Shahid Afridi: ಗೌತಮ್ ಗಂಭೀರ್ ವಿಭಿನ್ನ ಮನುಷ್ಯ, ಅತ್ಯದ್ಭುತ ಆಟಗಾರ; 2007ರ ಘಟನೆ ನೆನೆದು ಹೊಗಳುತ್ತಲೇ ಅಚ್ಚರಿ ಹೇಳಿಕೆ ನೀಡಿದ ಅಫ್ರಿದಿ
Aug 14, 2023 06:40 AM IST
ಗೌತಮ್ ಗಂಭೀರ್ ಬಗ್ಗೆ ಶಾಹೀದ್ ಅಫ್ರಿದಿ ಮಾತು.
- Shahid Afridi: ತಮ್ಮ ಮತ್ತು ಗೌತಮ್ ಗಂಭೀರ್ ನಡುವಿನ ಗಲಾಟೆಯ ಕುರಿತು ಪಾಕಿಸ್ತಾನದ ಮಾಜಿ ಆಲ್ರೌಂಡರ್ ಶಾಹೀದ್ ಅಫ್ರಿದಿ ಮಾತನಾಡಿದ್ದಾರೆ. ಕ್ರಿಕೆಟ್ನಲ್ಲಿ ವಾಗ್ವಾದಗಳು ಸಹಜ. ಭಾರತ ಕ್ರಿಕೆಟ್ ಅದ್ಭುತ ಆಟಗಾರ ಎಂದು ಗಂಭೀರ್ ಅವರನ್ನು ಶ್ಲಾಘಿಸಿದ್ದಾರೆ.
ಭಾರತದ ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir) ಮತ್ತು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ (Shahid Afridi) ನಡುವಿನ ಜಗಳ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. 2007ರ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಏಕದಿನ ಪಂದ್ಯದಲ್ಲಿ ಈ ಇಬ್ಬರ ಜಗಳವು ವಿಶ್ವಮಟ್ಟದಲ್ಲಿ ಸುದ್ದಿಯಾಗಿತ್ತು. ಇಬ್ಬರೂ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು. ಈ ಘಟನೆ ಕ್ರಿಕೆಟ್ ಇತಿಹಾಸದಲ್ಲಿ ಅತಿದೊಡ್ಡ ಗಲಾಟೆಗಳಲ್ಲಿ ಒಂದು. ನಿವೃತ್ತಿಯ ನಂತರವೂ ಕ್ರಿಕೆಟ್ ಅಥವಾ ರಾಜಕೀಯ ಕುರಿತು ಪರಸ್ಪರ ಟೀಕೆ ಮಾಡುತ್ತಲೇ ಇರುತ್ತಾರೆ.
ಯೂಟ್ಯೂಬ್ ಶೋ ಹದ್ ಕರ್ ದಿಯಲ್ಲಿ ಪಾಕಿಸ್ತಾನದ ಸಾಮಾಜಿಕ-ಮಾಧ್ಯಮ ತಾರೆ ಮತ್ತು ನಟ ಮೊಮಿನ್ ಸಾಕಿಬ್ ಅವರೊಂದಿಗೆ ಮಾತನಾಡುವಾಗ ಶಾಹೀದ್ ಅಫ್ರಿದಿ ಅವರಿಗೆ ಈ ಜಗಳದ ಕುರಿತಂತೆ ಪ್ರಶ್ನೆಯೇ ಎದುರಾಯಿತು. ಆಡುವಾಗ ಗಂಭೀರ್ ಅವರನ್ನು ಪ್ರಚೋದಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಉತ್ತರಿಸಿದ ಅವರು, ಇದು ಕ್ರಿಕೆಟ್ನಲ್ಲಿ ಸಾಮಾನ್ಯ ತಂತ್ರ. ಅವಿಭಾಜ್ಯ ಅಂಗ. ಭಾರತೀಯ ತಂಡದ ಉಳಿದ ಆಟಗಾರರಿಗಿಂತ ಗಂಭೀರ್ ಭಿನ್ನ ವ್ಯಕ್ತಿ ಎಂದು ಹೇಳಿದ್ದಾರೆ.
