Bhagavad Gita: ರಕ್ಷಣೆ, ಕಷ್ಟದಿಂದ ಬಿಡುಗಡೆಗೆ ಮನುಷ್ಯ ಭಗವಂತನ ಆಶ್ರಯ ಪಡೆಯಬೇಕು; ಗೀತೆಯ ಅರ್ಥ ಹೀಗಿದೆ
May 06, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita Updesh: ರಕ್ಷಣೆ, ಕಷ್ಟದಿಂದ ಬಿಡುಗಡೆಗೆ ಮನುಷ್ಯ ಭಗವಂತನ ಆಶ್ರಯ ಪಡೆಯಬೇಕು ಎಂಬುದರ ಅರ್ಥವನ್ನು ಭಗವದ್ಗೀತೆಯ 9ನೇ ಅಧ್ಯಾಯದ 17 ಮತ್ತು 18ನೇ ಶ್ಲೋಕದಲ್ಲಿ ತಿಳಿಯಿರಿ.
9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 17
ಪಿತಾಹಮಸ್ಯ ಜಗತೋ ಮಾತಾ ಧಾತಾ ಪಿತಾಮಹಃ |
ವೇದ್ಯಂ ಪವಿತ್ರಮ್ ಓನ್ಕಾರ ಋಕ್ ಸಾಮ ಯಜುರೇವ ಚ ||17|
ಅನುವಾದ: ನಾನು ವಿಶ್ವದ ತಂದೆ, ತಾಯಿ, ಆಧಾರ ಮತ್ತು ಪಿತಾಮಹ. ನಾನು ಜ್ಞಾನದ ಗುರಿ, ಪ್ರವಿತ್ರೀಕರಿಸುವವನು, ಓಂಕಾರ. ನಾನೇ ಋಗ್, ಸಾಮ ಮತ್ತು ಯಜುರ್ ವೇದಗಳು.
ತಾಜಾ ಫೋಟೊಗಳು
ಭಾವಾರ್ಥ: ಚರಾಚರವಾದ ಎಲ್ಲ ವಿಶ್ವದ ಅಭಿವ್ಯಕ್ತಿಗಳು ಕೃಷ್ಣನ ವಿವಿಧ ಶಕ್ತಿಗಳಿಂದ ಪ್ರಕಟವಾದವು. ಐಹಿಕ ಅಸ್ತಿತ್ವದಲ್ಲಿ ನಾವು ಬೇರೆ ಬೇರೆ ಜೀವಿಗಳೊಡನೆ ಬೇರೆಬೇರೆ ಸಂಬಂಧಗಳನ್ನು ಸೃಷ್ಟಿಸಿಕೊಳ್ಳುತ್ತೇವೆ. ಆ ಜೀವಿಗಳೆಲ್ಲ ಕೃಷ್ಣನ ತಟಸ್ಥ ಶಕ್ತಿಗಳೇ. ಪ್ರಕೃತಿಯ ಸೃಷ್ಟಿಯಲ್ಲಿ ತಂದೆ, ತಾಯಿ, ತಾತ, ಸೃಷ್ಟಿಕರ್ತ ಎಂದು ಅವರಲ್ಲಿ ಕೆಲವರು ಕಾಣಿಸುತ್ತಾರೆ. ಅವರೆಲ್ಲ ಕೃಷ್ಣನ ವಿಭಿನ್ನಾಂಶಗಳೇ. ತಂದೆ-ತಾಯಿಗಳಂತೆ ತೋರುವ ಜೀವಿಗಳು ಕೃಷ್ಣನೇ ಆಗಿದ್ದಾನೆ. ಈ ಶ್ಲೋಕದಲ್ಲಿ ಧಾತಾ ಎಂದರೆ ಸೃಷ್ಟಿಕರ್ತ ಎಂದರ್ಥ. ನಮ್ಮ ತಂದೆತಾಯಿಯವರು ಮಾತ್ರ ಕೃಷ್ಣನ ವಿಭಿನ್ನಾಂಶರು. ಮಾತ್ರವಲ್ಲ, ಸೃಷ್ಟಿಕರ್ತ, ಅರ್ಜಿ, ಅಜ್ಜ ಎಲ್ಲ ಕೃಷ್ಣನೇ. ಆದುದರಿಂದಲೇ ಕೃಷ್ಣನು ಎಲ್ಲ ವೇದಗಳ ಗುರಿ (Bhagavad Gita Updesh in Kannada).
