಮುಂಬೈ ಶರಣಾಯಿತು.

ಭಾನುವಾರವೂ ಮಳೆ ಆತಂಕ

2ನೇ ಕ್ವಾಲಿಫೈಯರ್‌ ಪಂದ್ಯ ಗೆದ್ದಿರುವ ಗುಜರಾತ್‌ ತಂಡವು, ಇಂದು ಸಿಎಸ್​ಕೆ ತಂಡದ ವಿರುದ್ಧ ಫೈನಲ್​ ಪಂದ್ಯವನ್ನು ಅಹ್ಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ಸೆಣಸಾಟ ನಡೆಸಲಿದೆ. 2ನೇ ಕ್ವಾಲಿಫೈಯರ್‌ಗೆ ಅಡ್ಡಿಯಾಗಿದ್ದ ಮಳೆ, ಇಂದು ಫೈನಲ್‌ ಪಂದ್ಯಕ್ಕೂ ಕಾಟ ಕೊಡುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ವರದಿಯಿಂದ ತಿಳಿದು ಬಂದಿದೆ.

ಹಾಗಾಗಿ ಉಭಯ ತಂಡಗಳ ಆಟಗಾರರ ಜೊತೆಗೆ ಫ್ಯಾನ್ಸ್​ಗೂ ಮಳೆ ಭೀತಿ ಶುರುವಾಗಿದೆ. ಇಂದು ರಾತ್ರಿ ಅಹ್ಮದಾಬಾದ್​ನಲ್ಲಿ ಶೇ 20ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ವರದಿಯ ಪ್ರಕಾರ, ಯಾವ ಸಮಯದಲ್ಲಿ ಬೇಕಾದರೂ ವರುಣನ ಆಗಮನ ಆಗಬಹುದು ಎಂದು ವರದಿಯಾಗಿದೆ. ಕೆಲವು ವರದಿಗಳ ಪ್ರಕಾರ ಮಳೆ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಮೈದಾನದ ಸಿಬ್ಬಂದಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಮಳೆಯಿಂದ ಫೈನಲ್‌ ರದ್ದಾದರೆ ಮುಂದೇನು?

ಲೀಗ್​ ಹಂತದಲ್ಲಿ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ 1 ಅಂಕವನ್ನು ಹಂಚಲಾಗುತ್ತದೆ. ಯಾವುದೇ ಮೀಸಲು ದಿನ ಇರುವುದಿಲ್ಲ. ಆದರೆ ಮಳೆಯಿಂದ ಫೈನಲ್​ ಪಂದ್ಯ ರದ್ದಾದರೆ ಮುಂದೇನು ಎಂಬ ಮಿಲಿಯನ್​ ಡಾಲರ್ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಮತ್ತೊಂದು ಸಂಗತಿ ಏನೆಂದರೆ ಈ ಫೈನಲ್​ ಪಂದ್ಯವು ಮಳೆಯಿಂದ ರದ್ದಾದರೆ, ಯಾವುದೇ ಮೀಸಲು ದಿನ ಇಟ್ಟಿಲ್ಲ. ಆ ಬಳಿಕ ಐಪಿಎಲ್​ ನಿಯಮಗಳನ್ನು ಅನುಸರಿಸಲಾಗುತ್ತದೆ.

ಲೀಗ್​​ನಲ್ಲಿ 2 ತಂಡಗಳು ಕನಿಷ್ಠ ಐದು ಓವರ್‌ಗಳನ್ನು ಮುಗಿಸಿದ ಬಳಿಕ ಮಳೆ ಬಂದರೆ, ಆಗ ಡಿಎಲ್‌ಎಸ್‌ ನಿಮಯ ಮೊರೆ ಹೋಗಬೇಕಾಗುತ್ತದೆ. ಆ ಮೂಲಕ ಗೆಲುವಿನ ತಂಡವನ್ನು ನಿರ್ಧಾರ ಮಾಡಲಾಗುತ್ತದೆ. ಒಂದು ವೇಳೆ 2 ತಂಡಗಳು ಕನಿಷ್ಠ ಓವರ್‌ಗಳನ್ನು ಮುಗಿಸಿಲ್ಲವೆಂದರೆ, ಫಲಿತಾಂಶ ಇಲ್ಲದೆ ರದ್ದುಪಡಿಸಲಾಗುತ್ತದೆ. ಆಗ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ನೀಡಲಾಗುತ್ತದೆ.

ಇದೇ ನಿಮಯಗಳು ಫೈನಲ್‌ ಪಂದ್ಯಕ್ಕೂ ಅನ್ವಯವಾಗುತ್ತದೆ. ಮಳೆ ಅಥವಾ ಹವಾಮಾನದ ಕಾರಣದಿಂದ ಫೈನಲ್‌ ಪಂದ್ಯ ರದ್ದುಗೊಂಡರೆ ಅಥವಾ ಫಲಿತಾಂಶ ಬಂದಿಲ್ಲವಾದರೆ ಟೂರ್ನಿಯ ಅಂಕಪಟ್ಟಿಯ ಆಧಾರದ ಮೇಲೆ ಚಾಂಪಿಯನ್​ ತಂಡವೆಂದು ಘೋಷಿಸಲಾಗುತ್ತದೆ. ಹಾಗೇನಾದರೂ ಮಳೆಯಿಂದ ಫೈನಲ್ ಪಂದ್ಯ ರದ್ದಾಗೊಂಡರೆ, ಪಾಯಿಂಟ್ಸ್​ ಟೇಬಲ್​​ನಲ್ಲಿ ಮೊದಲ ಸ್ಥಾನ ಪಡೆದ ಗುಜರಾತ್‌ ಟೈಟಾನ್ಸ್ ತಂಡ ಚಾಂಪಿಯನ್​ ಆಗಲಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ ಸಂಭಾವ್ಯ ತಂಡ

ಡೆವೋನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಮೊಯೀನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ & ವಿಕೆಟ್​ ಕೀಪರ್), ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.

ಇಂಪ್ಯಾಕ್ಟ್ ಪ್ಲೇಯರ್​; ಮತೀಷ ಪತಿರಾಣ

ಗುಜರಾತ್‌ ಟೈಟನ್ಸ್ ಸಂಭಾವ್ಯ ತಂಡ

ಶುಭಮನ್ ಗಿಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯ, ಮೋಹಿತ್ ಶರ್ಮಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್.