ಗಂಭೀರ್ನನ್ನು ಶ್ಲಾಘಿಸಿದ ಅಫ್ರಿದಿ
ವಿಭಿನ್ನ ಮನುಷ್ಯ ಎಂದು ಹೇಳಿರುವ ಅಫ್ರಿದಿ, ಅದ್ಭುತ ಆಟಗಾರ ಕೂಡ ಹೌದು. ರಾಷ್ಟ್ರೀಯ ತಂಡದಲ್ಲಿ ಖ್ಯಾತಿಯನ್ನು ಹೊಂದಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಮೈದಾನದಲ್ಲಿ ನಡೆಯುವ ವಾಗ್ವಾದ, ಜಗಳಗಳು ಸೋಷಿಯಲ್ ಮೀಡಿಯಾ ಮೂಲಕ ಹೆಚ್ಚು ಪ್ರಚಾರ ಪಡೆದಿವೆ ಎಂದು ನಾನು ನಂಬುತ್ತೇನೆ. ಆದರೆ ಭಿನ್ನ, ವಿಭಿನ್ನ ಆಟಗಾರ ಎಂದು ಅಫ್ರಿದಿ ಶ್ಲಾಘಿಸಿದ್ದಾರೆ. ಭಾರತದ ಅದ್ಭುತ ಬ್ಯಾಟರ್ಗಳಲ್ಲಿ ಗಂಭೀರ್ ಕೂಡ ಒಬ್ಬರು ಎಂದು ಹೇಳಿದ್ದಾರೆ.
ಅವರೊಬ್ಬ ಅದ್ಭುತ ಆಟಗಾರ
ಗಂಭೀರ್ ಅವರ ಒಂದು ಸಕಾರಾತ್ಮಕ ಅಂಶವನ್ನು ಉಲ್ಲೇಖಿಸಲು ಅಫ್ರಿದಿಯನ್ನು ಯೂಟ್ಯೂಬರ್ ಕೇಳಿದರು. ಆಗ ಅಫ್ರಿದಿ ಅವರ ಬ್ಯಾಟಿಂಗ್ ಅನ್ನು ಹಾಡಿ ಹೊಗಳಿದರು. ಕೆಲವು ಭಾರತೀಯ ಬ್ಯಾಟರ್ಗಳು ಬ್ಯಾಟ್ನೊಂದಿಗೆ ಉತ್ತಮ ಸಮಯವನ್ನು ಹೊಂದಿರುವುದನ್ನು ನಾನು ನೋಡಿದ್ದೇನೆ. ಅವರು, ಚೆಂಡಿನ ಅದ್ಭುತ ಹಿಡಿತ ಹೊಂದಿದ್ದರು. ಅವರೊಬ್ಬ ಅದ್ಭುತ ಆಟಗಾರ. ಇದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂದು ಹೇಳಿದ್ದಾರೆ.
ಗಂಭೀರ್ ವಿಚಾರಿಸಿದ್ದ ಅಫ್ರಿದಿ
ಈ ವರ್ಷದ ಆರಂಭದಲ್ಲಿ ದೋಹಾದಲ್ಲಿ ನಡೆದ ಲೆಜೆಂಡ್ಸ್ ಕ್ರಿಕೆಟ್ ಲೀಗ್ನಲ್ಲಿ ತಮ್ಮ ಪಂದ್ಯದ ವೇಳೆ ಗಂಭೀರ್ ಮತ್ತು ಅಫ್ರಿದಿ ಹ್ಯಾಂಡ್ಶೇಕ್ ಹಂಚಿಕೊಂಡಿದ್ದರು. ಭಾರತ ಮಹಾರಾಜರ ತಂಡಕ್ಕೆ ಗಂಭೀರ್ ನಾಯಕರಾಗಿದ್ದರೆ, ಅಫ್ರಿದಿ ಏಷ್ಯಾ ಲಯನ್ಸ್ ತಂಡವನ್ನು ಮುನ್ನಡೆಸಿದ್ದರು. ಗಂಭೀರ್ ಬ್ಯಾಟಿಂಗ್ ಮಾಡುವಾಗ ಚೆಂಡು ಬಡಿದಿತ್ತು. ಆದರೆ, ಪಾಕಿಸ್ತಾನದ ಮಾಜಿ ಆಲ್ರೌಂಡರ್ ಅಫ್ರಿದಿ ವಿಚಾರಿಸಿದ್ದರು. ಈ ಕುರಿತ ವಿಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇಬ್ಬರ ನಡುವಿನ ಭಿನ್ನಾಭಿಪ್ರಾಯದ ಹೊರತಾಗಿಯೂ ಈ ಇಬ್ಬರು ಆಟಗಾರರ ನಡೆ ಸಾಕಷ್ಟು ಮೆಚ್ಚುಗೆಗೆ ವ್ಯಕ್ತವಾಗಿತ್ತು.