ನಾವು ವೇದಗಳ ಮೂಲಕ ತಿಳಿಯಬಸುವುದೆಲ್ಲ ಕೃಷ್ಣನ ಕಡೆಗಿಟ್ಟ ಒಂದು ಹೆಜ್ಜೆ. ನಮ್ಮ ಸಹಜಸ್ವರೂಪವನ್ನು ಪರಿಶುದ್ಧಗೊಳಿಸಿಕೊಳ್ಳಲು ನೆರವಾಗುವ ವಸ್ತುವೂ ಕೃಷ್ಣ. ಹಾಗೆಯೇ, ಎಲ್ಲ ವೈದಿಕ ತತ್ವಗಳನ್ನು ಅರ್ಥಮಾಡಿಕೊಳ್ಳಬಯಸುವ ಜಿಜ್ಞಾಸುವೂ ಕೃಷ್ಣನ ವಿಭಿನ್ನಾಂಶ. ಹಾಗಾಗಿ ಅವನೂ ಕೃಷ್ಣನೇ. ಎಲ್ಲ ವೇದದ ಮಂತ್ರಗಳಲ್ಲಿ ಪ್ರಣವ ಎಂದು ಕರೆಯುವ ಓಂಕಾರದ ದಿವ್ಯ ಶಬ್ದನಾದವೂ ಕೃಷ್ಣ. ಸಾಮ, ಯಜುರ್, ಋಗ್ ಮತ್ತು ಅಥರ್ವಣ - ನಾಲ್ಕು ವೇದಗಳಲ್ಲಿಯೂ ಪ್ರಣವ ಅಥವಾ ಓಂಕಾರವು ಬಹು ಪ್ರಧಾನವಾಗಿರುವುದರಿಂದ, ಅದೂ ಕೃಷ್ಣನೇ ಎಂದು ತಿಳಿಯಬೇಕು.
9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 18
ಗತಿರ್ಭರ್ತಾ ಪ್ರಭುಃ ಸಾಕ್ಷೀ ನಿವಾಸಃ ಶರಣಂ ಸುಹೃತ್ |
ಪ್ರಭವಃ ಪ್ರವಲಯಃ ಸ್ಥಾನಂ ನಿಧಾನಂ ಬೀಜಮವ್ಯಯಮ್ ||18|
ಅನುವಾದ: ನಾನೇ ಗುರಿಯು, ನಾನೇ ಪೋಷಿಸುವವನು, ನಾನೇ ಯಜಮಾನನು, ನಾನೇ ಸಾಕ್ಷಿ, ನಾನೇ ನಿವಾಸ, ನಾನೇ ಆಶ್ರಯ, ನಾನೇ ಅತ್ಯಂತ ಆಪ್ತ ಗೆಳೆಯ, ನಾನೇ ಸೃಷ್ಟಿ, ನಾನೇ ಪ್ರಳಯ, ನಾನೇ ಎಲ್ಲಕ್ಕೂ ಆಧಾರ, ನಾನೇ ವಿಶ್ರಾಂತಿ ತಾಣ, ನಾನೇ ಶಾಶ್ವತವಾದ ಬೀಜ.
ಭಾವಾರ್ಥ: ಗತಿ ಎಂದರೆ ನಾವು ಸೇರಲು ಬಯಸುವ ಗುರಿ. ಜನಕ್ಕೆ ಇದು ತಿಳಿಯದಿದ್ದರೂ ಕಟ್ಟಕಡೆಯ ಗುರಿ ಕೃಷ್ಣನೇ. ಕೃಷ್ಣನನ್ನು ಅರಿಯದವನು ದಾರಿತಪ್ಪಿದ್ದಾನೆ. ಪ್ರಗತಿ ಎಂದು ಕರೆಯುವ ಅವನ ಪ್ರಯಾಣವು ಪಾರ್ಶ್ವಿಕವಾದದ್ದು ಅಥವಾ ಭ್ರಾಂತಿಯಿಂದ ಕೂಡಿದ್ದು. ಬೇರೆ ಬೇರೆ ದೇವತೆಗಳನ್ನು ತಮ್ಮ ಗುರಿಯನ್ನಾಗಿ ಮಾಡಿಕೊಂಡವರು ಅನೇಕರಿದ್ದಾರೆ. ಆಯಾ ದೇವತೆಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆ ವಿಧಾನಗಳನ್ನುಕಟ್ಟುನಿಟ್ಟಾಗಿ ಅನುಸಿ ಅವರು ಚಂದ್ರಲೋಕ, ಸೂರ್ಯಲೋಕ, ಇಂದ್ರಲೋಕ, ಮಹರ್ ಲೋಕ ಮೊದಲಾದ ವಿವಿಧ ಲೋಕಗಳನ್ನು ತಲಪುತ್ತಾರೆ. ಆದರೆ ಇಂತಹ ಲೋಕಗಳೆಲ್ಲ ಕೃಷ್ಣನ ಸೃಷ್ಟಿಯಾದದ್ದರಿಂದ ಏಕಕಾಲದಲ್ಲಿ ಅವು ಕೃಷ್ಣನೂ ಹೌದು, ಕೃಷ್ಣನಲ್ಲದ್ದೂ ಹೌದು.
ಇಂತಹ ಲೋಕಗಳು ಕೃಷ್ಣಶಕ್ತಿಯ ಅಭಿವ್ಯಕ್ತಿಗಳಾದದ್ದರಿಂದ ಅವು ಕೃಷ್ಣನೇ. ಆದರೆ ಅವು ಏನಿದ್ದರೂ ಕೃಷ್ಣಸಾಕ್ಷಾತ್ಕಾರಕ್ಕೆ ಒಂದು ಹೆಜ್ಜೆ ಮಾತ್ರ. ಕೃಷ್ಣನ ವಿವಿಧ ಶಕ್ತಿಗಳ ಬಳಿಗೆ ಹೋಗುವುದೆಂದರೆ ಕೃಷ್ಣನ ಬಳಿಗೆ ಪರೋಕ್ಷವಾಗಿ ಹೋಗುವುದು. ಮನುಷ್ಯನು ನೇರವಾಗಿ ಕೃಷ್ಣನ ಬಳಿಗೆ ಹೋಗಬೇಕು. ಅದರಿಂದ ಕಾಲ ಮತ್ತು ಶಕ್ತಿ ಎರಡೂ ಉಳಿಯುತ್ತವೆ. ಉದಾಹರಣೆಗೆ ಒಂದು ಕಟ್ಟಡದ ಮೇಲಕ್ಕೆ ಹೋಗಲು ಕೊಂಡೊಯ್ಯುವ ಸಾಧಕವಿದ್ದಾಗ ಮೆಟ್ಟಲು ಮೆಟ್ಟಲಾಗಿ ಹತ್ತುತ್ತಾ ಏಕೆ ಹೋಗಬೇಕು? ಎಲ್ಲವೂ ಕೃಷ್ಣನ ಶಕ್ತಿಯನ್ನು ಆಧರಿಸಿದೆ. ಆದುದರಿಂದ ಕೃಷ್ಣನ ಆಶ್ರಯವಿಲ್ಲದೆ ಯಾವುದೂ ಇರಲು ಸಾಧ್ಯವಿಲ್ಲ. ಎಲ್ಲವೂ ಕೃಷ್ಣನಿಗೆ ಸೇರಿದ್ದು ಮತ್ತು ಎಲ್ಲವೂ ಕೃಷ್ಣನ ಶಕ್ತಿಯಿಂದಲೇ ಇರುವುದು. ಆದುದರಿಂದ ಕೃಷ್ಣನು ಪರಮ ಪ್ರಭು.
ಕೃಷ್ಣನು ಪ್ರತಿಯೊಬ್ಬರ ಹೃದಯದಲ್ಲಿಯೂ ಇರುವುದರಿಂದ ಅವನು ಪರಮಸಾಕ್ಷಿ. ನಾವು ವಾಸಿಸುವ ಮನೆಗಳು, ದೇಶಗಳು ಅಥವಾ ಲೋಕಗಳು ಸಹ ಕೃಷ್ಣನೇ. ಆಶ್ರಯದ ಕಟ್ಟಕಡೆಯ ಗುರಿ ಕೃಷ್ಣ. ಆದುದರಿಂದ ಮನುಷ್ಯನು ರಕ್ಷಣೆಗಾಗಲಿ ಅಥವಾ ತನ್ನ ಸಂಕಟದ ನಾಶಕ್ಕಾಗಲಿ ಕೃಷ್ಣನಲ್ಲಿ ಆಶ್ರಯ ಪಡೆಯಬೇಕು. ನಾವು ರಕ್ಷಣೆಯನ್ನು ಪಡೆದಾಗ ನಮ್ಮ ರಕ್ಷಕನು ಜೀವಂತವಾಗಿರುವವನಾಗಿರಬೇಕು ಎನ್ನುವುದನ್ನು ತಿಳಿಯಬೇಕು. ಕೃಷ್ಣನೇ ಪರಮ ಪುರುಷ. ಕೃಷ್ಣನು ನಮ್ಮ ಹುಟ್ಟಿನ ಮೂಲ ಅಥವಾ ಪರಮಪಿತ. ಕೃಷ್ಣನಿಗಿಂತ ಉತ್ತಮರಾದ ಸ್ನೇಹಿತರು ಅಥವಾ ಉತ್ತಮರಾದ ಹಿತೈಷಿಗಳು ಯಾರೂ ಇರುವುದು ಸಾಧ್ಯವಿಲ್ಲ. ಕೃಷ್ಣನು ನಮ್ಮ ಸೃಷ್ಟಿಯ ಆದಿಮೂಲ ಮತ್ತು ವಿನಾಶದ ಅನಂತರ ಕಟ್ಟಕಡೆಯ ವಿಶ್ರಾಂತಿಯ ತಾಣ. ಆದುದರಿಂದ ಕೃಷ್ಣನು ಎಲ್ಲ ಕಾರಣಗಳ ಶಾಶ್ವತ ಕಾರಣನು.